ಬಿ.ಜಿ.ಎಲ್. ಸ್ವಾಮಿಯವರ ಕುರಿತಾದ ‘ಸ್ವಾಮಿಯಾನ’ ಪುಸ್ತಕ
– ಪ್ರಶಾಂತ್ ಭಟ್
ಬಿ.ಜಿ.ಎಲ್. ಸ್ವಾಮಿ ಕನ್ನಡಿಗರಿಗೆ ಪರಿಚಿತ ಹೆಸರು. ಅವರ ‘ಹಸುರು ಹೊನ್ನು’, ‘ಕಾಲೇಜು ರಂಗ’, ‘ಸಾಕ್ಷಾತ್ಕಾರದ ಹಾದಿಯಲ್ಲಿ’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’ ಇತ್ಯಾದಿ ಪುಸ್ತಕಗಳು ಹಾಸ್ಯದ ಜೊತೆಗೆ ಸಸ್ಯಶಾಸ್ತ್ರದ ಕುರಿತಾದ ಅರಿವನ್ನೂ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ೧೯೮೦ರಲ್ಲೇ ಧೈವಾಧೀನರಾದ ಸ್ವಾಮಿಯವರು ಹೇಗಿದ್ದರು, ಅವರ ಹುಡುಕಾಟದ ಶೈಲಿ, ಜೀವನ ವಿಧಾನ ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಂತ ಹುಡುಕಾಡಿದರೆ ಸಿಗುವ ಮಾಹಿತಿ ತುಂಬಾ ಕಡಿಮೆ. ಹೀಗಾಗಿ ಅವರ ಪುಸ್ತಕಗಳ ಮೂಲಕ ಮತ್ತು ಅವರ ತಂದೆ ಡಿ.ವಿ.ಗುಂಡಪ್ಪನವರ ಕುರಿತಾದ ಚಿತ್ರಣಗಳಲ್ಲಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನುಸುಳುವ ( ಉದಾಹರಣೆಗೆ ಡಿ.ವಿ.ಜಿ.ಯವರ ಮಗಳು ತಂದೆಯ ಬಗ್ಗೆ ಬರೆಯುವಾಗ ‘ಸ್ವಾಮಿ ನಮ್ಮನ್ನು ತುಂಬಾ ಗೋಳು ಹೊಯ್ಕೊಳ್ಳುವವನು, ಆದರೆ ಯಾವಾಗ ಬರೆಯಲು ಶುರು ಮಾಡಿದನೋ ಆವಾಗಿನಿಂದ ಗಂಭೀರನಾದ. ಹಾಸಿಗೆಗೆ ಕಾಲು ಒರಗಿಸಿ ಬರೆಯುತ್ತಿದ್ದ’ ಇತ್ಯಾದಿ) ಪ್ರಸಕ್ತಿಗಳೇ ಅಧಿಕ.
ಹಾಗಾಗಿ ಆಕಸ್ಮಿಕ ಎಂಬಂತೆ ಕೈಗೆ ದೊರಕಿದ ಈ ಪುಸ್ತಕ ‘ಸ್ವಾಮಿಯಾನ’ ಅವರ ಬಗ್ಗೆ ಒಂದಿಷ್ಟಾದರೂ ತಿಳುವಳಿಕೆ ಹೆಚ್ಚಿಸುತ್ತದೆ. ಇಲ್ಲಿ ಹಲವಾರು ಕ್ಷೇತ್ರದ ಗಣ್ಯರು ಅವರ ಬಗ್ಗೆ ಬರೆದ ಲೇಖನಗಳಿವೆ. ಸ್ವಾಮಿಯವರ ಪತ್ನಿ ವಸಂತ ಅವರು ಬರೆದ ಟಿಪ್ಪಣಿಯಿದೆ. ಎಮ್.ಚಿದಾನಂದ ಮೂರ್ತಿಯವರ ಲೇಖನ ಸ್ವಾಮಿಯವರ ಚಟಗಳ ಬಗ್ಗೆ, ಅವರ ಚರ್ಚಾಪಟುತ್ವದ ಬಗ್ಗೆ ಬೆಳಕು ಚೆಲ್ಲುತ್ತದೆ. ಆತ್ಮೀಯ ಎಂಬ ವಿಭಾಗದಲ್ಲಿ ಸ್ವಾಮಿಯವರ ಭಾವಮೈದ ಟಿ.ಎನ್. ಕೃಷ್ಣಮೂರ್ತಿ ಬರೆದ ಕೊನೆಯ ದಿನದ ಮೆಲುಕು, ಬಾನುಲಿ ಸಂದರ್ಶನಗಳಲ್ಲಿ ಎಸ್.ದಿವಾಕರ್, ಸು.ಸುಬ್ರಮಣ್ಯ (ಈ ಸಂಕಲನದ ಸಂಪಾದಕ) ಮಾಡಿರುವ ಸಂದರ್ಶನಗಳಿವೆ. ಕು.ಶಿ.ಹರಿದಾಸ ಭಟ್ಟ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಹಾ.ಮಾ.ನಾಯಕ್, ಎಚ್.ಎಸ್.ಕೆ. ಯವರ ಅಪೂರ್ವ ಸ್ಮರಣೆಯ ಚಿತ್ರಣಗಳಿವೆ. ಕೊನೆಯ ವರುಷ ಅವರೊಡನೆ ಒಡನಾಡಿ ತಾವಿಬ್ಬರು ಜೊತೆಗೂಡಿ ಸಂಗೀತದ ಬಗ್ಗೆ ಲೇಖನ ಬರೆಯಬೇಕಿತ್ತು. ಆದರೆ ಅಷ್ಟರಲ್ಲಿ ಅವರು ಕಾಲವಾದರು, ಆಮೇಲೆ ಅದರ ಬಗ್ಗೆ ಬರೆಯುವ ಆಸಕ್ತಿಯೇ ಬತ್ತಿ ಹೋಯಿತು ಎಂದು ನೆನೆದುಕೊಳ್ಳುವ ಭೈರಪ್ಪರ ನೆನಕೆಯಿದೆ.
ತನ್ನ ಸಂಶೋಧನೆಗೆ ಅಡ್ಡಿಯಾಗುತ್ತದೆ ಎಂದು ಪ್ರಾಂಶುಪಾಲರ ಹುದ್ದೆಯಿಂದ ಹಿಂಬಡ್ತಿ ಪಡೆದು ಪ್ರೊಫ಼ೆಸರ್ ಆಗಿ ಮುಂದುವರಿದ, ನಿವೃತ್ತರಾದ ಬಳಿಕವೂ ರಾತ್ರಿ ಹಗಲೆನ್ನದೆ ಲ್ಯಾಬಿನ ಕೆಲಸಗಳಲ್ಲಿ ಮುಳುಗಿರುತ್ತಿದ್ದ, ವಾಕಿಂಗ್ ಹೋಗುವಾಗ ಏನಾದರು ವಿಶಿಷ್ಟ ಗಿಡ ಕಂಡರೆ ಜೇಬಿನಿಂದ ಭೂತ ಗನ್ನಡಿ ಹಿಡಿದು ಅದರ ಪರೀಕ್ಷೆ ಮಾಡುವ ಸ್ವಾಮಿಯವರ ಚಿತ್ರಣ ಆಪ್ತವಾಗಿದೆ. ಭೈರಪ್ಪ ದಿನಾ ಬೆಳಿಗ್ಗೆ ಮೂರೂ ಮುಕ್ಕಾಲಿಗೆ ಎದ್ದು ವಾಕಿಂಗ್ ಹೋಗುವಾಗ ಸ್ವಾಮಿಯವರು ತಮ್ಮ ಕೊಠಡಿಯಲ್ಲಿ ಪಿಟೀಲು ಅಭ್ಯಾಸ ಮಾಡುವುದು ಕೇಳುತ್ತಿರುತ್ತಾರೆ. “ನೀವು ಇದೇ ಹೊತ್ತಿಗೆ ಏಳುತ್ತೀರಾ” ಎಂಬ ಭೈರಪ್ಪರ ಪ್ರಶ್ನೆಗೆ, ” ಹೌದು, ಆದರೆ ನಿಮ್ಮ ಹಾಗೆ ವಾಕಿಂಗ್, ವ್ಯಾಯಾಮ ಇಲ್ಲ” ಎಂದು ಸ್ವಾಮಿ ನಕ್ಕು ಬಿಡುತ್ತಾರೆ. ತಮ್ಮ ಲೇಖನದ ಕೊನೆಯಲ್ಲಿ, ‘ಲಘು ವ್ಯಾಯಾಮವೋ, ಮುಂಜಾನೆ ನಾಲ್ಕೈದು ಮೈಲಿ ತಿರುಗಾಟವನ್ನೋ ಸ್ವಾಮಿ ಇಟ್ಟುಕೊಳ್ಳಬೇಕಿತ್ತು ಎನಿಸುತ್ತದೆ. ಆದರೆ ಈ ಅಭ್ಯಾಸವಿರುವ ಎಷ್ಟು ಜನ ಮೊದಲೇ ಹೋಗಿಲ್ಲ’ ಎಂದುಕೊಳ್ಳುವ ಭೈರಪ್ಪ ಸಾವಿನ ಕಾರಣವನ್ನು ಹುಡುಕಿಹೋಗುವುದು ನಮ್ಮ ದುಃಖವನ್ನು ತಗಲು ಹಾಕಲು ನಾವು ಸೃಷ್ಟಿಸುವ ಒಂದು ನಿಮಿತ್ತ ಮಾತ್ರ ಎಂಬ ತೀರ್ಮಾನಕ್ಕೆ ಬರುತ್ತಾರೆ. ಸ್ವಾಮಿಯವರ ಪುಸ್ತಕಗಳ ಓದುವಾಗ ‘ಛೇ, ಅವರಿನ್ನೂ ಇರಬೇಕಿತ್ತು’ ಅಂತನ್ನಿಸುವಾಗ ಭೈರಪ್ಪರ ಈ ಮಾತು ಎಷ್ಟು ನಿಜ ಅಂತನ್ನಿಸಿ ಮನಸು ಖಿನ್ನವಾಗುತ್ತದೆ.
BJL Swamy was a great writer. I liked his Hasiru Honnu a lot.
ಇದು ಬಿ.ಜಿ.ಎಲ್.ಸ್ವಾಮಿಯವರ ಜನ್ಮಶತಾಬ್ದಿ;ಇನ್ನಷ್ಟು ಒಳನೋಟಗಳನ್ನು ಕೊಡಬಹುದಾಗಿತ್ತು
ಟಿ.ಆರ್.ಅನಂತರಾಮು
ಈ ಪುಸ್ತಕ ಯಾವ ಪ್ರಕಾಶನದ್ದು? ಲೇಖಕರು/ಸಂಪಾದಕರು ಯಾರು? ಎಲ್ಲಿ ಸಿಗುತ್ತದೆ? ಮಾಹಿತಿಗಳನ್ನು ಕೊಟ್ಟರೆ ಉಪಯೋಗವಾಗುತ್ತದೆ.