ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು………..
– ಸುಬ್ರಮಣ್ಯ ಮಾಚಿಕೊಪ್ಪ
ಭ್ರಷ್ಟಾಚಾರದ ವಿರುದ್ದ ಹೋರಾಡಲು ಒಂದು ಹರಿತ ಆಯುಧಕ್ಕಾಗಿ ಉಪವಾಸ ಸತ್ಯಾಗ್ರಹಗಳೆಲ್ಲಾ ನಡೆದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಸಿದ್ದವಾಗಿ ಬರಲಿರುವ ಲೋಕಪಾಲ್ ಮಸೂದೆ ಎಷ್ಟು ಹರಿತವೋ ಎಂಬುದನ್ನು ಕಾಲವೇ ಹೇಳಬೇಕು. ಭ್ರಷ್ಟಾಚಾರದ ವಿರುದ್ದ ಹೋರಾಡಲು ಈಗಾಗಲೇ ಒಂದು (ಸಾಕಷ್ಟು ಹರಿತವಾದ) ಆಯುದವಿದೆಯೆಂದು ಎಷ್ಟು ಜನಕ್ಕೆ ಗೊತ್ತು?? ಆ ಆಯುದವನ್ನು ಉಪಯೋಗಿಸಿ“ಅಲ್ಲಿ ಎನು ನಡಿಯುತ್ತಿದೆ?” ಎಂದು ತಿಳಿದುಕೊಂಡು ಭ್ರಷ್ಟಾಚಾರದ ಆಳವನ್ನು ಕಾಣಬಹುದು ಎಂಬುದು ಎಷ್ಟು ಜನರಿಗೆ ಗೊತ್ತಿದೆ?? ಆ ಆಯುದದ ಹೆಸರು ನಿಮಗೆಲ್ಲಾ ಎಲ್ಲೋ ಕೇಳಿ ಗೊತ್ತಿರಬಹುದು. ನಿಮ್ಮಲ್ಲಿ ಕೆಲವರಾದರೂ ಅದನ್ನು ಉಪಯೋಗಿಸಿಯೂ ಉಪಯೋಗಿಸಿರಬಹುದು. (ಕಾಮೆಂಟ್ ನಲ್ಲಿ ನಿಮ್ಮ ಅನುಭವ ಹೇಳಬಹುದು).ಅದೇ ಮಾಹಿತಿ ಹಕ್ಕು ಎಂಬ ಕಾನೂನು!!! ಈ ಲೇಖನ ಓದಿದ ಮೇಲೆ ಒಂದಿಬ್ಬರು ಇದನ್ನು ಉಪಯೋಗಿಸಿ“ಅಲ್ಲಿ ಎನು ನಡಿಯುತ್ತಿದೆ” ಎಂದು ತಿಳಿದುಕೊಂಡು ಸಂಬಂದಪಟ್ಟವರಿಗೆ ದೂರು ಕೊಟ್ಟರೆ ಕಾಮಗಾರಿಗಳು ಸ್ವಲ್ಪವಾದರೂ ಸರಿಯಾಗುತ್ತದೆ ಎಂಬುದೇ ನನ್ನ ಆಶಯ ಹಾಗೂ ನನ್ನ ಅನುಭವ. (ಹಾಗೆಲ್ಲಾ ಕಾಟಾಚಾರಕ್ಕೆ ಏನೇನೋ ಮಾಡದಂತೆ ಸ್ವಲ್ಪವಾದರೂ ಸರಿಯಾಗಿ ಕೆಲಸಮಾಡುವಂತೆ ಚುರುಕು ಮುಟ್ಟಿಸುತ್ತದೆ).ನಮ್ಮೂರ ರಸ್ತೆಯೊಂದರ ಕಳಪೆ ಡಾಮರ್ ಕಾಮಗಾರಿ ನಡೆದಾಗ – ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ – ಕಾಮಗಾರಿಯ ಎಸ್ಟಿಮೆಶನ್ ತರಿಸಿ – ದೂರು ಕೊಡುತ್ತೇವೆಂದಾಗ – ಜಿಲ್ಲಾಪಂಚಾಯತ್ ಇಂಜೀನಿಯರ್ ಮತ್ತು ರಸ್ತೆ ಕಂಟ್ರಾಕ್ಟರ್ ನಮ್ಮ ಮನೆಯವರೆಗೂ ಪಾದಬೆಳೆಸಿ – ತಪ್ಪಾಗಿದ್ದನ್ನು ಒಪ್ಪಿಕೊಂಡು – ರಸ್ತೆಗೆ ಹೊಸದಾಗಿ ಜಲ್ಲಿ ಟಾರಿನ ಒಂದು ಪದರ ಹಾಕಿದ ವಿಷಯವೇ ಈ ಬ್ಲಾಗಿನ ಬರಹ.
ಸುಮಾರು ಎರಡೂವರೆ ವರ್ಷದ ಕೆಳಗೆ ನಡೆದ ಘಟನೆ. ಬಸ್ಸುಗಳೋಡಾಡುವ ಮುಖ್ಯರಸ್ತೆಯಿಂದ ಎರಡೂವರೆ ಕಿ.ಮೀ. ದೂರವಿರುವ ನಮ್ಮೂರಿನ ಜಲ್ಲಿ ರಸ್ತೆಯ ಬದಿಗೆ ಅಲ್ಲಲ್ಲಿ ಲಾರಿಯಿಂದ ಕಲ್ಲುಗಳು ದಡದಡಾಂತ ಇಳಿಸಲ್ಪಟ್ಟವು. ನಾಲ್ಕೈದು ದಿನಗಳಲ್ಲಿ ಆ ದೊಡ್ಡ ಕಲ್ಲುಗಳನ್ನು ಸುತ್ತಿಗೆಯಲ್ಲಿ ಕುಟ್ಟಿ ಪುಡಿ ಮಾಡಲು ಒಂದೆರಡು ಲಂಬಾಣಿ ಕುಟುಂಬಗಳ ಆಗಮನವೂ ಆಯ್ತು. (ಸ್ವಲ್ಪ ಗಾಜುಗಣ್ಣಿನ ಬಿಳಿ ಕೆಂಪು ಮೈಬಣ್ಣದ ಅವರ ಚಿಳ್ಳೆಪಿಳ್ಳೆಗಳು – ಆಹಾ-ನೋಡಲು ಒಂದಕ್ಕಿಂತ ಒಂದು ಮುದ್ದಾಗಿದ್ದವು). ನೋಡುನೋಡುತ್ತಿದ್ದಂತೆಯೇ ಆ ಸುಡು ಬಿಸಿಲಿನಲ್ಲಿ ಮೂರು ಕೋಲಿನ ತಾತ್ಕಾಲಿಕ ಚಪ್ಪರ ಹಾಕಿಕೊಂಡು ಅದರಡಿ ಕೂತು ಆ ಕಲ್ಲುಗಳನ್ನು ಸುತ್ತಿಗೆಯಲ್ಲಿ ಒಡೆದು ಮುಷ್ಟಿಗಾತ್ರದ ಜಲ್ಲಿಗಳನ್ನಾಗಿ ಮಾಡಿದರು. ಐದಾರು ದಿನಗಳಲ್ಲೇ ಮತ್ತೊಂದಿಷ್ಟು ಜನರು, ರೋಡ್ ರೋಲರ್, ಡಾಮರ್ ಡ್ರಂಗಳು, ‘ಬೇಬಿಜೆಲ್ಲಿ’, ಡಾಮರ್-ಜಲ್ಲಿಕಲ್ಲು ಮಿಶ್ರಣ ಮಾಡುವ ಯಂತ್ರ-ಎಲ್ಲದರ ಆಗಮನವಾಯಿತು. ಹಳೆ ರಸ್ತೆಯನ್ನು ಅಗೆದು, ಅದಕ್ಕೆ ದೊಡ್ಡ ಜಲ್ಲಿ ಸುರಿದು, ರೋಡ್ ರೋಲರ್ ಓಡಿಸಿ, ಮಟ್ಟಮಾಡಿದಂತೆ ಮಾಡಿ, ಅದರಮೇಲೆ ಬೇಬಿಜಲ್ಲಿ ಡಾಂಬರ್ ಬಿಸಿ ಮಿಶ್ರಣ ಚೆಲ್ಲಿ,ಮತ್ತೊಂದೆರಡು ಬಾರಿ ರೋಡ್ ರೋಲರ್ ಓಡಿಸಿ, ಒಂದೂವರೆ ದಿನದಲ್ಲೇ ಟಾರ್ ರಸ್ತೆ ರೆಡಿಮಾಡಿ ಉಳಿದ (ಉಳಿಸಿದ) ಬೆಬಿಜಲ್ಲಿ,ಟಾರ್ ಡ್ರಂ ಎಲ್ಲಾ ಲಾರಿಗೆ ತುಂಬಿ ಕೆಲಸ ಮುಗಿಸಿ ಹೋದರು!!! ಚಿಕ್ಕಜಲ್ಲಿ ಹಾಗೂ ಡಾಂಬರ್ ಮಿಶ್ರಣ ಹಾಕಿದ್ದರೂ ಕೆಳಗೆ ಹಾಕಿದ್ದ ದೊಡ್ದಜಲ್ಲಿ ಕಾಣುತ್ತಿತ್ತು. ಸರಿಯಾಗಿ ಕಾಲಲ್ಲಿ ಒದ್ದರೆ ಎಲ್ಲಾ ಕಿತ್ತುಬರುವಂತಿತ್ತು. ಮಾಡುವಾಗ ಊರ ಜನ ಕೇಳಿದಾಗ – “ಅದಿನ್ನೂ ಸೆಟ್ ಆಗಬೇಕು. ಕೆಲವೇ ದಿನದಲ್ಲಿ ಎಲ್ಲಾ ಸರಿಯಾಗಿ ಫಸ್ಟ್ ಕ್ಲಾಸ್ ಆಗುತ್ತದೆ” – ಎಂಬ ಉತ್ತರ – ಮೇಸ್ತ್ರಿ ಕಡೆಯಿಂದ!!! ಶುದ್ದ ಕಳಪೆ ಕಾಮಗಾರಿ. ನಾನು ಮಾತ್ರ-ಅಲ್ಲಿ ಏನೂ ವೀರಾವೇಶದ ವಾಗ್ವಾದ ಮಾಡದೇ-ಆ ಕಾಮಗಾರಿ ಮಾಡುವಾಗಿನ ಫೋಟೋಗಳನ್ನ ತೆಗೆದಿಟ್ಟುಕೊಂಡೆ.
ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಬೇಕಾದ ಮಾಹಿತಿ ಕೇಳಲು ಸಂಬಂದಪಟ್ಟ ಕಛೇರಿಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಒಂದು ರೂಪಾಯಿಗೆ ಕ್ಸೆರಾಕ್ಸ್ ಅಂಗಡಿಗಳಲ್ಲಿ ಸಿಗುವ ಮಾಹಿತಿ ಹಕ್ಕು ಫಾರಂ ತಂದು ಮನೆಯಲ್ಲೇ ಕೂತು ಭರ್ತಿಮಾಡಿ ಅಂಚೆ ಕಛೇರಿಯಿಂದ ಹತ್ತು ರೂಪಾಯಿ ಐ.ಪಿ.ಓ ತಂದು ಅದರೊಟ್ಟಿಗಿಟ್ಟು ಸಂಬಂದಪಟ್ಟ ಇಲಾಖೆಗೆ ಕೊರಿಯರ್ ಮಾಡಿದರೆ ಮುಗಿಯಿತು. ಒಂದು ತಿಂಗಳೊಳಗೇ ನಿಮ್ಮ ಮನೆಗೇ ಉತ್ತರ ಬರುತ್ತದೆ. (ಹಾಗೆ ಏನೂ ಉತ್ತರವೇ ಕೊಡದಿದ್ದರೆ ಅಧಿಕಾರಿಗಳು ದಿನಕ್ಕೆ ೨೫೦ ರೂಪಾಯಿ ದಂಡ ತೆರಬೇಕು). ಮಾಹಿತಿ ಹಕ್ಕು ಕಾನೂನನ್ನು ಮೊದಲ ಬಾರಿಗೆ ಬಳಸಿ ಜಿಲ್ಲಾ ಪಂಚಾಯತಿಯಿಂದ ಕಾಮಗಾರಿ ನಡೆದ ನಮ್ಮ ರಸ್ತೆಯ ಕೆಲಸದ ಎಸ್ಟಿಮೆಶನ್ ತರಿಸಿದೆ. (ಎಸ್ಟಿಮೆಶನ್=ಕಾಮಗಾರಿ ಹೇಗೆ ನಡೆಯಬೇಕು ಹಾಗೂ ಅದಕ್ಕೆ ಖರ್ಚೆಷ್ಟು ಎಂಬುದರ ಸಂಪೂರ್ಣ ವಿವರ). ಜೊತೆಗೆ ಜಲ್ಲಿ ಡಾಮರ್ ಕಾಮಗಾರಿ ಕಳಪೆಯಾದರೆ ಯಾರಿಗೆ ದೂರುಕೊಡಬೇಕೆಂಬ ಇನ್ನೊಂದು ಮಾಹಿತಿಯನ್ನೂ ಕೇಳಿದ್ದೆ!!! ಪುಟವೊಂದಕ್ಕೆ ಎರಡು ರುಪಾಯಂತೆ (ಅದನ್ನೂ ಪೋಸ್ಟಲ್ ಐ.ಪಿ.ಓ. ಮೂಲಕ ಕೊರಿಯರ್ ಮಾಡಬೇಕು) ಐದಾರು ಪುಟಗಳ ಮಾಹಿತಿ ಕೈ ತಲುಪಿತು.ಎಸ್ಟಿಮೆಶನ್ ನೋಡಿದರೆ ನಮಗೆ ಗೊತ್ತಾಗುವುದು ಕಳಪೆ ಕಾಮಗಾರಿಯ ಸಂಪೂರ್ಣ ಮಾಹಿತಿ!!!ಪ್ರತಿ ಹಂತದಲ್ಲೂ ಕಳಪೆ ಹಾಗೂ ಕಾಟಾಚಾರದ ಕೆಲಸ ನಡೆದಿತ್ತು.
A4 ಸೈಜಿನ ಎರಡು ಪೇಪರ್ ತೆಗೆದುಕೊಂಡು –ಕಾಮಗಾರಿ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಕಳಪೆಯಾಗಿದೆಯೆಂದು ೧,೨,೩,೪….. ಎಂದು ಒಂದರಕೆಳಗೆ ಒಂದರಂತೆ ಸವಿಸ್ತಾರವಾಗಿ ಬರೆದು –“ಕಾಮಗಾರಿ ನೂರಕ್ಕೆ ನೂರು ಎಸ್ಟಿಮೆಶನ್ ನಂತೆ ಮಾಡುವುದು ಕಷ್ಟಸಾದ್ಯವಾದರೂ ಸಂಪೂರ್ಣ ಕಳಪೆಯಾಗಿರುವುದರಿಂದ ದೂರುಕೊಡುವುದು ಅನಿವಾರ್ಯವಾಗಿದೆ. ಕಾಮಗಾರಿಯ ವಿವಿದ ಹಂತಗಳ ಫೋಟೊ ತೆಗೆದಿಟ್ಟುಕೊಂಡಿದ್ದು ಕಳಪೆಯಾಗಿದ್ದನ್ನು ಸರಿಪಡಿಸದಿದ್ದರೆ ಇಲಾಖೆಗೆ ಅಧಿಕೃತ ದೂರುಕೊಡಬೇಕಾಗುತ್ತದೆ. ಅಧಿಕೃತ ದೂರುಕೊಡುವ ಮೊದಲು (ಅಧಿಕೃತ ದೂರನ್ನು ಯಾರಿಗೆ ಕೊಡಬೇಕೆಂಬ ಮಾಹಿತಿಯನ್ನು ಮೊದಲೇ ಕೇಳಿಪಡೆದುಕೊಂಡಿದ್ದೆನಷ್ಟೇ!!) ನಿಮ್ಮ ಗಮನಕ್ಕೆ ಈ ಪತ್ರ” – ಎಂಬ ಎಚ್ಚರಿಕೆಯೊಂದಿಗೆ ಪತ್ರವೊಂದನ್ನು – ಮೂರು ಪ್ರತಿಗಳನ್ನಾಗಿ ಕ್ಸೆರಾಕ್ಸ್ ಮಾಡಿ – ೧) ಜಿಲ್ಲಾ ಪಂಚಾಯತ್ ಇಂಜೀನಿಯರ್, ೨) ಜಿಲ್ಲಾ ಪಂಚಾಯತ್ ನಮ್ಮ ಕ್ಷೇತ್ರದ ಸದಸ್ಯರು ಹಾಗೂ ೩) ಕಾಮಗಾರಿ ಮಾಡಿದ ಕಂಟ್ರಾಕ್ಟರ್ – ಈ ಮೂರೂ ವಿಳಾಸಕ್ಕೆ ಕೊರಿಯರ್ ಮಾಡಿದೆ. ‘ಸದಾ ನಗುಮೊಗದ’ ನಮ್ಮ ಘನವೆತ್ತ ಜಿಲ್ಲಾ ಪಂಚಾಯತ್ ಸದಸ್ಯರಿಂದ (ಈಗ ಮಾಜಿ) ಈವರೆಗೂ ಉತ್ತರ ಬಂದಿಲ್ಲ – ಉತ್ತರ ಕಳಿಸುವವರಿಗೆ ಕಷ್ಟವಾಗದಂತೆ ನನ್ನ ವಿಳಾಸ ಬರೆದಿದ್ದ ಐದು ರೂಪಾಯಿ ಪೋಸ್ಟ್ ಕವರ್ ಇಟ್ಟು ಕಳಿಸಿದ್ದರೂ ಕೂಡ!!!
ಆದರೆ ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗೆ ಕಳಿಸಿದ್ದ ಪತ್ರ ಕೆಲಸಮಾಡಿತ್ತು. “ನೀವು ಮಾಡಿದ ರಸ್ತೆ ಕಾಮಗಾರಿ ಕಳಪೆಯಾಗಿದೆಯೆಂದು ಗ್ರಾಮಸ್ಥರಿಂದ ದೂರು ಬಂದಿದ್ದು, ಮಳೆಗಾಲ ಕಳೆದ ನಂತರ ಸರಿಪಡಿಸದಿದ್ದರೆ ನಿಮ್ಮಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ” – ಎಂದು ಇಂಜೀನಿಯರ್ ಕಂಟ್ರಾಕ್ಟರ್ಗೆ ಒಂದು ಪತ್ರ ಬರೆದು ಅದರ ನಕಲನ್ನು ನನಗೆ ಕಳಿಸಿದರು. ಕಂಟ್ರಾಕ್ಟರ್ ಕಡೆಯಿಂದಲೂ ಮಳೆಗಾಲ ಕಳೆದ ನಂತರ ಸರಿಪಡಿಸಿಕೊಡುವ ಆಶ್ವಾಸನೆಯ ಪತ್ರ ಬಂತು. ಇಷ್ಟೆಲ್ಲಾ ಓದಿ ನೀವು – “ವಾವ್!!! ಆ ವರ್ಷ ಮಳೆಗಾಲ ಕಳೆದಕೂಡಲೇ ಕಂಟ್ರಾಕ್ಟರ್ ಬಂದು ರಸ್ತೆ ಸರಿಮಾಡಿಕೊಟ್ಟರು ತಾನೇ” – ಎಂದು ಉದ್ಗಾರ ತೆಗೆಯಬೇಡಿ. ಮಳೆಗಾಲ ಮುಗಿದು ನಾಲ್ಕೈದು ತಿಂಗಳುಗಳಾದನಂತರವೂ ಅವರದ್ದು ಜಾಣಮರೆವು!!! ಆ ಜಾಣಮರೆವಿಗೆ ಔಷದಿಯಾಗಿ ಉಪಯೋಗಿಸಿದ್ದು ಮತ್ತೊಮ್ಮೆ ಮಾಹಿತಿಹಕ್ಕು ಕಾನೂನು!!! ಈ ಬಾರಿ ಕೇಳಿದ ಮಾಹಿತಿ – ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರ (ಟೆಂಡರ್ ಕರೆದ ದಿನಾಂಕ, ತೆರೆದ ದಿನಾಂಕ, ಭಾಗವಹಿಸಿದ್ದ ಬಿಡ್ಡುದಾರರು, ಕೊಟ್ ಮಾಡಿದ ಬಿಡ್). ಚುರುಕು ಮುಟ್ಟಿತು. ಒಂದು ದಿನ (ನಾನು ಮನೆಯಲ್ಲಿರಲಿಲ್ಲ) ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ ನಮ್ಮಮನೆಯವರೆಗೂ ಬಂದು – “ಟಾರ್ ನ ಗುಣಮಟ್ಟ ಕಡಿಮೆಯಿದ್ದುದರಿಂದ ಹಾಗಾಗಿದ್ದು” – ಎಂದು ಸ್ಪಷ್ಟೀಕರಣ ನೀಡಿ (!!!) ಇನ್ನೊಂದು ಪದರ ಟಾರ್ ಹಾಕಿ ಸರಿಪಡಿಸುವುದಾಗಿ ಹೇಳಿದರು. ಒಂದೆರೆಡು ದಿನಗಳಲ್ಲೇ ಮತ್ತೊಮ್ಮೆ ಲಾರಿ, ಬೇಬಿಜೆಲ್ಲಿ, ಟಾರ್ ಡ್ರಂಗಳು, ಟಾರ್ ಮತ್ತು ಜಲ್ಲಿ ಮಿಶ್ರಣಮಾಡುವ ಯಂತ್ರ, ರೋಡ್ ರೋಲರ್ ಹಾಗೂ ಕೆಲಸಗಾರರು – ಇವರೆಲ್ಲರ ಆಗಮನವಾಯಿತು. ರಸ್ತೆಯನ್ನೊಮ್ಮೆ ಗುಡಿಸಿ – ಹೊಸದಾಗಿ ಬಿಸಿ ಟಾರ್ ಜಲ್ಲಿ ಮಿಶ್ರಣ ಸುರಿದು – ಅದರಮೇಲೆ ರೋಡ್ ರೋಲರ್ ಓಡಿಸಿ – ರಸ್ತೆ ಸರಿಪಡಿಸಿದರು!!!! (ನಾಳೆ ನಮ್ಮೂರಿಗೆ ನೀವು ಬಂದಾಗ – “ಎಲ್ಲಿ ಆ ಸೂಪರ್ ಸುಪ್ರಿಂ ರೋಡ್?” ಎಂದು ಕೇಳಿದರೆ – ಇದು ಎರಡೂವರೆ ವರ್ಷ ಹಿಂದಿನ ಕಥೆ. ಮೂರ್ನಾಲ್ಕು ತಿಂಗಳಲ್ಲೇ ಹಾಳಾಗುವ ಬದಲು ಈಗ ಕಿತ್ತುಹೋಗಲು ಶುರುವಾಗಿದೆ!!!)
ಸ್ವಲ್ಪ ಕಲ್ಪಿಸಿಕೊಳ್ಳೋಣ. ಮಾಹಿತಿ ಹಕ್ಕು ಎಂಬ ಕಾನೂನೇ ಇಲ್ಲದಿದ್ದರೆ?
ಕಳಪೆ ರಸ್ತೆ ಕಾಮಗಾರಿ ದೂರುಕೊಡಲು ನಾನು ಜಿಲ್ಲಾಪಂಚಾಯತ್ ಆಫೀಸಿಗೆ ಹೋಗುವುದು. “ಎಸ್ಟಿಮೆಶನ್ ಎಲ್ಲಿ ಸಿಗುತ್ತೆ?ಎಲ್ಲಿ ದೂರು ಕೊಡುವುದು?” – ಎಂದು ನಾನು ಕೇಳುವುದು!! ಕೇಳುತ್ತಿರುವಂತೆಯೇ (ಯಾವನೋ ಒಬ್ಬ ಎಲ್ಲಾ ಸರಿಮಾಡುವವನು ಬಂದ – ಎಂಬಂತೆ ಆಶ್ಚರ್ಯ ಹಾಗು ಅಸಡ್ಡೆಯಿಂದ ನನ್ನನ್ನು ನೋಡುತ್ತಾ) ಅಲ್ಲಿ ಕೂತ ಯಾವನೋ ಒಬ್ಬ ಸಿಬ್ಬಂದಿ – ಕಿಸಕ್ಕನೆ ನಗುತ್ತಾ – “ಸಾಹೇಬ್ರಿಲ್ಲ, ನಾಳೆ ಬನ್ನಿ” – ಎಂದು ಹೇಳುವುದು. ಯಾವ ಎಸ್ಟಿಮೆಶನ್ ಮಾಹಿತಿ ಹಕ್ಕು ಕಾನೂನಿನ ಸಹಾಯದಿಂದ – ಇಪ್ಪತ್ತು ಮೂವತ್ತು ರೂಪಾಯಿಗೆ ನಮ್ಮ ಮನೆಬಾಗಿಲಿಗೆ ಬರುತ್ತದೋ – ಅದೇ ಎಸ್ಟಿಮೆಶನ್ ಗೆ ಆ ಕಾನೂನು ಇಲ್ಲದಿದ್ದರೆ – ನಾವು ಎಷ್ಟೊಂದು ಕಷ್ಟಪಡಬೇಕಾಗುತ್ತಿತ್ತು ಅಲ್ವಾ.




