ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಲೇಬೇಕು,ಆದರೆ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವುದೇಕೆ?
– ಗೋಪಾಲ ಕೃಷ್ಣ
ಧರ್ಮಸ್ಥಳವೆಂದರೆ ಪ್ರತಿನಿತ್ಯ ಸಾವಿರಾರು ಜನರು, ದೇಶದ ಖ್ಯಾತನಾಮರು, ಅಧಿಕಾರದ ಚುಕ್ಕಾಣಿ ಹಿಡಿದ ಮಂತ್ರಿ, ಮುಖ್ಯಮಂತ್ರಿಗಳು ಭೇಟಿ ನೀಡುವ ಧಾರ್ಮಿಕ ಸ್ಥಳ. ಇಲ್ಲಿನ ಪೂಜೆಯಿಂದ ಹಿಡಿದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ತಾರೆಯರ ಭೇಟಿಯವರೆಗಿನ ಪ್ರತಿ ಬೆಳವಣಿಗೆಯೂ ರಾಜ್ಯ/ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ. ತೀರಾ ಇತ್ತೀಚೆಗೆ ಅಂದರೆ ಜೂನ್ 27, 2011ರಂದು ಇಡೀ ರಾಜ್ಯವೇ ಧರ್ಮಸ್ಥಳದತ್ತ ಮುಖ ಮಾಡಿ ಕುಳಿತಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಣೆ-ಪ್ರಮಾಣದ ಸಮರಕ್ಕೆ ಧರ್ಮಸ್ಥಳ ಸಾಕ್ಷಿಯಾಗುವುದಿತ್ತು. ಅಂದು ರಾಜ್ಯದ ಎಲ್ಲಾ ಸುದ್ದಿ ಮಾಧ್ಯಮಗಳು ಧರ್ಮಸ್ಥಳದಲ್ಲೇ ಠಿಕಾಣಿ ಹೂಡಿದ್ದವು; ಧರ್ಮಸ್ಥಳದ ವಿಚಾರದ ವಿನಹ ಮತ್ತೇನೂ ಸುದ್ದಿಯೇ ಅಲ್ಲ. ‘ಮಾತಿಗೆ ಹೆಣಗಿದವನು ಮಂಜುನಾಥ, ದುಡ್ಡಿಗೆ ಹೆಣಗಿದವನು ವೆಂಕಟರಮಣ’ ಎಂಬ ನಂಬಿಕೆ ಇರುವುದರಿಂದಲೇ ಜನರ ದೃಷ್ಟಿ ಧರ್ಮಸ್ಥಳದತ್ತ ನೆಟ್ಟಿತ್ತು.
ಅಂತಹ ಸಂದರ್ಭದಲ್ಲೂ ಧರ್ಮಸ್ಥಳದ ವಿರುದ್ಧ ಆರೋಪ ಮಾಡದಿದ್ದವರು, ಇಂದು ದಿಗ್ಗನೆದ್ದು ಕುಳಿತಿರುವುದೇಕೆ? ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಲೇಬೇಕು. ಧರ್ಮಸ್ಥಳವೇ ಆಗಲಿ, ದೇಶದ ಬೇರೆ ಎಲ್ಲಿಯೇ ಆಗಲಿ ಸಾಮಾನ್ಯನಿಂದ ರಾಷ್ಟ್ರಪತಿಯವರೆಗೂ ಹತ್ಯಾಚಾರದಂತಹ ಪ್ರಕರಣದಲ್ಲಿ ಸಿಲುಕಿಕೊಂಡವರು ಯಾರೇ ಆದರೂ ಸರಿಯೇ ಅವರಿಗೆ ಮರಣದಂಡನೆ ವಿಧಿಸುವುದೇ ಸೂಕ್ತ ಶಿಕ್ಷೆ. ಆಗಲೇ ಸಹೋದರಿ ಸೌಜನ್ಯ ಆತ್ಮಕ್ಕೂ, ಅವರ ಕುಟುಂಬಕ್ಕೂ ನ್ಯಾಯ ಒದಗಿಸಿದಂತಾಗುವುದು.