ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು
ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.
ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.
ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.
ನಂದಿ ಬೆಟ್ಟ ಟ್ರಿಪ್ -೧
– ಪ್ರಶಸ್ತಿ.ಪಿ, ಸಾಗರ
ಬೆಂಗಳೂರಿಗೆ ಬಂದು ಪೀಜಿ ಹಿಡ್ದಾಗಿನಿಂದ ವಾರಾಂತ್ಯದಲ್ಲಿ ಎಲ್ಲೂ ಸುತ್ಲಿಲ್ಲ ಅಂದ್ರೆ ಏನೋ ಮಿಸ್ಸಿಂಗು, ಬೋರಿಂಗು ಅನ್ಸೋಕೆ ಶುರು ಆಗತ್ತೆ. ಮಾಡಕ್ಕೆ ಬೇರೆ ಕೆಲ್ಸ ಇಲ್ಲದೇ ಸುತ್ತೋದು ಅಂತೇನೂ ಅಲ್ಲ..ಆದ್ರೆ ಯಾಕೋ ಗೊತ್ತಿಲ್ಲ “ದೇಶ ಸುತ್ತು, ಕೋಶ ಓದು ಅಂತಾರಲ್ಲ”. ಅದರಲ್ಲಿ ೨ನೇದೇ ಸ್ವಲ್ಪ ಇಷ್ಟ ಆಗ್ತಿತ್ತು ನಂಗೆ. ಹಿಂಗಿರೋವಾಗ ಬೆಂಗಳೂರಲ್ಲೇ ಇದ್ದು ನಂದಿ ಬೆಟ್ಟಕ್ಕೆ ಹೋಗಿಲ್ಲ ಅಂದ್ರೆ ಹೆಂಗೆ ಅಂತ ಅನ್ಸಿಬಿಡ್ತು ಒಂದು ವಾರ. ಕೆಲ ತಿಂಗಳ ಹಿಂದೆ ಹರೀಶಣ್ಣ ಮತ್ತು ತಂಡದವ್ರು ಹೋಗಿದ್ದ ಫೋಟೋ ನೋಡಿ ನಾನೂ ಹೋಗ್ಬೇಕಿತ್ತು, ಛೆ , ಅಂತ ಆಸೆ ಆಗಿದ್ದೂ ಸುಳ್ಳಲ್ಲ. ಸರಿ ಅಂತ ಮುಂದಿನ ಶನಿವಾರಕ್ಕೆ ಅಲ್ಲಿಗೇ ಹೋಗದು ಅಂತ ಫಿಕ್ಸ್ ಮಾಡಿ ಸ್ವಲ್ಪ ಚೇಂಜ್ ಇರ್ಲಿ ಅಂತ FB ಲೊಂದು Event ಮಾಡಿಕರಿದ್ವಿ..೨-೩ ದಿನ ಆದ್ರೂ ಪ್ರತಿಕ್ರಿಯೆ ನೋಡಿ ಕೂಸು ಹುಟ್ಸಕ್ಕೆ ಮುಂಚೇನೆ ಕುಲಾವಿ ಹೊಲ್ಸಿದ್ವಾ ಅಂತನೇ ಅನಿಸ್ತಿತ್ತು. ಕೊನೆಗೆ ಗುರುವಾರ, ಮತ್ತೆ ತಕಾ ಅಂತ ಬೆಂದಕಾಳೂರ ಸೆಕೇಲಿ ಬೆಂದು ಶನಿವಾರ ಮಧ್ಯಾಹ್ನದವರ್ಗೆ ಪಾಚ್ಕೊಳೋಕೆ(ಮಲ್ಗೋಕೆ!!) ಸ್ಕೆಚ್ ಹಾಕಿದ್ದ ಗೆಳೆಯರಿಗೆಲ್ಲಾ ಮೆಸೇಜಾಯ ನಮಃ ಅಂದಾಯ್ತು. ಕೆಲೋರು ಬರ್ತೋನಿ ಅಂದ್ರು. ಕೆಲೋರು ಪ್ರತೀ ಸಲದಂಗೇ ಕೈಯತ್ತಿದ್ರು. ಕೆಲೋರು ಸರಿ ಮಚಾ, ಶುಕ್ರವಾರ ರಾತ್ರೆ ಹೇಳ್ತೀನಿ ಅಂದ್ರು. ಇಲ್ಲಾ ಮಗಾ ಊರಿಗೆ ಹೋಗ್ಬೇಕು, ಸೋರಿ ಕಣೋ ಅಲ್ಲಿಗೆ ಹೋಗ್ಬೇಕು, ಮುಂಚೇನೆ ಪ್ಲಾನ್ ಆಗ್ಬಿಟ್ಟಿದೆ ಅವನನ್ನ ಮೀಟ್ ಮಾಡ್ಬೇಕು ಅನ್ನೋ ತರಾವರಿ ಉತ್ರಗಳೂ ಬಂದ್ವು. ಒಂದು ವರ್ಷ ಮುಂಚೆ ಪ್ಲಾನ್ ಮಾಡಿದ್ರೂ ಇದೇ ಕತೆ ಬಿಡೋ .. ಕರ್ಮ ಅಂತ ಒಂದ್ಸಲ ಬೇಜಾರ್ ಮಾಡ್ಕಂಡ ಫ್ರೆಂಡು..ಎಲ್ಲಾದ್ರೂ ಬಿಟ್ ಹೋದ್ರೆ ನನ್ಯಾಕೆ ಕರ್ದಿಲ್ಲ ಅಂತ ಹಿಗ್ಗಾಮುಗ್ಗಾ ಜಾಡಿಸೋ ಇವ್ರುಗಳ್ನ ಎಲ್ಲಿಗಾದ್ರೂ ಬರ್ತೀರ ಕರದ್ರೆ ಇದೇ ಗೋಳು ಕಣ್ಲಾ ಅಂದ ಗೆಳೆಯ. ಕೊನೆಗೆ ಆ ಮೆಸೇಜು ಎಲ್ಲೆಲ್ಲೋ ತಿರ್ಗಿ ತಿರ್ಗಿ, ಯಾರ್ಯಾರೋ ಎಲ್ಲ ಕೇಳಂಗೆ ಆಗಿ ನಿರೀಕ್ಷೆನೇ ಮಾಡ್ದೇ ಇದ್ದ ಹಳೇ ಗೆಳೆಯರೆಲ್ಲಾ ಸಿಕ್ಕು ಒಟ್ಟು ೮ ಜನ ಬೆಟ್ಟ ಹತ್ತೋ ಭೂಪರು ರೆಡಿ ಆದ್ವಿ ಅನ್ನಿ ಕೊನೆಗೆ 🙂
ನಂದಿ ಬೆಟ್ಟ ಬೆಳಗಿಂದು , ಸ್ಕಂದ ಗಿರಿ ರಾತ್ರೀದು ಅಂದಿದ್ದ ಗೆಳೆಯ ವಿಶು. ಬೆಳ ಬೆಳಗ್ಗೆ ೪:೩೦ ಗೆ ಅಲ್ಲಿಗೆ ಹೋಗಿದ್ವಿ. ಏನು ಚಂದಾ ಇತ್ತು ಅನ್ನಿ. ಮಂಜು ಬೀಳೋದು ನೋಡೋದೇ ಸ್ವರ್ಗ ಅನ್ನೋ ತರ ಅಲ್ಲಿಗೆ ಹೋದ ಬ್ಲಾಗ್ ಗೆಳೆಯ ಒಬ್ಬ ಬರ್ಕೊಂಡಿದ್ದ. ಆದ್ರೆ ಅಷ್ಟು ಮುಂಚೆ, ಅದೂ ವಾರಾಂತ್ಯದ ಶನಿವಾರ ಗೆಳೆಯರನ್ನ ಹೊರಡ್ಸೋ ಸೀನೇ ಇರ್ಲಿಲ್ಲ. ಸರಿ ಅಂತ ೭:೩೦ ಗೆ ಹೊರಡೋದು ಅಂತ ಅಂದ್ವಿ. ಎರ್ಲನ್ನೂ ಸೇರಿಸ್ಕಂಡು ಅಲ್ಲಿಗೆ ಹೋಗಿದ್ದನ್ನ ಬರದ್ರೆ ಅದೇ ಒಂದು ಲೇಖನ ಆಗ್ಬೋದು. ಈಗಾಗ್ಲೇ ಈ ಲೇಖನ ಓದಕ್ಕೆ ಯಾಕೆ ಶುರು ಮಾಡಿದ್ನೋ ಅಂತ ಬೋರು ಹೊಡೆದು ಪೇಜು ಬಿಡೋಕೆ ಪ್ಲಾನ್ ಮಾಡ್ತಿರಬಹುದಾದ ನಿಮಗೆಲ್ಲಾ ಇನ್ನೂ ಕೊರೆಯದೇ ನಂದಿ ಬೆಟ್ಟದ ನಿಜವಾದ ಅನುಭವಕ್ಕೆ ಬರ್ತೀನಿ.