ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.
ಡಬ್ಬಿಂಗ್ ಪರವಾಗಿರುವವರು ವಾದಿಸುವುದೆಂದರೆ ‘ ನಾವು ಗ್ರಾಹಕರು. ಏನು ಪಡೆಯಬೇಕು ಎಂಬುದನ್ನು ನಾವು ನಿರ್ಧರಿಸಬೇಕೆ ಹೊರತು ಚಿತ್ರರಂಗದ ಕೆಲವರಲ್ಲ. ಇತರೆ ರಾಜ್ಯದವರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಕಾರ್ಟೂನ್, ಡಿಸ್ಕವರಿ, ಪೋಗೋದಂಥಹ ವಾಹಿನಿಗಳನ್ನು, ಆಂಗ್ಲ ಸಿನಿಮಾಗಳನ್ನು ನೋಡುತ್ತಿರುವಾಗ ನಾವ್ಯಾಕೆ ಪರಭಾಷೆಯಲ್ಲೇ ಅವುಗಳನ್ನು ವೀಕ್ಷಿಸಬೇಕು? ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಕನ್ನಡದಲ್ಲಿ ಚಿತ್ರ – ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯದಿಂದ ವಂಚಿತನಾಗಬೇಕೇಕೆ? ಅರ್ಥವಾಗದ ಭಾಷೆಯ ಸಿನಿಮಾಗಳನ್ನು ನೋಡಿ ಅರ್ದಂಬರ್ಧ ತಿಳಿದುಕೊಳ್ಳುವ ಬದಲು ಡಬ್ಬಿಂಗ್ ಮಾಡಿದರೆ ನನ್ನ ಭಾಷೆಯಲ್ಲೇ ನೋಡಿ ಆನಂದಿಸಿ ಸಂಪೂರ್ಣ ಅರಿತುಕೊಳ್ಳುವುದು ಒಳ್ಳೆಯದಲ್ಲವೇ? ತಮಿಳಿನಲ್ಲೇ ಪೋಗೋ ವೀಕ್ಷಿಸುವ ಹುಡುಗನಿಗೆ ತನ್ನ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆಯೇ ಹೊರತು ಅದೇ ಕಾರ್ಯಕ್ರಮಗಳನ್ನು ಇಂಗ್ಲೀಷಿನಲ್ಲಿ ನೋಡುವ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಬೆಳೆಯಲು ಹೇಗೆ ಸಾಧ್ಯ? ನಮ್ಮ ಹಕ್ಕನ್ನು ಕಸಿದುಕೊಂಡಿರುವ ಚಿತ್ರೋದ್ಯಮದ ಈ ನೀತಿ ಸಂವಿಧಾನಬಾಹಿರ’
ಇನ್ನು ಡಬ್ಬಿಂಗ್ ವಿರೋಧಿಸುವವರು ಮುಂದಿಡುವ ವಾದವೆಂದರೆ ‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂಥ ಹಿರಿಯ ಲೇಖಕರು ಆರಂಭಿಸಿದ ಈ ಚಳುವಳಿ ರಾಜ್ ಕುಮಾರ್ ರಂಥ ಮೇರು ನಟರ ನೇತೃತ್ವದಲ್ಲಿ ಮುಂದುವರಿದು ಕನ್ನಡ ಚಿತ್ರೋದ್ಯಮದ ಉಳಿವಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧಿಸಲಾಗಿದೆ. ಈ ನಿಷೇಧ ತೆರವುಗೊಳಿಸಿದರೆ ಹೆಚ್ಚು ಬಂಡವಾಳದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ. ಚಿತ್ರೋದ್ಯಮವನ್ನೇ ಅವಲಂಬಿಸಿದ ಜನರ ಹೊಟ್ಟೆಪಾಡಿಗೆ ಚ್ಯುತಿಯುಂಟಾಗುತ್ತದೆ. ಮೇಲಾಗಿ ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವಲಾಗಲಾರವು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ’
ಇವಿಷ್ಟೂ ವಾದಸರಣಿಯ ಹಿನ್ನೆಲೆಯಲ್ಲಿ ಡಬ್ಬಿಂಗ್ ವಿಚಾರವನ್ನು ವಿಶ್ಲೇಷಿಸಿದರೆ ಎರಡೂ ಗುಂಪಿನ ತಪ್ಪುಗಳು ಎದ್ದು ಕಾಣುತ್ತದೆ. ಮೊದಲನೆಯದಾಗಿ ಡಬ್ಬಿಂಗ್ ಪರವಾಗಿರುವವರು ಹೇಳುವಂತೆ ಪ್ರೇಕ್ಷಕ ಗ್ರಾಹಕನಲ್ಲ, ದುಡ್ಡು ಕೊಟ್ಟೇ ಸಿನಿಮಾಕ್ಕೆ ಹೋದಾಗ್ಯೂ ಕೂಡ ಪ್ರೇಕ್ಷಕ ಗ್ರಾಹಕನಲ್ಲ. ಸಿನಿಮಾ ಎಂಬುದು ಒಂದು ರೀತಿಯ ಕಲಾವಿಭಾಗವೇ ಹೊರತು ಕೇವಲ ವ್ಯಾಪಾರವಲ್ಲ, ಕೊನೇಪಕ್ಷ ಪ್ರೇಕ್ಷಕನ ದೃಷ್ಟಿಯಿಂದ. ಹೇಗೆ ಒಂದು ಪುಸ್ತಕದ ಓದು ಆತ್ಮಸಂತೋಷಕ್ಕೆ ದಾರಿ ಮಾಡಿಕೊಡುತ್ತಾ ಓದುಗರನ್ನು ಅಂತರಂಗದಿಂದ ತೃಪ್ತಿಪಡಿಸುತ್ತದೋ ಅದೇ ರೀತಿಯ ಕೆಲಸ ನಿಜವಾದ ಸಿನಿಮಾದಿಂದ ಸಾಧ್ಯವಾಗುತ್ತದೆ. ದುಡ್ಡು ಕೊಟ್ಟು ಪುಸ್ತಕ ಕೊಂಡಾಕ್ಷಣ ಓದುಗ ತನ್ನನ್ನು ತಾನೇ ಗ್ರಾಹಕನೆಂದುಕೊಂಡುಬಿಟ್ಟರೆ ಲೇಖಕನನ್ನು ವ್ಯಾಪಾರಿಯೆಂದುಕೊಂಡುಬಿಟ್ಟರೆ ಎಲ್ಲವನ್ನೂ ವ್ಯಾಪಾರ-ವಸ್ತು-ಲಾಭ-ನಷ್ಟದಿಂದಲೇ ತೂಗುವ ಜಾಗತೀಕರಣದ ಪ್ರಭಾವವೆನ್ನಬಹುದಷ್ಟೇ. ಇನ್ನು ಚಿತ್ರೋದ್ಯಮದವರ ಹೇಳಿಕೆಯಂತೆ ಡಬ್ಬಿಂಗ್ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ ಎಂಬುದೂ ಅವಸರದ ಹೇಳಿಕೆ. ಚಿತ್ರೋದ್ಯಮ ಕನ್ನಡ ಸಂಸ್ಕೃತಿಯ ಒಂದು ಭಾಗವೇ ಹೊರತು ಸಿನಿಮಾಗಳು ಮಾತ್ರ ಕನ್ನಡ ಸಂಸ್ಕೃತಿಯಲ್ಲ. ಡಬ್ಬಿಂಗ್ ನೆಲದ ಸಂಸ್ಕೃತಿಯನ್ನೇ ನಾಶಮಾಡಿಬಿಡುವಷ್ಟು ಶಕ್ತವಾಗಿದ್ದ ಪಕ್ಷದಲ್ಲಿ ‘ವಾಗೈ ಸೂಡಾ ವಾ’ ‘ಮರೀನಾ’ದಂಥ ಅದ್ಬುತ ಮಣ್ಣಿನ ಸಿನಿಮಾಗಳನ್ನು ತಯಾರಿಸಲು ತಮಿಳರಿಗೆ ಸಾಧ್ಯವಾಗುತ್ತಿತ್ತೇ? ಡಬ್ ಆಗದಿರುವ ಚಿತ್ರಗಳೇ ನಮ್ಮ ರಾಜ್ಯದ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವಾಗ ಡಬ್ಬಿಂಗ್ ಚಿತ್ರಗಳು ಮಾತ್ರ ನಮ್ಮ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ ಎನ್ನುವುದು ಹಾಸ್ಯಾಸ್ಪದವೇ ಸರಿ.
ಇನ್ನು ಡಬ್ಬಿಂಗ್ ವಿರೋಧಿಸುವ ಬಹುತೇಕರು ರೀಮೇಕಿನ ಬಗ್ಗೆ ಸೊಲ್ಲೆತ್ತುವುದಿಲ್ಲ! ರೀಮೇಕ್ ಎಂದರೆ ಪುಸ್ತಕವೊಂದನ್ನು ಅನುವಾದಿಸಿದಂತೆ; ರೀಮೇಕ್ ಚಿತ್ರವಾದರೂ ನಮ್ಮ ಜನರಿಗೆ ಕೆಲಸ ದೊರಕುತ್ತದೆ. ಡಬ್ಬಿಂಗಿನಿಂದ ಕಂಠದಾನ ಕಲಾವಿದರನ್ನು ಹೊರತುಪಡಿಸಿ ಉಳಿದವರಿಗೆ ಕೆಲಸ ದೊರಕದು ಎಂದು ರೀಮೇಕ್ ಚಿತ್ರಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ರೀಮೇಕಿನಲ್ಲಿ ಕನ್ನಡ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವೇ? ಲಿಯೋ ಟಾಲ್ ಸ್ಟಾಯ್ ನ ‘ವಾರ್ ಅಂಡ್ ಪೀಸ್’ ಕೃತಿಯನ್ನು ಕನ್ನಡದಲ್ಲಿ ಓದಿದಾಗಲೂ ಕೂಡ ಅದು ರಷ್ಯಾದ ಕಥೆಯಾಗಿ ನಮ್ಮನ್ನು ತಲುಪುತ್ತದೆಯೇ ಹೊರತು ಭಾರತದ ಕಥೆಯಗಲ್ಲ. ಪುಸ್ತಕಗಳು ಅನುವಾದವಾಗುವುದು ಎಲ್ಲೆಡೆಗೂ ಸಲ್ಲುವ ಅದರಲ್ಲಿನ ಮೌಲ್ಯಗಳಿಗಾಗಿಯೇ ಹೊರತು ಕಥೆಗಾಗಿಯಲ್ಲ. ಮೌಲ್ಯಭರಿತ ಪರಭಾಷಾ ಚಿತ್ರಗಳನ್ನು ರೀಮೇಕಿಸಿದ್ದರೆ ರೀಮೇಕ್ ಪರವಾಗಿರುವವರನ್ನು ಒಪ್ಪಬಹುದಿತ್ತು. ಆದರೆ ರೀಮೇಕಿಸುವುದು ಮಸಾಲಾ ಭರಿತ ಚಿತ್ರಗಳನ್ನಷ್ಟೇ. ‘ನಮ್ಮ ಕನ್ನಡಕ್ಕೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಚಿತ್ರ ತಯಾರಿಸಿದ್ದೇವೆ’ ಎಂದು ರೀಮೇಕಿಗರು ಹೇಳಿಕೊಳ್ಳುತ್ತಾರೆ. ಆದರೆ ಪ್ರತಿ ದೃಶ್ಯವನ್ನೂ ನಕಲು ಮಾಡುವವರೇ ಹೆಚ್ಚು. ಇತ್ತೀಚೆಗೆ ತೆರೆಕಂಡ 12 Angry men ಚಿತ್ರದ ನಕಲಾದ ‘ದಶಮುಖ’ ಇದಕ್ಕೆ ಉತ್ತಮ ಉದಾಹರಣೆ. ನಮ್ಮ ನೆಲಕ್ಕೆ ಸಂಬಂಧವೇ ಇರದ ನ್ಯಾಯಪದ್ಧತಿಯನ್ನು ಯಥಾವತ್ ಅನುಕರಿಸಿ ನಗೆಪಾಟಲಿಗೆ ಈಡಾಗಿರುವ ಚಿತ್ರವಿದು. ನಮ್ಮದೇ ನಾಯಕನಟರು, ನಮ್ಮದೇ ಭಾಷೆಯ ಹೊಡಿಬಡಿ ಚಿತ್ರಗಳನ್ನು ನೋಡುವಾಗ ತೆಲುಗು ಭಾಷೆಯ ಚಿತ್ರ ನೋಡುತ್ತಿದ್ದೇವೆಂಬ ಭಾವ ಬರುವುದು ಸುಳ್ಳಲ್ಲ. ಭಾಷೆ ಮತ್ತು ಕಲಾವಿದರು ಕನ್ನಡದವರಾದಾಕ್ಷಣ ಒಂದು ಸಿನಿಮಾ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸಲಾರದು.
ಕಳೆದ ವರ್ಷ ಬಿಡುಗಡೆಗೊಂಡ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ [ನನ್ನ ಅರಿವಿಗೆ ಬಂದಂತೆ] ಇಪ್ಪತ್ಮೂರು ರೀಮೇಕ್ ಮತ್ತು ಕದ್ದ ಚಿತ್ರಗಳು. ಕೆಂಪೇಗೌಡ, ಹುಡುಗರು, ಕಿರಾತಕ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ರೀಮೇಕ್ ಚಿತ್ರಗಳು. ಇನ್ನು ಕಳೆದ ವರ್ಷದ ಅತ್ಯಂತ ಯಶಸ್ವಿ ಚಿತ್ರ ಸಾರಥಿ ‘ಲಯನ್ಸ್ ಕಿಂಗ್’ ಎಂಬ ಆಂಗ್ಲ ಭಾಷೆಯ ಅನಿಮೇಶನ್ ಚಿತ್ರದ ಯಥಾವತ್ ತದ್ರೂಪು! ಇನ್ನು ಕಥೆ ಕಾದಂಬರಿ ಆಧರಿಸಿದ ಚಿತ್ರಗಳು ಬೆರಳೆಣಿಕೆಯಷ್ಟು! ಅವುಗಳಲ್ಲಿ ‘ಪುಟ್ಟಕ್ಕನ ಹೈವೇ’ ಮಾತ್ರ ವಾಹಿನಿಗಳ ಮುಖಾಂತರ ಹೆಚ್ಚು ಜನರನ್ನು ತಲುಪಿತು. ಉಳಿದ ಚಿತ್ರಗಳು [ಗಿರೀಶ್ ಕಾಸರವಳ್ಳಿಯವರ ಚಿತ್ರಗಳೂ ಸೇರಿದಂತೆ] ಪ್ರಶಸ್ತಿ ಸಮಿತಿಯವರಿಗೆ, ದೊಡ್ಡ ನಗರಗಳ ಚಿತ್ರೋತ್ಸವ ವೀಕ್ಷಕರಿಗಷ್ಟೇ ಸೀಮಿತ.
ಪ್ರೇಕ್ಷಕ ‘ಗ್ರಾಹಕ’ನೆಂಬ ವಾದ, ಚಿತ್ರೋದ್ಯಮ ಕುಂಠಿತಗೊಂಡರೆ ಕನ್ನಡ ಸಂಸ್ಕೃತಿಯೇ ನಾಶವಾಗಿಬಿಡುತ್ತದೆಂಬ ಅನಗತ್ಯ ಭಯಗಳನ್ನು ಪಕ್ಕಕ್ಕಿರಿಸಿ ನೋಡಿದಾಗಲೂ ಕೂಡ ಡಬ್ಬಿಂಗಿಗೆ ಅವಕಾಶ ಮಾಡಿಕೊಡುವುದೇ ಸರಿಯಾದ ನಿರ್ಧಾರ. ಡಬ್ಬಿಂಗಿಗೆ ಅವಕಾಶ ನೀಡದಿದ್ದ ಪಕ್ಷದಲ್ಲಿ ರೀಮೇಕ್ ಮತ್ತು ಕದ್ದ ಕಥೆಗಳ ಸಿನಿಮಾಕ್ಕೂ ನಿಷೇಧ ಹೇರಬೇಕು. ಚಿತ್ರರಂಗ ಇದಕ್ಕೆ ತಯಾರಿದೆಯೇ? ಇಲ್ಲ. ಸುಬ್ರಮಣ್ಯಪುರಂ, ನಾಡೋಡಿಗಳ್, shutter island, ಗಾಡ್ ಫಾದರ್, ಸಿಂಗಂನಂಥ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕರ್ನಾಟಕದಾದ್ಯಂತ ಬಿಡುಗಡೆಯಾಗಿ ಹೆಚ್ಚು ಜನರನ್ನು ತಲುಪಿಬಿಟ್ಟಿದ್ದರೆ ಆ ಚಿತ್ರಗಳನ್ನು ಮತ್ತೆ ರೀಮೇಕಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರೇಮ್, ಉಪೇಂದ್ರನಂಥ ನಿರ್ದೇಶಕರು, ಸುದೀಪ್, ಪುನೀತ್, ದರ್ಶನ್ ರಂಥ ನಟರು ಈ ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಾ ತಮ್ಮ ನಟನೆಯ ಪ್ರತಿಭೆಯನ್ನು ಅನುಕರಣೆಯಲ್ಲಿ ವ್ಯರ್ಥಗೊಳಿಸುತ್ತ ನಿರ್ದೇಶನದ ಕಲ್ಪನೆಯನ್ನು ಚಿತ್ರ ಕಟ್ಟುವ ವಿಧಾನವನ್ನು ಮಸುಕುಗೊಳಿಸಿಕೊಳ್ಳುತಿರಲಿಲ್ಲ. ಕಡೇ ಪ್ರತಿಭಾವಂತರ ಪ್ರತಿಭೆ ಹಣ ಮಾಡುವ ಪ್ರಭಾವಳಿಯಿಂದ ಹೊರಬಂದು ಹೊಳಪು ಪಡೆದುಕೊಳ್ಳುವುದಕ್ಕಾದರೂ ಡಬ್ಬಿಂಗಿಗೆ ಅವಕಾಶ ನೀಡಬೇಕು.
********
ಕನ್ನಡಕ್ಕೆ ಡಬ್ಬಿಂಗ್ ಬೇಡ.
ಕನ್ನಡದಲ್ಲಿರುವ ಪರಭಾಷೆಯ ಪದಗಳು ಬೇಡ.
ಕನ್ನಡಿಗರು ಕನ್ನಡಿಗರಲ್ಲದವರನ್ನು ಸಂಪರ್ಕಿಸುವುದನ್ನೂ, ಅಂತಹವರೊಡನೆ ಮಾತನಾಡುವುದನ್ನೂ ನಿರ್ಬಂಧಿಸಿಬಿಡಿ.
ಕನ್ನಡಿಗರು ಪರರನ್ನು ನೋಡುವುದನ್ನೇ ನಿಷೇಧಿಸಿಬಿಡಿ.
ಕರ್ನಾಟಕಕ್ಕೆ ಹೊರಗಿನವರು ಬರುವುದು ಬೇಡ, ಕನ್ನಡಿಗರು ಹೊರ ಹೋಗುವುದು ಬೇಡ.
ಒಟ್ಟಿನಲ್ಲಿ ಕನ್ನಡಿಗರು ಕೂಪಮಂಡೂಕಗಳಾಗಿಬಿಡಿ.
ಇದರಿಂದ ಬೇಳೆ ಬೇಯಿಸಿಕೊಳ್ಳಬೇಕಾದವರು ಬೇಯಿಸಿಕೊಳ್ಳುತ್ತಿರುತ್ತಾರೆ; ಅವರ ಕುರಿತಾಗಿ ನೀವು ತಿಳಿಯಲು ಪ್ರಯತ್ನಿಸಬೇಡಿ.
ಡಬ್ಬಿಂಗನಿಂದ ಕನ್ನಡ ಕಲಾವಿದರಿಗೆ ಕೆಲಸ ಸಿಗುವದಿಲ್ಲ ಎನ್ನುತ್ತಾರಲ್ಲ. ಆದರೆ ನಟಿಯರು, ಗಾಯಕರು, ಮ್ಯೂಸಿಕ್ ಡೈರೆಕ್ಟರುಗಳು, ನಿರ್ಮಾಪಕರು, ಪೋಷಕ ಪಾತ್ರಧಾರಿಗಳನೇಕರು ಹೊರಗಿನಿಂದಲೇ ತರಿಸುತ್ತಾರಲ್ಲ?? ಕೆಲವು ಪ್ರಭಾವಿ ನಟರು ತಮ್ಮ ನಟನೆಗೆ ಕುತ್ತು ಬರುತ್ತದೆಂದು ನಾಟಕವಾಡುತ್ತಿದ್ದಾರೆ. ಇವರನ್ನು ಕೇಳದೆ ಡಬ್ಬಿಂಗ್ ಶುರು ಮಾಡಬೇಕು.