ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 16, 2015

4

ಸುಳ್ಸುದ್ದಿ-ಬೆಂಗಳೂರಿನಲ್ಲಿ ಮಿತಿಮೀರಿದ ಸರಗಳ್ಳರ ಹಾವಳಿ:ಮೋದಿ ವಿರುದ್ಧ ವ್ಯಾಪಕ ಟೀಕೆ

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್,ಮಾವಿನಕಾಡು

ನಿಲುಮೆ_ಸುಳ್ಸುದ್ದಿ_ಸರಗಳ್ಳರಹಾವಳಿಬೆಂಗಳೂರಿನಲ್ಲಿ ದಿನೇ ದಿನೇ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಧೀರ್ಘ ಮೌನ ಮುರಿಯಬೇಕು ಎಂದು ರಾಜ್ಯದ ಗೃಹ ಸಚಿವರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾನ್ಯ ಗೃಹ ಸಚಿವರು,ನಮ್ಮ ರಾಜ್ಯದಲ್ಲಿ,ಅದರಲ್ಲೂ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಊಹೆಗೂ ನಿಲುಕದ ಮಟ್ಟಕ್ಕೆ ಬೆಳೆದು ನಿಂತಿದೆ.ಆದರೆ ಈ ಬಗ್ಗೆ ಪ್ರಧಾನಿ ಇದುವರೆಗೂ ಬಾಯಿ ಬಿಟ್ಟು ಏನನ್ನೂ ಹೇಳಿಲ್ಲ.ಇದು ವೈಯುಕ್ತಿಕವಾಗಿ ನನಗೆ ತೀರಾ ಆಶ್ಚರ್ಯವನ್ನುಂಟುಮಾಡಿದೆ ಎಂದು ಹೇಳಿದರು. ಈ ನಡುವೆ ಸರಗಳ್ಳತನಕ್ಕೆ ಹೊಸದೊಂದು ವ್ಯಾಖ್ಯಾನ ಕೊಟ್ಟ ಸಚಿವರು,ಮಹಿಳೆಯರ ಕತ್ತಿನಿಂದ ಇಬ್ಬರು ಸರಗಳ್ಳರು ಸರವನ್ನು ಕಿತ್ತೊಯ್ದರೆ ಅದು ಸರಗಳ್ಳತನವಾಗುವುದಿಲ್ಲ,ಮೂರು ಅಥವಾ ಅದಕ್ಕಿಂತಾ ಹೆಚ್ಚು ಜನ ಕದ್ದರೆ ಮಾತ್ರ ಅದನ್ನು ಸರಗಳ್ಳತನ ಎಂದು ದೂರು ದಾಖಲಿಸಿಕೊಳ್ಳಲು ನಮ್ಮ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ತಿಳಿಸಿದರು.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ,ಇತ್ತೀಚಿಗೆ ನರೇಂದ್ರ ಮೋದಿ ಮೌನೇಂದ್ರ ಮೋದಿ ಆಗುತ್ತಿದ್ದಾರೆ ಎಂದು ಟೀಕಿಸಿದರು.ಈ ಸರಗಳ್ಳತನ ಪ್ರಕರಣಗಳಲ್ಲಿ ಪ್ರಮುಖವಾಗಿ ಇರಾನೀ ಗ್ಯಾಂಗ್ ನ ಹೆಸರು ಕೇಳಿಬರುತ್ತಿದ್ದರೂ ಪ್ರಧಾನಿ ಮೋದಿ ಇದುವರೆಗೂ ಪ್ರಕರಣ ಸಂಬಂಧ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.ಒಂದು ವೇಳೆ ಪ್ರಕರಣದಲ್ಲಿ ಇರಾನೀ ಗ್ಯಾಂಗ್ ನ ಪಾತ್ರ ಇರುವುದೇ ಹೌದಾದಲ್ಲಿ ಇರಾನಿನ ಅಧ್ಯಕ್ಷ ಹಸನ್ ರೌಹಾನಿ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ಯಾಕೆ ಅವರ ಗಮನಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು,ಈ ವಿಷಯವನ್ನು ಪ್ರಧಾನಿಯವರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಪ್ರತಿಪಕ್ಷದ ಸದಸ್ಯರ ಕರ್ತವ್ಯ.ಪ್ರಧಾನಿಯವರ ಮದ್ಯಸ್ಥಿಕೆಯಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ.ಆದರೆ ಪ್ರತಿಪಕ್ಷದ ಸದಸ್ಯರು ಏನೂ ಮಾಡದೆ ನಿಷ್ಕ್ರಿಯರಾಗಿದ್ದಾರೆ.ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಇಷ್ಟೊಂದು ನಿಷ್ಕ್ರಿಯ ಪ್ರತಿಪಕ್ಷವನ್ನು ನೋಡಿದ್ದು ಇದೇ ಮೊದಲು ಎಂದರು.

ಹೆಚ್ಚುತ್ತಿರುವ ಸರಗಳ್ಳತನದ ಬಗ್ಗೆ ಮಾತನಾಡಿದ ನಗರ ಪೋಲೀಸ್ ಕಮಿಷನರ್ ರವರು, ನಮ್ಮ ಎಲ್ಲಾ ಮಹಿಳಾ ಪೋಲೀಸ್ ಪೇದೆಗಳಿಗೆ ಸರವನ್ನು ಹಾಕಿಕೊಂಡು ಓಡಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.ನಗರದಲ್ಲಿನ ಸುಮಾರು 25 ಪ್ರತಿಶತ ಪೋಲೀಸರನ್ನು ಎಐಸಿಸಿ ಉಪಾದ್ಯಕ್ಷರ ಪ್ರಶ್ನೋತ್ತರ ಕಾರ್ಯಕ್ರಮಗಳಿಗೆ ನಿಯೋಜಿಸಲಾಗಿದೆ.ಶೇ.30 ರಷ್ಟು ಪೋಲೀಸರನ್ನು ವಿಚಾರವಾದಿಗಳ ರಕ್ಷಣೆಗೆ ನಿಯೋಜಿಸಲಾಗಿದೆ.ಶೇ.40 ರಷ್ಟು ಪೋಲೀಸರನ್ನು ರಾಜಕಾರಣಿಗಳ ರಕ್ಷಣೆಗಾಗಿ ನಿಯೋಜಿಸಲಾಗಿದೆ.ಉಳಿದಿರುವ ಕೇವಲ ಶೇ.5 ರಷ್ಟು ಪೊಲೀಸರಿಂದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಇಲಾಖೆಯಿದ್ದು ಇದಕ್ಕೆಲ್ಲಾ ಕೇಂದ್ರ ಸರ್ಕಾರವೇ ಏನಾದರೂ ಪರಿಹಾರ ಹುಡುಕಬೇಕು ಎಂದು ಅವರೂ ಸಹಾ ಕೇಂದ್ರದತ್ತ ಮುಖ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಉಸ್ತುವಾರಿ ಸಚಿವರು,ಪ್ರಧಾನಿ ಮೋದಿಯವರು ಒಂದೆಡೆ ಸ್ವಚ್ಛ ಭಾರತದ ಬಗ್ಗೆ ಮಾತಾಡುತ್ತಿದ್ದಾರೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದ್ದು ಕಣ್ಣು ಹಾಯಿಸಿದೆಡೆಯೆಲ್ಲಾ ಕಸವೇ ಕಾಣುತ್ತಿದೆ.ಪ್ರಧಾನಿಯವರಿಗೆ ನಿಜವಾಗಿಯೂ ಸ್ವಚ್ಛ ಭಾರತದ ಬಗ್ಗೆ ಕಾಳಜಿಯಿದ್ದಲ್ಲಿ ಮೊದಲು ಬೆಂಗಳೂರಿನ ಕಸದ ಸಮಸ್ಯೆಯನ್ನು ಪರಿಹರಿಸಲಿ ಎಂದು ಸವಾಲು ಹಾಕಿದರು.ಸ್ಥಳದಲ್ಲಿದ್ದ ಮೇಯರ್ ರವರೂ ಸಹಾ ಇದಕ್ಕೆ ದನಿಗೂಡಿಸಿದರು.ಅಷ್ಟೇ ಅಲ್ಲದೆ,ಮೋದಿಯವರು ಡಿಜಿಟಲ್ ಇಂಡಿಯಾದ ಬಗ್ಗೆ ಮಾತಾಡುತ್ತಿದ್ದಾರೆ,ಅದಕ್ಕೆ ಕಾರಣ ವಿದ್ಯಾವಂತ ಜನ ಅವರ ಪಕ್ಷಕ್ಕೆ ಓಟು ಹಾಕಿದ್ದು.ಅವಿದ್ಯಾವಂತರೆಲ್ಲಾ ನಮ್ಮ ಪಕ್ಷಕ್ಕೆ ಓಟು ಹಾಕಿದ್ದರಿಂದಲೇ ಅವರು ಕಸದ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ ಎಂದು ದೂರಿದರು.

*ವಿ.ಸೂ:ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿಗೆ ಪ್ರತಿಯೊಂದು ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳಿಗೂ ಮೋದಿಯನ್ನು ಹೊಣೆ ಮಾಡುತ್ತಿರುವವರನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.

ಚಿತ್ರಕೃಪೆ : mid-day.com

4 ಟಿಪ್ಪಣಿಗಳು Post a comment
  1. UNIVERSAL's avatar
    hemapathy
    ಆಕ್ಟೋ 16 2015

    What is the connection to Modi and these chain snatchers? Instead of blaming Police to everything, women should be alert to defend themselves. If they stop wearing jewels whenever they go outside, they can stop these snatchers.

    ಉತ್ತರ
    • sudarshanarao's avatar
      ಆಕ್ಟೋ 16 2015

      That is not the issue right? It nay eventually lead to the assertion that do not leave the house!!

      It is a satire.
      .

      ಉತ್ತರ
    • WITIAN's avatar
      WITIAN
      ಆಕ್ಟೋ 16 2015

      ಸ್ವಾಮಿ ಹೇಮಾಪತಿ ಯವರೆ, ಅದು ಸುಳ್ಸುದ್ದಿ! ಅದರಲ್ಲಿರುವ ವ್ಯಂಗ್ಯಕ್ಕೆ ನಕ್ಕು ಬಿಡಿ, ಸಾಕು.

      ಉತ್ತರ
  2. anjaneya reddy sm's avatar
    anjaneya reddy sm
    ಆಕ್ಟೋ 16 2015

    ಸೂಪರ್

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments