ತುಳುನಾಡಿನ ಮಾರ್ನೆಮಿ ಆಚರಣೆ
– ಭರತೇಶ ಅಲಸಂಡೆಮಜಲು
ಪಿಲಿ, ಕೊರಗೆ, ಕರಡಿ, ಸಿಮ್ಮ ನಲಿತೋಂತಲ್ಲಗೆ,
ಪುರು ಬಾಲೆ, ಜೆತ್ತಿನಲ್ಲೇ ಇತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ,
ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ,
ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು…..
(ಹುಲಿ, ಕೊರಗ,ಕರಡಿ, ಸಿಂಹ ಕುಣಿಯುತ್ತಿವೆ,
ಪುಟ್ಟ ಮಗು, ಮಲಗಿದ್ದಲ್ಲೇ ಇದ್ದ ಅಜ್ಜ ಎದ್ದು ನಡೆದರು,
ಚೆಂಡೆಯ ಸದ್ದಿಗೆ ಏದ್ದಿತ್ತು ದೂಳು ಊರೇಲ್ಲಾ,
ಬಂತು ನವರಾತ್ರಿ ನಡೆಯುತ್ತಾ, ಕುಣಿಯುತ್ತಾ…)
ತುಳುನಾಡಿನಲ್ಲಿ ನವರಾತ್ರಿ, ದಸರಾ,ದುರ್ಗಾ ಪೂಜೆಯು ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ .ಒಂಬತ್ತು ದಿನಗಳ ಕಾಲ ಭರಪೂರ ಭಯ, ಭಕ್ತಿಯ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷವನ್ನು ಅರ್ವಿಭಾವಗೊಳಿಸಿ ಆ ತೆರದಲ್ಲಿ ನಟನೆ, ಹಾಸ್ಯ, ಮಾತಿನ ರಂಗು ನೀಡಿ ದುರ್ಗೆಯರ ಅರಾಧನೆ ಶುರುವಿಡುತ್ತದೆ, ದಕ್ಷಿಣದ ಜಿಲ್ಲೆಗಳ ಪ್ರಸಿದ್ಧ ದೇವಾಲಯಗಳಾದ ಮಂಗಳಾದೇವಿ, ಕಟೀಲು, ಬಪ್ಪನಾಡು, ಮಂದಾರ್ತಿ, ಕೊಲ್ಲೂರು, ಬೆಳ್ಳಾರೆಯ ಜಲದುರ್ಗೆ, ಭಗವತಿ ಹೀಗೆ ಹಲವಾರು ಹಳ್ಳಿಗೊಂದರಂತೆ, ಸೀಮೆಗೊಂದರಂತೆ ದುರ್ಗೆಯರ ದೇವಾಲಯಗಳು ಕಂಡುಬರುತ್ತದೆ, ಈ ದಿನಗಳಲ್ಲಿ ಮನೆ ಮನೆಗಳಲ್ಲಿ ಪೂಜೆ ನಡೆಯದಿದ್ದರೂ ದೇವಿಯ ಅರಾಧನೆ ಮಾಡುವ ಮನೆಗಳಲ್ಲಿ ಮತ್ತು ಸಿರಿ ದರ್ಶನವಿರುವ ಮನೆಗಳಲ್ಲಿ ಮಾರ್ನೆಮಿಯ ವಿಶೇಷ ಪೂಜೆ ನಡೆಸುತ್ತಾರೆ. ತುಳುನಾಡಿನ ಯಕ್ಷಗಾನ ಪ್ರಸಂಗಗಳಲ್ಲಿ ದುರ್ಗೆಯರ ಲೀಲೆಗಳನ್ನು ಮನೋಜ್ಞವಾಗಿ ಹಲವಾರು ಕ್ಷೇತ್ರ ಮಹಾತ್ಮೆಗಳು ಕಣ್ಣಿಗೆ ಕಟ್ಟಿಕೊಡುತ್ತದೆ.