ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:೧
-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)
ರಾಜಕಾರಣಿಗಳಾದ ನಾವು ಒಂದು ತರಹ ವಿಚಿತ್ರವಾದ ಪರಿಸ್ಥಿತಿಯಲ್ಲಿ ಇದ್ದೇವೆ. ಹೊರಜಗತ್ತಿನಲ್ಲಿ ನಾವು ಬರುತ್ತಿರವಾಗ ನಮಸ್ಕಾರ ಎನ್ನುತ್ತಾರೆ. ನಾವು ದಾಟಿದ ಮೇಲೆ ನಮ್ಮನ್ನು ಬಯ್ಯುತ್ತಾರೆ. ನನ್ನಿಂದ ಅವನಿಗೆ ಏನೋ ಆಗಬೇಕು ಆದ್ದರಿಂದ ಅವನು ನಮಗೆ ಬಹಳ ಗೌರವ ಕೊಡುತ್ತಾನೆ. ಇಲ್ಲವಾದರೆ ನಮಗೆ ಗೌರವ ಕೊಡುವುದಿಲ್ಲ. ಇಂದು ಸಮಾಜದಲ್ಲಿ ನಮ್ಮ ಬಗ್ಗೆ ಗೌರವಗಳು, ಪ್ರೀತಿಗಳು ಪ್ರಾಮಾಣಿಕವಾಗಿ ಪ್ರಕಟವೆ ಆಗುತ್ತಿಲ್ಲ. ಜನರಿಗೆ ನಮ್ಮ ವಿರುದ್ಧವಾದ ಭಾವನೆಗಳು ಇದ್ದಲ್ಲಿ ಅ ಭಾವನೆಗಳನ್ನು ನಮ್ಮ ವಿರುದ್ಧ ವ್ಯಕ್ತಪಡಿಸಿದರೆ ನಾವು ನಮ್ಮ ತಪ್ಪನ್ನು ತಿದ್ದುಕೊಳ್ಳವುದಕ್ಕೆ, ಅದನ್ನು ಸರಿಪಡಿಸಿಕೊಳ್ಳವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬಹುದು. ಅಥವಾ ನಾವು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನೇರವಾಗಿ ಹೇಳಿದರೆ ಮತ್ತಷ್ಟು ಪುಷ್ಟಿಕರಿಸಿಕೊಂಡು ಬೆಳೆಸಬಹುದು. ಆದರೆ ಸಮಾಜವೇ ಹೈ ಡಿಗ್ರಿಯ ಹಿಪೋಕ್ರಟಿಕ್ ಪರಿಸರದಲ್ಲಿ ಬದುಕುತ್ತಿದೆ. ಜನರು ತಮಗೆ ನೇರವಾಗಿ ಅನ್ನಿಸಿದ್ದನ್ನು ಹೇಳುತ್ತಿಲ್ಲ. ಹಿಪೋಕ್ರಟಿಕ್ ಜನರ ಮಧ್ಯೆ ಬೆಳದು ಬರುವ ನನ್ನಂತ ರಾಜಕಾರಣಿ ಇನ್ನೂ ಎಷ್ಟು ಹಿಪ್ರೋಕ್ರಟಿಕ್ ಆಗಿರಬಹುದು ನೀವೆ ಯೋಚನೆ ಮಾಡಿ.
ಈ ಜನರ ಮಧ್ಯೆಯೇ ರಾಜಕಾರಣಿಗಳಾದ, ನಾವು ಇರಬೇಕು. ವಿದ್ಯಾವಂತ ಅವಿದ್ಯಾವಂತರ ಮಧ್ಯೆ, ಜಾತಿ ಪ್ರೇಮಿಗಳ ಮಧ್ಯೆ, ಜಾತಿ ಮೀರದವರ ಮಧ್ಯೆ, ನಾನು ಅನ್ನುವವರ ಮಧ್ಯೆ, ಊರು ಅನ್ನುವವರ ಮಧ್ಯೆ, ಅನ್ಯಾಯವನ್ನ ಮಾಡುವವರ ಮಧ್ಯೆ, ಅನ್ಯಾಯವನ್ನು ವಿರೋಧಿಸುವವರ ಮಧ್ಯೆ, ಈ ರೀತಿಯ ವ್ಯವಸ್ಥೆಯ ಮಧ್ಯೆ ಜನಪ್ರತಿನಿಧಿ ಬೆಳೆದುಬರಬೇಕಾದರೆ, ಭವಿಷ್ಯ ನಮ್ಮ ಕಷ್ಟ ಅ ದೇವರಿಗೆ ಪ್ರೀತಿ. ಇತ್ತೀಚೆಗೆ ಬಹಳ ಸುಲಭವಾಗಿದೆ. ಸಮಾಜ ಹೇಗೆ ಭ್ರಷ್ಟವಾಗುತ್ತದೆಯೋ ಅದರ ಮಧ್ಯೆ ಅದೇ ರೀತಿಯ ಪ್ರತಿನಿಧಿಯು ಹುಟ್ಟಿಬರುತ್ತಿದ್ದಾನೆ.
ಇಂದಿನ ನಾಯಕರು ಹೇಗೆ ಬೆಳೆಯುತ್ತಾರೆ? ಈಗ ಗಣಪತಿಗಳ ಸಂಖ್ಯೆ ಜಾಸ್ತಿ ಷಣ್ಮುಖರ ಸಂಖ್ಯೆ ಕಡಿಮೆ. ನಾವು ಈ ಕಥೆಯನ್ನು ಕೇಳಿರಬೇಕು. ಪಾರ್ವತಿ ಪರಮೇಶ್ವರರು ತಮ್ಮ ಮಕ್ಕಳಲ್ಲಿ ಯಾರು ಸಮರ್ಥರು ಎಂದು ತಿಳಿದುಕೊಳ್ಳುವುದಕ್ಕೆ ಒಂದು ಪರೀಕ್ಷೆ ಮಾಡುತ್ತಾರೆ. ಯಾರು ಬೇಗ ಮೂರು ಲೋಕಗಳನ್ನು ಸುತ್ತ್ತಿ ಬರುತ್ತಾರೋ ಅವರು ಸಮರ್ಥರಾಗಿರುತ್ತಾರೆ. ಷಣ್ಮುಖ ಮೂರು ಲೋಕಗಳನ್ನು ಸುತ್ತುತ್ತಾನೆ. ಆದರೆ ಗಣಪತಿ ಅಪ್ಪ ಅಮ್ಮರನ್ನೇ ಸುತ್ತಿ ನೀವೇ ನನಗೆ ಮೂರು ಲೋಕ ಎಂದುಬಿಟ್ಟ. ಹಾಗೆ ಇವತ್ತು ರಾಜಕೀಯ ನಾಯಕತ್ವ ಬೆಳೆಯುತ್ತಿರುವುದು ಯಾರದೋ ಮನೆಯ ಬಾಗಿಲಳೊಳಗೆ, ಇಂದ್ರ ಚಂದ್ರರು ಅನ್ನುವವರ ಮಧ್ಯೆ. ಯಾರ ಹಿಂಬಾಲಕರಾಗಿ ಜನತೆಯ ಮಧ್ಯೆ ಹೋಗದೆ, ಹೋರಾಟವನ್ನೇ ಮಾಡದೆ ಒಂದು ರೀತಿ ವಸೂಲಿ ಭಾಗ್ಯ, ಅಥವಾ ಚಮಚಗಿರಿ ಮಾಡುತ್ತಾ ಅಲ್ಲೇ ಇದ್ದವನೇ ನಾಯಕನಾಗುತ್ತಾನೆ. ಆದರೆ ಹೋರಾಟ ಮಾಡುತ್ತಾ ಜನರ ಮಧ್ಯೆ ಪ್ರೀತಿ ಗೆದ್ದವನು ನಾಯಕನಾಗುವುದಿಲ್ಲ. ಒಂದು ವೇಳೆ ಆದರೋ ಅದು ಬಹಳ ವಿರಳ.
ಇಂದು ಜನರ ಮಧ್ಯೆ ಹೋಗಿ ಅವರ ನೋವು ನಲಿವನ್ನು ಸ್ಪಂದಿಸುವಂತಹ ರಾಜಕಾರಣಿಗಳ ಪ್ರಮಾಣ ಕಡಿಮೆ ಆಗುತ್ತಿದೆ. ಇಂದು ಹಣ ಇದ್ದರೇ ಮಾತ್ರ ಚುನಾವಣೆ, ಇದು ಬಹುತೇಕರ ಅನುಭವ ಇದೇ ಆಗಿದೆ. ನನಗೆ ಪ್ರತಿ ಸಾರಿ ಈ ಅನುಭವ ಆಗುತ್ತದೆ. ಜನ, ಅಣ್ಣ ನೀನೆ ಪಾರ್ಲಿಮೆಂಟ್ಗೆ ಅಭ್ಯರ್ಥಿ ಎಂದು ಆರು ತಿಂಗಳಿಂದ ಪುಸಲಾಯಿಸುತ್ತಾರೆ. ಇನ್ನೇನು ಚುನಾವಣೆ ಹತ್ತಿರ ಬಂದಾಗ ಬೇಡ ಬಿಡಣ್ಣ ನಿನ್ನ ಹತ್ತಿರ ದುಡ್ಡು ಎಲ್ಲಿದೆ ಅಂತ ಹೇಳುತ್ತಾರೆ. ಅವರಿಗೆ ಅದರ ಬಗ್ಗೆ ಏನೇನು ಸಂಕೋಚವಿಲ್ಲದೆ ಹೇಳುತ್ತಾರೆ. ಹಾಗಾಗಿ ಹಣ ಮಾಡದೆ ಇರುವ ರಾಜಕಾರಣಿ ಮಲೆನಾಡಿನ ಮಣಕ/ಗಿಡ್ಡ ಕಾಣುವ ಹಾಗೆ ಕಾಣುತ್ತಾನೆ. ಅದು ಎಲ್ಲೋ ಗುಡ್ಡ ಬೆಟ್ಟ ಹತ್ತಿ ಇಳಿದು ಎಲ್ಲೋ ಮೇಯಿಕೊಂಡು ಬಂದು ಅದು ಅರ್ಧ ಪಾವು ಹಾಲು ಕೊಡುತ್ತದೆ. ಈ ಮನೆಯಲ್ಲೇ ಕಟ್ಟಿ ಹೊರಗೆ ಬಿಡದೆ ಇರುವಂತಜ ಸಿಂಧಿ ಹಸು ಇದೆಯೆಲ್ಲ ಅದು ಬಕೆಟ್ಗಟ್ಟಲೇ ಹಾಲು ಕೊಡುತ್ತದೆ. ಅದಕ್ಕೆ ಇಂಜ್ಕ್ಷನ್ ಕೊಟ್ಟು ಅದರ ಕೆಚ್ಚಲು ದಪ್ಪ ಮಾಡಿ, ಹಾಲು ಜಾಸ್ತಿ ಬರುವ ಹಾಗೆ ಮಾಡಿ ಅದರಿಂದ ಹಾಲು ಕರಿಯಬೇಕು. ದುಡ್ಡಿದ್ದ ರಾಜಕಾರಣಿಗಳು ಸಿಂಧಿ ಆಕಳಿನ ಹಾಗೆ, ದುಡ್ಡಿಲ್ಲದವರು ಮಲೆನಾಡಿನ ಮಣಕದ ಹಾಗೆ ಎಂಬುದು ಸುಳ್ಳಲ್ಲ. ಇದರ ಮಧ್ಯೆ ಹಣ ಖರ್ಚು ಮಾಡದೆ ಗೆಲ್ಲುವುದು ಹೇಗೆ ಅಂತ ತಾವೇ ನಮಗೆ ಮಾರ್ಗದರ್ಶನ ಮಾಡಬೇಕು.
ಹಣ ಖರ್ಚು ಮಾಡುವುದಕ್ಕೆ ಯಾರೂ ತಯಾರು ಇರುವುದಿಲ್ಲ. ನಾನು ಮೊದಲ ಬಾರಿ ವಿಧಾನ ಸಭೆಯನ್ನ ಗೆದ್ದಾಗ ಅದು ಎರಡು ತಾಲ್ಲೂಕ್ ಬೇರೆ, ಒಂದು ಶಿವಮೊಗ್ಗ ಗ್ರಾಮಾಂತರ ಮತ್ತೊಂದು ಹೊಸನಗರ ತಾಲ್ಲೂಕ್. 80 ಕಿಲೋ ಮೀಟರ್ ಇರುವ ಕ್ಷೇತ್ರವನ್ನು ನಾನು ಮೂರು ಮುಕ್ಕಾಲು ಲಕ್ಷದಲ್ಲಿ ಗೆದ್ದಿದೀನಿ. ಇವತ್ತು ನಮ್ಮೂರಲ್ಲಿ ಪಂಚಾಯತಿ ಸದಸ್ಯನೂ ಅಷ್ಟು ಕಡಿಮೆ ಹಣದಿಂದ ಗೆಲ್ಲುವುದಕ್ಕೆ ಆಗುತ್ತಿಲ್ಲ. ನಾವು ಪಾರ್ಲಿಮೆಂಟ್ ಎಲೆಕ್ಷನ್ನನ್ನು ಸನ್ಮಾನ್ಯ ಬಂಗಾರಪ್ಪ ಎದುರಿಗೆ ಗೆಲ್ಲಬೇಕಾದರೆ ನಾನು 52 ಲಕ್ಷ ರೂ ವೆಚ್ಚಮಾಡಿದ್ದೆ. ಈಗ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ಅದು 25 ರಿಂದ 30 ಕೋಟಿ ಬೇಕಾಗಬಹುದು. ಇಷ್ಟು ಬಂಡವಾಳ ಖರ್ಚು ಮಾಡುವವರ ಬಗ್ಗೆ ಮತದಾರ ವಿರೋಧ ಮಾಡಿದರೆ, ನೀನು ಇಷ್ಟು ಖರ್ಚು ಏಕೆ ಮಾಡಿತ್ತೀಯ? ಎಲ್ಲಿಂದ ಮಾಡುತ್ತೀಯ ಎಂದು ಪ್ರಶ್ನೆ ಮಾಡಿದರೆ? ರಾಜಕಾರಣಿಗಳು ಖರ್ಚು ಮಾಡುವುದರ ಬಗ್ಗೆ ಹೆದರಬೇಕಾಗುತ್ತದೆ. ಆದರೆ ಚುನಾವಣೆಯ ಸಮಯದಲ್ಲಿ ಮತದಾರರು ಮಾತನಾಡುವುದು ಹೇಗೆ ಗೊತ್ತಾ? ಇವನು ಏನು ಬ್ರಾಂಡ್ ಕೊಡಿಸಿದ್ದಾನೆ ಅಣ್ಣ? ಅದು ಕಿಕ್ ಇಲ್ಲವಣ್ಣ, ಅವನು ಕೊಡಿಸಿದ್ದಾನೆ. ಹೇಗೆ ಇದೆ ಗೊತ್ತ ಕಿಕ್? ಎನ್ನುತ್ತಾರೆ. ಇದರಲ್ಲಿ ವಿದ್ಯಾವಂತರು, ಅವಿದ್ಯಾವಂತರು ಇದ್ದಾರೆ. ಅನುಕೂಲಸ್ಥರು ಅನಾನುಕೂಲಸ್ಥರು ಇದ್ದಾರೆ. ಕೂಲಿಕಾರ ಇದ್ದಾನೆ. ದಿನ ಬೆಳಗ್ಗೆ ಏನು ಕೆಲಸ ಮಾಡದೆ ಬಿಳಿ ಬಟ್ಟೆ ಹಾಕಿಕೊಂಡು ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ ತಿರುಗುವಂತಹ ಬೃಹಸ್ಪತಿ ಕೂಡ ಇದ್ದಾನೆ. ಈ ಬೃಹಸ್ಪತಿಗಳಿಗೆ ಚುನಾವಣೆ ಬಂತು ಅಂದರೆ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಹಾಕಿಕೊಂಡರೆ, ತಿಂಡಿ ಮಾಡುವುದೇ ಕ್ಯಾಂಡಿಡೆಟ್ ಲೆಕ್ಕದಲ್ಲಿ, ಊಟ ಮಾಡುವುದೇ ಕ್ಯಾಂಡಿಡೆಟ್ ಲೆಕ್ಕದಲ್ಲಿ. ಸಂಜೆ ಆಗುತ್ತಿದಂತೆ ಇವರೆಲ್ಲ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕುಳಿತುಕೊಂಡು ಬಿಲ್ ಮಾಡುತ್ತಿರುತ್ತಾರೆ. ಈ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಮರು ಉತ್ಪಾದನೆ ಆಗುತ್ತದೆ.
ರಾಜಕಾರಣಿ ಚುನಾವಣೆಗೆ ತಾನು ಹಾಕಿರುವ ಬಂಡವಾಳವನ್ನು ಮೊದಲು ಹೊರ ತೆಗೆಯುತ್ತಾನೆ. ತನ್ನ ಅಧಿಕಾರವಧಿ 5 ವರ್ಷ ಇರುತ್ತದೆಯೋ, ಇಲ್ಲ ಮಧ್ಯದಲ್ಲಿ ಅಧಿಕಾರ ಹೋಗಿಬಿಡುತ್ತದೆಯೋ ಎಂಬ ಭಯದಿಂದಲೇ ಆತ ಮೊದಲು ತಾನು ಹಾಕಿಕೊಂಡ ಬಂಡವಾಳವನ್ನು ತೆಗೆಯುತ್ತಾನೆ. ಇದರ ಜೊತೆಗೆ ಮುಂದಿನ ಚುನಾವಣೆಗೆ ಇನ್ನೂ ಹೆಚ್ಚಾಗುವುದರಿಂದ 25% ಹೆಚ್ಚಾಗಿ ಹಣ ಮಾಡುತ್ತಾನೆ. ಪ್ರಾಮಾಣಿಕನನ್ನು ಸಹ ಭ್ರಷ್ಟನನ್ನಾಗಿ ಮಾಡುವ ವ್ಯವಸ್ಥೆ ಇವತ್ತು ಬಂದು ಹೋಗಿದೆ. ಇವತ್ತು ಪ್ರಾಮಾಣಿಕನಾಗಿ ರಾಜಕಾರಣ ಮಾಡುತ್ತೇನೆ ಎಂದರೆ ಜನರು ನಂಬುವುದಿಲ್ಲ. ರಾಜಕಾರಣ ಮತ್ತು ಪ್ರಾಮಾಣಿಕತೆ ಈ ಎರಡು ತದ್ವಿರುದ್ಧವಾಗಿದೆ ಎಂಬುದು ಜನರ ಸಾಮಾನ್ಯ ಜ್ಞಾನವಾಗಿದೆ.
ಸಮಾಜ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹುಟ್ಟಿಕೊಂಡಿರುವತಂಹ ಸಂಘಟನೆಗಳು ಕೇಳುವ ಹಣ ನೋಡಿದರೆ, ಒಂದು ಕ್ಷಣ ಜ್ವರ ಬರುತ್ತದೆ. ನವೆಂಬರ್ ತಿಂಗಳು ಮತ್ತು ಗಣಪತಿ ಹಬ್ಬ ಬಂತು ಎಂದರೆ, ನಮಗೆ ಎರಡನೆ ಹೆರಿಗೆ ಶುರು ಆಗುತ್ತದೆ. ಒಂದು ಕಡೆ ಕನ್ನಡ ಸಂಘಗಳು, ಮತ್ತು ಬೀದಿ ಬೀದಿಗಳಲ್ಲಿ ಕೂರಿಸುವ ಗಣಪತಿಗಳಿಗೆ ಎಲ್ಲಿಂದ ನಾವು ಹಣ ಕೊಡಬೇಕು. ಒಂದು ಗಣಪತಿ ಹಬ್ಬಕ್ಕೆ ಕನಿಷ್ಟ 8 ರಿಂದ 10 ಲಕ್ಷ ಎತ್ತಿ ಇಡುಬೇಕಾಗುತ್ತದೆ. ಹಾಗಾದರೆ ನಾವು ಈ ಹಣವನ್ನು ಎಲ್ಲಿಂದ ತರಬೇಕು. ಕನ್ನಡ ರಾಜ್ಯೋತ್ಸವಕ್ಕೂ ಲಕ್ಷಾಂತರ ರೂಪಾಯಿಗಳನ್ನು ಕೊಡಬೇಕಾದಲ್ಲಿ ಹಣವನ್ನು ಎಲ್ಲಿಂದ ತರಬೇಕು?
ಹಿಂದೆ ಯಾವುದೇ ಕಾರ್ಯಕ್ರಮಗಳಿಗೆ ಮುಖ್ಯ ಅಥಿತಿ ಎಂದು ಕರೆದರೆ ಭಾಷಣಕ್ಕೆ ಮಾತ್ರ, ಆದರೆ ಇಂದು ಆಹ್ವಾನ ಪತ್ರಿಕೆಗೆ ಮುಖ್ಯ ಅತಿಥಿ ಎಂದು ಹಾಕಿದ್ದಾರೆ ಎಂದರೆ ಅದು ಹಣ ವಸೂಲಿಗೆ ಎಂದು ನಾವು ತಿಳಿದುಕೊಳ್ಳಬೇಕು. ಆಗ ಮುಖ್ಯ ಅಥಿತಿಗಳು ಒಬ್ಬ ಅಥವಾ ಇಬ್ಬರು ಇರುತ್ತಿದ್ದರು. ಆದರೆ ಈಗ ಮುಖ್ಯ ಅಥಿತಿಗಳು 20ಕ್ಕು ಹೆಚ್ಚು ಜನ ಇರುತ್ತಾರೆ. ಮುಖ್ಯ ಅಥಿತಿಗಳೆಲ್ಲರು ದುಡ್ಡು ಕೊಡಬೇಕು. ನೀವೇನಾದ್ರು ಹಣ ಕಡಿಮೆ ಕೊಟ್ಟರೆ, ನಿಮಗೆ ಎಂಟಾಣೆ ಹಾರವೇ ಗತಿ. ನೀವು 25 ರಿಂದ 30 ಸಾವಿರ ಕೊಟ್ಟರೆ, ದೊಡ್ಡ ಹಾರ ಮಾಡಿಸಿ 4 ಜನ ಹಿಡಿದುಕೊಂಡು ಅಣ್ಣಾಗೆ ಹಾಕೋ ಎಂದು ಹೇಳುತ್ತಾರೆ. ಇದು ಇಷ್ಟಕ್ಕೆ ನಿಲುತ್ತದೆಯೇ ಇಲ್ಲ.
ಇನ್ನೂ ದೇವಸ್ಥಾನದ ವಿಷಯ, ಇವತ್ತು ಒಂದು ಊರಿನಲ್ಲಿ ದೇವಸ್ಥಾನಗಳು ಕಡಿಮೆ ಇದೆಯಾ? ಎಲ್ಲಾ ಜಾತಿಯವರ ದೇವಸ್ಥಾನ, ಒಂದು ಜಾತಿಗೆ ಕೊಟ್ಟರೆ ಮುಗೀತು, ಆ ಜಾತಿಯವರಿಗೆ ಮಾತ್ರ ಕೊಡುತ್ತೀರ? ನಮಗೆ ಏಕೆ ಕೊಡುವುದಿಲ್ಲ ಎಂದು ಬೇರೆಯವರು ಪ್ರಶ್ನೆ ಮಾಡುತ್ತಾರೆ. ಒಂದು ಊರಿಗೆ ಎಷ್ಟು ದೇವಸ್ಥಾನಗಳು? ಅವರು ಕೇಳುವ ಹಣವನ್ನು ನೋಡುದ್ರೆ ಎದೆ ಒಡೆದು ಹೋಗುತ್ತದೆ. ಅವರು ಒಂದೊಂದು ತಿಂಗಳ ಸಂಬಳ ಕೇಳುತ್ತಾರೆ. ಇದರ ಜೊತೆಗೆ ಸ್ವಾಮಿಗಳು ಬಹಳ ಒಳ್ಳೆಯವರು, ಎಲ್ಲಾ ಸರ್ವಸಂಗ ಪರಿತ್ಯಾಗಿಗಳು ಅಂತ ಅವರ ಬಳಿ ನಮಸ್ಕಾರ ಮಾಡಿಕೊಂಡು ಬರಲು ಹೋದರೆ ಅಥವಾ ಯಾವುದೋ ಒಂದು ಸಮಾರಂಭಕ್ಕೆ ಹೋದಾಗ ಅವರು ನಮಗೆ ಅಜ್ಞೆ ಮಾಡಿಬಿಡುತ್ತಾರೆ. ಮಂಜುನಾಥ ಇದೊಂದು ಸ್ವಲ್ಪ ರಸ್ತೆ ಆಗಬೇಕಾಗಿತ್ತು. ಕೇವಲ 10 ಕಿಲೋ ಮೀಟರ್ ರಸ್ತೆ ಆಗಬೇಕು, ಮುಂದಿನ ತಿಂಗಳು ಜಾತ್ರೆ ನಡೆಯುತ್ತಿದೆ. ಭಕ್ತರು ಬಹಳ ಜನ ಬರುತ್ತಿದ್ದಾರೆ ಆದ್ದರಿಂದ ಈ ರಸ್ತೆ ಬೇಗ ಆಗಬೇಕು ಎಂದು ಸಭೆಯಲ್ಲಿ ಭಕ್ತರ ಎದುರು ಹೇಳಿಬಿಡುತ್ತಾರೆ. ಅಲ್ಲೇ ನಮ್ಮನ್ನು ಒಪ್ಪಿಸಿ ಬಿಡುತ್ತಾರೆ. ಅವರ ಬೇಡಿಕೆ ಈಡೇರಿಸಲು ಯಾವ ಬಜೆಟ್ನಲ್ಲು ಹಣ ಇರುವುದಿಲ್ಲ. ಒಂದು ವೇಳೆ ಮಾಡಿಕೊಡದೆ ಇದ್ದರೆ, ನೋಡಪ್ಪ ಮಂಜುನಾಥ ಸಭೆಯಲ್ಲಿ ಏನ್ ಹೇಳಿದ್ದರು, ಅವರ ಮಾಡಿಕೊಟ್ಟರಾ?. ಇಲ್ಲಿಗೆ ಮುಗಿತು. ನಮ್ಮ ಗುರು ಹೇಳಿದ್ರೂ ಮಾಡಿಕೊಡದೆ ಇದ್ದವನಿಗೆ ಬುದ್ದಿ ಕಲಿಸಬೇಕು ಎಂದು ಜನ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ.
ಇನ್ನು ಕೆಲವರು ಜನ ಸಮಾಜದಲ್ಲಿ ಇದ್ದಾರೆ. ಅವರಿಗೆ ಊರಿನಲ್ಲಿ ಯಾರು ಸಾಯುವ ಹಾಗಿಲ್ಲ. ಇವರದ್ದು ಒಂದು ಸಂತಾಪ ಇದ್ದೇ ಇರುತ್ತದೆ. ಹಾಗೆ ಮಹಾತ್ಮರ ದಿನಾಚರಣೆ ಅದು ಬಸವಣ್ಣ ಇರಲಿ, ಅಂಬಿಗರ ಚೌಡಯ್ಯ ಇರಲಿ, ಅವರ ಜೊತೆ ಇವರ ಒಂದು ಪೋಟ ಇದ್ದೆ ಇರುತ್ತದೆ. ಮಹಾತ್ಮರಿಗಿಂತ ಇವರದೇ ದೊಡ್ಡ ದೊಡ್ಡ ಪೋಟಗಳು ಫ್ಲೆಕ್ಸಗಳಲ್ಲಿ ಹಾಕಿಸಿಕೊಳ್ಳುತ್ತಾರೆ. ಈ ರೀತಿಯ ಫ್ಲಕ್ಸಿಗಳಲ್ಲಿ ನಾಯಕರ ಉದಯವಾಗುತ್ತದೆ. ಇದು ನಿಜವಾಗಲು ನಮ್ಮಂತ ಪ್ರಾಮಾಣಿಕ ರಾಜಕಾರಣ ಮಾಡುವವರಿಗೆ ಇದೊಂದು ಸವಾಲು. ಇಂದು ಜನರ ಮಧ್ಯೆ, ಹೋರಾಟದ ಮಧ್ಯೆ. ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ನಾಯಕ ಹುಟ್ಟುತ್ತಿಲ್ಲ. ಬಂಡವಾಳವನ್ನು ಇಟ್ಟುಕೊಂಡು ಅಖಾಡಕ್ಕೆ ಬರುವವನನ್ನು ಈ ರಾಜಕಾರಣ ಮತ್ತು ಸಮಾಜ ಒಪ್ಪಿಕೊಳ್ಳುತ್ತಿದೆ. ಆ ಹಣ ಯಾವ ರೀತಿ ಸಂಪಾದನೆ ಮಾಡಿದ್ದು ಎಂದು ಈ ಸಮಾಜ ಕೇಳುವುದಿಲ್ಲ. ಒಟ್ಟಿನಲ್ಲಿ ಸಮಾಜಕ್ಕೂ ಮತ್ತು ರಾಜಕಾರಣಕ್ಕೂ ಹಣ ಬೇಕಾಗಿದೆ.
ಈ ತರಹದ ಹಣದ ಮಧ್ಯೆ ತೇಲಿ ಹೋಗುತ್ತಿರುವ ಮತದಾರರ ಮಧ್ಯೆ, ಸಮಾಜದ ಮಧ್ಯೆ, ರಾಜಕಾರಣ ಮಾಡುವುದು ದೊಡ್ಡ ಸವಾಲು. ನಾವು ಶಾಸಕರಾದಾಗ ನಮಗೆ ಒಂದು ಕನಸಿತ್ತು. ನಾವು ಈಗ ಶಾಸಕರಾಗಿದ್ದೇವೆ ಆದ್ದರಿಂದ ನಮಗೆ ಬಹಳ ಜವಾಬ್ದಾರಿ ಇದೆ. ನಾವು ಆಡುವ ಮಾತುಗಳು ಎರಡು ಲಕ್ಷ ಜನಕ್ಕೆ ನಾನು ಜವಾಬ್ದಾರಿಯಾಗಿ ಕೆಲಸ ಮಾಡಬೇಕು ಅಂದುಕೊಂಡಿದ್ದೆ. ಆಗ ನಾನು ಹೊಸನಗರದ ಶಾಸಕ. ಅ ಸಮಯದಲ್ಲಿ ಬೇರೆ ರೀತಿಯ ವಿಕಟ ಪರಿಸ್ಥಿತಿಯ ಅನುಭವ ಶುರುವಾಯಿತು. ಆ ಅನುಭವನ್ನು ಮೂಂದಿನ ಅಂಕಣದಲ್ಲಿ ನೋಡಬಹುದು…(ಮುಂದುವರೆಯುವುದು..)






ಆಂ ಆದ್ಮಿ ಪಕ್ಷ ಈ ಕೆಟ್ಟ ರಾಜಕೀಯ ಸಂಸ್ಕೃತಿಗೆ ಕೊಡಲಿ ಪೆಟ್ಟು ನೀಡಲಿದೆ ಮಿ. ಮಂಜುನಾಥ್. ಕೆಜ್ರೀವಾಲ್ ಅವರ ನಾಯಕತ್ವದಲ್ಲಿ ನಾವೆಲ್ಲಾ ಹೊಸ ರಾಜಕೀಯ ಸಂಸ್ಕೃತಿಗೆ ನೀರೆರೆಯೋಣ.
ದಿನದ ಮೂರು ಹೊತ್ತು ಕಾಂಗಿ ಗಂಜಿಕೇಂದ್ರದ ಹತ್ತಿರ ಓಡಾಡಿಕೊಂಡಿರುವ ಕರ್ನಾಟಕದ ಎಡಬಿಡಂಗಿಗಳಿಂದ ಆಪ್ ನ ಮೇಲೆತ್ತುವಿಕೆಯ ಮಾತು!. ಹರಹರಾ ಶ್ರೀ ಚನ್ನಸೋಮೇಶ್ವರಾ!!. ಕೇಜ್ರಿವಾಲ್ ನಿಗೆ ಇವುಗಳು ನೀರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮೊನ್ನೆ ಒಬ್ಬ ಹಿರಿ ‘ಬುದ್ಧಿಜೀವಿ’ಯ ಉವಾಚ “ನಾನು ಆಪ್ ಚಳುವಳಿಯನ್ನು ಬೆಂಬಲಿಸುತ್ತೇನೆ..ಆದರೆ ಆಪ್ ಪಕ್ಷವನ್ನು ಬೆಂಬಲಿಸುವುದಿಲ್ಲ”.
ಆ ‘ಬುದ್ಧಿಜೀವಿ’ ಇವತ್ತು ಕಾಂಗೈ ಗೆ ಬೆಂಬಲ ಕೊಡ್ತಾರಂತೆ! 🙂
ಆ ಬುದ್ಧಿಜೀವಿ ಮತ್ಯಾರೂ ಅಲ್ಲ ನಾಡಿನ ಅತ್ಯಂತ ಶ್ರೇಷ್ಠ ಚಿಂತಕ ಡಾ. ಯೂ ಆರ್ ಅನಂತಮೂರ್ತಿ. ಅವರ ಬಗ್ಗೆ ಹಗುರವಾಗಿ ಮಾತನಾಡಿ ನೀವು ದೊಡ್ಡವರಾಗುತ್ತೀರಾ?
ಮೊದಲನೆಯ ಪ್ಯಾರಾ ನಿಮ್ಮ ಗ್ಯಾಂಗ್ ನವರಿಗೆ. ಕನಿಷ್ಠ ಬಾಯಿಯಲ್ಲಿ ಹೇಳುವುದಕ್ಕೆ/ಬರೆಯುವದಕ್ಕಾದರೂ ಪ್ರಾಮಾಣಿಕವಾಗಿದ್ದರೆ ಒಣದಿಷ್ಟು ಗೌರವ ಸಿಗುತಿತ್ತು!.
ಇನ್ನು ನಾಡು ಕಂಡ ಶ್ರೇಷ್ಠ ಚಿಂತಕರ ಬಗ್ಗೆ ಈ ಇಬ್ಬರು ಸಾಹಿತಿಗಳ ಅಭಿಪ್ರಾಯ ಓದಿ
http://kannada.oneindia.in/literature/articles/2011/29-6-sl-bhyrappa-versus-ur-anantha-murthy-davangere-aid0135.html
2191 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಲಾದ ನೆಲ್ಲಿ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು ಜೈಲಿನಿಂದ ಬಿಡಿಸಿದ ಕಾಂಗ್ರೆಸ್ ಸರಕಾರದ ಕ್ರಮ ಅನಂತಮೂರ್ತಿಯವರಿಗೆ ಸರಿಯೆಂದು ಅನಿಸಿರಬೇಕು. ಯಾಕೆಂದರೆ ಅವರು ನೆಲ್ಲಿ ಹತ್ಯಾಕಾಂಡದ ಬಲಿಪಶುಗಳ ಪರವಾಗಿ ಎಂದೂ ಪ್ರಶ್ನೆ ಮಾಡಿಲ್ಲ.
ಕನ್ನಡಕ್ಕೆ ಅನುವಾದ ಮಾಡಲು ಮಂಜುನಾಥ ಅವರು ಈ ಲೇಖನವನ್ನು ಗುಜರಾಥಿ (ನಮೋ ಭಾಷೆ)ಯಲ್ಲಿ ಬರೆದಿದ್ದಾರಾ ಹೇಗೆ?
Vachanagala Paribahseyalli bardidru, adu shetkar ge arta agli antha sarala kannadakke thandiddare
ನೆಟ್ಟಗೆ ಕನ್ನದಲ್ಲಿ ಬರೆಯಲೂ ಬಾರದ ಅವಿದ್ಯಾವಂತ ರಾಜಕಾರಣಿಯಿಂದ ಲೇಖನ ಬರೆಸುವಂತಹ ತುರ್ತು ಅದೇನಿತ್ತೋ ನಿಮಗೆ! ಪ್ರೊ. ಬಿ ಕೆ ಚಂದ್ರಶೇಖರ್ ಅವರಿಗೆ ಕೋರಿಕೆ ಸಲ್ಲಿಸಿದ್ದರೆ ಅವರು ಒಂದು ಶ್ರೇಷ್ಠ ಮಟ್ಟದ ಬರಹ ಕೊಡುತ್ತಿರಲಿಲ್ಲವೇ ನಿಮಗೆ?
ಶೇಟ್ಕರ್
ವಿದ್ಯಾವಂತ ಬುದ್ದಿಜೀವಿಗಳು ಬರೆಯುವುದಕ್ಕಿಂತ ಅತ್ಯತ್ತಮವಾಗಿಯೇ ಇದೆ…ಅದರಲ್ಲಿಯೂ ಬೇಡ ಬಿಡಿ ಸುಮ್ಮನೆ ನಿಮಗೆ ಉರಿಸುವುದು ಏಕೆ?
ಸಾಮಾನ್ಯವಾಗಿ ರಾಜಕೀಯದವರನ್ನು ಎಲ್ಲರೂ ಬಯ್ಯುವವರೇ ಆಗಿದ್ದಾರೆ . ಅವರ ನೋವುಗಳು ಕನಸುಗಳು, ಮನದಾಳದ ಮಾತುಗಳನ್ನು ತಿಳಿಸಿದ್ದಕ್ಕೆ ನಿಲುಮೆಗೆ ನನ್ನ ನಮನ. ಹಾಗೇನೆ ನಾವು ಸಾಮಾನ್ಯ ಮತದಾರರೂ ಎಚ್ಚರ ವಹಿಸಿ ಎಲ್ಲಿಂದ ಹಣ ಕೊಡುತ್ತಾನೀತ ಎಂದು ಯೋಚಿಸಬೇಕು.