Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೩
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೨
ಭಾಗ ೧ ಮತ್ತು ೨ ರಲ್ಲಿ ‘370ನೇ ವಿಧಿಯ ಸಾಂವಿಧಾನಿಕ ಸಿಂಧುತ್ವ’ ಮತ್ತು ‘370ನೇ ವಿಧಿಯ ನಿಂದನೆ ಮತ್ತು ದುರ್ಬಳಕೆ’ಯ ಬಗ್ಗೆ ಮಾತನಾಡಿದೆವು. ಭಾಗ ೩ ರಲ್ಲಿ ಮುಂದಿನ ಹಾದಿಯ ಬಗ್ಗೆ ಚಿಂತಿಸೋಣ
ಮುಂದಿನ ಹಾದಿ
ಮೇಲೆ ನೀಡಿದ ಎಲ್ಲ ಉದಾಹರಣೆಗಳು ಸಾಬೀತುಪಡಿಸುವುದಿಷ್ಟೇ, ಸಂವಿಧಾನದ 370ನೇ ವಿಧಿ ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ನಾಗರಿಕತೆ, ಮಾನವ ಹಕ್ಕುಗಳ ಕುರಿತ ಅಂತರಾಷ್ಟ್ರೀಯ ಕಾನೂನುಗಳ ಕಲ್ಪನೆಗಳ ಮೇಲೆ ನಡೆಯತ್ತಿರುವ ಅತಿಯಾದ ಅಣಕ. ಇದು ಭಾರತದ ಜನಸಂಖ್ಯೆ ಗಣನೀಯ ಪ್ರಮಾಣದ ಭಾಗವೊಂದನ್ನು ದ್ವತೀಯ ದರ್ಜೆಯ ಮತ್ತು ನಾಗರಿಕರೇ ಅಲ್ಲದ ಸ್ಥಿತಿಗೆ ಇಳಿಸುತ್ತದೆ. ವಿಪುಲ್ ಕೌಲನ ಪ್ರಕರಣವನ್ನು ಮತ್ತೆ ನೋಡುವುದಾದರೆ, ಅಂದಿನ ಮುಖ್ಯಮಂತ್ರಿ ಗುಲಾಮ್ ನಬೀ ಆಜಾದ್ರ ಕಾರ್ಯದರ್ಶಿ ನೀಡಿದ “ರಾಜ್ಯಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯ ಅಡಿಯಲ್ಲಿ ಭಾರತ ಸರ್ಕಾರದ ಗೃಹ ಇಲಾಖೆ ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರ ಬಾಧ್ಯವಲ್ಲ. ಆದ್ದರಿಂದ ನಿಮ್ಮ ಮಗುವಿನ ವೈದ್ಯಕೀಯ ವೆಚ್ಚವನ್ನು ಪಾವತಿಸಲು ಸಾಧ್ಯವಿಲ್ಲ” ಎನ್ನುವ ನಿರ್ದಯ ಉತ್ತರ ಕೌಲ್ ಕುಟುಂಬದಲ್ಲಿ ಅಣುಮಾತ್ರವಷ್ಟಾದರೂ ಜೀವಂತವಾಗಿದ್ದ ಭರವಸೆಯನ್ನು ತುಂಡರಿಸಿ ಅಡಗಿಸಿತು. ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ ಹದಿಮೂರು ವರ್ಷದ ಅದೃಷ್ಟಹೀನ ಬಾಲಕನ ಬವಿಷ್ಯವನ್ನು ಅಂಧಕಾರಕ್ಕೆ ನೂಕಿತು.
ಸಂವಿಧಾನವು ಕ್ಚೇತ್ರ ವ್ಯಾಪ್ತಿಯನ್ನು ನಿರ್ಣಯಿಸುವುದಿಲ್ಲ, ಆದರೆ ಸಂವಿಧಾನವನ್ನು ರೂಪಿಸುವ ಭಾರತದ ಜನ ಆ ಕೆಲಸವನ್ನು ಮಾಡುತ್ತಾರೆ. ಆದ್ದರಿಂದ ತತ್ಕಾಲೀನ ಸನ್ನಿವೇಶಕ್ಕನುಗುಣವಾಗಿ ಮಾಡಲ್ಪಟ್ಟ ಹಂಗಾಮಿ ನಿಬಂಧನೆಗಳು, 370ನೇ ವಿಧಿಯನ್ನು ಉಪಕರಣವಾಗಿಸಿ ಜಮ್ಮು ಕಾಶ್ಮೀರ ರಾಜ್ಯದಲ್ಲಿ ನಡೆಸಿದಂತೆ, ಪಕ್ಷಪಾತಗಳನ್ನು ಸಕ್ರಮಗೊಳಿಸಬಾರದು. ಜಮ್ಮು ಕಾಶ್ಮೀರ ರಾಜ್ಯ ವಿಲೀನದ ಕಾರಣದಿಂದಾಗಿ ಭಾರತದ ಅವಿಭಾಜ್ಯ ಅಂಗವಾಗಿದೆಯೇ ಹೊರತು 370ನೇ ವಿಧಿಯಿಂದಾಗಿ ಅಲ್ಲ. ಯಾವುದೇ ತಿದ್ದುಪಡಿಗಾಗಿ 370ನೇ ವಿಧಿಯ ಮೂಲಭೂತ ಅಗತ್ಯ ರಾಜ್ಯ ಸರ್ಕಾರದ ಸಮ್ಮತಿಯೇ ಹೊರತು ಸಂವಿಧಾನ ಸಭೆಯ ಅಂಗೀಕಾರವಲ್ಲ. ಅಲ್ಲದೇ 370ನೇ ವಿಧಿಯು ಭಾರತದ ರಾಷ್ಟ್ರಪತಿಗೆ ಸಂಸತ್ತಿನ ಸಮ್ಮತಿಯಿಲ್ಲದೇ ಈ ವಿಧಿಯನ್ನು ತಿದ್ದುಪಡಿ ಮಾಡುವ ಸಾಂವಿಧಾನಿಕ ಅಧಿಕಾರವನ್ನು ನೀಡುತ್ತದೆ.
370(1)(b) ಮತ್ತು 370(3)ರ ಹೆಚ್ಚುವರಿ ಅಧಿಕಾರಗಳೊಂದಿಗೆ 368ನೇ ವಿಧಿಯು ಸಂಸತ್ತಿಗೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ನೀಡುತ್ತದೆ. ಆದರೆ ಕಳೆದ 60 ವರ್ಷಗಳಲ್ಲಿ ಜಮ್ಮು ಕಾಶ್ಮೀರ ರಾಜ್ಯ ಸರ್ಕಾರದ ಸಹಮತಿ ಮೂಡಿಸಲು ಯಾವುದೇ ಕಾರ್ಯವಿಧಾನವನ್ನು ರೂಪಿಸಲಾಗಿಲ್ಲ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜಮ್ಮು ಕಾಶ್ಮೀರ ರಾಜ್ಯ ಸಂವಿಧಾನದ ಭಾಗ 2ರಲ್ಲಿ “ಜಮ್ಮು ಕಾಶ್ಮೀರ ರಾಜ್ಯವು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ ಮತ್ತು ಉಳಿಯವುದು (“The State of Jammu and Kashmir is and shall be an integral part of the Union of India”) ಎಂದು ಸ್ಫಷ್ಟವಾಗಿ ಹೇಳಲಾಗಿದೆ. ಬದಲಾವಣೆಯ ವೈಫಲ್ಯಕ್ಕೆ ದೆಹಲಿಯ ಇಚ್ಛಾಶಕ್ತಿಯ ಕೊರತೆಯೇ ಬಹುಮುಖ್ಯ ಕಾರಣವಾಗಿದೆ.
ವಿಪುಲನ ತಾಯಿ ಉಷಾ ಕೌಲ್ ತುಂಬಾ ದಿಗಿಲುಗೊಂಡಿದ್ದಳು. ಆತನಿಗೆ ಔಷಧೋಪಚಾರ ನಡೆಯದಿದ್ದರೆ, ಅವನ ಪ್ರಾಣ ಅಪಾಯದಲ್ಲಿದೆ ಎಂದು ಆಕೆ ಬೆದರಿದ್ದಳು. ಹಾಗೆಯೇ ‘ಅಪಾಯ’ದಲ್ಲಿದೆ ರಾಷ್ಟ್ರ ಮತ್ತು ಸಂವಿಧಾನದ “ಮೂಲಭೂತ ಸಂರಚನೆ’. ರಾಷ್ಟ್ರ ಸ್ವಸ್ಥವಾಗಿರಲು ಜಮ್ಮು ಕಾಶ್ಮೀರ ರಾಜ್ಯವೂ ಸೇರಿದಂತೆ ಎಲ್ಲ ರಾಜ್ಯಗಳೂ ರಾಷ್ಟ್ರೀಯ ಮುಖ್ಯವಾಹಿನಿಯ ಭಾಗ ಮತ್ತು ಅಂಗವಾಗುವುದು ಅತ್ಯಗತ್ಯ. ಇದು ನಡೆಯಬೇಕಾದರೆ ಹಾಗೂ ಜಮ್ಮು ಕಾಶ್ಮೀರ ರಾಜ್ಯಾಡಳಿತ ವ್ಯವಹಾರಗಳು ನೇರವಾಗಬೇಕಾದರೆ, ಒಂದು ಔಷಧದ ಅಗತ್ಯವಿದೆ. ಆ ಔಷಧವೇ 370ನೇ ವಿಧಿಯ ರದ್ದು.




