“ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ….”


ಸಂಸ್ಕೃತಿ ಸಂಕಥನ – ೯
– ರಮಾನಂದ ಐನಕೈ
ವರ್ಶಿಪ್ ಅಂದರೆ ನಮ್ಮ ಪೂಜೆ ಅಲ್ಲ
ಜನಸಾಮಾನ್ಯರ ಮಾತು ಹಾಗಿರಲಿ, ಯಾವುದೇ ಭಾರತೀಯ ತಿಳುವಳಿಕಸ್ತನ ಹತ್ತಿರ ‘ಪೂಜೆ’ ಅಂದರೆ ಏನೆಂದು ಕೇಳಿದರೆ ‘ವರ್ಶಿಪ್’ ಎಂದು ಉತ್ತರ ಕೊಡುತ್ತಾನೆ. ‘ವರ್ಶಿಪ್’ ಅಂದರೆ ಏನೆಂದು ಕೇಳಿದರೆ ‘ಪೂಜೆ’ ಅನ್ನುತ್ತಾನೆ. ಅದು ಸ್ವಾಭಾವಿಕ. ಏಕೆಂದರೆ ನೂರಾರು ವರ್ಷಗಳಿಂದ ನಮ್ಮ ಜ್ಞಾನ ಇಷ್ಟು ಹದಕ್ಕೆ ಬಂದಿದೆ. ಹೆಚ್ಚು ವಾದ ಮಾಡಿದರೆ ನಿಘಂಟು ತೆರೆದು ತೊರಿಸುತ್ತಾರೆ. ಅಲ್ಲಿ ವರ್ಶಿಪ್ ಅಂದರೆ ಅರ್ಚನೆ, ಪೂಜೆ, ಆರಾಧನೆ ಎಂಬಿತ್ಯಾದಿ ಅರ್ಥಗಳಿವೆ. ನಾವಿಲ್ಲಿ ಚರ್ಚಿಸುತ್ತಿರುವುದು ತರ್ಜುಮೆಯ ಕುರಿತಾಗಲ್ಲ ಅಥವಾ ಪದಗಳ ಅರ್ಥ ವ್ಯತ್ಯಾಸಗಳ ಬಗ್ಗೆಯೂ ಅಲ್ಲ. ಇಂಥ ತಪ್ಪು ಗೃಹಿಕೆಗಳು ಒಂದು ಸಂಸ್ಕೃತಿಯ ಮೇಲೆ ಮಾಡುವ ತಪ್ಪು ಪರಿಣಾಮಗಳ ಕುರಿತು.
ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಆಚರಣೆಗಳನ್ನು ನೋಡಿ ‘ಭಾರತೀಯರು ವರ್ಶಿಪ್ ಮಾಡುತ್ತಿಲ್ಲ, ಬದಲಾಗಿ ನೂರಾರು ದೇವರುಗಳನ್ನು ಪೂಜೆ ಮಾಡುತ್ತಾರೆ’ ಎಂದು ಗ್ರಹಿಸಿದರೆ ತೊಂದರೆ ಇಲ್ಲವಾಗಿತ್ತು. ಆದರೆ ಅವರು ಭಾರತೀಯರು ತಪ್ಪುತಪ್ಪಾಗಿ ವರ್ಶಿಪ್ ಮಾಡುತ್ತಿದ್ದಾರೆ ಎಂದು ಗ್ರಹಿಸಿದ್ದೇ ಯಡವಟ್ಟಾಗಲು ಕಾರಣ. ಏಕೆಂದರೆ ಮುಂದೆ ಅವರು ಈ ತಪ್ಪು ವರ್ಶಿಪ್ ಸರಿಪಡಿಸಲು ಪ್ರಯತ್ನಿಸಬೇಕಾಯಿತು. ಈ ಪ್ರಯತ್ನವೇ ಭಾರತೀಯ ಸಂಸ್ಕೃತಿಗೆ ಬಡಿದ ಬಾಲಗ್ರಹ ಎಂಬುದು ಬಾಲಗಂಗಾಧರರ ಬರಹಗಳನ್ನು ಓದಿದಾಗ ಅರಿವಾಗುತ್ತದೆ.