ಕಬ್ಬು ಸಕ್ಕರೆಗಷ್ಟೇ ಸೀಮಿತವೆ?
– ರಾಘವೇಂದ್ರ ಅಡಿಗ
ರಾಜ್ಯದಲ್ಲಿ ಇದೇ ಇಪ್ಪತ್ತು ದಿನಗಳಲ್ಲಿ ಸುಮಾರು ಇಪ್ಪತ್ತೈದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಬಹುಪಾಲು ಮಂದಿ ಕಬ್ಬು ಬೆಳೆಗಾರರೇ ಆಗಿದ್ದು ಸಾಲ ಮಾಡಿ ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆಳಿಗೆ ನೀಡಿದ ಬಳಿಕ ಕಾರ್ಖಾನೆ ಮಾಲೀಕರಿಂದ ಬರಬೇಕಾದ ಹಣ ಬರದೆ ಸಾಲದ ಬಡ್ಡಿಯನ್ನೂ ಕಟ್ಟಲಾಗದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ರೈತರ ಈ ಸರಣಿ ಆತ್ಮಹತ್ಯೆಗೆ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರೇ ನೇರ ಹೊಣೆ ಎಂದು ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಎಲ್ಲರೂ ಗುಲ್ಲೆಬ್ಬಿಸುತ್ತಿದ್ದಾರೆ. ಇದು ತಕ್ಕಮಟ್ಟಿಗೆ ನಿಜವೂ ಆಗಿರಬಹುದು. ಆದರೆ ಇಂದಿನ ಕೃಷಿ ಪದ್ದತಿ, ರೈತರ ಮನಸ್ಥಿತಿಯೂ ಸಹ ಈ ದುರ್ದೆಸೆಗೆ ಕಾರಣೆವೆಂದರೆ ಅದು ತಪ್ಪಲ್ಲ.
ಸಕ್ಕರೆಗೆ ಸೀಮಿತವಲ್ಲ!
ಮೊದಲನೆಯದಾಗಿ ನಮ್ಮ ರೈತರ ಮನಸ್ಥಿತಿ ಬದಲಾಗಬೇಕು. ಕಾರ್ಖಾನೆಗಳು, ಸರ್ಕಾರಗಳನ್ನೇ ಅವಲಂಬಿಸಿಕೊಳ್ಳುವುದರಿಂದ ಹೊರಬಂದು ತಾವೇ ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಯಬೇಕಿದೆ. ಇಂದು ತಂತ್ರಜ್ಜಾನ ಅದೆಷ್ಟು ಮುಂದುವರಿದಿದೆ, ಮಾನವನು ತಾನದೆಷ್ಟರ ಮಟ್ಟಿಗೆ ಅದರ ಅನುಕೂಲಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ನಾವ್ಯಾರೂ ಇನ್ನೊಬ್ಬರಿಗೆ ಹೇಳಿಕೊಡಬೇಕಾಗಿಲ್ಲ. ಕೃಷಿ ಕ್ಷೇತ್ರದಲ್ಲಿಯೂ ಸಹ ಹಿಂದಿನ ಕಾಲಕ್ಕಿಂತ ಸಾಕಷ್ಟು ಬದಲಾವಣೆಗಾಳಾಗಿವೆ. ಕ್ರಾಂತಿಕಾರಿ ರೀತಿಯಲ್ಲಾಗಿರುವ ತಾಂತ್ರಿಕ ಪ್ರಗತಿಯನ್ನೂ ನಮ್ಮವರೇ ಕೆಲವು ಕೃಷಿಕರು ಅದರ ಲಾಭವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಆದರೆ ಇಂತಹಾ ಸನ್ನಿವೇಶದಲ್ಲಿಯೂ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನೇ ನೆಲಸಮ ಮಾಡುವುದು, ಸುಡುವುದು ಅಲ್ಲದೆ ತಾನೂ ಕೂಡ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗುತ್ತಿರುವುದು ನೋಡಿದರೆ ನಮ್ಮ ಕೃಷಿಕರಿಗೆ ಈ ತಂತ್ರಜ್ಞಾನ ಬೆಳವಣಿಗೆಯ ಕುರಿತ ಸಾಮಾನ್ಯ ಜ್ಞಾನವೂ ಇಲ್ಲವೆ ಎನ್ನುವ ಪ್ರಶ್ನೆ ಎದುರಾಗುತ್ತದೆ.