ನಿನ್ನೆಗೆ ನನ್ನ ಮಾತು …. ಭಾಗ 3
– ಮು ಅ ಶ್ರೀರಂಗ ಬೆಂಗಳೂರು
ಭಾಗ ೧ : ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ
ಭಾಗ ೨ : ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು
ಅಂಚೆ ಗುಮಾಸ್ತನ ಕೆಲಸದ ತರಬೇತಿಗೆಂದು ಡಿಸೆಂಬರ್ ೧೯೭೮ರ ಕೊನೆಯ ವಾರದಲ್ಲಿ ಕೋಲಾರದಲ್ಲಿ ಬಂದಿಳಿದಾಗ ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಬೆಳಗ್ಗೆ ಮಾಗಡಿಯಿಂದ ಹೊರಟಾಗ ಚಳಿಯಿತ್ತು. ಆದ್ದರಿಂದ ಬೆಚ್ಚಗಿರಲಿ ಎಂದು ಆಗ ಜೀನ್ಸ್ ಎಂದು ಕರೆಸಿಕೊಳ್ಳುತ್ತಿದ್ದ ದಪ್ಪ textureನ ಪ್ಯಾಂಟು ಮತ್ತು ಪ್ಯಾಂಟಿನ ಬಟ್ಟೆಯಷ್ಟೇ ದಪ್ಪವಿದ್ದ ಬಣ್ಣ ಬಣ್ಣದ ಬಟ್ಟೆಯಿಂದ ಹೊಲಿಸಿಕೊಂಡಿದ್ದ ಒಂದು ಫುಲ್ ತೋಳಿನ ಷರ್ಟ್ ಹಾಕಿಕೊಂಡಿದ್ದೆ. ಒಂದು ಕಡಿಮೆ ದರ್ಜೆಯ ದೊಡ್ಡ ಏರ್ ಬ್ಯಾಗ್ ನಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿಕೊಂಡು ಮಿಕ್ಕಿದ್ದನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೊರಟಿದ್ದೆ. ನಾನು ಈ ಮೊದಲು ಕೋಲಾರ ನೋಡಿರಲಿಲ್ಲ. ಬಸ್ ನಿಲ್ದಾಣದಲ್ಲಿ ಇಳಿದ ಮೇಲೆ ಒಂದಿಬ್ಬರನ್ನು ದಾರಿ ಕೇಳಿಕೊಂಡು .ಅಂಚೆ ಇಲಾಖೆಯ ಆಡಳಿತ ಕಛೇರಿಯನ್ನು ಪ್ರವೇಶ ಮಾಡಿದ್ದಾಯ್ತು. ಮೊದಲು ಅಲ್ಲಿ report ಮಾಡಿಕೊಳ್ಳ ಬೇಕಾಗಿತ್ತು. ಮೊದಲ ದಿನದ ಭಯ ಮಿಶ್ರಿತ ಆತಂಕ ಸಹಜ ತಾನೇ? ಜತೆಗೆ ನನ್ನ ವೇಷ-ಭೂಷಣ ಇವೆಲ್ಲ ಕಂಡು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಅಕ್ಕ ಪಕ್ಕ ಕೂತಿದ್ದ ಒಂದಿಬ್ಬರು ಲಲನಾಮಣಿಗಳು ಪರಸ್ಪರ ಮೆಲು ದನಿಯಲ್ಲಿ ಮಾತಾಡಿಕೊಂಡು ನಕ್ಕಂತಾಯ್ತು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನ ಪ್ರವರ ಒಪ್ಪಿಸಿದ್ದಾಯ್ತು. ಅವರು ಕೇಳಿದ ದಾಖಲಾತಿ ಪತ್ರಗಳು,ಸರ್ಟಿಫಿಕೇಟ್ ಇತ್ಯಾದಿಗಳನ್ನೆಲ್ಲ ತೋರಿಸಿದ್ದಾಯ್ತು.