“ನೀನು” ಯಾರು? ಸತ್ಯ ಶೋಧನೆಗೆ ಸಮಿತಿ
– ಪ್ರವೀಣ್ ಕುಮಾರ್ ಮಾವಿನಕಾಡು
ಇತ್ತೀಚೆಗಷ್ಟೇ ವಾಲ್ಮೀಕಿ ಯಾರು ಎನ್ನುವ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ, ಹೇಗಾದರೂ ಮಾಡಿ ಮತ್ತೆ ಆ ಪುಸ್ತಕ ಜನರನ್ನು ತಲುಪಲು ಬಿಡಬಾರದು ಎನ್ನುವ ಕಾರಣಕ್ಕಾಗಿ ಆಯ್ದ ವ್ಯಕ್ತಿಗಳಿಂದ ಕೂಡಿದ ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈಗ ಉಪೇಂದ್ರ ನಿರ್ದೇಶಿಸಿ ನಟಿಸಿದ ಉಪ್ಪಿ2 ಚಿತ್ರದಲ್ಲಿ ಬರುವ ‘ನೀನು’ ಅಂದರೆ ಯಾರು ಎನ್ನುವ ಬಗ್ಗೆ ಸತ್ಯಶೋಧನೆ ಕೈಗೊಳ್ಳಲು ಹಂಪೆನಾಗ್ ಅವರ ನೇತೃತ್ವದಲ್ಲಿ ಸರಕಾರ ಇನ್ನೊಂದು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ! ಅಲ್ಲದೇ ಉಪೇಂದ್ರ ಅವರು ತಮ್ಮ ಚಿತ್ರಕ್ಕೆ ಉಪ್ಪಿಟ್ಟು ಎನ್ನುವ ಹೆಸರನ್ನೇ ಏಕೆ ಇಟ್ಟರು,ಬಹುಜನರು ಸೇವಿಸುವ ಇತರ ಮಾಂಸಾಹಾರದ ಹೆಸರನ್ನು ಏಕೆ ಇಡಲಿಲ್ಲ ಎನ್ನುವ ಬಗ್ಗೆಯೂ ಸಮಿತಿ ಚರ್ಚಿಸಿ ಸರ್ಕಾರಕ್ಕೆ ತನ್ನ ವರದಿ ಒಪ್ಪಿಸಲಿದೆ.
ಈ ಮೊದಲು ಕೆಲವು ಕಾರಣಗಳಿಗಾಗಿ ಉಪೇಂದ್ರ ರವರ ಈ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ಸರ್ಕಾರ ಅಂದುಕೊಂಡಿತ್ತಾದರೂ ನಂತರ,ನ್ಯಾಯಾಲಯವು ಸರ್ಕಾರ ಕೊಡಲಿದ್ದ ಕಾರಣಗಳನ್ನು ಒಪ್ಪುವ ಸಾಧ್ಯತೆಗಳು ತೀರಾ ಕಮ್ಮಿ ಎನ್ನುವ ತಜ್ಞರ ಸಲಹೆಯ ಮೇರೆಗೆ ಈ ಸತ್ಯ ಶೋಧನಾ ಸಮಿತಿಯನ್ನು ರಚಿಸಿ ಆ ಸಮಿತಿಯಿಂದ ತಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ಪಡೆದು ನಂತರ ಚಿತ್ರ ಪ್ರದರ್ಶನ ರದ್ದು ಮಾಡಲು ತೀರ್ಮಾನಿಸಿದೆ.ಆದ್ದರಿಂದ ಶ್ರೀ ಹಂಪೆನಾಗರಾಜು ಅವರ ನೇತೃತ್ವದಲ್ಲಿ ಆರು ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.