ಕಾರಂತರೆಂದರೆ ಯಾರಂತ ತಿಳಿದಿರಿ?
– ರೋಹಿತ್ ಚಕ್ರತೀರ್ಥ
“ಬೋಸ್ ಐನ್ಸ್ಟೈನ್ ಸ್ಟಾಟಿಸ್ಟಿಕ್ಸ್” ಎಂಬ ಅದ್ಭುತ ಸಂಗತಿಯನ್ನು ಭೌತಶಾಸ್ತ್ರಕ್ಕೆ ಕೊಟ್ಟ ಸತ್ಯೇಂದ್ರನಾಥ ಬೋಸ್ರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂಬ ಶಿಫಾರಸು ಹೋಗಿತ್ತು. ಆದರೆ ಅಂತಿಮಕ್ಷಣದಲ್ಲಿ ಅವರಿಗೆ ಆ ಪ್ರಶಸ್ತಿ ಕೈತಪ್ಪಿತು. “ಈ ಮನುಷ್ಯ ಕೇವಲ ಭೌತಶಾಸ್ತ್ರಜ್ಞನಲ್ಲ. ಕವಿ, ಸಂಗೀತಗಾರ, ಅನುವಾದಕ, ಹೋರಾಟಗಾರ, ಕಲಾವಿದ ಎಲ್ಲವೂ ಆಗಿದ್ದಾರೆ. ಇವರಿಗೆ ವೃತ್ತಿನಿಷ್ಠೆ ಇದೆಯೆಂದು ನಂಬುವುದು ಹೇಗೆ?” ಎಂದು ಪ್ರಶಸ್ತಿ ಸಮಿತಿ ಕೇಳಿತ್ತಂತೆ! ಅಕ್ಟೋಬರ್ ಎರಡನೆ ವಾರ ಎಂದರೆ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗುವ ಸಮಯ. ದುರಂತವೋ ಗೌರವವೋ ಕಾಕತಾಳೀಯವೋ, ಅದೇ ವಾರದ ಮೂರನೇ ದಿನ – ಅಂದರೆ ಅಕ್ಟೋಬರ್ 10ರಂದು ನಮ್ಮ ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಜನ್ಮದಿನವೂ ಕೂಡ. ಬಹುಶಃ ಕಾರಂತರ ಹೆಸರು ನೊಬೆಲ್ ಸಾಹಿತ್ಯ ಪ್ರಶಸ್ತಿಗಾಗಿ ಶಿಫಾರಸುಗೊಂಡಿದ್ದರೆ ಅವರಿಗೂ ಆ ಪುರಸ್ಕಾರ ಸಿಗುತ್ತಿದ್ದದ್ದು ಸಂಶಯ. ಬದುಕಿನಲ್ಲಿ ಏನೇನೆಲ್ಲಾ ಆಗಿ ಸಾಧನೆ ಮಾಡಿದ ಈ ವ್ಯಕ್ತಿಗೆ ಬರೆಯುವುದಕ್ಕೆ ಸಮಯವೇ ಸಿಕ್ಕಿರಲಿಕ್ಕಿಲ್ಲ ಎಂದು ಸಮಿತಿಯವರು ಹೆಸರನ್ನು ತಿರಸ್ಕರಿಸುತ್ತಿದ್ದರೋ ಏನೋ.
ಕಾರಂತರನ್ನು ಏನೆಂದು ಕರೆಯುವುದು? ಹೆಮ್ಮರವೆಂದೇ? ವಿಶಾಲ ಸಾಗರವೆಂದೇ? ಹಿಮಾಲಯವೆಂದೇ? ಔನ್ನತ್ಯವಷ್ಟೇ ಹಿರಿಮೆಯಾಗಿ ನಿಂತಿರುವ ಗೌರೀಶಂಕರ ಕಾರಂತರ ಜ್ಞಾನದ ಆಳಕ್ಕೆ, ವಿಸ್ತಾರಕ್ಕೆ ಸಾಟಿಯಾಗುವುದಿಲ್ಲ. ಹಿಂದೂ ಸಾಗರದಂತಹ ಸಮುದ್ರರಾಜನಿಗೆ ಕಾರಂತರ ಮಾನವೀಯತೆಯ ಎತ್ತರವನ್ನು ಸರಿಗಟ್ಟಲು ಸಾಧ್ಯವಾದೀತೇ? ಕಾರಂತರ ಅಜ್ಜ ಚಿನ್ನದ ಕಸುಬು ಕಲಿತ ರಸವೈದ್ಯರಾಗಿದ್ದರಂತೆ. ಅಪ್ಪ ಶೇಷ ಕಾರಂತರು ಕಲಿತದ್ದು ಎಲ್ಲಿ, ಎಷ್ಟು ಇವೆಲ್ಲ ನಿಗೂಢ. ಆದರೆ ಲೋಕಜ್ಞಾನದಿಂದ ಬಂದದ್ದನ್ನು ಮೇಷ್ಟ್ರಾಗಿ ಶಾಲೆಯಲ್ಲಿ ಹಂಚುತ್ತಿದ್ದರು. ಒಂಬತ್ತು ಮಕ್ಕಳ ಹಿರಿಸಂಸಾರದಲ್ಲಿ ಶಿವರಾಮ ನಾಲ್ಕನೆಯವನು. ಸಂಸಾರ ದೊಡ್ಡದಾಯಿತು; ದುಡಿವ ಕೈ ಸಾಲದಾಯಿತೆಂದು ಶೇಷ ಕಾರಂತರು ಮಾಸ್ತರಿಕೆ ಕೈಬಿಟ್ಟು ಜವಳಿ ವ್ಯಾಪಾರಕ್ಕೆ ಇಳಿದರು. ಅಕ್ಷರಾಭ್ಯಾಸದ ಜೊತೆಗೆ ಈ ತಂದೆ ತನ್ನ ಹೋರಾಟದ ಕೆಚ್ಚು, ಧೈರ್ಯಗಳನ್ನೂ ಮಕ್ಕಳಲ್ಲಿ ಆಗಲೇ ತುಂಬಿಸಿರಬೇಕು. ಶಿವರಾಮ ಹದಿನೆಂಟು ತುಂಬುವ ಹೊತ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ. ಗಾಂಧೀಜಿಯ ಅಸಹಕಾರ ಚಳುವಳಿ ಕಾವು ಪಡೆಯುತ್ತಿದ್ದ ಸಮಯ. ಹುಡುಗನ ನೆತ್ತರು ಧಿಮಧಿಮನೆ ಕುಣಿದಿರಬೇಕು. ಹೋರಾಟಕ್ಕೆ ಇಳಿದ. ಮಂಗಳೂರು, ಕೋಟದ ನಡುವೆ ಉಠ್ಭೈಸ್ ಮಾಡಿದ.
ಮತ್ತಷ್ಟು ಓದು