ಆರ್ಯರಿಂದ ಭಾರತದ ಮೇಲೆ ದಾಳಿ ಎಂಬ ಪೊಳ್ಳು ವಾದ
– ವಿನೋದ್ ಹಿಂದೂ ನ್ಯಾಷನಲಿಸ್ಟ್
ದೇಶದಲ್ಲಿ ಅಸಹಿಷ್ಣುತೆ (Intolerance) ಮಿತಿ ಮೀರುತ್ತಿದೆ ದೇಶದಲ್ಲಿ ಉಸಿರುಗಟ್ಟೋ ವಾತಾವರಣವಿದೆ ಅಂತ ಕೆಲ ತಿಂಗಳಿನಿಂದ ಹಲವಾರು ಸಾಹಿತಿಗಳು, ಬುದ್ಧಿಜೀವಿಗಳು, ಲೇಖಕರು, ನಟ ನಟಿಯರು ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ನಿಮಗೆಲ್ಲ ತಿಳಿದ ವಿಷಯವೇ, ಅದೇ ಪ್ರಶಸ್ತಿ ವಾಪಸಾತಿ, ಅಸಹಿಣ್ಣುತೆಯ ವಾದದ ತಿಕ್ಕಾಟದಲ್ಲೇ ಅಮೀರ್ ಖಾನ್ ಕೂಡ ದೇಶದಲ್ಲಿ ಕಳೆದ 6-8 ತಿಂಗಳಿನಿಂದ ಒಂದು ತರಹ ಭಯದ ವಾತಾವರಣ ದೇಶದಲ್ಲಿದೆ, “ನನ್ನ ಪತ್ನಿ ದೇಶ ಬಿಡೋಣವೇ” ಅಂದಿದ್ದಳು ಅಂತ ಹೊಸ ವಿವಾದವನ್ನೇ ಸೃಷ್ಟಿಸಿದ್ದರು ಹಾಗು ಅಮೀರ್ ಖಾನರವರ ಪರ ವಿರೋಧವಾಗಿ ನಾನಾ ರೀತಿಯ ಪ್ರತಿಭಟನೆಗಳು ನಡೆದಿದ್ದು ತಮಗೆಲ್ಲ ತಿಳಿದ ವಿಷಯವೇ.
ಇದೇ ವಿಷಯವನ್ನಿಟ್ಟುಕೊಂಡು ಮೊನ್ನೆ ತಾನೆ ಶುರುವಾಗಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಕೋಲಾಹಲವೆದ್ದಿತ್ತು. ಆಗ ನಮ್ಮ ದೇಶದ ಮಾನ್ಯ ಗೃಹಮಂತ್ರಿ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಮಾತನಾಡುತ್ತ ಈ ತಥಾಕತಿತ ಅಸಹಿಣ್ಣುತೆಯ ಬಗ್ಗೆ ಚರ್ಚೆ ಮಾಡುವಾಗ ಸಂವಿಧಾನ ಕರ್ತೃ ಅಂಬೇಡ್ಕರರ ವಿಷಯವನ್ನು ಪ್ರಸ್ತಾಪಿಸುತ್ತ ದಲಿತ ಶೋಷಣೆಯನ್ನು ತಮ್ಮ ಧ್ವನಿ ಎತ್ತಿ ದಲಿತರ ಹಕ್ಕುಗಳಿಗಾಗಿ ಸಮರ್ಥವಾಗಿ ಹೋರಾಟ ನಡೆಸಿ ಅವರ ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಹೊರತು ಅಂಬೇಡ್ಕರರು ಯಾವತ್ತೂ ದೇಶ ಬಿಡುವ ಯೋಚನೆ ಮಾಡಿರಲಿಲ್ಲ ಅಂತ ಉಲ್ಲೇಖಿಸುತ್ತ ನಮ್ಮ ದೇಶ ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನಲ್ಲೇ ಸಹಿಷ್ಣು ರಾಷ್ಟ್ರವಾಗಿದೆ ಅನ್ನೋ ಮಾತನ್ನು ಹೇಳಿದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಹಾಗು ಕಲ್ಬುರ್ಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆಯವರು ಅಂಬೇಡ್ಕರ್ ದೇಶ ಬಿಡ್ತೀನಿ ಅನ್ನೋ ಮಾತನ್ನು ಆಡಿರಲೇ ಇಲ್ಲ. ನಾವು ದ್ರಾವಿಡರು ಈ ದೇಶದ ಮೂಲನಿವಾಸಿಗಳು ನೀವು(ಆರ್ಯರು) ಹೊರಗಿನಿಂದ ಬಂದವರು ಅಂತ ಒಂದು ಸ್ಟೇಟ್’ಮೆಂಟ್ ಕೊಟ್ಟಿದ್ದರು.
ಭಾರತಕ್ಕೆ ಆರ್ಯರು ಹೊರಗಿನಿಂದ ಬಂದವರು, ದ್ರಾವಿಡರು ಮೂಲನಿವಾಸಿಗಳು ಅನ್ನೋದು ಪೊಳ್ಳು ವಾದವಂತ ಎಷ್ಟೋ ಜನ ಪಾಶ್ಚಾತ್ಯ ವಿದ್ವಾಂಸರು, ಇತಿಹಾಸಕಾರರೇ ಸಾಕ್ಷ್ಯಾಧರ, ಸಂಶೋಧನೆಗಳ ಮೂಲಕ ಒಪ್ಪಿಕೊಂಡಾಗ “Aryan Invasion Theory” ಒಟ್ಟಾರೆಯಾಗಿ baseless ಅನ್ನೋದು ಜಗಜ್ಜಾಹಿರಾಗಿರುವ ಸಂದರ್ಭದಲ್ಲಿ ಮತ್ತೆ ಆ ಪೊಳ್ಳು ವಾದವನ್ನಿಟ್ಟುಕೊಂಡು ರಾಜಕಾರಣ ಮಾಡುವುದು ಮಾತ್ರ ಇನ್ನೂ ಭಾರತದಲ್ಲಿ ನಿಂತಿಲ್ಲ ಅನ್ನುವುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಮಾತಿನಿಂದಲೆ ಅರ್ಥವಾಗುತ್ತದೆ. ಇದೇ “ಆರ್ಯರಿಂದ ಭಾರತದ ಮೇಲೆ ದಾಳಿ” ಎಂಬ ವಿಷಯ ಮಂಡಿಸಿ ಬ್ರಿಟೀಷರು ಅನುಸರಿಸಿದ divide and rule ಪಾಲಿಸಿಯನ್ನ ನಮ್ಮ ರಾಜಕಾರಣಿಗಳು ಇನ್ನೂ ಅನುಸರಿಸಿ ಜನರ ಮನಸ್ಸಿನಲ್ಲಿ ಜಾತಿಯೆಂಬ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮಾತ್ರ ದೇಶದ ಐಕ್ಯತೆಗೆ ಮಾರಕವೇ ಸರಿ.
ಅಸಹಿಷ್ಣುತೆ – ಮನೆ ಮನೆ ಕಥೆ!
– ನಾಗೇಶ ಮೈಸೂರು
ಯಾಕೋ ಗುಬ್ಬಣ್ಣ ಪತ್ತೆಯಿಲ್ಲದೆ ಮಾಯಾವಾಗಿಹೋಗಿದ್ದ ಒಂದು ತಿಂಗಳಿಂದ. ಆಗೀಗ ಮಧ್ಯೆ ಬರಿ ಒಂದೆರಡು ಮೆಸೇಜ್ ಮಾತ್ರ ಕಳಿಸಿ ‘ವೆರಿ ಬಿಜಿ’ ಅಂತೊಂದು ಚೋಟು ಸುದ್ಧಿ ಹಾಕಿ ಇನ್ನು ಕುತೂಹಲ ಜಾಸ್ತಿ ಮಾಡಿಬಿಟ್ಟಿದ್ದ. ‘ಪ್ರಾಜೆಕ್ಟುಗಳೆಲ್ಲ ಕ್ಯಾನ್ಸಲ್ಲಾಗಿ ಇದ್ದಕ್ಕಿದ್ದಂತೆ ಫುಲ್ ಫ್ರೀ ಟೈಮ್ ಸಿಕ್ಕಿಬಿಟ್ಟಿದೆ; ಸ್ವಲ್ಪ ಬ್ರೇಕು ಸಿಕ್ಕಿದಾಗಲೆ ಅಲ್ಲಿ ಇಲ್ಲಿ ಓಡಾಡಿಕೊಂಡು ಬಿಡಬೇಕು ಸಾರ್.. ಈಗಲಾದರು ನೋಡೊ ಜಾಗವೆಲ್ಲ ನೋಡಿಬಿಡಬೇಕು ಅನ್ಕೊಂಡಿದೀನಿ’ ಅಂತಿದ್ದ. ‘ಹೇಳಿದ ಹಾಗೆ ಎಲ್ಲಾದರು ಟೂರು ಹೊಡಿತಿದಾನ ?’ ಅನ್ಕೊಂಡೆ, ಕ್ರಿಸ್ಮಸ್ಸಿನ ರಜೆ ಹತ್ತಿರವಾಗುವಾಗಲಾದರೂ ಸಿಕ್ತಾನ ನೋಡೋಣ ಅನ್ಕೊಂಡು ‘ವಾಟ್ಸಪ್ ಗುಬ್ಬಣ್ಣ ? ಮೆರ್ರಿ ಕ್ರಿಸ್ಮಸ್’ ಎಂದು ಮತ್ತೊಂದು ತುಂಡು ಸುದ್ದಿ ಕಳಿಸಿದೆ.
ಈ ಮೆಸೇಜಿಗೆ ಗುಬ್ಬಣ್ಣ ಖಂಡಿತವಾಗಿ ರೆಸ್ಪಾಂಡ್ ಮಾಡ್ತನೆ ಅಂತ ಭರವಸೆಯಿತ್ತು. ಯಾವ ಹಬ್ಬಹರಿದಿನಕ್ಕು ನಾನು ‘ವಿಷ್’ ಮೆಸೇಜ್ ಕಳಿಸಿದವನಲ್ಲ.. ಗುಬ್ಬಣ್ಣ ಹಬ್ಬ ಹರಿದಿನಕ್ಕೆ ವಿಷಸ್ ಕಳಿಸಿದಾಗಲೂ ಬರಿ ‘ಥ್ಯಾಂಕ್ಸ್’ ಅನ್ನೊ ರಿಪ್ಲೈ ಬರೆದರೆ ಅದೇ ಹೆಚ್ಚು. ಅಂತಹವನಿಗೆ ಅವನು ಆಚರಣೆ ಮಾಡದ ಹಬ್ಬಗಳಿಗೆಲ್ಲ ಬೇಕಂತಲೆ ವಿಷಸ್ ಕಳಿಸಿ ಸ್ವಲ್ಪ ರೇಗುವಂತೆ ಮಾಡುತ್ತಿದ್ದೆ.. ಅವಕ್ಕೆಲ್ಲ ಕಳಿಸಿದ್ದಕ್ಕಲ್ಲ ಅವನಿಗೆ ಕೋಪ ; ‘ನಮ್ಮ ಹಬ್ಬಗಳಿಗೆ ಕಳಿಸದೆ, ಕಳಿಸಿದ್ದಕ್ಕು ರೆಸ್ಪಾಂಡ್ ಮಾಡದೆ ಸಂಬಂಧಿಸದೆ ಇರೋದಕ್ಕೆ ಮಾತ್ರ ಉದ್ದುದ್ದ ಮೆಸೇಜ್ ಕಳಿಸಿ ವಿಷ್ ಮಾಡುವೆನಲ್ಲಾ?’ ಅಂತ. ಹಾಗೆ ಕಳಿಸಿದಾಗೆಲ್ಲ ಉರಿದೆದ್ದು ಬೀಳುವುದು, ರೇಗುವುದು ಮಾಮೂಲಾದ ಕಾರಣ, ಬೇಕೆಂತಲೆ ಆ ಮೆಸೇಜ್ ಕಳಿಸಿದ್ದು!