ನನ್ನ ಊರು ಬೆಂಗಳೂರು – ಇಂತಿ ನಿಮ್ಮ ಪ್ರೀತಿಯ ಬಾಂಗ್ಲಾ ನುಸುಳುಕೋರ
– ವೃಷಾಂಕ್ ಭಟ್
ಭಾರತದಲ್ಲಿ ದಿನಕಳೆದಂತೆ ಕೌಶಲ್ಯರಹಿತ ಕಾರ್ಮಿಕರ (Unskilled labourers) ಸಂಖ್ಯೆ ಕ್ಷೀಣಿಸುತ್ತಿದೆ. ಡ್ರೈವರ್ಗಳು, ಹೊಟೇಲ್ ಮಾಣಿಗಳು, ಮನೆಕೆಲಸದವರು, ಕೃಷಿಕಾರ್ಮಿಕರು, ಕ್ಲೀನರ್ಗಳು, ಹಮಾಲಿಗಳು, ಚಿಂದಿ ಸಂಗ್ರಹಿಸುವವರು ಕ್ಷೀಣಿಸಿರುವ ಪರಿಣಾಮ ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರವೊಂದು ಖಾಲಿಯಾಗಿತ್ತು. ಬೆಂಗಾಲಿ ಮಾತನಾಡುವ ಮುಸಲ್ಮಾನರು ಇಂದು ಆ ಸ್ಥಾನವನ್ನು ತುಂಬಿದ್ದಾರೆ. ಬೆಂಗಾಲಿ ಮಾತನಾಡಿದ ತಕ್ಷಣ ಅವರೆಲ್ಲ ಪಶ್ಚಿಮ ಬಂಗಾಳದವರಲ್ಲ. ಅವರೆಲ್ಲರೂ ಬಾಂಗ್ಲಾ ನುಸುಳುಕೋರರು..!
ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬಾಂಗ್ಲಾದೇಶದ ಮುಸಲ್ಮಾನರು ಟೆಂಟ್ಗಳನ್ನು ಕಟ್ಟಿಕೊಂಡು ಜೀವನ ಪ್ರಾರಂಭಿಸಿದ್ದಾರೆ. ಅದರಂತೆಯೇ ಕರ್ನಾಟಕದಲ್ಲಿ ಬಾಂಗ್ಲಾ ಪ್ರಜೆಗಳು ಒಳನುಸುಳಿರುವ ಬಗ್ಗೆ ಅಪರೂಪಕ್ಕೊಮ್ಮೆ ವರದಿಯಾಗಿತ್ತಾದರೂ, ಇಲ್ಲೇ ಇದ್ದಾರೆ, ಇಷ್ಟೇ ಪ್ರಮಾಣದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿರಲಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು, ರಾಮನಗರ ಮುಂತಾದ ಕಡೆಗಳಲ್ಲಿ ಬಾಂಗ್ಲಾ ನುಸುಳುಕೋರರು ಬೀಡುಬಿಟ್ಟಿದ್ದಾರೆಂಬ ಊಹಾಪೋಹಗಳು ಎದ್ದಿದ್ದವು. ಬೆಂಗಳೂರಿನ ಶಿವಾಜಿನಗರ, ಕೆ.ಆರ್.ಮಾರ್ಕೆಟ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಕೆ.ಆರ್.ಪುರಂನಲ್ಲಿ ಬಾಂಗ್ಲಾ ನುಸುಳುಕೋರರಿರುವುದು ಓಪನ್ ಸೀಕ್ರೆಟ್. ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ, ಕಾಟಂ ನಲ್ಲೂರು ಬಳಿ ಆರೆಂಟು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ಟೆಂಟ್ ಕಟ್ಟಿಕೊಂಡು ವಾಸವಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ನಮ್ಮ ತಂಡವು ಆ ಭಾಗಗಳಿಗೆ ಭೇಟಿ ನೀಡಿತು. ನಮಗಲ್ಲಿ ಕಾದಿತ್ತು ಆಶ್ಚರ್ಯಗಳ ಮೇಲೆ ಆಶ್ಚರ್ಯ..! ಆಘಾತಗಳ ಮೇಲೆ ಆಘಾತ..!
ಮಹದೇವಪುರ ವಿಧಾನಸಭಾ ಕ್ಷೇತ್ರದ ಆವಲಹಳ್ಳಿ ಮತ್ತು ಕಾಟಂನಲ್ಲೂರಿನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಗುಂಪು-ಗುಂಪಾಗಿ ಬೀಡುಬಿಟ್ಟಿದ್ದಾರೆ. ಇಂತಹ ಒಟ್ಟು ಮೂರು ಗುಂಪುಗಳಿಗೆ ಮೂಲಭೂತ ಸೌಕರ್ಯ ನೀಡುವೆವೆಂದು ಹೇಳಿಕೊಂಡು ನಾವು ಭೇಟಿ ಕೊಟ್ಟೆವು.
ಮೊದಲನೇ ಬಾಂಗ್ಲಾದೇಶಿ ಕ್ಯಾಂಪ್
ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುಗಿ ಅರ್ಧ ಕಿ.ಮೀ. ಚಲಿಸಿದರೆ ಅಲ್ಲಿರುವ ಬಾಂಗ್ಲಾದೇಶಿ ಸೆಟ್ಲ್ಮೆಂಟ್ (ವಸತಿ) ಸಿಗುತ್ತದೆ. ಸೆಟ್ಲ್ಮೆಂಟ್ ಬಗ್ಗೆ ನಮಗೆ ಮಾಹಿತಿ ನೀಡಿದ್ದ ಅದೇ ಊರಿನ ವ್ಯಕ್ತಿಯೊಬ್ಬರನ್ನು ನಾವು ಜೊತೆಗೆ ಕರೆದೊಯ್ಯಲಿಲ್ಲ. ಏಕೆಂದರೆ ಸ್ಥಳೀಯರಾದ ಅವರನ್ನು ಬಾಂಗ್ಲಾದೇಶಿಗರು ಗುರುತಿಸಿದರೆ ಭವಿಷ್ಯದಲ್ಲಿ ಅವರಿಗೆ ಸಮಸ್ಯೆಯಾಗುವ ಸಂಭವವಿತ್ತು. ನಾವು ಕ್ಯಾಂಪ್ಗೆ ಭೇಟಿ ನೀಡಿದಾಗ ಅರ್ಧದಷ್ಟು ಮಂದಿ ಕೆಲಸಗಳಿಗಾಗಿ ಹೊರಗೆ ಹೋಗಿದ್ದರು. ಕ್ಯಾಂಪಿನಲ್ಲಿ ನಮ್ಮನ್ನು ಸ್ವಾಗತಿಸಿದವರು ಕನ್ನಡಿಗ ಬರ್ಕತ್..!
ನಮ್ಮನ್ನು ನೋಡಿದ ಬರ್ಕತ್ ‘ಯಾರು ನೀವು?’ ಎಂದು ಕೇಳಿದ. ಆತನ ಮಾತಿನ ಭಾವದಲ್ಲಿ ‘ಇಲ್ಲೇಕೆ ಬಂದಿರಿ ?’ ಎಂಬ ಪ್ರಶ್ನೆಯೂ ಇತ್ತು. ಕಡಿದು ಹೂತುಹಾಕಿದರೂ ಯಾರಿಗೂ ತಿಳಿಯದಂತಹ ಜಾಗದಲ್ಲಿ ನಾವಿದ್ದೆವು. ಸರ್ಕಾರವು ಬಡವರಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸುತ್ತಿದ್ದು, ಯಾರಿಗೆಲ್ಲ ಮನೆಯಿಲ್ಲ ಎಂದು ಸಮೀಕ್ಷೆ ಮಾಡಲು ಬಂದಿದ್ದೇವೆ ಎಂದ ಮೇಲೆ ಬರ್ಕತ್ ಆತ್ಮೀಯನಾದ.
ಬರ್ಕತ್ ತಿಳಿಸಿದಂತೆ ಆ ಕ್ಯಾಂಪ್ನಲ್ಲಿ ಕನಿಷ್ಠ 40 ರಿಂದ 50 ಮಂದಿ ಜನರಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಿಯರು ಇದ್ದಾರೆಂದು ಆತ ಹೇಳಿದರೂ, ಅಲ್ಲಿದ್ದವರೆಲ್ಲ ಬಾಂಗ್ಲಾದವರೇ ಎಂಬುದು ಅವರ ಹಾವಭಾವದಿಂದ ತಿಳಿಯುತ್ತಿತ್ತು. ಬರ್ಕತ್ ತಿಳಿಸುವಂತೆ ಆ ಜನರು ಪ್ರತಿ ದಿನ ಪ್ಲಾಸ್ಟಿಕ್, ಕಬ್ಬಿಣದ ತುಂಡುಗಳನ್ನು ಆರಿಸಿಕೊಂಡು ಬರುತ್ತಾರೆ. ಸ್ಥಳೀಯ ಮುಸ್ಲಿಂ ವ್ಯಾಪಾರಿಯೊಬ್ಬ ಅವುಗಳನ್ನು ಖರೀದಿಸಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ ಮಾರುತ್ತಾರೆ. ಅದರಿಂದ ಬಂದ ಆದಾಯದಲ್ಲಿ ಬಾಂಗ್ಲಾದೇಶೀಯರ ಜೀವನ. ಕೆಲವರಿಗೆ ಮದುವೆಯಾಗಿ ಜೊತೆಯಲ್ಲಿ ಮಕ್ಕಳಿದ್ದಾರೆ. ಉಳಿದವರು ಅವಿವಾಹಿತರು ಅಥವಾ ಹೆಂಡತಿಯರು ಬಾಂಗ್ಲಾದಲ್ಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಕನ್ನಡವಾಗಿರುವುದರಿಂದ ಇಲ್ಲಿನ ಮಕ್ಕಳು ಹೋಗುವುದು ಇಂಗ್ಲಿಷ್ ಮಾಧ್ಯಮ ಶಾಲೆಗೆ…! ಪೇಪರ್, ಪ್ಲಾಸ್ಟಿಕ್, ಕಬ್ಬಿಣ ಆರಿಸುವ ಬಾಂಗ್ಲಾ ಒಳನುಸುಳುಕೋರರ ಮಕ್ಕಳು ಖಾಸಗಿ ಶಾಲೆಗಳಿಗೆ!!!
ಅಲ್ಲಿರುವ ಬಾಂಗ್ಲಾದೇಶಿಯ ಬಾಯಿಂದ ‘ನಾನು ಬಾಂಗ್ಲಾದಿಂದ ಬಂದವನು’ ಎಂದು ಹೇಳಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಬಳಿಯಲ್ಲಿದ್ದ ವಾಯ್ಸ್ ರೆಕಾರ್ಡರ್ನಲ್ಲಿ ಅವರ ಧ್ವನಿ ಅಚ್ಚಾದರೆ ಮಹತ್ವದ ಸಾಕ್ಷಿ ದೊರೆತಂತೆ. ಆದರೆ ಬಾಂಗ್ಲಾದೇಶಿಯರೊಂದಿಗೆ ಮಾತನಾಡಲು ಬರ್ಕತ್ ಅನುವು ಮಾಡಿಕೊಡಲಿಲ್ಲ. ಸಂಜೆಯ ಮೇಲೆ ಬಂದರೆ ಈ ಗುಂಪಿನ ನಾಯಕ ಬರುತ್ತಾನೆ; ಆಮೇಲೆ ಬನ್ನಿ ಎಂದು ತನ್ನ ಮೊಬೈಲ್ ಸಂಖ್ಯೆ ನೀಡಿದ. ಇಲ್ಯಾಕೋ ಕೆಲಸ ಕೈಗೂಡುತ್ತಿಲ್ಲವೆಂದು ಭಾವಿಸಿ, ಒಂದಿಷ್ಟು ಫೋಟೋಗಳನ್ನು ತೆಗೆದು ಕ್ಯಾಂಪ್ನಿಂದ ಹೊರಬಂದೆವು. ಆಗ ಸಿಕ್ಕವನೇ ಯುವಕ ಮೊಹಮ್ಮದ್ ಜಿಯೋಲ್.
ಮೊಹಮ್ಮದ್ ಜಿಯೋಲ್ ಸಿಕ್ಕಿದ್ದು ಕ್ಯಾಂಪಿನ ಹೊರಭಾಗದಲ್ಲಿ. ಒಳಗೆ ನಡೆದದ್ದೇನೂ ಅವನಿಗೆ ತಿಳಿದಿರಲಿಲ್ಲ. ಯಾವುದಪ್ಪ ನಿನ್ನ ಊರು ಎಂದಾಗ ಕೊಲ್ಕತ್ತಾ (ಪ.ಬಂಗಾಳ) ಎಂದ. ‘ಏನಪ್ಪಾ ನೀನು, ಒಳಗಿರುವವರೆಲ್ಲ ಬಾಂಗ್ಲಾದವರು ಎನ್ನುತ್ತಿದ್ದಾರೆ; ನೀನು ಮಾತ್ರ ಕೊಲ್ಕತ್ತಾ ಅಂತೀಯಲ್ಲ’ ಎಂದಾಗ, ಹಲ್ಲು ಕಿರಿಯುತ್ತಾ ‘ಹೌದು, ನಾನು ಬಾಂಗ್ಲಾದವನು’ ಎಂದ..! ಮೊಹಮ್ಮದ್ ಜಿಯೋಲ್ ನೀಡಿದ ಮಾಹಿತಿಯ ಪ್ರಕಾರ ಆತ ಬಾಂಗ್ಲಾದ ಬರ್ಗಟ್ ಜಿಲ್ಲೆಯವನು. ಬಾಂಗ್ಲಾ-ಭಾರತ ಗಡಿಯಲ್ಲಿ ಹಣ ಕೊಟ್ಟರೆ ಈ ಕಡೆಯಿಂದ ಆ ಕಡೆ, ಆ ಕಡೆಯಿಂದ ಈ ಕಡೆಗೆ ಬರಬಹುದು – ಹೋಗಬಹುದು. ಒಳನುಸುಳುವುದು ದೊಡ್ಡ ಸಮಸ್ಯೆಯೇ ಅಲ್ಲ. ಕುರ್ಬಾನಿಯ (ಬಕ್ರೀದ್) ನಂತರ ಆತ ಊರಿಗೆ ಹೋಗುತ್ತಾನೆ.
ಇವಿಷ್ಟು ಮಾಹಿತಿ ಪಡೆದು ನಾವು ಮೊದಲನೇ ಕ್ಯಾಂಪಿನಿಂದ ಹೊರಬಂದೆವು. ಸಂಜೆ ನಾಲ್ಕರ ಮೇಲೆ ಬನ್ನಿ ಎಂದು ಬರ್ಕತ್ ತಿಳಸಿದನಾದರೂ, ಅಪಾಯದ ಸೂಚನೆಯಿದ್ದ ಕಾರಣ ನಾವು ಮತ್ತೆ ಅಲ್ಲಿಗೆ ಹೋಗಲಿಲ್ಲ.
ಎರಡನೇ ಬಾಂಗ್ಲಾದೇಶಿ ಕ್ಯಾಂಪ್…
ಇವರ ಬಳಿ ಉಂಟು ಆಧಾರ್ ಕಾರ್ಡ್
ಹೊಸಕೋಟೆ ಟೋಲ್ ಪಕ್ಕದಲ್ಲಿರುವ ಕಾಟಂನಲ್ಲೂರು ಹುಣಸೆ ತೋಪಿನಲ್ಲಿ ಬೀಡುಬಿಟ್ಟಿರುವ ಬಾಂಗ್ಲಾ ನುಸುಳುಕೋರರ ಕ್ಯಾಂಪಿಗೆ ಹೋದಾಗ ಅಲ್ಲಿ ಕನ್ನಡಿಗರ್ಯಾರೂ ಇರಲಿಲ್ಲ. ಅದು ನಮಗೆ ಸಹಕಾರಿಯಾಗಿತ್ತು. ಮೆಡಿಕಲ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಈ ಕ್ಯಾಂಪ್ ಒಳ ಹೊಕ್ಕೆವು. ಅಲ್ಲಿ ನಮ್ಮನ್ನು ಸಂಶಯಪೂರ್ವಕವಾಗಿ ಸ್ವಾಗತಿಸಿದವನು ಆ ಕ್ಯಾಂಪಿನ ಮುಖ್ಯಸ್ಥ ಮೊಹಮ್ಮದ್ ಸರೋಅರ್. ನಿಮ್ಮಲ್ಲಿಗೆ ಡಾಕ್ಟರ್ ಬರುತ್ತಾರೆಯೇ, ಮಕ್ಕಳ ಆರೋಗ್ಯ ಹೇಗಿದೆ ಎಂದೆಲ್ಲ ವಿಚಾರಿಸಿದ ಮೇಲೆ ಅವರಿಗೆ ನಮ್ಮ ಮೇಲೆ ನಂಬಿಕೆ ಬಂತು. ನಾವು ಮೊಹಮ್ಮದ್ ಸರೋಅರ್ ಮನೆಯ ಒಳಗೆ ಹೋಗಿ ಮಾತನಾಡುತ್ತಿರುವಾಗ ಆತ ಆಧಾರ್ ಕಾರ್ಡ್ ಮಾಡಿಸಿರುವುದು ತಿಳಿಯಿತು. ಅದನ್ನಾತ ನಮಗೆ ತೋರಿಸಿದ. ಬಾಂಗ್ಲಾದೇಶಿಯರಿಗೆ ಆಧಾರ್ ಕಾರ್ಡ್ ಕೊಡಲಾಗಿದೆ ಎಂಬ ಕೂಗು ಸತ್ಯವೆಂದು ನಮಗೆ ಸ್ಪಷ್ಟವಾಯಿತು. ಸರೋಅರ್ ಆಧಾರ್ ಕಾರ್ಡ್ನಲ್ಲಿ ಸರಿಯಾದ ವಿಳಾಸವೇ ಇರಲಿಲ್ಲ. ವಿಳಾಸದಲ್ಲಿ ಮಸೀದಿ ರಸ್ತೆ, ಹೊಸಕೋಟೆ ಎಂದು ಬರೆಯಲಾಗಿತ್ತು. ಆದರೆ ಇರುವುದು ಹುಣಸೇ ತೋಪಿನ ಟೆಂಟಿನಲ್ಲಿ. ಇದೇನು ಹೀಗೆ ಎಂದು ಕೇಳಿದಾಗ, ಹಿಂದೆ ಆ ವಿಳಾಸದಲ್ಲಿದ್ದೆ ಎಂದ. ಇವೆಲ್ಲದರ ನಡುವೆ, ಆತ ಹೊಸಕೋಟೆಗೆ ಬಂದು 8 ವರ್ಷಗಳಾಗಿವೆ. ಸ್ಥಳೀಯ ಆಡಳಿತದ ಉದಾಸೀನ ಎಷ್ಟು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಸರೋಅರ್ ತನ್ನನ್ನು ತಾನು ಪಶ್ಚಿಮ ಬಂಗಾಳದವನು ಎಂದು ಹೇಳಿಕೊಂಡನೇ ವಿನಃ, ಬಾಂಗ್ಲಾದೇಶೀಯ ಎನ್ನಲಿಲ್ಲ. ಹಾಗಾಗಿ ಆತನನ್ನು ಬಾಂಗ್ಲಾದೇಶೀಯ ಎನ್ನಲು ಸರಿಯಾದ ಸಾಕ್ಷಿಯಿರಲಿಲ್ಲ. ಆತ 8 ವರ್ಷದ ಹಿಂದೆಯೇ ಭಾರತದೊಳಗೆ ನುಸುಳಿದ್ದರಿಂದ, ಸ್ಥಳೀಯರೊಂದಿಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬಾರದು ಎಂಬುದನ್ನು ಅರಿತಿದ್ದ. ಆದರೆ ಸರೋಅರ್ನ ಆಧಾರ್ ಕಾರ್ಡ್ ಮಾಹಿತಿಗಳನ್ನು ನಾವು ಪಡೆಯುತ್ತಿರುವುದನ್ನು ಕಂಡ ಮೊಹಮ್ಮದ್ ಆರೀಫ್, ಸರ್ಕಾರದಿಂದ ಏನಾದರೂ ಸಹಾಯ ಸಿಗಬಹುದೆಂದು ಭಾವಿಸಿ ತನ್ನ ಮತ್ತು ತನ್ನ ಪತ್ನಿ ಸುಮಿಯ ಆಧಾರ್ ಕಾರ್ಡ್ಗಳನ್ನು ನಮಗೆ ತೋರಿಸಿದ. ಮಾತಿನ ನಡುವೆ, ತಾನು ಬಾಂಗ್ಲಾದಿಂದ ಬಂದಿರುವುದಾಗಿಯೂ ಬಾಯಿ ಬಿಟ್ಟ! ಈ ಕ್ಯಾಂಪಿನ ಒಂದು ಮೂಲೆಯಲ್ಲಿ ಪ್ಲಾಸ್ಟಿಕ್ ಶೀಟ್ಗಳಿಂದ ನಿರ್ಮಿಸಿದ ಮಸೀದಿಯೂ ಇದೆ. ಸ್ಥಳೀಯ ಮೌಲ್ವಿಗಳು ಆಗಾಗ ಬಂದು ಉಪದೇಶ ಮಾಡುತ್ತಾರೆ ಎಂದು ಸರೋಅರ್ ತಿಳಿಸುತ್ತಾನೆ.
ಚಿಂದಿ ಆಯುವುದಷ್ಟೇ ಕೆಲಸವಲ್ಲ
ಇದು ಮೂರನೇ ಕ್ಯಾಂಪಿನ ಕಥೆ…
ಎರಡನೇ ಕ್ಯಾಂಪಿನಲ್ಲಿದ್ದ ಹುಡುಗನೊಬ್ಬನನ್ನು ಜೊತೆಯಲ್ಲಿ ಕರೆದುಕೊಂಡು ಮೂರನೇ ಕ್ಯಾಂಪಿಗೆ ಹೋದೆವು. ಜೊತೆಗೊಬ್ಬ ಬಾಂಗ್ಲಾ ಹುಡುಗನಿದ್ದರಿಂದ ಮೂರನೇ ಕ್ಯಾಂಪಿನಲ್ಲಿ ಕೆಲಸ ಮಾಡುವುದು ಸುಲಭವಾಯಿತು. ಆ ಕ್ಯಾಂಪಿನಲ್ಲೂ ಕೆಲವರು ತಮ್ಮನ್ನು ಕೊಲ್ಕತ್ತದವರೆಂದರು, ಕೆಲವರು ಬಾಂಗ್ಲಾದವರೆಂದರು. ಈ ಕ್ಯಾಂಪಿನ ಜನ ಕೇವಲ ಪ್ಲಾಸ್ಟಿಕ್, ಪೇಪರ್ ಮತ್ತು ಕಬ್ಬಿಣ ಸಂಗ್ರಹಿಸುವುದನ್ನಷ್ಟೇ ತಮ್ಮ ಕೆಲಸ ಮಾಡಿಕೊಂಡಿರಲಿಲ್ಲ. ಇವರಲ್ಲಿ ಬಹುತೇಕ ಹೆಂಗಸರು ಅಪಾರ್ಟ್ಮೆಂಟ್ಗಳಿಗೆ ಮನೆಕೆಲಸದವರಾಗಿ ಹೋಗುತ್ತಾರೆ. ಹೋಟೆಲುಗಳಲ್ಲಿ ಅಡಿಗೆ, ಕ್ಲೀನಿಂಗ್ ಇತ್ಯಾದಿ ಕೆಲಸಗಳಿಗೆ ಸೇರಿಕೊಂಡಿದ್ದಾರೆ. ತಮ್ಮ ಬಳಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಇದೆ ಎನ್ನುವ ಇವರು, ಅವೆಲ್ಲವನ್ನು ತಮಗೆ ಕೆಲಸ ಕೊಟ್ಟ ಮಾಲಿಕರಿಗೆ ನೀಡಿದ್ದಾರಂತೆ.
ಇವೆಲ್ಲದರ ಜೊತೆಗೆ ಈ ಕ್ಯಾಂಪಿನಲ್ಲಿರುವ ಟೆಂಟ್ಗಳಿಗೆ ವಿದ್ಯುತ್ ಸರಬರಾಜಾಗುತ್ತದೆ. ಅಗತ್ಯ ನೀರು ದೊರೆಯುತ್ತದೆ.
ಮೂರನೇ ಕ್ಯಾಂಪಿನಿಂದ ಇವಿಷ್ಟು ಮಾಹಿತಿ ಪಡೆದು ಹೊರಬಂದೆವು. ಮೂರನೇ ಕ್ಯಾಂಪಿನ ಕೆಲವು ಜನರು ಬಾಂಗ್ಲಾದೇಶಿಗಳಲ್ಲ ಪಶ್ಚಿಮ ಬಂಗಾಳದವರು ಎಂದದ್ದನ್ನು ನಮ್ಮೊಂದಿಗೆ ಬಂದಿದ್ದ ಬಾಂಗ್ಲಾ ಹುಡುಗ ಗಮನಿಸಿದ್ದ. ಕ್ಯಾಂಪಿನಿಂದ ಹೊರ ಬರುತ್ತಿದ್ದಂತೇ ಅವನು ಹೇಳಿದ, ‘ಅವರೆಲ್ಲರೂ ಬಾಂಗ್ಲಾದವರೇ. ಪಶ್ಚಿಮ ಬಂಗಾಳದವರೆಂದು ಅದೇಕೆ ಸುಳ್ಳು ಹೇಳಿದರೋ ತಿಳಿಯದು. ಸುಳ್ಳು ಹೇಳುವುದರಿಂದ ಏನು ಪ್ರಯೋಜನ. ಇಂದು ಅವರು ಸುಳ್ಳು ಹೇಳಬಹುದು. ಆದರೆ ನಾಳೆ ಮೇಲಿನವನಿಗೆ ಎಲ್ಲ ಲೆಕ್ಕ ಕೊಡಬೇಕಾಗುತ್ತದೆ’.
ಮಸೀದಿಗೂ ನುಸುಳುಕೋರರಿಗೂ ಏನು ಸಂಬಂಧ
ಬಾಂಗ್ಲಾ ಒಳನುಸುಳುಕೋರು ತಮ್ಮ ಕ್ಯಾಂಪಿನಲ್ಲೇ ಮಸೀದಿ ನಿರ್ಮಿಸಿ ಕುರಾನ್ ಪಠಿಸುತ್ತಾರೆ. ಅವರೇ ಹೇಳುವಂತೆ ಸ್ಥಳೀಯ ಮೌಲ್ವಿಗಳು ಆಗಾಗ ಬಂದು ಮಾರ್ಗದರ್ಶನ ನೀಡುತ್ತಾರೆ. ಇದರ ಅರ್ಥ ಸ್ಥಳೀಯ ಮಸೀದಿಗೆ ಬಾಂಗ್ಲಾ ನುಸುಳುಕೋರರ ಬಗ್ಗೆ ಮಾಹಿತಿಯಿದೆ. ಆದರೂ ಪೊಲೀಸರಿಗೆ ತಿಳಿಸದೆ ಸಹಾಯ ಮಾಡುತ್ತಿದ್ದಾರೆ. ಸ್ಥಳೀಯ ಮಸೀದಿಗಳು ಅಕ್ರಮವಾಗಿ ಭಾರತದೊಳಗೆ ಬಂದವರನ್ನು ಏಕೆ ವಿಶ್ವಾಸದಲ್ಲಿಟ್ಟುಕೊಂಡಿವೆ ಎಂಬುದು ಈ ಕಾಲಘಟ್ಟದ ಪ್ರಮುಖ ಪ್ರಶ್ನೆಗಳಲ್ಲೊಂದು. ಅಷ್ಟೇ ಅಲ್ಲದೆ ಸ್ಥಳೀಯ ಕನ್ನಡಿಗರೂ ಸಹ ನುಸುಳುಕೋರರಿಗೆ ಆಶ್ರಯ ನೀಡುತ್ತಿದ್ದಾರೆ. ಇವೆಲ್ಲವೂ ದೇಶದ್ರೋಹವೇ.
ನುಸುಳುಕೋರರು ಆಯಾ ಪ್ರದೇಶದ ಮಸೀದಿಯ ಸಂಪರ್ಕದಲ್ಲಿದ್ದು, ಮಸೀದಿಯ ಆದೇಶಗಳನ್ನು ಮಾತ್ರ ಪಾಲಿಸುವ ಈ ಒಳನುಸುಳುಕೋರರಿಂದ ದೇಶದ ಆಂತರಿಕ ಭದ್ರತೆಗೆ ತೊಂದರೆ ಕಾದಿಟ್ಟ ಬುತ್ತಿ. ಮುಂಬೈಯ ಅಮರ್ ಜ್ಯೋತಿಗೆ ಒದ್ದದ್ದು ಇದೇ ಬಾಂಗ್ಲಾ ನುಸುಳುಕೋರರು. ಇವರು ಮೂಲತಃ ಬಾಂಗ್ಲಾದೇಶದವರಾದ ಕಾರಣ ಭಾರತದ ಬಗ್ಗೆ ಪ್ರೀತಿ ಗೌರವಗಳು ಇರುವುದಿಲ್ಲ. ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವ ಭಾರತೀಯ ಮೂಲಭೂತವಾದಿಗಳಿಗೆ ಬಾಂಗ್ಲಾ ನುಸುಳುಕೋರರು ಸಹಾಯಕ್ಕೆ ಬರುತ್ತಾರೆ. ಇವರುಗಳು ಹೊಂದಿರುವ ಆಧಾರ್ ಕಾರ್ಡ್, ವೋಟರ್ ಐಡಿಗಳಲ್ಲಿ ನಕಲಿ ವಿಳಾಸವಿರುವುದರಿಂದ, ಅಪರಾಧದಂತಹ ಸಂದರ್ಭಗಳಲ್ಲಿ ಇವರನ್ನು ಪತ್ತೆಹಚ್ಚುವುದೂ ಕಷ್ಟ. ದೇಶದಲ್ಲಿ 2 ಕೋಟಿಗಿಂತ ಹೆಚ್ಚು ನುಸುಳುಕೋರರು ನೆಲೆಸಿದ್ದು ಈ ಎರಡು ಕೋಟಿ ಸಂಖ್ಯೆಯ ಸಮುದಾಯ ಮಸೀದಿ ಹೇಳಿದವರಿಗೆ ವೋಟ್ ನೀಡುವ ಸಾಧ್ಯತೆಯಿರುವುದರಿಂದ ಬಹುತೇಕ ರಾಜಕೀಯ ಪಕ್ಷಗಳು ತೆಪ್ಪಗಿರುತ್ತವೆ.
ಬಿಜೆಪಿ ಅಧಿಕಾರಕ್ಕೆ ಬರಲೂ ಬಾಂಗ್ಲಾ ನುಸುಳುಕೋರರೇ ಕಾರಣ
ಹೌದು, ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೂ ಬಾಂಗ್ಲಾ ನುಸುಳುಕೋರರೇ ಕಾರಣ. ಅಸ್ಸಾಂಅನ್ನು ಆಕ್ರಮಿಸಿಕೊಳ್ಳುತ್ತಿದ್ದ ಬಾಂಗ್ಲಾ ನುಸುಳುಕೋರರನ್ನು ತಡೆಯುವ ಪ್ರಯತ್ನವನ್ನು ಹಿಂದಿದ್ದ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ. ಜನರೂ ಸಹ ಇದರಿಂದ ಬೇಸತ್ತಿದ್ದರು. ಗಡಿಯನ್ನು ಬಲಪಡಿಸುವುದು ಮತ್ತು ಅಕ್ರಮ ನುಸುಳುಕೋರರನ್ನು ಹಿಂದಿಕ್ಕುವುದು ಬಿಜೆಪಿಯ ಚುನಾವಣಾ ಆಶ್ವಾಸನೆಯಾಗಿತ್ತು. ಅಸ್ಸಾಮಿನ ಜನ ಅತ್ಯಂತ ಸಹಜವಾಗಿ ಬಿಜೆಪಿಗೆ ಮತ ನೀಡಿದರು. ಬಿಜೆಪಿ ಗೆಲುವು ಯಾರಿಗೂ ಆಶ್ವರ್ಯ ಹುಟ್ಟಿಸಲಿಲ್ಲ. ನುಸುಳುಕೋರರನ್ನು ತಡೆಯದೇ ಹೋದರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಣಿಪುರಗಳಲ್ಲೂ ಅಸ್ಸಾಂನಂತಹ ಪರಿಸ್ಥಿತಿ ಹುಟ್ಟುತ್ತದೆ.
ಆಧಾರ್ಗೆ ಬೇಡ ಆಧಾರ
ವಿದೇಶಿಯರಿಗೆಲ್ಲ ಆಧಾರ್ ಕಾರ್ಡ್..!
ಕಾರ್ಡ್-1
ಮೊದಲನೆಯ ಆಧಾರ್ ಕಾರ್ಡ್ ಕ್ಯಾಂಪ್-2ರ ಮುಖ್ಯಸ್ಥ ಮೊಹಮ್ಮದ್ ಸರೋಅರ್ನದು. ಆತ ನೀಡಿರುವ ವಿಳಾಸ ಮಸೀದಿ ರಸ್ತೆ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ. ಆದರೆ ವಾಸವಿರುವುದು ಹುಣಸೇತೋಪಿನ ಟೆಂಟಿನಲ್ಲಿ. ಮಸೀದಿ ರಸ್ತೆಯ ವಿಳಾಸ ನೀಡಿ ಆಧಾರ್ ಕಾರ್ಡ್ ಪಡೆಯಲು ಯಾರು ಸಹಾಯ ಮಾಡಿದರು ಎಂಬುದು ಗಂಭೀರ ಪ್ರಶ್ನೆ.
ಕಾರ್ಡ್ 2 ಮತ್ತು 3
ನಾವು ಸರ್ಕಾರಿ ಅಧಿಕಾರಿಗಳು ಎಂದು ನಂಬಿದ ಮೊಹಮ್ಮದ್ ಆರಿಫ್ ಕೆ, ಸವಲತ್ತುಗಳನ್ನು ಪಡೆಯುವ ಆಸೆಯಿಂದ ತನ್ನ ಆಧಾರ್ ಕಾರ್ಡನ್ನು ನಮಗೆ ತೋರಿಸಿದ. ಆತ ತನ್ನನ್ನು ಬಾಂಗ್ಲಾದೇಶಿಗ ಎಂದು ಒಪ್ಪಿಕೊಂಡಿದ್ದರಿಂದ ಆತನಲ್ಲಿ ಇರಬಹುದಾದ ಆಧಾರ್ ಕಾರ್ಡ್ ನೋಡಲು ನಾವೂ ಉತ್ಸುಕರಾಗಿದ್ದೆವು. ಆರಿಫನು ತನ್ನ ಹಾಗೂ ಪತ್ನಿ ಸುಮಿಯ ಆಧಾರ್ ಕಾರ್ಡ್ ತೋರಿಸಿದಾಗ ನಮಗೆ ಆಶ್ಚರ್ಯ ಕಾದಿತ್ತು. ಆರಿಫನ ವಿಳಾಸ ಮಸೀದಿ ರಸ್ತೆ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಎಂದಿದ್ದರೆ, ಆತನ ಪತ್ನಿ ಸುಮಿಯ ಆಧಾರ್ ಕಾರ್ಡ್ನಲ್ಲಿದ್ದ ವಿಳಾಸ ಬಿದರಹಳ್ಳಿ ಹೋಬಳಿ, ಕಾಟಂನಲ್ಲೂರು, ಬೆಂಗಳೂರು. ಬಾಂಗ್ಲಾದೇಶದಿಂದ ಬಂದಿರುವ ಈ ದಂಪತಿಗಳ ವಿಳಾಸ ಮಾತ್ರ ಬೇರೆ ಬೇರೆಯಾಗಿರುವುದು ಸಾಮಾನ್ಯರಿಗೂ ಸಂಶಯ ಮೂಡುವಂತದ್ದು. ಹೀಗೆ ಯಾವುದೇ ಆಧಾರವಿಲ್ಲದೆ ವಿತರಿಸಲಾಗುತ್ತಿರುವ ಆಧಾರ್ ಕಾರ್ಡ್ನಿಂದ ದೇಶಕ್ಕಾಗಬಹುದಾದ ನಷ್ಟಗಳು ಬಹಳಷ್ಟು.
ಎರಡು ಕೋಟಿಗೂ ಹೆಚ್ಚು ನುಸುಳುಕೋರರು ಭಾರತದಲ್ಲಿ!
ಭಾರತದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ದೊಡ್ಡ ಪ್ರಮಾಣದಲ್ಲಿ ಇರುವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ನಾವೀಗ ಇದ್ದೇವೆ; ಏಕೆಂದರೆ ಅವರ ಸಂಖ್ಯೆ ಸುಮಾರು ಎರಡು ಕೋಟಿ ಎಂಬುದಾಗಿ 2012ರಲ್ಲಿ ವಿದೇಶಾಂಗ ಖಾತೆ ಮಾಜಿ ರಾಜ್ಯಸಚಿವ ಶಶಿತರೂರ್ ಅವರೇ ನಂಬಲರ್ಹವಾಗಿ ಅಂದಾಜಿಸಿದ್ದರು. ಹಲವು ಕಡೆಗಳಲ್ಲಿ ಮಾಡಿದ ಭಾಷಣಗಳಲ್ಲಿ ಅವರು ಅದೇ ಸಂಖ್ಯೆಯನ್ನು ಪುನರುಚ್ಚರಿಸಿದ್ದು ಕಾಣಿಸುತ್ತದೆ.
‘ಡೆಕ್ಕನ್ ಕ್ರಾಸಿಕಲ್’ ಪತ್ರಿಕೆಯಲ್ಲಿ ಮೇ 11, 2012 ರಂದು ಪ್ರಕಟವಾದ ಒಂದು ಲೇಖನದಲ್ಲಿ ಅವರು ಹೀಗೆ ಹೇಳಿದ್ದರು : ‘ಬಾಂಗ್ಲಾದೇಶವು ಸಾಕಷ್ಟು ಈಚೆಗೆ ಕೂಡ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳಿಗೆ ಮತ್ತು ಭಯೋತ್ಪಾದಕರಿಗೆ ಒಂದು ಆಡುಂಬೊಲವಾಗಿತ್ತು. ಹಾಗೆಯೇ ಈಶಾನ್ಯ ಭಾರತೀಯ ಬಂಡುಕೋರರಿಗೂ ಆಶ್ರಯ ತಾಣವಾಗಿತ್ತು. ಭಾರತಕ್ಕೆ ಅಕ್ರಮ ವಲಸಿಗರನ್ನು ಕಳುಹಿಸುವುದರಲ್ಲಿಯೂ ಅದರ ಪಾತ್ರವಿದೆ; ಕಳೆದ ಎರಡು ದಶಕಗಳಲ್ಲಿ ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರು ಭಾರತಕ್ಕೆ ಅಕ್ರಮಪ್ರವೇಶ ಮಾಡಿದ್ದಾರೆಂಬ ವಿಚಾರ ವಿಶ್ವಸನೀಯ ಮೂಲಗಳಿಂದ ತಿಳಿಯಲಾಗಿದೆ; ಅಲ್ಲಿಂದ ಅವರು ಇಡೀ ದೇಶಕ್ಕೆ ಪಸರಿಸಿದ್ದಾರೆ.’
ಶ್ರೀಲಂಕಾ, ಸಿರಿಯ, ನೆದರ್ಲೆಂಡ್ಸ್, ಒಶಿಲಿ, ಹಂಗೇರಿ, ಬೆಲ್ಜಿಯಮ್ ಸೇರಿದಂತೆ ಜಗತ್ತಿನ 25ಕ್ಕೂ ಅಧಿಕ ದೇಶಗಳ ಜನಸಂಖ್ಯೆ ಎರಡು ಕೋಟಿ ಅಥವಾ ಅದಕ್ಕಿಂತ ಕಡಿಮೆ ಎಂಬುದನ್ನು ಮನಗಂಡರೆ ಈ ಸಮಸ್ಯೆಯ ಅಗಾಧತೆ ತಿಳಿಯುತ್ತದೆ.
ಈ ತೀವ್ರ ಸ್ವರೂಪದ ಅಕ್ರಮಪ್ರವೇಶದಿಂದ ಗರಿಷ್ಠ ಹಾನಿಗೀಡಾದ ರಾಜ್ಯವೆಂದರೆ ಅಸ್ಸಾಂ. ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೀವ್ರಸ್ವರೂಪದ ಜನಾಸಂಖ್ಯಾ ಅಸಮತೋಲನ ಉಂಟಾಗಿದೆ; ಪರಿಣಾಮವಾಗಿ ಆಗಾಗ ಜನಂಗೀಯ ಘರ್ಷಣೆಗಳು ನಡೆದಿವೆ; ಬೃಹತ್ ಸ್ವರೂಪದ ಹತ್ಯಾಕಾಂಡಗಳು ಸಂಭವಿಸಿವೆ. 1983ರಲ್ಲಿ ನೆಲ್ಲಿ ಎಂಬಲ್ಲಿ ನಡೆದ ಹತ್ಯಾಕಾಂಡದಲ್ಲಿ ಸುಮಾರು 2,000 ಜನ ಬಲಿಯಾಗಿದ್ದರು.
ಎರಡು ವರ್ಷಗಳ ಹಿಂದೆ ಕೋಕ್ರಜಾರ್ನಲ್ಲಿ ನಡೆದ ಜನಾಂಗೀಯ ಘರ್ಷಣೆಗಳಿಂದ ಒಂದು ಹೊಸ ವಿದ್ಯಮಾನವು ಕಂಡುಬಂತು; ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಈಶಾನ್ಯ ಭಾರತದ ವಿದ್ಯಾರ್ಥಿಗಳ ಮೇಲೆ ದಾಳಿಗಳು ನಡೆದವು. ಅವರಿಗೆ ಬೆದರಿಕೆಯೊಡ್ಡಲಾಯಿತು. ಪುಣೆಯಲ್ಲಿ ಕೆಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದರೆ ಬೆಂಗಳೂರಿನಲ್ಲಿ ಭಯದ ವಾತಾವರಣ ಉಂಟುಮಾಡಿ ಸುಮಾರು 5,000 ಮಂದಿ ಭಯದಿಂದ ಹುಟ್ಟೂರಿಗೆ ಮರಳುವಂತೆ ಮಾಡಲಾಯಿತು. ಮೈಸೂರಿನಲ್ಲಿ ಓರ್ವ ಟಿಬೆಟಿಯನ್ಗೆ ಇರಿದಿದ್ದು ಅದನ್ನು ಈಶಾನ್ಯ ಭಾರತದ ಪ್ರಜೆ ಮೇಲಿನ ದಾಳಿ ಎಂಬಂತೆ ಬಿಂಬಿಸಲಾಯಿತು. ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಈಚೆಗೆ ಮುಂಬಯಿಯಲ್ಲೊಂದು ಪ್ರತಿಭಟನಾ ರ್ಯಾಲಿ ನಡೆದಾಗ ಹಿಂಸಾಚಾರ ಉಂಟಾಗಿದ್ದು, ಅದನ್ನು ಕೂಡ ಮೇಲಿನ ಘಟನೆಗಳ ಸಾಲಿಗೆ ಸೇರಿಸಬಹುದು. ಬಾಂಗ್ಲಾದೇಶಿ ಅಕ್ರಮವಲಸಿಗರಿಂದ ‘ಭಾರತದ ಆಂತರಿಕ ಭದ್ರತೆಗೆ ಬೆದರಿಕೆಯಿದೆ’ ಎಂದು ಸುಪ್ರೀಂಕೋರ್ಟ್ ಮತ್ತು ದೆಹಲಿ ಹೈಕೋರ್ಟ್ಗಳು ಎಚ್ಚರಿಕೆ ನೀಡಿದ್ದರೂ ಇದು ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಾದ್ದರಿಂದ ಇದನ್ನು ಬಹುತೇಕ ಹಿನ್ನೆಲೆಗೆ ಸೇರಿಸಲಾಗಿದೆ. ವರ್ಷಗಳು ಸರಿದಂತೆ ಇದು ದೊಡ್ಡದಾಗಿ ಬೆಳೆದಿದ್ದು, ಪೂರ್ತಿ ರಾಜಕೀಯವಾಗಿದೆ ಮತ್ತು ಧ್ರುವೀಕರಣ ಉಂಟುಮಾಡಿದೆ; ಕಾಂಗ್ರೆಸ್ ವೋಟ್ಬ್ಯಾಂಕ್ ರಾಜಕೀಯ ನಡೆಸುತ್ತಿದೆ ಎಂದು ಬಿಜೆಪಿ ಮತ್ತು ಶೀವಸೇನೆಗಳು ಆರೋಪಿಸುತ್ತಿವೆ.
ಭಾರತೀಯರಾದ ನಾವು ಎಂತಹ ಜನಾಂಗವೆಂದರೆ, ಒಂದು ಸಮಸ್ಯೆ ವಿಪರೀತಕ್ಕೆ ಹೋದಾಗಲೇ ನಾವು ಪ್ರತಿಕ್ರಿಯಿಸುವವರು. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಂಡುಬಂದಿರುವ ವಿದ್ಯಮಾನಗಳು ಸಮಸ್ಯೆ ಆ ಮಟ್ಟಕ್ಕೆ ಮುಟ್ಟಿರುವುದನ್ನು ಸೂಚಿಸುವಂತಿವೆ. ಕನಿಷ್ಠ ಈಗಲಾದರೂ ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಮಸ್ಯೆಯನ್ನು ಗಂಭೀರವಾಗಿ ಎದುರಿಸುವ ಸನ್ನಿವೇಶ ಬಂದಂತಿದೆ.
ವಿಕ್ರಮ ಮ್ಯಾಗಜಿನ್ ನಲ್ಲಿ ಪ್ರಕಟವಾದ ತನಿಖಾ ವರದಿ
Very good report but it is really scary to know that we have 2crore enemies inside the country…hope people near to those places and govt will take action and send these people back to their country