ಪರ್ವ ಮತ್ತು ಮಹಾಭಾರತ
– ಮು.ಅ ಶ್ರೀರಂಗ
ಹರವು ಸ್ಫೂರ್ತಿ ಗೌಡ ಅವರು ‘ಅವಧಿ’ಯಲ್ಲಿ ೬-೩-೧೫ರಂದು ಬರೆದಿರುವ ‘ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು’ ಲೇಖನದಲ್ಲಿ ಭೈರಪ್ಪನವರು ಮಹಾಭಾರತವನ್ನು ಆಧರಿಸಿ ಬರೆದಿರುವ ಪರ್ವ ಕಾದಂಬರಿಯ ಬಗ್ಗೆ ಪ್ರಸ್ತಾಪಿಸಿರುಪ ಪ್ರಶ್ನೆಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ನಿಲುಮೆಯ ಓದುಗರ ಜತೆ ಹಂಚಿಕೊಳ್ಳುವುದು ಈ ನನ್ನ ಬರಹದ ಉದ್ದೇಶ. ಸ್ಪೂರ್ತಿ ಗೌಡ ಅವರ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಸದ್ಯದ ನಮ್ಮ ಓದುಗರ ಮನೋಭಾವ, ಅವರ ಓದಿನ ರೀತಿ ನೀತಿ, ಕನ್ನಡ ಸಾಹಿತ್ಯದ ಸದ್ಯದ ವಿಮರ್ಶೆಯ ವಾತಾವರಣ ಇತ್ಯಾದಿಗಳ ಪ್ರತಿಫಲನದಂತೆ ಇದೆ. ಇದು ಸಹಜ.ಆ ಪ್ರತಿಕ್ರಿಯೆಗಳ ಬಗ್ಗೆ ಇದಕ್ಕಿಂತ ಹೆಚ್ಚೇನು ಹೇಳುವುದು ಇಲ್ಲ.
ಸ್ಫೂರ್ತಿ ಗೌಡ ಅವರು ‘ಪರ್ವ’ದ ಬಗ್ಗೆ random ಆಗಿ ಎತ್ತಿರುವ ಮೂರ್ನಾಲಕ್ಕು ಆಕ್ಷೇಪಣೆಗಳು ಮತ್ತು ಉಪ ಆಕ್ಷೇಪಣೆಗಳ relevanceಗೆ ಮಾತ್ರ ನನ್ನ ಈ ಬರಹ ಸೀಮಿತವಾಗಿದೆ. ಇತಿಹಾಸ, ಕಾವ್ಯ ಮತ್ತು ಪುರಾಣಗಳು ಬೆರೆತಿರುವ ಮಹಾಭಾರತದ ಕತೆಯನ್ನು ಈಗ ಚಾಲ್ತಿಯಲ್ಲಿರುವ ವಿಮರ್ಶೆಯ ಅಳತೆಗೋಲಿನಿಂದ ಅಳೆದು ಬೆಲೆ ಕಟ್ಟುವ ಕ್ರಿಯೆಯೇ ಸರಿಯಾದುದಲ್ಲ. ಇಂದು ನಮ್ಮ ಸಾಹಿತ್ಯದ ವಿಮರ್ಶಕ ಮತ್ತು ವಿಮರ್ಶಕಿಯರಿಗೆ ಹಿಂದಿನ ಮತ್ತು ಇಂದಿನ ಕೃತಿಗಳಿಗೆ (ಅದು ಸಾಮಾಜಿಕ/ಐತಿಹಾಸಿಕ/ಪೌರಾಣಿಕ ಯಾವುದೇ ಆಗಿರಲಿ) ಪ್ರಗತಿಗಾಮಿ.ಪ್ರತಿಗಾಮಿ,ಮಹಿಳಾ ವಿರೋಧಿ,ವೈದಿಕ ಶಾಹಿ ಇತ್ಯಾದಿ ಹಣೆ ಪಟ್ಟಿಗಳನ್ನು ಕಟ್ಟಿ ಆ ಕೃತಿಗಳ ಲೇಖಕರನ್ನು ಏರಿಸುವುದೋ ಇಳಿಸುವುದೋ ಮಾಡುವುದು ತುಂಬಾ ಖುಷಿ ಕೊಡುವ ಕೆಲಸವಾಗಿದೆ. ಹಾಗೆ ನೋಡಿದರೆ ಇಂತಹ ವಿದ್ಯಮಾನ ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯದೇ. ಈಗ ಈ ಕೆಲಸ ಇನ್ನೂ ಜೋರಾಗಿದೆ ಅಷ್ಟೇ. ವಿಮರ್ಶೆಯ ಪರಿಭಾಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ; ಬದಲಾಗಬೇಕು ಎಂಬುದರ ಬಗ್ಗೆ ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಬದಲಾಗುತ್ತಿರುವ ವಿಮರ್ಶೆಯ ಪರಿಭಾಷೆಗಳನ್ನು ಸಾಹಿತ್ಯ ಕೃತಿಯೊಂದಕ್ಕೆ ನಾವು ಯಾವ ರೀತಿ apply ಮಾಡಬೇಕು? ಆ ಪರಿಭಾಷೆಗಳ limits ಏನು? ಎಂಬುದರ ಬಗ್ಗೆ ನಾವು ಯೋಚಿಸದಿದ್ದರೆ ಆಭಾಸವಾಗುತ್ತದೆ. ಸ್ಪೂರ್ತಿಗೌಡ ಅವರು ಪರ್ವದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೂಲ ಕಾರಣ ಹೊಸ ವಿಮರ್ಶೆಯ ಪರಿಭಾಷೆಗಳ wrong application.
ಮತ್ತಷ್ಟು ಓದು