ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು
-ಮು.ಅ ಶ್ರೀರಂಗ,ಬೆಂಗಳೂರು
ಒಬ್ಬ ಬ್ರಾಹ್ಮಣನ ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ ಯಜಮಾನನ ತಂದೆಯದೋ ತಾಯಿಯದೋ ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು. ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಮತ್ತಷ್ಟು ಓದು