ಬ್ರಹ್ಮಚರ್ಯವೇ ಅಸಹಜವೆಂದ ದಾರ್ಶನಿಕ, ಸನ್ಯಾಸಿನಿಯನ್ನು ವಂಚಕಿ ಎಂದ….!!
– ಗುರುರಾಜ ಕೋಡ್ಕಣಿ. ಯಲ್ಲಾಪುರ
“ನಾನು ಯಾರನ್ನೂ ಸಹ ಆದರ್ಶವ್ಯಕ್ತಿಯಾಗಿ ಸ್ವೀಕರಿಸಲಾರೆ. ನನ್ನನ್ನೂ ಸಹ ಯಾರೂ ಆದರ್ಶವಾಗಿ ಸ್ವೀಕರಿಸಬಾರದು. ಆದರ್ಶ ವ್ಯಕ್ತಿತ್ವಗಳಲ್ಲಿ ಮೇಲು ಕೀಳು ಎಂಬ ಭೇದವಿರಬಾರದು. ಮೊದಲು ಜನಿಸಿದ್ದ ಆದರ್ಶ ವ್ಯಕ್ತಿ, ನಂತರ ಜನಿಸಿದ ಮಹಾನ್ ವ್ಯಕ್ತಿಗಿಂತ ಶ್ರೇಷ್ಟವೆನ್ನುವುದು ಅರ್ಥಹೀನ. ವ್ಯಕ್ತಿತ್ವಗಳಲ್ಲಿನ ಮಹಾನತೆ ಸಮಾನಾಂತರ ರೇಖೆಯಂಥದ್ದು. ಮಹಾತ್ಮಾ ಗಾಂಧಿ, ಮದರ್ ತೆರೆಸಾರಂಥಹ ವ್ಯಕ್ತಿತ್ವಗಳ ಮೇಲೆ ನನಗೆ ತೀರ ಕಡಿಮೆ ಗೌರವವಿದೆ ಎಂಬುದು ಅನೇಕರ ಅಂಬೋಣ. ಅಂಥಹ ಅಭಿಪ್ರಾಯಗಳು ಸಂಪೂರ್ಣ ತಪ್ಪು. ಅಸಲಿಗೆ ನನಗೆ ಇಂಥವರ ಮೇಲೆ ಗೌರವವೇ ಇಲ್ಲ. ಅಂದ ಮೇಲೆ ಹೆಚ್ಚು ಗೌರವ, ಕಡಿಮೆ ಆದರ ಎನ್ನುವ ಪ್ರಶ್ನೆಯೇ ನಿರರ್ಥಕ. ಇವರೆಲ್ಲರೂ ಆದರ್ಶವಾದಿ ಅಪರಾಧಿಗಳು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಕಾನೂನು ಮರಣದಂಡನೆ ವಿಧಿಸುವ ದುಷ್ಕರ್ಮಿಗಳ ಅಪರಾಧಕ್ಕಿಂತಲೂ ಇಂಥಹ ಆದರ್ಶವಾದಿ ಅಪರಾಧಿಗಳ ಅಪರಾಧ ಘೋರವೆನ್ನುವುದು ನನ್ನ ವಾದ. ಒಂದರ್ಥದಲ್ಲಿ ನಿಜವಾದ ಅಪರಾಧಿಗಳೆಂದರೆ ಇಂಥವರೇ. ಮದರ್ ತೆರೆಸಾರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವದ ಹತ್ತಾರು ರಾಷ್ಟ್ರಗಳು ಆಕೆಯ ಸಾಧನೆಯನ್ನು ಮೆಚ್ಚಿ ಪ್ರಶಸ್ತಿಗಳ ಸುರಿಮಳೆಗೈದವು. ಇಂದಿಗೂ ವಿಶ್ವವಿದ್ಯಾಲಯಗಳು ಆಕೆಗೆ ಒಂದರ ಹಿಂದೊಂದರಂತೆ ಗೌರವ ಡಾಕ್ಟರೇಟ್ ನೀಡುತ್ತಲೇ ಇವೆ. ಇಷ್ಟಾಗಿಯೂ ಆಕೆಯ ಸಾಧನೆಯೇನು ಎಂಬುದು ನನಗರ್ಥವಾಗದ ವಿಷಯ. ಕೈಗೆ ಸಿಕ್ಕ ಅನಾಥರನ್ನೆಲ್ಲ ಎಳೆದುಕೊಂಡು ಹೋಗಿ ಅವರೆಲ್ಲರನ್ನು ಕ್ಯಾಥೋಲಿಕ್ಕರನ್ನಾಗಿ ಪರಿವರ್ತಿಸಿದ್ದೇ ಆಕೆಯ ಸಾಧನೆ. ಮತ್ತಷ್ಟು ಓದು