ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 14, 2014

35

ಧರ್ಮ ಅಂದರೇನು?

‍ನಿಲುಮೆ ಮೂಲಕ

– ಸಚ್ಚಿದಾನಂದ ಹೆಗ್ಡೆ

ಧರ್ಮಫೇಸ್ ಬುಕ್ಕೂ ಸೇರಿದಂತೆ ನಮ್ಮ ಮಾತುಗಳಲ್ಲಿ, ಬರಹಗಳಲ್ಲಿ ಮತ್ತು ನಿತ್ಯದ ನಮ್ಮ ವ್ಯವಹಾರಗಳಲ್ಲಿ “ಧರ್ಮ” ಶಬ್ದ ಅಪಾರವಾದ ಅಪಾರ್ಥದಲ್ಲಿ ಬಳಕೆಯಾಗುತ್ತಿರುವುದನ್ನು ಕಂಡು ಮನಸ್ಸಿಗೆ ಅಸಹನೀಯವಾದ ಕಿರಿಕಿರಿ ಉಂಟಾಗುತ್ತದೆ. ಧರ್ಮಗುರುಗಳೂ ಸಹ ಈ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದನ್ನು ಕಂಡಾಗ ಸಂಕಟವಾಗುತ್ತದೆ.

ಎಲ್ಲರೂ ಧರ್ಮ ಶಬ್ದವನ್ನು ಹೇಗೆ ಬಳಸುತ್ತಿದ್ದಾರೆ? ಕ್ರೈಸ್ತ ಧರ್ಮ, ಇಸ್ಲಾಮ್ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ವೀರಶೈವ ಧರ್ಮ, ಸಿಖ್ ಧರ್ಮ ಇತ್ಯಾದಿ ಇತ್ಯಾದಿ. ನಿಜಕ್ಕೂ ಇವು ಧರ್ಮಗಳೇ? ಅಸಲಿಗೆ ಇವೆಲ್ಲ ಏನು?

ಧರ್ಮ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದು ಆ ಶಬ್ದಕ್ಕೆ ಮಾಡುವ ಅಪಚಾರವಲ್ಲವೇ? ಅದು ಅಧರ್ಮವಾಗುವುದಿಲ್ಲವೇ? ಇದರ ಬಗ್ಗೆ ತಲಸ್ಪರ್ಶೀ ಚಿಂತನೆಯಾಗಲಿ ಎನ್ನುವುದು ನನ್ನ ಆಶಯ.ನನ್ನ ಅಭಿಪ್ರಾಯದಲ್ಲಿ ಧರ್ಮವು ದೇವರನ್ನು ಹುಡುಕುವ ನಿರ್ದಿಷ್ಟ ಮಾರ್ಗವಲ್ಲ. ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ, ಸಿಖ್, ವೀರಶೈವ ಮುಂತಾದವು ದೇವರನ್ನು ಹುಡುಕುವ ಯಾ ಸಾಕ್ಷಾತ್ಕರಿಸಿಕೊಳ್ಳುವ ನಿರ್ದಿಷ್ಟ ದಾರಿಗಳು. ಆಯಾ ದಾರಿಗಳಲ್ಲಿ ಸಾಗುವವರಿಗೆ ಅವು ಶ್ರೇಷ್ಠ. ಆದರೆ ಎಲ್ಲರಿಗೂ ಎಲ್ಲ ದಾರಿಗಳು ಶ್ರೇಷ್ಠವಲ್ಲ ಮತ್ತು ಏಕಕಾಲದಲ್ಲಿ ಎಲ್ಲ ದಾರಿಗಳಲ್ಲಿ ಹೆಜ್ಜೆ ಹಾಕಲೂ ಸಾಧ್ಯವಿಲ್ಲ.

ಧರ್ಮವು ದೇವರನ್ನು ಹುಡುಕುವ ನಿರ್ದಿಷ್ಟ ಮಾರ್ಗವಲ್ಲ. ಆದ್ದರಿಂದ ದೇವರಿಗೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಬಹುದೇ? ಹೇಳಲೂಬಹುದು. ಯಾಕೆಂದರೆ ದೇವರಲ್ಲಿ ನಂಬಿಕೆ ಇಲ್ಲದವರೂ ಧರ್ಮವನ್ನು ಅನುಸರಿಸಬಹುದು.ಬಹುದು ಏನು ಬಂತು, ಅನುಸರಿಸಲೇ ಬೇಕು. ಒಂದು ಸುಸ್ಥಿರ, ಸಮೃದ್ಧ, ಆರೋಗ್ಯಪೂರ್ಣ, ಸಬಲ ಮತ್ತು ಸ್ವಾವಲಂಬೀ ಸಮಾಜ ನಿರ್ಮಾಣಕ್ಕೆ ಧರ್ಮ ಅತ್ಯಗತ್ಯ. ಅಂಥ ಸಮಾಜದಲ್ಲಿ ಆಸ್ತಿಕರೂ, ನಾಸ್ತಿಕರೂ, ಅವೆರಡೂ ಅಲ್ಲದ ಸಂಶಯಾತ್ಮರೂ ಇರಬಹುದು. ಆದರೆ ಅವರೆಲ್ಲರೂ ಧರ್ಮವನ್ನು ಪಾಲಿಸಲೇ ಬೇಕಾಗುತ್ತದೆ. ಧರ್ಮವನ್ನು ಪಾಲಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಸರ್ವರಿಗೂ ನ್ಯಾಯ ದೊರಕುತ್ತದೆ. ಸರ್ವರೂ ತೃಪ್ತಿಯಿಂದರಲು ಸಾಧ್ಯ.

ಧರ್ಮವು ದೇವರನ್ನು ಹುಡುಕುವ ಮಾರ್ಗವಲ್ಲ, ನಿಜ. ಆದರೆ ಧರ್ಮ ಇದ್ದಲ್ಲಿ ದೇವರಿರುತ್ತಾನೆ. ಅಷ್ಟೇ ಅಲ್ಲ, ಧರ್ಮ ಸ್ಥಾಪನೆಗಾಗಿ ಪರಮಾತ್ಮ ಕಾಲಕಾಲಕ್ಕೆ ಅವತರಿಸುತ್ತಾನೆ ಎಂದು ಭಾರತೀಯ ದರ್ಶನ ಹೇಳುತ್ತದೆ. “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…….. ಸಂಭವಾಮಿ ಯುಗೇ ಯುಗೇ” ಎಂದು ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ಇದೆಲ್ಲದರ ಅರ್ಥ ಏನೆಂದರೆ ಧರ್ಮವು ಭಗವಂತನಿಗೆ ಅತ್ಯಂತ ಪ್ರಿಯವಾದದ್ದು ಎಂದಾಯಿತು.

ದೇವರಲ್ಲಿ ನಂಬಿಕೆ ಇಲ್ಲದವರಿಗೂ ಧರ್ಮ ಕಡ್ಡಾಯ. ಸ್ವತಃ ದೇವರಿಗೂ ಕಡ್ಡಾಯ. ಹಾಗಾದರೆ ಧರ್ಮ ಎಂದರೇನು?

ಧರ್ಮದ ಅರ್ಥ ಇದು :

ಕನ್ನಡದ ಮೇರು ಸಾಹಿತಿ, ನಡೆದಾಡುವ ವಿಶ್ವಕೋಶವೆಂದೇ ಪ್ರಸಿದ್ಧರಾಗಿದ್ದ ಡಾ. ಶಿವರಾಮ ಕಾರಂತರನ್ನು ನಾನು ಒಮ್ಮೆ ಪ್ರಶ್ನಿಸಿದೆ : “ಧರ್ಮ ಎಂದರೇನು?” ಅದಕ್ಕೆ ಅವರು “ಧರ್ಮ” ಶಬ್ದಕ್ಕೆ ಸಂಸ್ಕೃತದಲ್ಲಿ ಯಾವ ಅರ್ಥ ಇದೆಯೋ ಅದೇ ಅದರ ನಿಜವಾದ ಅರ್ಥ ಎಂದರು. ನಾನು ಮತ್ತೆ “ಹೀಗೆ ಹೇಳಿದರೆ ಏನು ಹೇಳಿದ ಹಾಗಾಯಿತು? ಕನ್ನಡದಲ್ಲಿ ವಿವರಿಸಿ” ಎಂದೆ.

ಅದಕ್ಕೆ ಅವರು “ಧರ್ಮ ಎಂದರೆ ಆದರ್ಶ ನಡವಳಿಕೆ” ಎಂದರು.

ಧರ್ಮದ ಕುರಿತು ನಾನು ಅನೇಕ ವರ್ಷಗಳ ಕಾಲ ತಲೆ ಕೆಡಿಸಿಕೊಂಡಿದ್ದೇನೆ. ಆದರೆ ಇಷ್ಟು ಸುಂದರ ಮತ್ತು ಯೋಗ್ಯ ಉತ್ತರ ನನಗೆ ಬೇರೆಲ್ಲೂ ದೊರೆಯಲಿಲ್ಲ. ಅತ್ಯಂತ ಸರಳ. ಚಿಕ್ಕ ಮಗುವಿಗೂ ಅರ್ಥ ಆಗುವಷ್ಟು ಸರಳ. ಅಷ್ಟೇ ಆಳ ಮತ್ತು ವಿಸ್ತಾರವಾದ ಅರ್ಥವ್ಯಾಪ್ತಿ. ಧರ್ಮದ ಅರ್ಥ ಏನು ಎಂದು ಯಾರಾದರೂ ಕೇಳಿದರೆ ಥಟಕ್ಕನೆ ಉತ್ತರಿಸಬಹುದಾದ, ಯಾವುದೇ ಶಬ್ದಾಡಂಬರವಿಲ್ಲದ, ಸಂಕೀರ್ಣತೆಯಿಂದ ಹೊರತಾದ ವ್ಯಾಖ್ಯಾನ.

ಧರ್ಮ ಎನ್ನುವ ಶಬ್ದವನ್ನು ನೂರಾರು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಆದರೆ ಯಾವ ಸಂದರ್ಭದಲ್ಲಿ ಅದನ್ನು ಬಳಸಿದರೂ ಡಾ. ಕಾರಂತರ ಈ ವ್ಯಾಖ್ಯಾನವೇ ಅತ್ಯಂತ ಹೊಂದಿಕೆಯಾಗುತ್ತದೆ.

ನೋಡಿ : ಪಿತೃಧರ್ಮ = ತಂದೆಯಾದವನು ಅನುಸರಿಸಬೇಕಾದ ಆದರ್ಶ ನಡವಳಿಕೆ.
ಪುತ್ರಧರ್ಮ = ಮಗನಾದವನು ಅಳವಡಿಸಿಕೊಳ್ಳಬೇಕಾದ ಆದರ್ಶ ನಡವಳಿಕೆ.
ರಾಜಧರ್ಮ = ಆಡಳಿತಗಾರರ ಆದರ್ಶ ನಡವಳಿಕೆ.

ಧರ್ಮ ಎಂದರೆ ದೇವರನ್ನು ಹುಡುಕುವ ನಿರ್ದಿಷ್ಟ ಮಾರ್ಗವಲ್ಲ, ಆದರೆ ಧರ್ಮ ಇದ್ದಲ್ಲಿ ದೇವರಿರುತ್ತಾನೆ.ಹೌದು, ಆದರ್ಶ ನಡವಳಿಕೆಯನ್ನು ಭಗವಂತ ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ? ಈ ಆದರ್ಶ ನಡವಳಿಕೆಯನ್ನೇ ಜಗತ್ತಿನಲ್ಲಿ ಪುನರ್ಸ್ಥಾಪಿಸಲು ಮತ್ತೆ ಮತ್ತೆ ತಾನು ಅವತರಿಸಿ ಬರುವುದಾಗಿ ಭಗವಂತ ಹೇಳಿದ್ದು. ತನ್ನನ್ನು ನಿರ್ದಿಷ್ಟ ಪದ್ಧತಿಯಲ್ಲೇ ಪೂಜಿಸಲು ಹೇಳಲೆಂದಲ್ಲ!

ಇನ್ನೂ ಒಂದು ಕೌತುಕ ನೋಡಿ : ನಾಸ್ತಿಕರಿಗೂ, ಆಸ್ತಿಕರಿಗೂ, ಇವೆರಡೂ ಅಲ್ಲದ ಸಂಶಯಾತ್ಮರಿಗೂ ಧರ್ಮ ಕಡ್ಡಾಯವೆಂದು ಹೇಳಿದೆ. ಹೌದು, ಎಲ್ಲರೂ ಕಡ್ಡಾಯವಾಗಿ ಅನುಸರಿಸಿದರೆ ಸಮಾಜದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನಿರ್ಮಾಣವಾಗುತ್ತದೆ.ಆದ್ದರಿಂದ ನಾವೆಲ್ಲರೂ ಧರ್ಮವಂತರಾಗೋಣ. ಏನಂತೀರಿ?

35 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ಫೆಬ್ರ 14 2014

    “ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ, ಸಿಖ್, ವೀರಶೈವ ಮುಂತಾದವು ದೇವರನ್ನು ಹುಡುಕುವ ಯಾ ಸಾಕ್ಷಾತ್ಕರಿಸಿಕೊಳ್ಳುವ ನಿರ್ದಿಷ್ಟ ದಾರಿಗಳು.”

    ಇದು ತಪ್ಪು ಗ್ರಹಿಕೆ. ಕ್ರೈಸ್ತ/ಇಸ್ಲಾಂ ಮತಗಳಲ್ಲಿ ದೇವರಿದ್ದಾರೆ ಆದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಪರಿಕಲ್ಪನೆ ಇಲ್ಲ.

    ಬೌದ್ಧ ಮತ ದೇವರಿದ್ದಾರೆ ಎಂದು ಹೇಳುವುದಿಲ್ಲ, ಇನ್ನು ಹುಡುಕುವ ಯಾ ಸಾಕ್ಷಾತ್ಕರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ!

    ಉತ್ತರ
    • ಸಂತೋಷ's avatar
      Maaysa
      ಫೆಬ್ರ 14 2014

      ಸರಿ!

      ಬೌದ್ಧ ಹಾಗು ಜೈನ ಮತಗಳು ನಾಸ್ತಿಕ; ಆವು ಆತ್ಮ ಹಾಗು ಪರಮಾತ್ಮಗಳನ್ನು ನಂಬುವುದಿಲ್ಲ.

      ಭಗವಂತನ ‘ಸಾಕ್ಷಾತ್ಕಾರ’ ಎಂಬುದು ಸಂಪೂರ್ಣ ವೈದಿಕ ಮತದ ಅವಿಷ್ಕಾರ!

      ಉತ್ತರ
      • Nagshetty Shetkar's avatar
        Nagshetty Shetkar
        ಫೆಬ್ರ 14 2014

        ಹೌದು. ವೈದಿಕರ ಪರಿಕಲ್ಪನೆಯನ್ನು ಇತರ ಮತಗಳ ಹೇರುವುದು ತಪ್ಪು.

        ಉತ್ತರ
        • ಸಂತೋಷ's avatar
          Maaysa
          ಫೆಬ್ರ 14 2014

          ಇಲ್ಲಿ ಹೇರಿಕೆ ಎಂತು ? ನೀವೇ ತಾನೇ ಬಂದು ಈ ಬ್ಲಾಗ್-ಅನ್ನು ಓದಿಕೊಂಡಿದ್ದು ?

          ಲೇಖಕರು ಅವರ ಪ್ರಕಾರ ‘ಧರ್ಮ’ ಏನು ಎಂದು ಬರೆದಿದ್ದಾರೆ. ನಿಮ್ಮ ಮನೆಗೆ ಬಂದು ಒದ್ದು ಹೇಳುತ್ತಿಲ್ಲ !

          ಉತ್ತರ
        • Balachandra Bhat's avatar
          ಫೆಬ್ರ 14 2014

          ಎಲ್ಲಾ ಮತಗಳೂ ವೈದಿಕ ಆಶ್ರಯದಿಂದಲೇ ಬೆಳೆದಿರುವದರಿಂದ ಹೇರಿಕೆಯ ಪ್ರಶ್ನೆ ಇಲ್ಲವೇ ಇಲ್ಲ. ಉದಾರಣೆಗೆ ಅದ್ವೈತ ಮತದ ತತ್ವಾರ್ಥದ ಮೇಲೆ ಬಸವಾದ್ವೈತ ನಿಂತಂತೆ

          ಉತ್ತರ
          • ಸಂತೋಷ's avatar
            Maaysa
            ಫೆಬ್ರ 15 2014

            ತಪ್ಪು!

            ಎಲ್ಲಾ ಮತಗಳು ವೈದಿಕ ಆಶ್ರಯದಿಂದ ಬೆಳೆದಿಲ್ಲ. ವೈದಿಕತೆಯನ್ನು ದ್ವೇಷಿಸುವ ಬೌದ್ಧ, ಜೈನ ಹಾಗು ಲಿಂಗಾಯತ ಮತಗಳು ಸಹ ಇವೆ .

            ಉತ್ತರ
            • Balachandra Bhat's avatar
              ಫೆಬ್ರ 15 2014

              ಉಹು ಹಾಗಲ್ಲ. ಲಿಂಗಾಯಿತದ ಬಸವಾದ್ವೈತ ಥೇಟ್ ವೈದಿಕ ಧರ್ಮದ ಅದ್ವೈತ ದ ಸಾರವೇ ಆಗಿದೆ. ಆದರೆ ಅದನ್ನು ತತ್ವಾರ್ಥವನ್ನು ಅರ್ಥಮಾಡಿಕೊಳ್ಳಲಾಗದ ಕೆಲವು ಮನೋರೋಗಿಗಳು ಸೆಕ್ಯುಲರಿಸಂ ನ ಮುಖವಾಡದ ಹೊತ್ತು ರಾಜಕೀಯ ಫಲಕ್ಕೋಸ್ಕರ ದ್ವೇಷಿಸುತ್ತಿದ್ದಾರೆ ಅಷ್ಟೆ.

              ಉತ್ತರ
              • ಸಂತೋಷ's avatar
                Maaysa
                ಫೆಬ್ರ 15 2014

                ಇಲ್ಲಪ್ಪೊ!

                ಅಲ್ಲಮ ಮುಂತಾದವರು ವೇದವನ್ನು ಬಾಯಿಗೆ ಬಂದ ಹಾಗೆ ತೆಗಳಿದ್ದಾರೆ.

                ಉತ್ತರ
                • Balachandra Bhat's avatar
                  ಫೆಬ್ರ 16 2014

                  ಇಲ್ಲ ಬೈದಿಲ್ಲ. ಹಾಗೆ ಹೇಳಿದ ಸಂದರ್ಭ ಬೇರೆ ಅಷ್ಟೆ. ಎಷ್ಟೊ ವಚನಗಳಲ್ಲಿ, ವೇದಗಳನ್ನು ಹೊಗಳಿದ್ದಾರೆ ಕೂಡ. ನಿಲುಮೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಅದು ಸೆಕ್ಯುಲರ್ ಮುಖ ಹೊತ್ತ ಕೆಲ ರಾಜಕೀಯ ಫಲಾನುಭವಿಗವಿಳು ಸೃಷ್ಟಿಸಿದ ಕಥೆ ಅಷ್ಟೆ. ಕುವೆಂಪು ವಿಶ್ವವಿಧ್ಯಾನಿಲಯದ ಸಿ.ಎಸ್.ಎಲ್.ಸಿ ಎಂಬ ಸಮಾಜವಿಜ್ನಾನದ ಸಂಶೋಧನಾ ತಂಡವೊಂದು ಇಂತಹ ಕುಕೃತ್ಯವನ್ನು ಬಯಲಿಗೆಳೆದಿದ್ದಾರೆ ಕೂಡ. ಕೆಲ ನೀಚ ಸಿಕ್ಯುಲರ್ ಗಳು ವಾದ ಮಾಡಲಾರದೆ ಪಲಾಯನಗೈದು, ಸಿ.ಎಸ್.ಎಲ್.ಸಿ ಯ ವೈಜ್ನಾನಿಕ ನಡೆಯನ್ನು ನಿಂದಿಸುತ್ತಾ ಬಾಯಿತೀಟೆ ತೀರಿಸಿಕೊಳ್ಳುತ್ತಿದ್ದಾರೆ. 🙂

                  ಉತ್ತರ
                  • Nagshetty Shetkar's avatar
                    Nagshetty Shetkar
                    ಫೆಬ್ರ 16 2014

                    “ನಾನೊಂದು ಮರವಾಗಿದ್ದರೆ
                    ಹಕ್ಕಿ ಗೂಡು ಕಟ್ಟುವ ಮುನ್ನ
                    ಕೇಳುತ್ತಿರಲಿಲ್ಲ ನೀನು ಯಾವ ಕುಲ;
                    ಬಿಸಿಲನ್ನ ಅಪ್ಪಿಕೊಂಡಾಗ
                    ನೆರಳಿಗಾಗುತ್ತಿರಲಿಲ್ಲ ಮೈಲಿಗೆ;
                    ತಂಬೆಲರ ಕೂಡ ಎಲೆಗಳ ಸ್ನೇಹ
                    ಮಧುರವಾಗಿರುತ್ತಿತ್ತು.

                    ಮಳೆಹನಿಗಳು ನಾನು ಶ್ವಪಚನೆಂದು
                    ಹಿಂದೆ ಸರಿಯುತ್ತಿರಲಿಲ್ಲ, ನಾನು
                    ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ
                    ಮಡಿಮಡಿಯೆಂದು ಓಡುತ್ತಿರಲಿಲ್ಲ.

                    ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈಯುಜ್ಜಿ
                    ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
                    ಅಡರಿಕೊಂಡ ಮುಕ್ಕೋಟಿ ದೇವತೆಗಳು
                    ನನ್ನ ಮುಟ್ಟಿಸಿಕೊಳ್ಳುತ್ತಿದ್ದರು.

                    ಯಾರಿಗೆ ಗೊತ್ತು?
                    ನನ್ನ ಅಂತ್ಯಕಾಲದಲ್ಲಿ
                    ಕಡಿದು ತುಂಡಾದ ಒಣ ಸೀಳೊಂದು
                    ಹೋಮಾಗ್ನಿಯಲ್ಲಿ ಬೆಂದು
                    ಪಾವನವಾಗುತ್ತಿತ್ತೇನೋ
                    ಅಥವಾ
                    ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ
                    ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೆ?”

                    ಚಿನ್ನಸ್ವಾಮಿಯವರ ಕವನದ ಸಾಲುಗಳು.

                    ಉತ್ತರ
                    • Balachandra Bhat's avatar
                      ಫೆಬ್ರ 16 2014

                      ತುಂಬ ಒಳ್ಳೆಯ ಸಾಲುಗಳು. ವೈದಿಕ ನಂಬಿಕೆಯ ಮೇಲೆಯೇ ನಿಂತ ಈ ವಚನ ತುಂಬ ಇಷ್ಟವಾಯಿತು.
                      ಗೋವನ್ನು ಪವಿತ್ರವೆಂದು ಪರಿಗಣಿಸಿದ್ದು, ಗೋವಿನಲ್ಲಿರುವ ಮುಕ್ಕೋಟಿ ದೇವತೆಗಳನ್ನು ಪರಿಗಣಿಸಿದ್ದು, ಹೋಮಾಗ್ನಿಯನ್ನು ಪಾವನವೆಂದಿದ್ದು, ವೈದಿಕ ಸಾರದ ಮೇಲೆ ನಿಂತ ಅಚಲ ನಂಬಿಕೆಯನ್ನು ತೋರಿಸುತ್ತದೆ.

                    • Nagshetty Shetkar's avatar
                      Nagshetty Shetkar
                      ಫೆಬ್ರ 16 2014

                      ಮಿ. ಭಟ್, ಮತಾಂಧ ಮೂಢ ಭಂಡ ವೈದಿಕರಿಗೆ ದಲಿತ ಕವಿಯ ನೋವು ಅರ್ಥವಾಗುವುದಿರಲಿ, ಅವನ ಕವಿತೆಯಲ್ಲಿರುವ ವ್ಯಂಗ್ಯ ಕೂಡ ಅರ್ಥವಾಗಲ್ಲ. ಎಮ್ಮೆಯ ಚರ್ಮಕ್ಕಿಂತ ದಪ್ಪ ಚರ್ಮ ನಿಮ್ಮದು.

                    • Balachandra Bhat's avatar
                      ಫೆಬ್ರ 16 2014

                      ಪೂರ್ವಾಗ್ರಹವೇ ತುಂಬಿರುವ ಮೆದುಳಿಲ್ಲದ ಮೆದುಳಿಗೆ ಪೀಡಿತರಿಗೆ ಎಲ್ಲವೂ ವೈದಿಕವಿರೋಧಿಯಂತೆ ಕಾಣುವದರಲ್ಲಿ ಸಂಶಯವಿಲ್ಲ. ಕವಿಯು ಮಡಿ-ಮೈಲಿಗೆಯ ಆಚರಣೆಯ ಬಗ್ಗೆ ವ್ಯಂಗ್ಯವಾಡಿದ್ದಾರೆಯೆ ಹೊರತೂ ವೈದಿಕತೆಯ ಆಧ್ಯಾತ್ಮಿಕ ನಂಬಿಕೆಯ ಬಗೆಗಲ್ಲ. ಇಂತಹ ಪೂರ್ವಾಗ್ರಹ ಪೀಡಿತರಿಗೆ ಭಾಷಾಜ್ನಾನದ ಅಗತ್ಯ ಇದೆ.

                    • SSNK's avatar
                      ಫೆಬ್ರ 17 2014

                      ಮೈಲಿಗೆ, ಮಡಿ ಇತ್ಯಾದಿಗಳನ್ನು ನೀವು ವೈದಿಕ ಆಚರಣೆಗಳೆಂದು ತಿಳಿದಂತಿದೆ.
                      ಅವಾವುವೂ ವೈದಿಕ ಆಚರಣೆಗಳಲ್ಲ. ವೇದಕ್ಕೂ ಮೈಲಿಗೆ-ಮಡಿಗೂ ಸಂಬಂಧವಿಲ್ಲ.
                      ಚತುರ್ವೇದಗಳಲ್ಲಾಗಲೀ, ಉಪನಿಷತ್ತುಗಳಲ್ಲಾಗಲೀ, ಭಗವದ್ಗೀತೆಯಲ್ಲಾಗಲೀ, ಇಂದು ಆಚರಣೆಯಲ್ಲಿರುವ ಮೈಲಿಗೆ-ಮಡಿ ಪದಗಳ ಒಂದು ಸಣ್ಣ ಉಲ್ಲೇಖವನ್ನು ತೋರಿಸಿ ನೋಡೋಣ.
                      ಅದೇ ರೀತಿ, ಜಾತಿ-ಕುಲಗಳ ಕುರಿತಾಗಿಯೂ ವೇದಗಳಲ್ಲಿ ಪ್ರಸ್ತಾಪವಿಲ್ಲ.
                      ನೀವಿಂದು ತಿಳಿದಿರುವ ಯಾವುದೇ ಜಾತಿಯ ಉಲ್ಲೇಖವನ್ನು ವೇದೋಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ತೋರಿಸಿ ನೋಡೋಣ.

                      ಮೈಲಿಗೆ-ಮಡಿ-ಜಾತಿ-ಕುಲ ಎಂಬ ಪದ ಬಂದೊಡನೆ, ಅದನ್ನು ವೈದಿಕತೆಯೊಡನೆ ಸೇರಿಸುವುದು ಭಾರತೀಯ ಸಂಸ್ಕೃತಿಯ ವಿರೋಧಿಗಳ (ಕಮ್ಯುನಿಸ್ಟರು, ಮಾವೋವಾದಿಗಳು, ನಕ್ಸಲರು, ಜಿಹಾದಿಗಳು, ಕ್ರೈಸ್ತ ಮಿಷನರಿಗಳು) ಸಂಚು ಅಷ್ಟೇ!

                      ಹೀಗಾಗಿ, ನೀವು ಇಲ್ಲಿ ಹಾಕಿರುವ ಪದ್ಯವು ವೈದಿಕ ವಿರೋಧಿ ಎನ್ನಿಸಿಕೊಳ್ಳಲು ಸಾಧ್ಯವೇ ಇಲ್ಲ. ‘ವೈದಿಕ ವಿರೋಧ’ ಎನ್ನುವುದು ನಿಮ್ಮ ತಲೆಯನ್ನು ಹೊಕ್ಕಿರುವ ‘ಕ್ರಿಮಿ’ ಅಷ್ಟೇ. 😉

                    • ಸಂತೋಷ's avatar
                      Maaysa
                      ಫೆಬ್ರ 17 2014

                      ಸರಿ! 🙂

          • ಗಿರೀಶ್'s avatar
            ಗಿರೀಶ್
            ಫೆಬ್ರ 15 2014
          • Nagshetty Shetkar's avatar
            Nagshetty Shetkar
            ಫೆಬ್ರ 15 2014

            ಮಿ. ಭಟ್, ನಿಮ್ಮ ಮೌಡ್ಹ್ಯ ಕೂಡ ನಿಮ್ಮ ಉದ್ಧಟತನದ ಹಾಗೆ ಅಪರಿಮಿತವಾದದ್ದು. ಬಸಾವದ್ವೈತದ ಉಸಾಬರಿಗೆ ತಾವು ಬರದಿರುವುದು ಶ್ರೇಯಸ್ಕರ.

            ಉತ್ತರ
            • Balachandra Bhat's avatar
              ಫೆಬ್ರ 16 2014

              @Shetkar, ಹಾಗಿದ್ದರೆ ಅದ್ವೈತ ಹಾಗೂ ಬಸವಾದ್ವೈತದ ವ್ಯತ್ಯಾಸವನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ. (ಕಾಪಿ ಪೇಸ್ಟ್ ಬುದ್ದಿವಂತಿಕೆ ಬೇಡ)

              ಉತ್ತರ
              • Nagshetty Shetkar's avatar
                Nagshetty Shetkar
                ಫೆಬ್ರ 16 2014

                ಅದ್ವೈತ = ಶೋಷಣೆ ಬಂಧನ
                ಬಸವಾದ್ವೈತ = ಸಮಾನತೆ ವಿಮೋಚನೆ

                ಉತ್ತರ
                • Balachandra Bhat's avatar
                  ಫೆಬ್ರ 16 2014

                  ತರ್ಕ, ಗ್ರಂಥಗಳ ಆಧರಿಸಿ ವಿವರಿಸಿ ಹೇಳಿ. ಇಂತಹ ಅನಾಧಾರಿತ ಚೀಪ್ ಹೇಳಿಕೆಯನ್ನು ಯಾವ ಅನಕ್ಷರಸ್ಥನೂ ಕೊಡಲಾರ.

                  ಉತ್ತರ
                • ಸಂತೋಷ's avatar
                  Maaysa
                  ಫೆಬ್ರ 18 2014

                  ಮೊದಲನೆಯದಾಗಿ “ಬಸವಾದ್ವೈತ” ಎಂಬುದು ಇತ್ತ ಸಂಸ್ಕೃತವೂ ಅಲ್ಲ, ಅತ್ತ ಕನ್ನಡವೂ ಅಲ್ಲ.

                  ಏನದು ಬಸವನ ಅದ್ವೈತ?

                  ಬಸವಣ್ಣ ಅದ್ವೈತವನ್ನು ಪ್ರತಿಪಾದಿಸಿಲ್ಲ! ರಾಮಾನುಜಾಚಾರ್ಯರ ವೈಷ್ಣವ ವಿಶಿಷ್ಟಾದ್ವೈತದ ತರಹದ ಲೈಂಗಿಕ(ಲಿಂಗದ) ವಿಶಿಷ್ಟಾದ್ವೈತವನ್ನು ಬಸವಣ್ಣ ಪ್ರತಿಪಾದಿಸಿದ್ದು.

                  ಅದ್ವೈತ ಎಂಬುದು “ಸರ್ವಂ ಖಲು ಇದಂ ಬ್ರಹ್ಮಾ” ಎನ್ನುವುದು. ಆ ಬ್ರಹ್ಮಾ ಲಿಂಗ ಇಲ್ಲವೇ ವಿಷ್ಣುವಿನ ಹಾಗೆ ಆರಧ್ಯವಲ್ಲ, ಅದು ಕೇವಲ ಧ್ಯಾನ್ಯ! ಆ ಬ್ರಹ್ಮಾ ಇಡೀ ಬ್ರಹ್ಮಾಂಡ ಹಾಗು ಪ್ರತಿಯೊಂದು ಅಣುವು ಕೂಡ!

                  ಇನ್ನು ಬಸವ ಆದಿ ಶರಣರು ಬಯಲು, ಲಿಂಗ ಇವೆಲ್ಲ (ಶಂಕರರ) ಅದ್ವೈತವಲ್ಲ . ಅದು ಇಸ್ಲಾಂ ಧರ್ಮದ ಹಾಗೆ. ಇಸ್ಲಾಮಿನ ಅಲ್ಲಾಹುವಿನ ಜಾಗದಲ್ಲಿ ಲಿಂಗ ಹಾಕಿದ್ದಾರೆ ಅಷ್ಟೇ!

                  “ಅದ್ವೈತ = ಶೋಷಣೆ ಬಂಧನ” 🙂 ತಿಕ್ಲು!

                  ಉತ್ತರ
                  • Balachandra Bhat's avatar
                    ಫೆಬ್ರ 18 2014

                    ಇರಲಿ, ನಮ್ ಶೆಟ್ಕರ್ ಸಾಬ್ರು ಬಂದು ಉತ್ತರಿಸಲಿ, ಅವರು ಕಾಪಿ ಪೇಸ್ಟ್ ಮಾಡಿ ಹೇಳುವದು ಬಹಳಷ್ಟಿದೆ. 🙂

                    ಉತ್ತರ
                    • ಸಂತೋಷ's avatar
                      Maaysa
                      ಫೆಬ್ರ 19 2014

                      ಶಂಕರರ ಅದ್ವೈತ :-

                      ಅದ್ವೈತ’ವೆಂದರೆ ಎರಡಿಲ್ಲದ್ದು. ಅಂದರೆ ‘ಒಂದೇ’ ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೇ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು ಅಭೇದ ಸಿದ್ಧಾಂತವೆಂದೂ ಕರೆಯಲಾಗುತ್ತದೆ.

                      ಅದ್ವೈತ ಸಿದ್ಧಾಂತವು , ಪ್ರಸಿದ್ಧಿ ಮತ್ತು ಜನಪ್ರಿಯತೆ ಪೆಡೆದ ದರ್ಶನ. ಅದ್ವೈತವೆಂದರೆ ಎರಡಿಲ್ಲದ್ದು -ಒಂದೇ ಎಂದು ಅರ್ಥ. ಸುಮಾರು ಕ್ರಿ.ಪೂ. ೮೦೦ -೩೦೦ ವರ್ಷಗಳಹಿಂದಿನ ಉಪನಿತ್ತುಗಳಲ್ಲಿ ಅದ್ವೈತ ಪರ ವಾಕ್ಯಗಳು ಸಾಕಷ್ಟಿವೆ. ಉದಾಹರಣೆಗೆ: “ಸರ್ವಂ ಖಲ್ವಿದಂ ಬ್ರಹ್ಮ” ; “ಆತ್ಮೈವೇದ ಸರ್ವಂ” ; “ಅಯಮಾತ್ಮಾಬ್ರಹ್ಮ;” ; “ಬ್ರಹ್ಮ”ವೇದ ಬ್ರಹ್ಮೈವ ಭವತಿ” ; ಇತ್ಯಾದಿ

                      ಜೀವಾತ್ಮನು ಅಜನೂ , ಅಮರನೂ , ಸರ್ವವ್ಯಾಪಿಯೂ, ಬ್ರಹ್ಮ ಸ್ವರೂಪಿಯೂ ಆಗಿದ್ದಾನೆ. ಅವನಿಗೆ ಪಾರಮಾರ್ಥಿಕವಾಗಿ ಬಂಧ-ಮೋಕ್ಷಗಳಿಲ್ಲ.. ಅವನಿಗೆ ಸ್ವರ್ಗ-ನರಕಗಳಿಲ್ಲ . ಅವನು ಅವನಲ್ಲಿ (ತನ್ನಲ್ಲಿ) ಇಲ್ಲದ ಗುಣಧರ್ಮಗಳನ್ನು ತನ್ನಲ್ಲಿ ಆರೋಪಿಸಿಕೊಂಡು (ಅವಿದ್ಯೆ – ಅಜ್ಞಾನ), ವ್ಯವಹರಿಸಲು ಅಧ್ಯಾಸವೇ (ಅಜ್ಞಾನ-ಮಾಯೆ) ಕಾರಣ.
                      ಆಕಾಶವು ಮಡಕೆ ಕುಡಿಕೆಗಳಲ್ಲಿ ಬೇರೆ ಬೇರೆ ಕಾಣುವಂತೆ, ಒಂದೇ ಚೈತನ್ಯವು (ಬ್ರಹ್ಮವು) ಉಪಾದಿಗಳ ಕಾರಣದಿಂದ ಬೇರೆ ಬೇರೆಯಾಗಿತೋರುವುದು. ಹಾಗಾಗಿ ಬೇಧವು ಪಾರಮಾರ್ಥಿಕ ಸತ್ಯವಲ್ಲ. ತತ್ವಮಸಿ – ತತ್- ತ್ವಂ- ಅಸಿ ಎಂಬ ಶ್ರತಿ ವಾಕ್ಯಗಳು (ಅದು= ಬ್ರಹ್ಮವು, ತ್ವಂ = ನೀನು, ಅಸಿ-ಆಗಿದ್ದೀಯೆ) ಅಬೇಧವನ್ನು ಸಾರುತ್ತವೆ .

                      ಬಸವಣ್ಣನ ತತ್ವ:-

                      ಲಿಂಗವೆಂಬ ಸೃಷ್ಟಿಕರ್ತ, ದೇವರು. ಅವನ ಸೃಷ್ಟಿಯಾದ ಮನುಜರು ಅವರ ಮಕ್ಕಳು, ದಾಸರು, ಭಕ್ತರು. ದಾಸರಾದ ಮನುಜರು ಆ ಲಿಂಗಕ್ಕೆ ಆರಾಧನೆಯನ್ನು, ಭಕ್ತಿಯನ್ನು ಸಲ್ಲಿಸಬೇಕು. ಆ ಭಕ್ತಿ-ಸಲ್ಲಿಸುವಿಕೆಗೆ ಕಾಯಕವೂ ಒಂದು ದಾರಿ.

                      ಇಲ್ಲಿ ಲಿಂಗ ಹಾಗು ಶರಣ(ಮನುಷ್ಯ) ಬೇರೆ ಬೇರೆ ತಾನೇ? ಲಿಂಗ = ಶರಣ ಅಲ್ಲವಲ್ಲ ! ಮತ್ತೆ ಇದು ಹೇಗೆ ಅದ್ವೈತ?

    • SalamBava's avatar
      SalamBava
      ಜನ 9 2017

      Well said Shetkar.

      ಉತ್ತರ
  2. jayaraj's avatar
    jayaraj
    ಫೆಬ್ರ 14 2014

    ಧರ್ಮದ ನಿಜವಾದ ಅರ್ಥ ತಿಳಿಸಿದ ನಿಮ್ಮ ಧರ್ಮಕ್ಕೆ ಕೋಟಿ ಕೋಟಿ ನಮನಗಳು. ಧರ್ಮೋ ರಕ್ಷತಿ ರಕ್ಷಿತಃ ಎಂಬ ವಾಕ್ಯವನ್ನು ಏನೆಲ್ಲ ಅಪಬಳಕೆ ಮಾಡುವವರಿದ್ದಾರೆ. ಅದರರ್ಥ ಇನ್ನು ಮುಂದೆ ಒಳ್ಳೆಯ ನಡುವಳಿಕೆಗಳನ್ನು ರಕ್ಷಿಸುವವನನ್ನು ಆತನ ನಡುವಳಿಕೆಗಳೇ ರಕ್ಷಿಸುತ್ತವೆಂದು ಇನ್ನು ಮೇಲೆ ನಾನು ಹೇಳುತ್ತೇನೆ. [[“ಧರ್ಮ” ಶಬ್ದಕ್ಕೆ ಸಂಸ್ಕೃತದಲ್ಲಿ ಯಾವ ಅರ್ಥ ಇದೆಯೋ ಅದೇ ಅದರ ನಿಜವಾದ ಅರ್ಥ ಎಂದರು]] ಹೀಗೆ ನೀವು ಹೇಳಿದ್ದೀರಿ. ಇಂಥ ಚಂದದ ಅರ್ಥ ಯಾವ ಗ್ರಂಥದಲ್ಲಿದೆ ಎಂದು ಶ್ರೀ ಕಾರಂತರು ಹೇಳಿದ್ದರೆ ಅಥವಾ ನಿಮಗೆ ಗೊತ್ತಿದ್ದರೆ ತಿಳಿಸಿದರೆ ಕರ್ಮಠರ ಬಾಯಿ ಮುಚ್ಚಿಸಲು ಬರುತ್ತದೆ. ದಯವಿಟ್ಟು ತಿಳಿಸಿರಿ. ಕರ್ಮಠರು ಸ್ನಾನ, ಸಂಧ್ಯಾವಂದನೆ, ದೇವಪೂಜೆಯನ್ನು ಆಗಮೋಕ್ತವಾಗಿ ಮಾಡುವದು, ಅಗ್ರ ಎಡಬರುವಂತೆ ಎಲೆ ಹಾಕುವದು , ಅನ್ನ ಎಡಕ್ಕೆ ಪಾಯಸ ಬಲಕ್ಕೆ ಬರುವಂತೆ ಬಡಿಸುವದು, ಇವೇ ಧರ್ಮಗಳೆಂದೂ ಅವನ್ನು ರಕ್ಷಿಸುವವನನ್ನು ಧರ್ಮ ರಕ್ಷಿಸುತ್ತದೆಂದೂ ಹೇಳುತ್ತಾ ಬರುತ್ತಿದ್ದಾರೆ. ಕಾರಣ ಧರ್ಮದ ಮೆಲಿನ ವ್ಯಾಖ್ಯಾನ ಎಲ್ಲಿ ಬಂದಿದೆ ತಿಳಿಸಿದರೆ ಉಪಕೃತನಾಗುತ್ತೇನೆ.

    ಉತ್ತರ
  3. Balachandra Bhat's avatar
    ಫೆಬ್ರ 14 2014

    ಇನ್ನು ಲೇಖನದ ವಿಷ್ಯಕ್ಕೆ ಬರುವುದಾದರೆ ನನ್ನ ತಿಳುವಳಿಕೆಯ ಪ್ರಕಾರ ಧರ್ಮ ಶಬ್ದದ ಅರ್ಥ ಕರ್ತವ್ಯ ಎಂದು. ಆದರೆ ಅದು ನಿರ್ಧಿಷ್ಟವಾಗಿರದೆ ವ್ಯಾಪಕವಾಗಿ ವಿಸ್ತಾರತೆಯನ್ನು ಹೊಂದಿದೆ ಕೂಡ. ಕೇವಲ ಆದರ್ಶ ನಡವಳಿಕೆ ಅಥವಾ ಕರ್ತವ್ಯ ಎಂಬ ಅರ್ಥಕ್ಕಷ್ಟೆ ಸೀಮಿತವಾಗಿದ್ದರೆ ಧರ್ಮ ಎಂಬ ಶಬ್ದವು ದೇವರನ್ನು ಹುಡುಕುವ ಗ್ರಂಥಗಳಲ್ಲಿ ಬಳಸುವ ’ಧರ್ಮಶಾಸ್ತ್ರ’ ಎಂಬ ಶಬ್ದಕ್ಕೆ ಯಾಕಾಗಿ ಅಂಟಿಕೊಂಡಿರುತ್ತಿದ್ದವು?
    ಹಾಗಾಗಿ ಧರ್ಮ ಎಂಬ ಶಬ್ದ ಒಂದೆ ಅರ್ಥಕ್ಕೆ ಸೀಮಿತವಾಗಿಲ್ಲ. ವ್ಯಾವಹಾರಿಕ ಜೀವನದಲ್ಲಿ ಅರ್ಥದಲ್ಲಿ ಕರ್ತವ್ಯ, ಆದರ್ಶ ನಡವಳಿಕೆ ಎಂದೆಲ್ಲಾ ಅರ್ಥೈಸಬಹುದು. ಹಾಗೆಯೆ ಅಧ್ಯಾತ್ಮಿಕವಲಯದಲ್ಲಿಯೂ ತನ್ನದೇ ಆದ ಅರ್ಥವನ್ನು ಹೊಂದಿದೆ. ಹಾಗೆಯೆ ’ಕರ್ಮ’ ಎಂಬ ಶಬ್ದವೂ ಕೂಡ. ಕರ್ಮ ಎಂಬ ಶಬ್ದವನ್ನು ಕಾಯಕ ಎಂದು ಒಂದರ್ಥದಲ್ಲಿ ಕರೆಯಬಹುದು, ಹಾಗೆಯೆ ಹೋಮ ಹವನ ಇತ್ಯಾದಿಯಾದ ’rituals’ ಎಂಬ ಅರ್ಥವೂ ಇದೆ.

    ಉತ್ತರ
  4. kumar's avatar
    kumar
    ಫೆಬ್ರ 18 2014

    sarva-dharmān parityajya
    mām ekaṁ śaraṇaṁ vraja
    ahaṁ tvāṁ sarva-pāpebhyo
    mokṣayiṣyāmi mā śucaḥ
    illi(Bhagavad-gita -18.66) dharma da artha venu?

    ಉತ್ತರ
    • ಸಂತೋಷ's avatar
      Maaysa
      ಫೆಬ್ರ 18 2014

      ಸ್ಟಾರ್ ಪ್ಲಸ್ ಅಲ್ಲಿ ಬರ್ತಾ ಇರುವ ಮಹಾಭಾರತ ನೋಡಿ, ಚೆನ್ನಾಗಿದೆ!

      ಧರ್ಮ ಎನ್ನುವುದು ಎಲ್ಲರಿಗೂ ಒಂದೇ ಅಲ್ಲ. ಪ್ರತಿಯೊಬ್ಬನು ತನ್ನ ಧರ್ಮವೇನು ಎಂಬುದನ್ನು ಕಂಡು-ಕೊಳ್ಳ-ಬೇಕು.

      ಉತ್ತರ
    • SSNK's avatar
      ಫೆಬ್ರ 19 2014

      [[sarva-dharmān parityajya]]
      [[illi(Bhagavad-gita -18.66) dharma da artha venu?]]

      ಧರ್ಮ ಎನ್ನುವ ಪದವನ್ನು ಸಂದರ್ಭಕ್ಕೆ ಅನುಗುಣವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
      ಮನುಷ್ಯನು ತನ್ನಿಂದಾದ ಕೆಲಸವನ್ನು “ನಾನು ಮಾಡಿದೆ” ಎಂದು ಹೇಳಿಕೊಳ್ಳುತ್ತಾನೆ. ಮತ್ತು ಅದಕ್ಕಾಗಿ ಪ್ರತಿಫಲಾಪೇಕ್ಷೆಯನ್ನೂ ಆಶಿಸುತ್ತಾನೆ. “ಕೆಲಸವನ್ನು ಮಾಡು, ಆದರೆ ಅದು ನಿನ್ನಿಂದಾಯಿತು ಎಂದು ಭಾವಿಸಬೇಡ, ಅದಕ್ಕಾಗಿ ಫಲವನ್ನೂ ಆಶಿಸಬೇಡ” ಎಂದು ಈ ಶ್ಲೋಕದಲ್ಲಿ ಶ್ರೀಕೃಷ್ಣನು ಹೇಳುತ್ತಿದ್ದಾನೆ. ಕೆಲಸವನ್ನು ಮಾಡಿದ ನಂತರ “ಬ್ರಹ್ಮಾರ್ಪಣಮಸ್ತು” ಎಂದು ಹೇಳುವುದೂ ಈ ಹಿನ್ನೆಲೆಯಿಂದಲೇ. ನಾನು ಮಾಡಿದ ಕರ್ತವ್ಯ ಭಗವಂತನಿಗೆ ಅರ್ಪಿತವಾದ ಮೇಲೆ, ಫಲಾಪೇಕ್ಷೆಯೇ ಇಲ್ಲ ಅಲ್ಲವೇ? ಹೀಗೆ, ಈ ಶ್ಲೋಕದಲ್ಲಿ ಧರ್ಮ ಎನ್ನುವ ಪದವನ್ನು ಕರ್ತವ್ಯ ಎನ್ನುವ ಅರ್ಥದಲ್ಲಿ ಬಳಸಲಾಗಿದೆ.

      ಭಾರತೀಯ (ಅರ್ಥಾತ್ ಹಿಂದೂ) ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಮೊದಲಿಗೆ ಪಾಶ್ಚಾತ್ಯ ಕನ್ನಡಕವನ್ನು ಕಿತ್ತೆಸೆಯಬೇಕು. ಪಾಶ್ಚಾತ್ಯ ಸೆಮೆಟಿಕ್ ಮತಗಳೊಂದಿಗೆ ಹೋಲಿಸುವುದನ್ನು ಮತ್ತು ಆ ಮತಗಳ ಸಮೀಕರಣದ ಮೂಲಕ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಬಿಡಬೇಕು. ಭಾರತೀಯ ಸಾಹಿತ್ಯಗಳಾದ ವೇದೋಪನಿಷತ್ತುಗಳು, ಭಗವದ್ಗೀತೆ, ಇತ್ಯಾದಿಗಳು ಭಾರತೀಯ ಸಂಸ್ಕೃತಿಯ ಆಶ್ರಯದಲ್ಲಿ ಹುಟ್ಟಿದ ಸನಾತನ ಸತ್ಯಗಳು. ಇಲ್ಲಿನ ಹತ್ತಾರು ಸಹಸ್ರ ವರ್ಷಗಳ ಜೀವನಾನುಭವದ, ಜೀವನ ದರ್ಶನಗಳ ಸಾರ ಅವು. ಅವು ಮತಾಚರಣೆಗಳು, ಜಾತಿ, ಇತ್ಯಾದಿಗಳಿಂದ ಅತೀತವಾದವು.
      ಪಾಶ್ಚಾತ್ಯ ಕನ್ನಡಕದ ಮೂಲಕ ನೋಡುವಾಗ, ಧರ್ಮವನ್ನು religion ಎಂದೂ, ಮತವನ್ನು ಜಾತಿಯೆಂದೂ, ದೇವರನ್ನು God ಎಂದೂ, ಇತ್ಯಾದಿ ಅನುವಾದಗಳನ್ನು ಮಾಡಿಕೊಂಡು ಗೊಂದಲಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಇದರಿಂದಾಗಿಯೇ, ಭಾರತದ ನೆಲದಲ್ಲಿ ಹುಟ್ಟದ “Secularism” ಎಂಬ ಪದವನ್ನು, ಭಾರತದ ಜೀವನಕ್ಕೆ ಹೊಂದಿಸಲು ಹೋಗಿ ಅನಾಹುತಗಳಾಗಿವೆ. ಭಾರತದಲ್ಲಿ ಎಂದೂ ರಾಜ್ಯಾಡಳಿತದ ಮೂಲಕ ಮತಗಳ ಪ್ರಚಾರ ನಡೆದಿಲ್ಲ. ಅಥವಾ ಮತೀಯ ನಾಯಕರು, ಮಠಾಧೀಶರು ಅಧಿಕಾರ ಹಿಡಿದು, ತಮ್ಮ ಮತ-ಅಭಿಪ್ರಾಯಗಳನ್ನು ಪ್ರಚುರಪಡಿಸಲು ಪ್ರಯತ್ನಿಸಿಲ್ಲ, ಒತ್ತಾಯಿಸಿಲ್ಲ, ಮತ್ತು ಇತರ ಮತಾಚರಣೆಗಳನ್ನು ತುಳಿದಿಲ್ಲ. ಈ ರೀತಿಯ ಘಟನೆಗಳು ಯೂರೋಪಿನಲ್ಲಿ ನಡೆದು, ಅದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡದ್ದೇ “Secularism”. ಅದು ಅಲ್ಲಿಗೆ ಅಗತ್ಯವಾಗಿತ್ತು. ಸೆಮೆಟಿಕ್ ಮತಗಳು ರಾಜಕೀಯ ಸಿದ್ಧಾಂತಗಳಾಗಿವೆ. ಆದರೆ, ಭಾರತೀಯ ಧರ್ಮ ಎಂದೂ ರಾಜಕೀಯವನ್ನು ಆಶ್ರಯಿಸಿಲ್ಲ. ಹೀಗಿರುವಾಗ, ಇಲ್ಲಿಗೆ “Secularism” ಅಗತ್ಯವೇನಿದೆ. ಇಲ್ಲಿನ ಮಣ್ಣಿನ ಗಂಧವನ್ನು ಅರ್ಥಮಾಡಿಕೊಳ್ಳದ, ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದು, ಪಾಶ್ಚಾತ್ಯ ಕನ್ನಡಕದ ಮೂಲಕ ಭಾರತವನ್ನು ನೋಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರು ಮಾಡಿರುವ ಅನರ್ಥವಿದು.

      ಭಾರತದ ಮಣ್ಣಲ್ಲಿ ಹುಟ್ಟಿದ ಅನೇಕ ಸಿದ್ಧಾಂತಗಳಿಗೆ ಪಾಶ್ಚಾತ್ಯ ಭಾಷೆಗಳಲ್ಲಿ ಸಮಾನಾರ್ಥಕ ಅನುವಾದಗಳು ದೊರೆಯುವುದಿಲ್ಲ. ಏಕೆಂದರೆ, ಆ ಸಿದ್ಧಾಂತಗಳೇ ಅಲ್ಲಿಲ್ಲ. ಹೀಗಾಗಿ, ಧರ್ಮ, ಕರ್ಮ, ಪುಣ್ಯ, ಸರ್ವಧರ್ಮ ಸಮಭಾವ, ಬ್ರಹ್ಮನ್, ಇತ್ಯಾದಿಗಳನ್ನು ಪಾಶ್ಚಾತ್ಯ ಭಾಷೆಗಳಿಗೆ ಅನುವಾದಿಸಲು ಪ್ರಯತ್ನಿಸಬೇಡಿ. ನೀವು ಹಿಡಿದಿರುವ ಭಗವದ್ಗೀತೆಯ ಪುಸ್ತಕದಲ್ಲಿ ಧರ್ಮ ಎನ್ನುವುದನ್ನು Religion ಎಂದು ಅನುವಾದಿಸಿದ್ದರೆ, ಆ ಪುಸ್ತಕವನ್ನು ಹೊರಗೆಸೆಯಿರಿ. ಧರ್ಮವನ್ನು Religion ಎನ್ನುವ ವಿಚಾರ/ಪದದ ಮೂಲಕ ಅರ್ಥಮಾಡಿಸಲು ಪ್ರಯತ್ನಿಸುವವರಿಗೆ, ಧರ್ಮದ ಅರ್ಥ ತಿಳಿದಿಲ್ಲ; ಹೀಗಿರುವಾಗ, ಅವರು ನಿಮಗೇನು ಅರ್ಥ ಮಾಡಿಸುತ್ತಾರೆ.

      ಕೇವಲ, ಧರ್ಮ ಎನ್ನುವ ಪದ ಮಾತ್ರವಲ್ಲ. ದೇವರು ಎನ್ನುವ ಕಲ್ಪನೆಯೂ ನಮ್ಮದು ಭಿನ್ನ. ನಮ್ಮ ದೇವರು ಎನ್ನುವ ಪದವನ್ನು God ಎಂದು ಅನುವಾದಿಸಲಾಗದು. ಅವರ God ಗೆ ಇತರ God ಗಳ ಕುರಿತು ಅಸೂಯೆಯಿರುತ್ತದೆ ಮತ್ತು “False God” ಎನ್ನುವ ಕಲ್ಪನೆಯೂ ಅವರಲ್ಲಿದೆ.
      ನಮ್ಮಲ್ಲಿ ದೇವರೆಂದರೆ ಒಬ್ಬನೇ. ಆತನಿಗೆ ಅನೇಕ ರೂಪ/ನಾಮಗಳನ್ನು ನಾವು ಕೊಟ್ಟಿದ್ದೇವಷ್ಟೇ ಎನ್ನುವುದು ಪ್ರತಿಯೊಬ್ಬ ಭಾರತೀಯನಿಗೂ ಚಿಕ್ಕಂದಿನಿಂದಲೇ ತಿಳಿದಿರುತ್ತದೆ. ಹೀಗಾಗಿ, ಗಣೇಶ, ಹನುಮಂತ, ಮಾರಮ್ಮ, ಕಾಳಿ, ಕೃಷ್ಣ, ಇತ್ಯಾದಿಗಳೆಲ್ಲಾ ಒಬ್ಬರೇ ದೇವರ ವಿವಿಧ ಹೆಸರುಗಳು. ಕೃಷ್ಣನಿಗೆ ಪೂಜಿಸಿದರೆ ಕಾಳಿಗೆ ಕೋಪ ಬರುವುದಿಲ್ಲ. ಆಂಜನೇಯನನ್ನು ಪೂಜಿಸಿದರೆ, ಗಣೇಶನಿಗೆ ಅಸೂಯೆಯಾಗುವುದಿಲ್ಲ. ಗಣೇಶನನ್ನು ಪೂಜಿಸುವವರು ಮಾರಮನನ್ನೋ, ಕೃಷ್ಣನನ್ನೋ “ಸುಳ್ಳು ದೇವರು” ಎಂದು ಹೇಳುವುದಿಲ್ಲ. ಏಕೆಂದರೆ, ಅವೆಲ್ಲವೂ ಒಂದೇ ದೇವರ ವಿವಿಧ ರೂಪಗಳೆಂದು ಅವರೆಲ್ಲರಿಗೂ ತಿಳಿದಿದೆ. ನಮ್ಮಲ್ಲಿ ಮಣ್ಣನ್ನೂ ಪೂಜಿಸುತ್ತೇವೆ, ಸೆಗಣಿಯನ್ನೂ ಪೂಜಿಸುತ್ತೇವೆ, ಕಲ್ಲು-ಮರಗಳನ್ನೂ ಪೂಜಿಸುತ್ತೇವೆ, ಪ್ರಾಣಿಗಳನ್ನೂ ಪೂಜಿಸುತ್ತೇವೆ – ಭಗವಂತ ಸರ್ವಾಂತರ್ಯಾಮಿ, ಪ್ರತಿಯೊಂದು ಅಣುವಿನಲ್ಲೂ ಆತನಿದ್ದಾನೆ, ಆತನಿಲ್ಲದ ಜಾಗವಿಲ್ಲ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಭಾರತೀಯ ಕಲ್ಪನೆಯ ದೇವರು ಇದು.
      ಇದನ್ನು God ಎಂದಾಗ ಎಷ್ಟೂಂದು ಗೊಂದಲವಾಗಬಹುದು ನೋಡಿ.

      ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ, ನೀವು ಭಗವದ್ಗೀತೆಯ ಶ್ಲೋಕವೊಂದನ್ನು ಉದಾಹರಿಸಿರುವಿರಿ. ಅದನ್ನು ತೆಗೆದುಕೊಂಡಿರುವುದು ಯಾವುದೋ ಆಂಗ್ಲ ಪುಸ್ತಕದಿಂದ. ಅಂದರೆ, ಯಾವುದೋ ಆಂಗ್ಲ ಪುಸ್ತಕ/ಟೀಕೆಯ ಮೂಲಕ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿರುವಂತಿದೆ. ನಿಮ್ಮ ಮಾತೃಭಾಷೆಯಲ್ಲಿ ಭಗವದ್ಗೀತೆಯ ಅರ್ಥವನ್ನು ಓದಿ. ಸಾಧ್ಯವಾದರೆ ಸಂಸ್ಕೃತ ಕಲಿತು ಭಗವದ್ಗೀತೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆಗ, ಅದು ನಿಮಗೆ ಸರಿಯಾಗಿ ಅರ್ಥವಾಗುತ್ತದೆ. ಆಂಗ್ಲ ಭಾಷಾಂತರದ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಅರ್ಥಕ್ಕಿಂತ ಅಪಾರ್ಥವೇ ಹೆಚ್ಚಾಗಬಹುದು, ಇದರಿಂದ ಅನರ್ಥವಾಗುವ ಅಪಾಯವೇ ಹೆಚ್ಚು!

      ಉತ್ತರ
      • ಲಿಂಗಾಯತರ ಒಕ್ಕೂಟ's avatar
        ಲಿಂಗಾಯತರ ಒಕ್ಕೂಟ
        ಫೆಬ್ರ 3 2016

        ನೈಸ್ ಕಾಮಿಡಿ ಇದು ತಮ್ಮ ಬೆನ್ನು ತಾವು ತಟ್ಟಿಕೊಳ್ಳುತ ಶಂಕರರ ನಾನು ಸತ್ಯ ಜಗತ್ತ್ ಮಿತ್ಯ ಎಂಬಂತೆ ನಮ್ಮದೆ ಸತ್ಯ ಎನ್ನುವ ನಿಮಗೆ …
        .ಆದರೆ ಒಂದಂತು ಸ್ಪಷ್ಟ ನೀವು ಹೇಳಿದ ದೇವರನ್ನು ಹುಡುಕುವ, ಅಥವಾ ಭಜನೆ ಮಾಡುತ ಜನರನ್ನು ಶೋಷಿಸುವದು ಲಿಂಗಾಯತ ಅಲ್ಲಾ ಹಲವಾರು ವರ್ಗದ ಜನರು ನ್ಯಾಯ,ಸತ್ಯ ಮಾರ್ಗದಲ್ಲಿ ನಡೆಯಲು ಕಟ್ಟಿಕೊಂಡ ಧರ್ಮವೇ ಲಿಂಗಾಯತ

        ಉತ್ತರ
  5. Hasanmukhi's avatar
    Hasanmukhi
    ಜನ 9 2017

    ವೀರಶೈವರು ಆಯತದಲ್ಲಿ ಲಿಂಗವನ್ನು ಧರಿಸುತ್ತಾರೆ. ಲಿಂಗವನ್ನು ಆಯತದಲ್ಲಿ ಧರಿಸಿಕೊಂಡವನೇ ಲಿಂಗಾಯತ, ಅದು ಒಂದು ರೂಢಿನಾಮ ಯಾವದೇ ಜಾತಿ ಧರ್ಮ ಅಲ್ಲ.

    ಉತ್ತರ
    • SalamBava's avatar
      SalamBava
      ಜನ 9 2017

      Ramjan Darga has written extensively on the difference between Lingayata and Veerashaiva. Please read his writings.

      ಉತ್ತರ
      • satyampriya's avatar
        satyampriya
        ಜನ 15 2017

        ಬ್ರಾಹ್ಮಣ್ಯವ ನಂಬಿದೆ ಗ್ರಹಗಳ ಕಾಟ ಶುರುವಾಯಿತಯ್ಯಾ
        ಬ್ರಾಹ್ಮಣ್ಯವ ನಂಬಿದೆ ವಾಸ್ತು ದೋಷ ಎರಗಿತಯ್ಯಾ
        ಬ್ರಾಹ್ಮಣ್ಯವ ನಂಬಿದೆ ದೇವರ ಭಯ ಆರಂಭಗೊಂಡಿತ್ತಯ್ಯಾ
        ಬ್ರಾಹ್ಮಣ್ಯವ ನಂಬಿದೆ ಜಾತಿ ಭ್ರಮೆ ಹೊಕ್ಕಿತಯ್ಯಾ
        ಬ್ರಾಹ್ಮಣ್ಯವ ನಂಬಿದೆ ಸೂತಕಗಳು ಸುತ್ತಿಕೊಂಡವಯ್ಯಾ
        ಬ್ರಾಹ್ಮಣ್ಯವ ನಂಬಿದೆ ಸಾವು ಕಾಡತೊಡಗಿತಯ್ಯಾ
        ಬಸವಣ್ಣನ ನಂಬಿದೆ ಕತ್ತಲೆ ಕರಗಿ ಹೋಗಿತ್ತು ಕಾಣಾ
        ವಿಶ್ವ ಸತ್ಯಂ ಪ್ರಿಯ ಬಸವಣ್ಣ

        Veerashaiva = Braahmanya
        Lingayata = Basava dharma

        ಉತ್ತರ
        • ಶೆಟ್ಟಿನಾಗ ಶೇ.'s avatar
          ಶೆಟ್ಟಿನಾಗ ಶೇ.
          ಜನ 15 2017

          ಖರೆ ಹೇಳಿದಿರಿ ವಿಶ್ವಾರಾಧ್ಯ ಸರ!

          ಉತ್ತರ
  6. G. Dakshina Murthy's avatar
    G. Dakshina Murthy
    ನವೆಂ 3 2017

    ಗಹನ ಮತ್ತು ವಿಶಾಲವಾದ ಅರ್ಥಗಳಿರುವ ಗುರುತರವಾದ ವಿಷಯವನ್ನು ಕುರಿತು ಬರೀ ಮೇಲ್ಪದರದ ಮಾತು, ಅರ್ಥ, ವ್ಯಾಖ್ಯಾನಗಳು, ದ್ವೇಷಾಸೂಯೆಗಳಿಂದಲೂ ಪರರ ಬಗೆಗಿನ ಅನಾದರ ಅಗೌರವಗಳಿಂದಲೂ ಅನಧ್ಯಯನದ ಕಾರಣದಿಂದಲೂ ವೇದಿಕೆಯ ಭಾಷಣಗಳ ಅರ್ಥಹೀನ ಮಾತುಗಳ ಪ್ರಭಾವದಿಂದಲೂ ಉತ್ಪನ್ನವಾದ ಅಭಿಪ್ರಾಯಗಳು, ‘ನಾನು ತಿಳಿದಿರುವುದೇ ಪರಮಸತ್ಯ; ಉಳಿದದ್ದೆಲ್ಲವೂ ತಪ್ಪು’ ಎನ್ನುವ ದನಿಯ ಅಪ್ರಬುದ್ಧ ಮಾತುಗಳು, ಸನಾತನವೆಲ್ಲವೂ ಮನುಕುಲಕ್ಕೆ ಮಾರಕ ಎನ್ನುವಂತಹ ಮೌಢ್ಯದ ಅಭಿವ್ಯಕ್ತಿ – ಎಲ್ಲವೂ ಪುಂಖಾನುಪುಂಖವಾಗಿ ಇಲ್ಲಿ ಹರಡಿಕೊಂಡಿವೆ. ಒಂದು ವಿಷಯವನ್ನು ಕುರಿತು ತಿಳಿದುಕೊಳ್ಳಬೇಕಾದರೆ ಒಂದು ಪ್ರಾಮಾಣಿಕ ಉದ್ದೇಶವಿರಬೇಕು; ಜ್ಣಾನವೃದ್ಧಿಯ ಹಂಬಲವಿರಬೇಕು; ಅನ್ಯರ ಅನಿಸಿಕೆಯನ್ನು ಗೌರವಿಸುವ ಸಂಸ್ಕೃತಿಯಿರಬೇಕು; ಮನುಕುಲಕ್ಷೇಮವನ್ನೇ ಧ್ಯೇಯವನ್ನಾಗಿರಿಸಿಕೊಂಡು ರೂಪಿಸಿದ ಸನಾತನ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಮನಸ್ಸಿರಬೇಕು; ಜಗತ್ತಿಗೇ ಬೆಳಕಾಗಿ ಪಾಶ್ಚಿಮಾತ್ಯರಿಗೂ ಮಾರ್ಗದರ್ಶಕವಾಗಿ ಮೆರೆಯುತ್ತಿರುವ ವೈದಿಕ ಹೊಳಹನ್ನು ನೋಡಬಲ್ಲ ಶಕ್ತಿಯಿರಬೇಕು. ಇದಾವುದೂ ಇಲ್ಲದೆ ಟೊಳ್ಳುರಾಜಕಾರಣಕ್ಕೆ ಬಲಿಯಾಗಿ, ಕೀರ್ತಿಶನಿಯ ಬೆನ್ನುಹತ್ತಿ, ವಿಧವಿಧವಾದ ವೇಷಗಳಲ್ಲಿ ಜನರನ್ನು ದಾರಿತಪ್ಪಿಸುತ್ತಿರುವವರನ್ನೇ ಮಾರ್ಗದರ್ಶಕರೆಂದು ಭ್ರಮಿಸುತ್ತ, ಅವಿದ್ಯೆಯ ಕತ್ತಲಲ್ಲಿನ ಭ್ರಮೆಯನ್ನೇ ತಿಳುವಳಿಕೆಯೆಂದುಕೊಂಡಿರುವ ಇಂಥವರ ಮಾತುಗಳಿಗೆ ಏನೆಂದು ಉತ್ತರ ಕೊಡುವುದು? ವೇದವೆಂಬುದು ಬೆಳಕು. ಬೆಳಕೇ ಬೇಡ, ಕತ್ತಲೆಯೇ ಸುಖ ಎಂದುಕೊಂಡವರಿಂದ ವೈದಿಕತೆಗೆ ಯಾವ ಹಾನಿಯೂ ಇಲ್ಲ. ಬೆಳಕಿನಲ್ಲಿರುವವರ ಜೀವನದ ಸೊಗಸು ಆನಂದಗಳ ಅನುಭವವನ್ನು ಕತ್ತಲೆಯಲ್ಲಿರುವವರು ಹೇಗೆ ಅನುಭವಕ್ಕೆ ತಂದುಕೊಳ್ಳಬಲ್ಲರು?

    ಉತ್ತರ

Leave a reply to SSNK ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments