ವಿಷಯದ ವಿವರಗಳಿಗೆ ದಾಟಿರಿ

Archive for

25
ಮಾರ್ಚ್

ಸಲ್ಲದ ವಾದದಲ್ಲಿ ಬಂಧಿಯಾದ ಸಂಕಮ್ಮ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಮಲೆ ಮಾದೇಶ್ವರ ಕಾವ್ಯಕಥನದ ರೀತಿ, ಬೃಹತ್ತು-ಮಹತ್ತು ಮತ್ತು ಕಾವ್ಯಗುಣಗಳಿಂದ ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಅಗ್ರಮಾನ್ಯವಾದ ಮಲೆಮಾದೇಶ್ವರ ಕಾವ್ಯದ ಅತ್ಯಂತ ಪ್ರಮುಖ ಭಾಗ ಸಂಕಮ್ಮನ ಸಾಲು. ಈ ಕಾವ್ಯ ಹಾಡುವವರು, ದೇವರಗುಡ್ಡರು ಅಥವಾ ಕಂಸಾಳೆಯವರು ಸಂಕಮ್ಮನ ಸಾಲನ್ನು ಸಾಮಾನ್ಯವಾಗಿ ಹಾಡಿಯೇ ಹಾಡುತ್ತಾರೆ. ಕೋರಣ್ಯಕ್ಕೆ ಬಂದಾಗ ಕೆಲವೊಮ್ಮೆ ಜನರೇ ಬೇಡಿಕೆ ಇಟ್ಟು ಈ ಸಾಲನ್ನು ಹಾಡಿಸುವುದೂ ಇದೆ. ಈ ಕಥೆಯನ್ನು ತನ್ಮಯರಾಗಿ ಕೇಳುವ ಜನ ಸಂಕಮ್ಮನ ಕಷ್ಟ ಕೋಟಲೆ ಕೇಳಿ ಕಣ್ಣೀರು ಇಡುವುದೂ ಇದೆ. ಈ ಕಾವ್ಯವನ್ನು ಮೊದಲ ಬಾರಿ ಸಮಗ್ರವಾಗಿ ಸಂಗ್ರಹಿಸಿದ ಪಿ ಕೆ ರಾಜಶೇಖರ್ ಅವರು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಮಗಾದ ಇಂಥ ಅನುಭವವನ್ನು ತಮ್ಮ ಸಂಗ್ರಹದಲ್ಲಿ ದಾಖಲಿಸಿದ್ದಾರೆ.

ಕೇಳಲು ಕಷ್ಟವಾದರೂ ಜನಪದರು ಬೇಡಿ ಬಯಸುವ ವಿಶಿಷ್ಟ ಕಥಾ ಭಾಗ ಇದು ಎಂಬುದರಲ್ಲಿ ಅನುಮಾನವಿಲ್ಲ. ಮಾದೇಶ್ವರನ ಹುಟ್ಟಿನ ಸಾಲು, ಶ್ರವಣ ದೊರೆ ಸಾಲು, ಬೇವಿನ ಹಟ್ಟಿ ಕಾಳಮ್ಮನ ಸಾಲುಗಳೂ ಆಸಕ್ತಿದಾಯಕವಾದವಾದರೂ ಜನರಿಗೆ ಇವು ಸಂಕಮ್ಮನ ಸಾಲಿನಷ್ಟು ಪ್ರಿಯವಾಗಿಲ್ಲ. ಸಂಕಮ್ಮನಲ್ಲಿ ಒಂದು ಬಗೆಯ ಆದರ್ಶವನ್ನು ಜನಪದರು ಬಹುಶಃ ಕಂಡಿರುವುದೇ ಇದಕ್ಕೆ ಕಾರಣವಿರಬೇಕು. ಗಂಡ ನೀಲಯ್ಯನ ವಿರುದ್ಧ ಸಂಕಮ್ಮನೇನೂ ಬಂಡೇಳುವುದಿಲ್ಲ; ಅವನ ಕ್ರಿಯೆಗೆ ಪ್ರತಿಕ್ರಿಯೆಯನ್ನೂ ತೋರುವುದಿಲ್ಲ; ತಂತ್ರಕ್ಕೆ ಪ್ರತಿ ತಂತ್ರವನ್ನೂ ಹೆಣೆಯುವುದಿಲ್ಲ. ಆಕೆಯ ವೃತ್ತಾಂತದಲ್ಲಿ ಕಾಣುವುದು ಅವಳ ತಾಳ್ಮೆ, ಸಹನೆ ಮತ್ತು ಕ್ಷಮೆ. ಬಹುಶಃ ಜನಪದರು ಪ್ರತಿಪಾದಿಸುವ ಇಂಥ ಆದರ್ಶದ ಗುಣಗಳು ಈ ಸಾಲುಗಳಲ್ಲಿ ಚಿತ್ರಿತವಾದ ಕಾರಣ ಜನಪದರು ಇದನ್ನು ಹೆಚ್ಚಾಗಿ ಬಯಸಲು ಕಾರಣವಾಗಿರಬಹುದು.

ಮತ್ತಷ್ಟು ಓದು »