ಅಸಹಿಷ್ಣುತೆ
– ಎಸ್.ಎನ್ ತಾರನಾಥ
ಈ ಮೇಲಿನ ವಾಕ್ಯಗಳನ್ನು ಎಲ್ಲ ಪತ್ರಿಕೆಗಳಲ್ಲಿ ಓದಿರುತ್ತಿರಿ.ಟಿವಿ ಚಾನೆಲ್ ಗಳಲ್ಲಿ ನೋಡಿರುತ್ತಿರಿ.ಇದನ್ನು ಬಿಟ್ಟು ಎಲ್ಲಿ? ನಾ ಕಾಣೆ. ಹಾಗಾದರೆ ಕೆಲವು ಬುದ್ದಿಜೀವಿಗಳು ಪ್ರಗತಿಪರ ಸಾಹಿತಿಗಳು ಎಲ್ಲ ಮಹಾನ್ ಗಳು ನಿದ್ದೆಯಲ್ಲೂ ಬಡಬಡಿಸುವ ಈ ಪದದ,ವಿಷಯದ ಸೃಷ್ಟಿಕರ್ತ ಯಾರು? ಯಾವಾಗ ಭಾರತದ ಮಹಾನ್ ಸಾಹಿತಿಗಳು ತಮ್ಮ ತಮ್ಮ ಪ್ರಶಸ್ತಿ ಗಳನ್ನೂ ಸರ್ಕಾರಕ್ಕೆ ವಾಪಸ್ಸು ಮಾಡಿ ಮುಖ್ಯವಾಹಿನಿಗೆ (ಟಿ.ವಿ ವಾಹಿನಿ) ಬಂದರೋ, ಅಂದು ಸಾಮಾನ್ಯ ನಾಗರಿಕರಿಗೆ ಗೊತ್ತಾಯಿತು. “ನಮ್ಮ ದೇಶದೊಳಗೆ ಏನೋ ಇದೆ. ಅದನ್ನು ನಮ್ಮ ಸಂಶೋಧಕರು ಹುಡುಕಿದ್ದಾರೆ “. ಕಲ್ಬುರ್ಗಿ ಸೇರಿದಂತೆ ಕೆಲವು ವಿಚಾರವಾದಿಗಳ ಹತ್ಯೆ ಹಾಗೂ ಕೆಲವು ಸ್ಥಳೀಯ ಘಟನೆಗಳ ನಂತರ ಶುರುವಾದ ಈ ವರಾತ ಇನ್ನು ನಿಂತಿಲ್ಲ. ಈ ಘಟನೆಗಳಿಗೆ ಅಲ್ಲಿನ ಸರ್ಕಾರಗಳನ್ನು ಹೊಣೆ ಮಾಡುವುದು ಬಿಟ್ಟು ಕೇಂದ್ರ ಸರ್ಕಾರವನ್ನು ದೂಷಿಸಲು ಶುರು ಹಚ್ಚಿಕೊಂಡರು. ಅವರು ರಾಜ್ಯಸರ್ಕಾರಗಳ ಬೆನ್ನುಬೀಳಲಿಲ್ಲ ಏಕೆ ಎನ್ನುವುದು ಬಯಲ ಸತ್ಯ. ಅಲ್ಲಿರುವುದು ಅವರ ಕೃಪಪೋಷಿತ ಸರ್ಕಾರಗಳು ಹಾಗು ಅಲ್ಲಿ ಹೋರಾಟ ಮಾಡಿದರೆ ಮೈಲೇಜ್ (ಜನಪ್ರಿಯತೆ) ಸಿಗುವುದಿಲ್ಲ. ಇಲ್ಲಿಂದ ನಂತರ ಇದು ವಿಪರೀತಕ್ಕೆ ಹೋಗಿ ಈ ಪದಕ್ಕೆ ತಮ್ಮ-ತಮ್ಮ ಮನಸ್ಸಿಗೆ ಸರಿ ಹೊಂದುವಂಥಹ ಹೇಳಿಕೆ ನೀಡಲು ಆರಂಭಿಸಿದರು.
ಹಿಂದು ಮತ್ತು ಇಂದು ಜಗತ್ತಿಗೆ ಭಾರತವೆಂದರೆ ಮೊದಲು ಕಾಣುವುದು ವಿವಿಧತೆಯಲ್ಲಿ ಏಕತೆ. ಜಗತ್ತಿಗೆ “ವಸುದೈವ ಕುಟುಂಬಕಂ” ಎಂದು ಹೇಳಿಕೊಟ್ಟ ಹಾಗು ಅದನ್ನು ಪಾಲಿಸಿದ ದೇಶ. ಕ್ರಿಸ್ತಶಕಕ್ಕೆ ಮೊದಲೇ ನನ್ನ ದೇಶ ಜಗತ್ತಿಗೆ ವಿಶ್ವಗುರು ಆಗಿತ್ತು. ಅತ್ಯುತ್ತಮ ಹಾಗು ಪ್ರಾಚೀನ ನಾಗರಿಕತೆ ಹೊಂದಿತು. ಈ ದೇಶದ ಹೆಮ್ಮೆ ಎಂದರೆ ಜ್ಞಾನ ಪ್ರಸಾರ ಮತ್ತು ಶಾಂತಿ.ನಳಂದ,ತಕ್ಷಶಿಲೆ ಮೊದಲಾದ ವಿದ್ಯಾಲಯಗಳನ್ನೂ ಹೊಂದಿದ ದೇಶ.ಕತ್ತಿ ಹಿಡಿದು ಬಂದ ಅಲೆಕ್ಸಾಂಡರನಿಗೆ ಅದರಲ್ಲೇ ಉತ್ತರ ಕೊಟ್ಟಿತು.ಆಶ್ರಯ ಬೇಡಿ ಬಂದ ಪಾರ್ಸಿಗಳಿಗೆ ಆಶ್ರಯ ನೀಡಿತು. ಬೌದ್ದ ಜೈನ ಧರ್ಮಗಳಿಗೆ ಜನ್ಮ ನೀಡಿದ ದೇಶ.ಜಗತ್ತಲ್ಲಿ ಶಾಂತಿಯಿಂದ ಧರ್ಮ ಪ್ರಸಾರ ಮಾಡಿದ ದೇಶ.ಸಾವಿರ ವರ್ಷಗಳ ಪರಕೀಯರ ಅಕ್ರಮಣ ಎದುರಿಸಿ ನಿಂತ ದೇಶ. ಕತ್ತಿ-ತಕ್ಕಡಿ ಹಿಡಿದು ಬಂದವರು ಹಾಲಲ್ಲಿ ಸಕ್ಕರೆಯಂತೆ ಬೆರೆತು ಬಾಳುವ ದೇಶ . ಈ ದೇಶದ ಮೂಲಮಂತ್ರವೇ ಅತಿಥಿ ದೇವೋಭವ. ಇಂದಿಗೂ ವಿವಿಧ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವ ಸೊಮಾಲಿಯ ಮೊದಲಾದ ದೇಶಗಳು, ವರ್ಣಭೇದದಿಂದ ನಲುಗಿರುವ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ವಧರ್ಮಿಯರ ನಡುವೆಯೇ ಕದನ ನಡೆಯುತ್ತಿರುವ ಅರಬ್ ರಾಷ್ಟ್ರಗಳ ನಡುವೆ ಇಂಥದೊಂದು ದೇಶವಿದೆಯೆಂದರೆ ಅದು ವಿಶ್ವಗುರು ಭಾರತ ಹಾಗೂ ಅದರ ಸಹಿಷ್ಣುತಾ ಮನೋಭಾವ.
ಇಂಥಹ ದೇಶದೊಳಗೆ ಕಂಡುಹಿಡಿದಿರುವ ಹೊಸ ವಿಷಯಕ್ಕೆ ನಿರೀಕ್ಷೆಯಂತೆ ಭಿನ್ನ ಅಭಿಪ್ರಾಯ ಕೇಳಿಬರುತ್ತಿದೆ. ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದೊಳಗೆ ನಡೆಯುವ ಸಂಗತಿ. ಇದನ್ನು ಹತ್ತಿಕ್ಕಲು ಭಾರತವೇನು ಶಾಂತ ದೇಶವ ಕಬಳಿಸಿದ, ತನ್ನೊಳಗಿನ ಪ್ರಜಾಪ್ರಭುತ್ವ ಹೋರಾಟವನ್ನು ಭೀಷಣವಾಗಿ ಹತ್ತಿಕ್ಕಿದ ಕಮ್ಯುನಿಸ್ಟರ ಪ್ರಿಯದೇಶ ಚೀನಾವಲ್ಲ.ಆದರೆ ಇಂದು ಹೋರಾಟ ತನ್ನ ಉದ್ದೇಶವನ್ನು ಕೇವಲ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರಿಕರಿಸಿದೆ. ಭಾರತದ ಬುದ್ದಿಜೀವಿಗಳ ವರ್ಗ ಹಾಗು ತನ್ನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಹೀನಾಯವಾಗಿ ಸೋತ ವಿರೋಧಪಕ್ಷದ ಕೂಟದ ಗುರಿ ಮೋದಿಯೆಂಬ ನಾಯಕ.ಅನಿಷ್ಟಕೆಲ್ಲ ಶನಿಶ್ವರನೆ ಕಾರಣ ಎಂಬಂತೆ ಭಾರತದಲ್ಲಿ ಇಂದಿನ ಎಲ್ಲ ಸಮಸ್ಯೆಗಳಿಗೆ ಮೋದಿ ಹಾಗೂ ಅವರ ಪಕ್ಷ ಕಾರಣ ಎಂದು ತುತ್ತೂರಿ ಊದುತ್ತಿದ್ದಾರೆ. ಇತಿಹಾಸದಲ್ಲಿ 3 ಭಾರಿ ದೊಡ್ಡ ಪ್ರಮಾಣದಲ್ಲಿ ದೇಶವಾಸಿಗಳ ಹತ್ಯೆ ಮಾಡಿದ ವಿರೋಧಪಕ್ಷ ತನ್ನ ಕಳೆದುಹೋದ ವೈಭೋಗವನ್ನು ಮತ್ತೆ ಪಡೆಯಲು ಇದರ ನೇತೃತ್ವವಹಿಸಿದೆ. ಬಿಹಾರ ಚುನಾವಣ ಫಲಿತಾಂಶ ನಂತರ ಇವರಿಗೆ ಮತ್ತು ಹುರುಪು ಬಂದಿದೆ.
ಇವರ ನಡುವೆ ತನ್ನದೊಂದು ಇರಲಿ ಎಂದು ಸೇರ್ಪಡೆಯಾದ ನಮ್ಮ ಸತ್ಯಮೇವ ಜಯತೇಯ ನಾಯಕ ಅಮೀರ್ ಖಾನ್.ತನ್ನ ಮಕ್ಕಳಿಗೆ ಇಲ್ಲಿ ಅಭದ್ರತೆಯಿದೆ ಎಂದು ದೇಶ ಬಿಡಲು ಸಿದ್ದರಾದ P.K . ಹಿಂದೂ ದೇವರನ್ನು ತೆಗಳಿ ಮಾಡಿದ ಸಿನಿಮಾವನ್ನು ಗೆಲ್ಲಿಸಿದ ಜನತೆಯಿರುವಾಗ ಹೀರೋನ ಹೆಂಡತಿಗೆ ಅಭದ್ರತೆ ಕಾಡಿದರೆ ಬದಲಾಯಿಸಬೇಕಾದದ್ದು ತಾಯಿ ನಾಡನ್ನೋ ಮಗನ ಡ್ಯಾಡ್ ನ್ನೊ?ಭಾರತ ನಮಗೆ ಸುರಕ್ಹಿತ ರಾಷ್ಟ್ರವೆಂದು ಬಾಂಗ್ಲಾದಿಂದ ಗಡಿಪಾರದ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ. ತಮ್ಮ ಗಂಜಿಕೇಂದ್ರಕ್ಕೆ ಕುತ್ತು ಬಂದಾಗ ನಡೆದ ಸಾಹಿತಿಗಳ ಪ್ರಶಸ್ತಿ ವಾಪಸ್ಸಿ ಅಭಿಯಾನಕ್ಕೆ ಓದುಗರಿಂದ ಪುಸ್ತಕ ವಾಪಸ್ಸಿ ಅಭಿಯಾನ ಆರಂಭವಾಗಿದೆ.
ಕೇವಲ 2 ತಿಂಗಳಲ್ಲಿ ಇಷ್ಟು ಪ್ರಶಸ್ತಿಯನ್ನು ವಾಪಸ್ಸು ಪಡೆದು ಮೋದಿ ಸಾಹಿತ್ಯ ಲೋಕವನ್ನು ಸ್ವಚ್ಚಗೊಳಿಸಿದ್ದಾರೆ.ಆದರೆ ಇದರಲ್ಲಿ ಸೇನಾ ಪದಕ ಪ್ರಶಸ್ತಿಗಲಿಲ್ಲ ಏಕೆಂದರೆ ಅಲ್ಲಿ ಪ್ರಶಸ್ತಿ ನೀಡಿದರೆ ಅದು ಶೌರ್ಯಕ್ಕಾಗಿ,ಕೆಲವು ಸಾಹಿತಿಗಳಂತೆ ಲಾಬಿ ನಡೆಸಿ ಅಲ್ಲ. “ಕಳ್ಳರು, ಸಮಾಜಘಾತುಕರು ,ರಾಷ್ಟದ್ರೋಹಿಗಳಿಗೆ ಜೀವಿಸಲು ಭಯವಿದೆ ಎಂದರೆ ರಾಷ್ಟ್ರ ಹಾಗು ರಾಷ್ಟ್ರನಾಯಕ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಅರ್ಥ” ಎಂಬ ಮಾತನ್ನು ಚಾಣಕ್ಯ ಹೇಳಿದ್ದಾನೆ. ಭವಿಷ್ಯದ ಭಾರತಕ್ಕಾಗಿ ಅರಿತು ಹೆಜ್ಜೆ ಇಡುವ ಮೋದಿ ಹಾಗು ತಂಡ ಇವರಿಗೆ ತಮ್ಮ ಮೇಕ್ ಇನ್ ಇಂಡಿಯಾ , ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಮೊದಲಾದ ಕೆಲಸಗಳ ಮೂಲಕ ಉತ್ತರ ನೀಡುತ್ತಿದೆ.
ಪಪ್ಪು ಮತ್ತು ತಂಡದ “ಅಸಹಿಷ್ಣುತೆ” (intolerance) ಸಿನಿಮಾ ವಿಮರ್ಶಕರಿಗೆ ಉತ್ತಮವಾಗಿ ಕಂಡರೂ ಪ್ರೇಕ್ಷಕ ತಿರಸ್ಕರಿಸುತ್ತಿದ್ದಾನೆ.ಆಸ್ಕರ್ ಪಡೆಯುವ ಹುಮ್ಮಸಿನಲ್ಲಿರುವ ನಟರಿಗೆ (ಸಾಹಿತಿ) ಟ್ವಿಟ್ಟರ್, ಫೇಸ್ಬುಕ್ ಮೊದಲಾದ ಸಾಮಾಜಿಕ ಮಾಧ್ಯಮದಲ್ಲಿ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ 3 ದಿನದಲ್ಲಿ ಲಕ್ಷ ಮೀರಿರುವ ಅಮೀರ್ ಬ್ರಾಂಡ್ ನ snapdeal unistalling ಸಾಕ್ಷಿ. ರವಿ ಕಾಣದನ್ನು ಕವಿ ಕಂಡ ಎನ್ನುವಂತೆ ಜನ ಕಾಣದನ್ನು ಬುದ್ದಿಜೀವಿ ಕಂಡರೆ ತಪ್ಪು ಸಾಮಾನ್ಯ ನಾಗರಿಕರದ್ದೋ? ದೈನಂದಿನ ಜೀವನದಲ್ಲಿ ಕಾಣದ ಅಸಹಿಷ್ಣುತೆ ಹೋರಾಟಗಾರರಿಗೆ ಚಾನೆಲ್ ಪತ್ರಿಕೆ ಗಳಲ್ಲಿ ಕಂಡರೆ ಅದಕ್ಕೆ ಹೊಟ್ಟೆಕಿಚ್ಚು ಎನ್ನಬಹುದೇ?