ವಿಷಯದ ವಿವರಗಳಿಗೆ ದಾಟಿರಿ

ಜುಲೈ 8, 2015

ಶೇರ್ ಷಾ !

‍ನಿಲುಮೆ ಮೂಲಕ

– ಆತ್ಮನ್ ಭಟ್,ಚಿತ್ರದುರ್ಗ

ವಿಕ್ರಮ್ ಬಾತ್ರಾಆತ ಭಾರತೀಯ ಸೇನೆಯ ಮಗದೊಬ್ಬ ಕ್ಯಾಪ್ಟನ್ ಅಷ್ಟೆ! ಆವತ್ತೂ ೭ ಜುಲೈ. ಕರೆಕ್ಟಾಗಿ ಹದಿನಾರು ವರ್ಷಗಳ ಹಿಂದಿನ’ ಫ್ಲ್ಯಾಷ್  ಬ್ಯಾಕು’. ಕಾರ್ಗಿಲ್ ಯುದ್ಧದ ರಣರಂಗ. ಅದೇ ಕಾರ್ಗಿಲ್ ಯುದ್ಧದ ಒಂದು ಗುಡ್ಡಗಾಡು. ವಂಚಕ ಹೇಡಿ ಪಾಕಿಸ್ತಾನೀ ನುಸುಳುಕೋರರ ಹಾಗೂ ಭಾರತೀಯ ಸೇನೆಯ ತುಕಡಿಯೊಂದರ ನಡುವಣ ಕಾಳಗ. Right now, ಆ ಕಾಳಗದ ಕ್ಲೈಮ್ಯಾಕ್ಸ್. ಒಬ್ಬ ಕ್ಯಾಪ್ಟನ್, ಅದೇ ಮೇಲೆ ಹೇಳಿದ್ದೆನಲ್ಲ ಆತ. ತನಗಿಂತ ಮೊದಲು ಹೋಗಬೇಕಿದ್ದ ಸುಬೇದಾರನಿಗೆ “तू बाल-बच्चेदार है, हट जा पीचे” ಅಂತ ಕೂಗಿದ. “ನಿನಗೆ ಮಕ್ಕಳು ಮರಿ ಇದಾವ. ನಡೀಲೆ ಆಚೆ!” ಅಂತ ಅರ್ಥ! ಹೋಲ್ಡ್ ಡೌನ್, ಈತನೇನು ಜೀವನ ಸಾಕಾದವನಲ್ಲ, ಈತನ ಕಾಲುಭಾಗ ಜೀವನವೂ ಮುಗಿದಿರಲಿಲ್ಲ. ಅವನಿಗಾಗ 24ರ ಹರೆಯ! ತಾನು ಮುಂದುವರೆದ. ಗುಂಡೇಟು ತಿಂದ, ಎಡವಿದ, ದಾಳಿಗೆ ಎದೆಗೊಟ್ಟ, ಆದರೂ ತ್ರಿವಿಕ್ರಮನಂತೆ ನುಗ್ಗಿದ. ಕೊನೆಗೊಮ್ಮೆ, ಅಲ್ಲೇ ‘जय माता दि ‘ ಅಂತ ಕೂಗಿ ಯುದ್ಧಾಂಕಣದಲ್ಲೇ ಕೊನೆಯುಸಿರೆಳೆದ. ಕೊನೆಯುಸಿರೆಳೆಯುವ ಮುನ್ನ ಉಸಿರಿಗೊಬ್ಬನಂತೆ ಐದು ಶತ್ರು ಸೈನಿಕರನ್ನ ಕೊಂದ. ಅವರ ತೀರ ಹತ್ತಿರಕ್ಕೆ, ಅಂದರೆ ಶತ್ರುವಿನ  ಸುಮಾರು ಒಂದು ಮಾರು ಹತ್ತಿರದಿಂದ ಅವರ ಎದೆಗೆ ಗುಂಡು ಹೊಕ್ಕಿಸಿದ. ಇವನ ಶೌರ್ಯ ಇಲ್ಲಿಗೆ ಮುಗಿಯುವುದಿಲ್ಲ, ಇಲ್ಲಿಂದ ಶುರುವಾಗುವುದೂ ಇಲ್ಲ. ಮುಂದೆ ಓದಿ. ನೆನಪಿರಲಿ, ಈತ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದವ. ‘ದಿ ಪರಮವೀರ ಚಕ್ರ’ವನ್ನು ಯುದ್ಧದಲ್ಲಿ ಭಾಗವಹಿಸಿದವರಿಗೆಲ್ಲ ಕೊಡುವುದಿಲ್ಲ! It is not surely a satisfactory certificate! ಆತನ ಹೆಸರೊಂದನ್ನು ಹೇಳಿಬಿಡುತ್ತೇನೆ, ಅದು ‘ವಿಕ್ರಮ್ ಬಾತ್ರಾ’!

ಆತ ಯಾವ ಪರಿ ದಿಟ್ಟನ್ನಾಗಿದ್ದನೆಂದರೆ, ನಾವು ನೀವೆಲ್ಲ ನಿಕ್ ನೇಮ್ ಅಂತ ಗೆಳೆಯರಲ್ಲಿ ಅವರ ಹೆಸರನ್ನು ಕತ್ತರಿಸಿ ಕರೆದುಕೊಳ್ಳುತ್ತೇವಲ್ಲ? ಆದರೆ ಈತನಿಗೆ ಸೇನೆಯ ಇತರ ಗೆಳೆಯರು ನಿಕ್ ನೇಮ್ ಅಂತ ಬೇರೆಯದೇ ಹೆಸರಿಟ್ಟಿದ್ದರು, ‘ಶೇರ್ ಷಾ’ ಅಂತ. ‘ಸಿಂಹಗಳ ರಾಜ’ ಅಂತ! ಇವತ್ತಿಗೂ ಸೇನಾ ಪರಿಣಿತರು ಆವತ್ತು ವಿಕ್ರಮ್ ಬಾತ್ರಾ Point 4875 ಎಂಬ ಬೆಟ್ಟದ ತುದಿಯಲ್ಲಿ ಶತ್ರುಗಳ  ಮೇಲೆ ನುಗ್ಗಿದ ಪರಿಯನ್ನು ಅತಿಮಾನುಷ ಅಂತಲೇ ಪರಿಗಣಿಸುತ್ತಾರೆ. ಈತನ ಜಾಗದಲ್ಲಿ ಮತ್ತೊಬ್ಬ ಸೈನಿಕನಿದ್ದಿದ್ದರೆ ಹಾಗೆ ಮಾಡುತ್ತಿರಲಿಲ್ಲವೇನೋ ಅಂತ ನಂಬುತ್ತಾರೆ! ಇದಕ್ಕೂ ಮೊದಲು, ಅಂದರೆ ಅದೇ ವರ್ಷದ(೧೯೯೯) ಜೂನ್ 20 ರಂದು ಮತ್ತೊಂದು ಕಾರ್ಯಾಚರಣೆಯಲ್ಲಿ  ಇದೇ ಕ್ಯಾಪ್ಟನ್ ಬಾತ್ರಾ ಭಾಗವಹಿಸಿದ್ದರು . ಅದು Point 5140 ಎಂಬ ಬೆಟ್ಟವನ್ನು ವಶಪಡಿಸಿಕೊಳ್ಳುವ ಸಲುವಾಗಿ.  ನಂಬಿ, ಅವರು  ತನ್ನ ದೇಶವನ್ನ ಯಾವ ರೇಂಜಿಗೆ ಪ್ರೀತಿಸುತ್ತಿದ್ದರೆಂದರೆ, ಅಂದು ಅವರು in hand to hand fight ಐವರು ದುಷ್ಮನ್ ಗಳನ್ನ ಹೊಡೆದು ಹಾಕಿದ್ದರು! ‘ಶೇರ್ ಷಾ’ ಅಂತ ಚಂದಕ್ಕೆ ಕರೆಯುತ್ತಾರಾ?

‘LOC ಕಾರ್ಗಿಲ್’ ಎಂಬ ಹಿಂದಿ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಕ್ರಮ್ ಬಾತ್ರಾ ರ ಪಾತ್ರ ಮಾಡಿದ್ದಾರೆ. ಒಮ್ಮೆ ನೋಡಿ. Point 5140 ಎಂಬ  ಬರೋಬ್ಬರಿ 17000 ಅಡಿಗಳ ಎತ್ತರದ ಬೆಟ್ಟ ಭಾರತದ ಪಾಲಾಯಿತು! ಅದೇ ಗೆಲುವಿನ ಹುಮ್ಮಸ್ಸಿನಲ್ಲೇ, ಅದೇ ದೇಶಪ್ರೇಮದ ತುಂಬುಮನಸ್ಸಿನಲ್ಲೇ Point 4875 ದ ಕಾರ್ಯಾಚರಣೆಗೂ ತೆರಳಿದ್ದರು. ಅದೇ ಮೊದಲನೇ ಪ್ಯಾರಾದಲ್ಲಿ ವಿವರಿಸಿದ ಕಾರ್ಯಾಚರಣೆ.  Point 4875 ಭಾರತದ ವಶಕ್ಕೆ ಬಂತು. ಆದರೆ ತೆಗೆದುಕೊಂದು ಬಂದ ಸೇನೆಯ ಕಪ್ತಾನ ವಿಧಿಯ ವಶಕ್ಕೆ ಹೋಗಿಬಿಟ್ಟಿದ್ದ! ಆವತ್ತು ಆ Point 4875 ಪಾಕಿಸ್ತಾನಿಯರ ಪಾಲಿಗೆ ಸುಲಭ ಸ್ವಪ್ನವಾಗಿತ್ತು. ಭಾರತೀಯ ಸೇನೆಯ ಪ್ರತೀ ಚಲನವಲನವೂ ಅದಕ್ಕೆ ಸ್ಫುಟವಾಗಿ ಕಾಣುತ್ತಿತ್ತು. ಭಾರತೀಯರಿಗೆ ತದ್ವಿರುದ್ಧ ಪರಿಸ್ಥಿತಿ! ಇದನ್ನೆಲ್ಲಾ ಅರಿತೆ ಪಾಪಿ ಪಾಕಿಸ್ತಾನ ನುಸುಳಿ ಬಂದಿತ್ತು. ಲೆಫ್ಟಿನೆಂಟ್ ನವೀನರ ಕಾಲಿಗೆ ಗ್ರೇನೇಡ್ ಒಂದು ಬಿದ್ದು ಘೋರ ಗಾಯವಾಯಿತು. ಅವರನ್ನು evacuate ಮಾಡಿದ ಬಾತ್ರಾ ಆ ಕ್ಷಣಕ್ಕೆ ಏಕಾಂಗಿಯಾಗಿ  ಶತ್ರುವಿನೆಡೆಗೆ ಓಡೋಡುತ್ತಾ  ಅವರ ಮೈಮೇಲೆರಗಿದರು.ಇದೊಂದು ತೀರಾ ಅನಿರೀಕ್ಷಿತವಾದ ನಡೆ! ಯಾರೂ ಅಷ್ಟೊಂದು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅದು ಬಾತ್ರಾಗೆ ಗೊತ್ತಿತ್ತು. ಶತ್ರು ಆ ಕ್ಷಣಕ್ಕೆ ಅಕ್ಷರಷಃ ಗಲಿಬಿಲಿಗೊಂಡ. ಬಾತ್ರಾ ಗೆ ಅದೇ ಬೇಕಿತ್ತು. ತೀರಾ ಹತ್ತಿರಕ್ಕೆ ನುಗ್ಗಿ ಒಬ್ಬಬ್ಬರಾಗಿ ಐದು ಪಾಕ್ ಸೈನಿಕರನ್ನು ಸುಟ್ಟು ಹಾಕಿದರು! ಆದರೆ ಶತ್ರುವಿನ ಪ್ರತಿಗುಂಡಿಗೆ ಬಾತ್ರ ತೀವ್ರವಾಗಿಯೇ ಗಾಯಗೊಂಡಿದ್ದರು. ಹಿಂಗಾದಾಗ ಸಾಮಾನ್ಯವಾಗಿ ಅವರನ್ನು evacuate ಮಾಡಲಾಗುತ್ತೆ. ಬಾತ್ರ ಒಪ್ಪಬೇಕಲ್ಲ?’ಸಿಂಹಗಳ ರಾಜ’ ಸಿಂಹಾಸನ ತೊರೆಯಲಿಲ್ಲ. ಇನ್ನೂ ಧೈರ್ಯದಿಂದ ಶತ್ರುವಿನೆಡೆಗೆ ನುಗ್ಗಿದರು. ಈಗ ಶತ್ರು ಶಾಕ್ ನಿಂದ ಹೊರಬಂದಿದ್ದ. ಎಚ್ಚೆತ್ತಿದ್ದ. ಎಲ್ಲೋ ದೂರದಿಂದ ಬಂದ ಶತ್ರುವಿನ artillery gun ನ ಅಸ್ತ್ರ ಬಾತ್ರಾರ ಎದೆಯನ್ನು ಸೀಳಿ ಹೋಯಿತು. ಬಾತ್ರ  ಕುಸಿದುಬಿದ್ದರು. ಅಸುನೀಗಿದರು.

ಹಾರಿ ಬರುತ್ತಿರುವ ದೊಡ್ಡ ಗುಂಡನ್ನು ತಪ್ಪಿಸಿಕೊಂಡು ಮತ್ತೆ ಎದ್ದು ಕೂಲಿಂಗ್ ಗ್ಲಾಸ್ ಸರಿಮಾಡಿಕೊಳ್ಳಲು ಬಾತ್ರಾ ಏನು ನಮ್ಮ ಸಿನೆಮಾ ಹೀರೋ ಅಲ್ಲವಲ್ಲ? ‘ಸಿಂಹಗಳ ರಾಜ’ ಸಿಂಹಾಸನ ತೊರೆಯಲಿಲ್ಲ, ಲೋಕವನ್ನೇ ತೊರೆದಿದ್ದ! ರೊಚ್ಚಿಗೆದ್ದಿದ್ದ ಸೈನಿಕರಲ್ಲಿ ದುಃಖವೂ ಜೊತೆಯಾಯಿತು. ಮಾದರಿಯಾಗಿ ಕಪ್ತಾನನೂ ಶೌರ್ಯ ತೋರಿಸಿದ್ದ. ನಡೆದ ಕಾಳಗದಲ್ಲಿ ಪಾಕಿಸ್ತಾನ ನೆಲಕಚ್ಚಿತು.  Point 4875 ಭಾರತದ ಕೈವಶವಾಯಿತು. “ಹಾರಿ ಬರುತ್ತಿರುವ ದೊಡ್ಡ ಗುಂಡನ್ನು ತಪ್ಪಿಸಿಕೊಂಡು ಮತ್ತೆ ಎದ್ದು ಕೂಲಿಂಗ್ ಗ್ಲಾಸ್ ಸರಿಮಾಡಿಕೊಳ್ಳಲು ಬಾತ್ರಾ ಏನು ನಮ್ಮ ಸಿನೆಮಾ ಹೀರೋ ಅಲ್ಲವಲ್ಲ?” ಅಂತ ಬರೆಯುವಾಗ ನಮ್ಮೆಲ್ಲರ ಮನಸ್ಥಿತಿಯ ಬಗ್ಗೆ ಜುಗುಪ್ಸೆ ಹುಟ್ಟಿತು.  “….. ಸಚಿನ್ ನ ಮಗನ ಹೆಸರು ಸಹಿತ ಗೊತ್ತಿರುತ್ತೆ! ಶಾರೂಕ್ ನ ಇಷ್ಟದ ರೆಸಪಿ, ದೀಪಿಕಾಳ ಮುಂದಿನ ಚಿತ್ರ, ಸಲ್ಮಾನ್ ನ ಅದಕ್ಕೂ ಮುಂದಿನ ಚಿತ್ರ ಇವೆಲ್ಲ ನಮಗೆ ಚೆನ್ನಾಗಿ  ಗೊತ್ತಿರುತ್ತೆ!….”  ಅಂತ ಹಿಂದೆ ನನ್ನದೇ ಒಂದು ಲೇಖನದಲ್ಲಿ ಬರೆದದ್ದು ನೆನಪಾಯಿತು. ಇವೆಲ್ಲ ಗೊತ್ತಿರುವ ನಮಗೆ ಕಸಬ್ ನನ್ನು ಸಜೀವ ಹಿಡಿದ ಕಾನ್ಸ್ಟೇಬಲ್ ತುಕಾರಾಂ ಒಂಬ್ಳೆಯ ಹೆಸರು ಗೊತ್ತಿರೋಲ್ಲ ಅಂತ ಬರೆಯುವಾಗ ಹಾಗೆ ಬರೆದಿದ್ದೆ.

ನಮ್ಮಲ್ಲೆಷ್ಟೋ ಜನಕ್ಕೆ ಬಾತ್ರಾ ಹಾಗೂ ಆತನಂತವರು ಇವತ್ತಿಗೂ ಗೊತ್ತಿಲ್ಲ. ನಾನೂ ಹಿಂದೆ ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ್ ನಲ್ಲಿ ಇವರ ಶೌರ್ಯದ ಬಗ್ಗೆ  ಕೇಳಿದ್ದೆ ಅಷ್ಟೆ.  ಇವತ್ಯಾವಾಗಲೋ ಪೇಪರ್ ಓದುತ್ತಿದ್ದಾಗ ಅದರ ಪುರವಣಿಯ ಒಂದು ಮೂಲೆಯಲ್ಲಿ, ಅದರಲ್ಲೂ ಪುಣ್ಯತಿಥಿ  ಎಂಬ ಸಾಮಾನ್ಯಾತಿ ಸಾಮಾನ್ಯ ಕಾಲಮ್ಮಿನಲ್ಲಿ ಬಾತ್ರಾ ಪುಣ್ಯತಿಥಿ ಇಂದು ಅಂತ ಗೊತ್ತಾಯಿತು! ನಂತರ ಪೂರಕ  ವಿಷಯ ಸಂಗ್ರಹಿಸಿ ಇವತ್ತೇ ಬರೆಯಬೇಕು ಅಂತ ಅಂದುಕೊಂಡಿದ್ದ ಲೇಖನ ಈಗ ರಾತ್ರಿ 12:45 ಮುಗಿದಿದೆ. ಇಷ್ಟೆಲ್ಲ  ನಾನು, ನನ್ನ ಸ್ನೇಹಿತರು, ಓದುಗರು ನೆನಪಿಸಿಕೊಳ್ಳಲೇ ಬೇಕು ಎಂಬ ಆಶಯದ ಹಠ ಅಷ್ಟೆ. ಯಾರೋ ಡೈರೆಕ್ಟರ್ ಹೇಳಿದಂತೆ ನಟಿಸುವ ನಟ ಸಮಾಜದ ಹೀರೋ ಆಗಿಬಿಡುತ್ತಾನೆ. ತಲೆಯಿಂದ ಕಾಲಿನವರೆಗೆ ಭ್ರಷ್ಟರನೇಕರು ಜನಮನ್ನಣೆ ಗಳಿಸಿಬಿಡುತ್ತಾರೆ. ತಮ್ಮ ಜನುಮದಿನಕ್ಕೆ ದೊಡ್ಡ ದೊಡ್ಡ ಹಾರ ಹಾಕಿಸಿಕೊಂಡು ಬಿಡುತ್ತರೆ. ಕೊನೆಗೆ ದುಡ್ಡಿನ ಹಾರವನ್ನೂ ಹಾಕಿಸಿಕೊಂಡು ಬಿಡುತ್ತಾರೆ. ನಾಚಿಕೇಡು!

ಯೋಧರು ಪ್ರಾಣಕೊಟ್ಟು ಉಳಿಸಿದ ದೇಶಕ್ಕೆ ನಾವೂ ದುಡಿಯಬೇಕು ಅಂತ ಅನ್ನಿಸೊಲ್ಲ, ನಮಗೆ ವಿದ್ಯಾರ್ಥಿಗಳಿಗೆ! google, facebook ಗಳಲ್ಲಿ ಪ್ಲೇಸ್ ಆಗಬೇಕು ಅಂತ ಬಯಸುತ್ತೇವೆ. ಅತ್ಯಂತ ಕೆಟ್ಟ ಸಂಗತಿ ಏನು ಗೊತ್ತಾ? ಅದೇ ಪಾಪಿಸ್ತಾನದ ಪ್ರಧಾನಿಯ ಭೇಟಿ ಮಾಡಲು, ಬೆಣ್ಣೆ ಹಚ್ಚಲು ಪಕ್ಷಬೇಧ ಮರೆತು  ನಮ್ಮ ಎಲ್ಲ ಪ್ರಧಾನಿಗಳೂ ಹಾತೊರೆಯುತ್ತಾರೆ. ಕಾಂಗ್ರೆಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ  ಕೋಸ್ಟ್ ಗಾರ್ಡ್ ಅನ್ನೇ ಧಿಕ್ಕರಿಸಿ ನೀವು ಉಡಾಯಿಸಿದ್ದು ಪಾಕಿಸ್ತಾನೀ ಉಗ್ರರ ಬೋಟ್ ಅಲ್ಲವೇ ಅಲ್ಲ ಅನ್ನುತ್ತೆ! ಅದಕ್ಕೆ ಬೇಡದ ಸಮಯದಲ್ಲಿ ವೋಟ್ ಬ್ಯಾಂಕ್ ನೆನಪಾಗಿಬಿಡುತ್ತೆ.  ಅಂದಹಾಗೆ ನಾಡಿದ್ದು ಮತ್ತೆ  ರಷ್ಯಾದಲ್ಲಿ ಮೋದಿ ಶರೀಫ್ ರನ್ನು ಭೇಟಿಯಾಗಲಿದ್ದಾರೆ. ಆ ನಿಸ್ಸಾರ ಗೆಳೆತನಕ್ಕೆ ಪುಷ್ಟಿ ನೀಡಲು! ಕೆಲವೇ ತಿಂಗಳುಗಳ ಹಿಂದೆ ಯೋಧನೊಬ್ಬ ಹುತಾತ್ಮನಾದಾಗ ಆತನ ಪುಟ್ಟ ಕುವರಿ ಅವಳ ತಂದೆಯ ಶವದ ಮುಂದೆ ನಿಂದು ದೇಶಭಕ್ತಿಯ ಘೋಷಣೆ ಕೂಗಿದಾಗಲಾದರೂ ನಮಗೆ ಬಲಿದಾನಗಳ ಮಹತ್ವ ಅರಿವಾಗ ಬೇಕಿತ್ತು. ಏನೇ ಹೇಳಿ ನಮ್ಮದು, ದಪ್ಪ ಚರ್ಮ, ಸ್ಸಾರಿ..!

ಕೊನೆಗೊಂದು ಸಾಲು. ‘ಯೇ ದಿಲ್ ಮಾಂಗೇ ಮೋರ್’! ಇದು ವಿಕ್ರಮ್ ಬಾತ್ರಾ ರ ಇಷ್ಟದ ಘೋಷಣೆ.  ಹುತಾತ್ಮರೂ ಮೇಲೆ ತಮಗೆ ಸಿಗುವ ಗೌರವ ಸ್ಮರಣೆಯ ಬಗ್ಗೆ  ಹಿಂಗೆ ಅಂದುಕೊಂಡಿರಬಹುದಾ – ‘ಯೇ ದಿಲ್ ಮಾಂಗೇ ಮೋರ್’ ಅಂತ! ಇರಲಿಕ್ಕಿಲ್ಲ. ಅವರು ನಿಸ್ವಾರ್ಥಿಗಳು. ಇಲ್ಲಾದರೆ ಇಂಥದ್ದೊಂದು ಕೃತಘ್ನ ಸಮಾಜಕ್ಕಾಗಿ  ಅವರು ಪ್ರಾಣ ಕೊಡುತ್ತಿದ್ದರಾ?

ಚಿತ್ರಕೃಪೆ : Indiasalutes

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments