ಸ್ವಾತಂತ್ರ್ಯದ ಜಾಡಿನಲ್ಲಿ ಕಾಡು ಜನರ ಹಾಡು
– ರಾಕೇಶ್ ಶೆಟ್ಟಿ
ಶಾಲಾ ದಿನಗಳಲ್ಲಿ ಜನವರಿ ೨೬ ಮತ್ತು ಆಗಸ್ಟ್ ೧೫ ಬಂದರೇ ಏನೋ ಒಂದು ರೀತಿಯ ಸಡಗರ.ಆ ಸಡಗರಕ್ಕೆ ಸಾತಂತ್ರ್ಯದ ಹಬ್ಬ ಅನ್ನುವ ಪುಟ್ಟ ಖುಷಿಯೂ ಕಾರಣವಾದರೆ,ದೊಡ್ಡ ಮಟ್ಟದಲ್ಲಿ ಕಾರಣವಾಗುತಿದಿದ್ದು “ನೃತ್ಯ,ಡ್ರಿಲ್” ಇತ್ಯಾದಿಗಳ ರಿಹರ್ಸಲ್ ನೆಪದಲ್ಲಾದರೂ ಮೇಷ್ಟ್ರುಗಳ ಪಾಠದಿಂದ ತಪ್ಪಿಸಿಕೊಳ್ಳಬಹುದಲ್ಲ ಅನ್ನುವುದು.ಆಟದ ಒಂದೇ ಒಂದು ಪಿರಿಯಡ್ ಅನ್ನೂ ಇಡದೇ ಯಾವಾಗಲೂ ಪಾಠ ಪಾಠ ಅನ್ನುತಿದ್ದ ನಮ್ಮ ಶಾಲೆಯ ಮಕ್ಕಳಿಗಂತೂ ಸ್ವಾತಂತ್ರ್ಯದ ಹಬ್ಬ ಅಕ್ಷರಶಃ ಸಾತಂತ್ರ್ಯವನ್ನೇ (ತರಗತಿಯಿಂದ ಹೊರಬರುವ) ತರುತಿತ್ತು.
ಪ್ರತಿವರ್ಷ ಜನವರಿ ೨೬ ಮತ್ತು ಆಗಸ್ಟ್ ೧೫ಕ್ಕೆ ನಮ್ಮ ಶಾಲೆಯಿಂದ ಡ್ರಿಲ್ ನಲ್ಲಿ ಭಾಗವಹಿಸುತಿದ್ದೆವು.ಆದರೆ ನಾವು ೭ನೇ ತರಗತಿಗೆ ಬಂದಾಗ (ಬಹುಷಃ ೧೯೯೬ ಇಸವಿ ಇರಬೇಕು) ಈ ಬಾರಿ ಯಾವುದಾದರೂ ನೃತ್ಯವನ್ನು ಮಾಡೋಣ ಅನ್ನುವ ನಿರ್ಧಾರ ಮಾಡಿದ್ದರು ಮೇಷ್ಟ್ರುಗಳು.’ರಾಯರು ಬಂದರು ಮಾವನ ಮನೆಗೆ’ ಚಿತ್ರದಿಂದ “ಅಡವಿ ದೇವಿಯ ಕಾಡು ಜನಗಳ ಈ ಹಾಡು” ಹಾಡನ್ನು ಆಯ್ಕೆ ಮಾಡಿದರು.
ತರಬೇತಿಯೂ ಶುರುವಾಯಿತು.ಪ್ರತಿವರ್ಷ ಡ್ರಿಲ್ ಮಾಡಿ ಸಾಕಾಗಿದ್ದ ನಮಗೆ ಇದು ಹೊಸತಾಗಿಯೇ ಕಾಣಿಸಿತು.ಅದರ ಜೊತೆಗೆ ಬೋನಸ್ ನಂತೆ ಇದರ ತರಬೇತಿಗೆಂದೇ ತುಸು ಹೆಚ್ಚೇ ಸಮಯವೂ ಸಿಗಲಾರಂಭಿಸಿತ್ತು.ಒಂದು ದಿನ ಬೆಳಗ್ಗಿನ ತರಬೇತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮುಗಿಸಿ ಆಟವಾಡುತಿದ್ದೆವು.ಶಾಲೆಯಲ್ಲಿದ್ದ ಪುಟ್ಟ ಹುದೋಟದಲ್ಲಿನ ಹಳದಿ ಬಣ್ಣದ (ಸೂರ್ಯಕಾಂತಿಯಂತಿರುವ)ಹೂವು ನೋಡಿದವನಿಗೆ ಕೀಳೋಣ ಅನ್ನಿಸಿತು.ಕಿತ್ತ ಮೇಲೆ ಮುಡಿದು ಕೊಳ್ಳಲು ಜಡೆಯಿಲ್ಲವಲ್ಲ! ಏನು ಮಾಡೋದು ಅನ್ನುವಾಗ ಗೆಳೆಯನ ಬೆನ್ನು ಕಾಣಿಸಿತು.ಬೆರಳುಗಳ ನಡುವೆ ಹೂವಿನ ತೊಟ್ಟನ್ನು ಇಟ್ಟುಕೊಂಡು ಹೂವನ್ನು ಗೆಳೆಯನ ಬಿಳಿ ಬಣ್ಣದ ಶರ್ಟಿಗೆ ಪಟೀರ್ ಎನ್ನುವಂತೆ ಬಡಿದೆ.ಏನಾಶ್ಚರ್ಯ! ಅವನ ಬಿಳಿ ಬಣ್ಣದ ಶರ್ಟಿನಲ್ಲಿ ಹಳದಿ ಬಣ್ಣದ ಹೂವಿನ ಫೋಟೋ ಕಾಪಿ ಮೂಡಿತ್ತು.