ಸೌರ ವಿದ್ಯುತ್ ಅವಕಾಶಗಳು
– ಗೋವಿಂದ ಭಟ್
ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.
ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.
ಸೌರ ಫಲಕಗಳು ಸಿಕ್ಕ ಕೂಡಲೇ ಪಂಪಿನ ಜತೆ ರಾತ್ರಿ ಉರಿಸಲು ಕೆಲವು ಸೌರ ದೀಪಗಳನ್ನೂ ವಿಧ್ಯುತ್ ಕಡಿತದ ಸಮಯದಲ್ಲಿ ಮನೆಯಾಕೆಗೆ ಅಕ್ಕಿ ಅರೆಯಲು, ಮಕ್ಕಳಿಗೆ ಸಚಿನ್ ಚೆಂಡು ಬಾರಿಸುವುದರ ನೋಡಲು ಮತ್ತು ನನ್ನ ಗಣಕಯಂತ್ರ ಉಪಯೋಗಿಸುವಂತೆ ವ್ಯವಸ್ಥೆ ಮಾಡಿಕೊಂಡೆ. ಹಗಲು ಶಕ್ತಿಯ ಒಳಹರಿವಿಂದಾಗಿ inverter ಸಹಾ ಹೆಚ್ಚು ಕಾಲ ಉಪಯೋಗಿಸಲು ಸಾದ್ಯವಾಯಿತು. ಇಷ್ಟಾದ ನಂತರ ವ್ಯರ್ಥವಾಗುತ್ತಿರುವ ಉಳಿಕೆ ವಿದ್ಯುತ್ ಬಗೆಗೆ ನನ್ನ ಗಮನ ಹರಿಯಿತು. ನನ್ನ ಫಲಕದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ತಿನ ಸಂಪೂರ್ಣ ಬಳಕೆ ಕನ್ನಡಿಯೊಳಗಿನ ಗಂಟು ಎಂಬ ವಿಚಾರ ಕ್ರಮೇಣ ಅರಿವಾಯಿತು.
ಯುರೋಪ್ ಅಮೇರಿಕದಲ್ಲಿರುವಂತೆ ಇಲ್ಲೂ ಬಿಸಿಲು ಇರುವಾಗ ಹೆಚ್ಚಿನ ವಿದ್ಯುತ್ ಜಾಲಕ್ಕೆ ಹಾಯಿಸಿ ರಾತ್ರಿ ಪಡಕೊಳ್ಳುವಂತಿದ್ದರೆ ಚೆನ್ನ. ಹಾಗೆ ಸಾದ್ಯವಾದರೆ ಮನೆಯಲ್ಲಿ ಉಳಿದ ಹೆಚ್ಚುವರಿ ಹಾಲು ನಾವು ಹಾಲಿನ ಸೊಸೈಟಿಗೆ ಹಾಕುವಂತೆ ಸರಳ ವ್ಯವಹಾರ. ನಮಗೆ ಬಾಟರಿಗಳಲ್ಲಿ ಶೇಖರಿಸುವ ಹಾಗೂ ಪರಿವರ್ತಿಸುವ ಉಪಕರಣಗಳು ಮುಂತಾದ ಅನಗತ್ಯ ದುಬಾರಿ ಖರ್ಚುಗಳು ತಪ್ಪುತ್ತದೆ ಹಾಗೂ ಲಬ್ಯವಿದ್ದರೂ ಅವುಗಳ ಗುಣಮಟ್ಟ ತೃಪ್ತಿದಾಯಕ ಎನ್ನುವಂತಿಲ್ಲ. ಆದರೆ ಜಾಲಕ್ಕೆ ವಿದ್ಯುತ್ ಹಾಯಿಸಲು ಎರಡು ಅಡಚಣೆಗಳು ನಮ್ಮ ಮುಂದಿವೆ.
ಅಪಾಯಕಾರಿ ಸನ್ನಿವೇಶಗಳ ತಪ್ಪಿಸಲು ಎನ್ನುವ ಕಾರಣಕ್ಕೆ ಜಾಲಕ್ಕೆ ವಿದ್ಯುತ್ ಹಾಯಿಸಬೇಕಾದರೆ ಯಾವಾಗಲು ವಿದ್ಯುತ್ ಇರಲೇಬೇಕು ಎಂಬುದು ಸ್ಪಷ್ಟ. ರಿಪೇರಿಗೆಂದು ನಿಲುಗಡೆ ಮಾಡಿದಾಗ ನಾವು ವಿದ್ಯುತ್ ಹಾಯಿಸಿದರೆ ಕೆಲಸಗಾರರ ಜೀವಕ್ಕೆ ಅಪಾಯ. ಆದರೆ ನಮ್ಮಲ್ಲಿ ಸೆಕೆಗಾಲದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಸೌರಫಲಕದಲ್ಲಿ ಉತ್ಪನ್ನ ಎರಡೂ ಅದಿಕವಾಗಿರುವಾಗ ಹಳ್ಳಿ ಕಡೆ ವಿದ್ಯುತ್ ಕಡಿತ ಇರುತ್ತದೆ ಎನ್ನುವ ವಿಚಾರ ಜಾಲಕ್ಕೆ ನಮ್ಮಿಂದ ವಿದ್ಯುತ್ ಹಾಯಿಸುವುದು ಅಸಾದ್ಯವಾಗಿಸುತ್ತದೆ. . ನಾವು ಜಾಲಕ್ಕೆ ಹುಯ್ಯುವ ವಿದ್ಯುತ್ತಿನ ಪ್ರಮಾಣ ಜಾಲದ ಮಟ್ಟಿಗೆ ಅತ್ಯಲ್ಪ. ಅದುದರಿಂದ ಅದಕ್ಕಾಗಿ ಜಾಲದಲ್ಲಿ ವಿದ್ಯುತ್ ಹಾಯಿಸಿ ಎಂದು ಕೇಳಲು ಸಾದ್ಯವಿಲ್ಲ.
ಎರಡನೆಯ ಸಿಮಿತಗೊಳಿಸುವ ವಿಚಾರ ಎಂದರೆ ನಾವು ಕಳುಹಿಸುವ ವಿದ್ಯುತ್ ಶಕ್ತಿಯ ತರಂಗಗಳು ಜಾಲದ ತರಂಗಗಳಿಗೆ ಹೊಂದಾಣಿಕೆಯಾಗ ಬೇಕು. ಅಲ್ಲಿ phase difference ಇರಲೇಬಾರದು. ಇದರ ತಾಂತ್ರಿಕತೆಯ ಬಗೆಗೆ ಇನ್ನೂ ನನಗೆ ಖಚಿತ ಮಾಹಿತಿ ಲಬ್ಯವಿಲ್ಲ. ಪಶ್ಚಿಮದ ದೇಶಗಳಲ್ಲಿ ಇವು ಮಿತ ದರದಲ್ಲಿ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.
ಜರ್ಮನಿಯಲ್ಲಿ 1999ರಲ್ಲಿ ತಂದ ಕಾನೂನು ತಿದ್ದುಪಡಿ ಜಾಲಕ್ಕೆ ವಿದ್ಯುತ್ ಹಾಯಿಸುವುದಕ್ಕೆ ಸುಗಮವಾಗಿಸಿ ಇಂದು ಅಲ್ಲಿ ಎಲ್ಲೆಡೆ ವಿದ್ಯುತ್ ಮಟ್ಟಿಗೆ ಸ್ವಾವಲಂಬಿಗಳನ್ನು ಕಾಣಬಹುದು. ಇಂದು ಈ ಕೈಗಾರಿಕೆ ದೇಶದಲ್ಲಿ 2 ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸಿರುವುದು ಮಾತ್ರವಲ್ಲ ಒಟ್ಟು ದೇಶದ ವಿದ್ಯುತ್ ಉತ್ಪಾದನೆಯ ಶೇಕಡಾ ಹನ್ನೆರಡರಷ್ಟು ಹೀಗೆ ಜನಸಾಮಾನ್ಯರ ಸೌರ ಫಲಕಗಳು ಹಾಗೂ ಗಾಳಿ ಯಂತ್ರಗಳಿಂದಲೇ ತಯಾರಾಗುತ್ತಿದೆ. ಜಗತ್ತಿನ ಸೌರ ಹಾಗೂ ಪವನ ಶಕ್ತಿ ಉಪಕರಣಗಳ ತಯಾರಿಕೆಯಲ್ಲಿ ಶೇಕಡ 30 ರಷ್ಟು ಪಾಲು ಇಂದು ಜರ್ಮನಿ ಹೊಂದಿರುತ್ತದೆ. ಅಲ್ಲಿ ಇತರ ಮೂಲಗಳ ವಿದ್ಯುತ್ ಯುನಿಟ್ ಒಂದಕ್ಕೆ ರೂಪಾಯಿ 3 ಕ್ಕೆ ಜಾಲ ಪಡಕೊಂಡರೆ ಸೌರ ಹಾಗೂ ಪವನ ಶಕ್ತಿ ಮೂಲದ ವಿದ್ಯುತ್ತಿಗೆ ಈಗ ರೂಪಾಯಿ 6 ರಷ್ಟು ಬೆಂಬಲ ಬೆಲೆ ಇರುತ್ತದೆ. ಈ ಪ್ರೋತ್ಸಾಹಕ ಬೆಂಬಲ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು ಕೊನೆಗೊಮ್ಮೆ ಇತರ ವಿದ್ಯುತ್ ಮೂಲಗಳ ಜತೆ ಸ್ಪರ್ದಿಸಲು ಒತ್ತಡ ಇರುತ್ತದೆ.
ಅಮೇರಿಕದ ಕಾಲಿಪೋರ್ನಿಯದಲ್ಲಿ ಒಂದು ಸೌರಫಲಕಗಳ ಅಳವಡಿಸುವ ಸಂಸ್ಥೆ ನೀವು ದೂರವಾಣಿಯಲ್ಲಿ ಸೂಚನೆ ಕೊಟ್ಟ ಕ್ಷಣದಲ್ಲಿ ಕಾರ್ಯಮುಖವಾಗುತ್ತದೆ. ನಿಮ್ಮ ಮನೆಯ ಛಾವಣಿಯ ಗೂಗಲ್ ಉಪಗ್ರಹ ಚಿತ್ರವನ್ನು ನೋಡಿ ಅಲ್ಲಿ ಯಾವ ರೀತಿ ಮತ್ತು ಎಷ್ಟು ಫಲಕಗಳ ಅಳವಡಿಸಬಹುದೆಂಬ ಸ್ಪಷ್ಟ ಯೋಜನೆ ಅವರ ಕಛೇರಿಯಲ್ಲೇ ತಯಾರಾಗುತ್ತದೆ. ಅವರು ಸಂಪೂರ್ಣ ಮಾಹಿತಿಯೊಂದಿಗೆ ಬಂದು ನಿಮ್ಮೊಂದಿಗೆ ಸಂವಾದಕ್ಕೆ ಕೂರುತ್ತಾರೆ. ನಿಮ್ಮ ಸಂಶಯಗಳನ್ನೆಲ್ಲ ಪರಿಹರಿಸುತ್ತಾರೆ. ದೊಡ್ಡ ವ್ಯವಸ್ಥೆಯಾದರೆ ದೈನಿಂದಿನ ನಿರ್ವಹಣೆಯಲ್ಲೂ ಸಹಾಯ ಮಾಡುತ್ತಾರೆ. ಹೀಗೆ ಅಲ್ಲಿ ಇದೊಂದು ಬೆಳೆಯುತ್ತಿರುವ ಉದ್ಯಮ.
ನಮ್ಮ ಸರಕಾರ ನಮ್ಮಲ್ಲಿ ತಯಾರಾಗುವ ಆದರೆ ಹಿಡಿದಿರಿಸಿಕೊಳ್ಳಲು ಸಾದ್ಯವಾಗದೆ ನಷ್ಟವಾಗುವ ವಿದ್ಯುತ್ ಪಡಕೊಳ್ಳುವ ಕಾಲ ಇನ್ನೂ ಬಂದಿಲ್ಲ. ಹಾಗಾಗಿ ನಮ್ಮ ಮುಂದಿರುವ ಇತರ ಅವಕಾಶಗಳ ಪರಿಶೀಲನೆ ಮಾಡೋಣ.
ಪಂಪು 48 V ಅಪೇಕ್ಷಿಸಿದರೆ ನಮ್ಮ ಮಾಮೂಲಿ ಉಪಕರಣಗಳೆಲ್ಲವೂ 12 V ನವು. ನಮ್ಮಲ್ಲಿ 48V ಹಾಗೆಯೇ ಬಳಸಿದರೆ ಉಪಕರಣ ದುಬಾರಿ ಮತ್ತು ಎಲ್ಲ ಫಲಕವನ್ನು 12V ಕ್ಕೆ ಪರಿವರ್ತಿಸಿದರೆ ಬೆರಳ ಗಾತ್ರದ ದುಬಾರಿ ಸರಿಗೆಯಲ್ಲಿ ಹಾಯಿಸುವುದು ಅನಿವಾರ್ಯ ಎನ್ನುವ ದ್ವಂದ್ವಕ್ಕೆ ಒಳಗಾದೆ. ಹೀಗೆ ಒಮ್ಮೆ ಹೆಚ್ಚಿನ ಬಳಕೆಗೆ ಸಹಾಯವಾಗಲು ಒಂದು 48V invertor ಸಹಾ ಪಡಕೊಂಡೆ. ಅದು ಆನೆ ಗಾತ್ರದ ಕಾರಿನಲ್ಲಿ ಕೊತ್ತಂಬರಿ ಸೊಪ್ಪು ತರಲು ಹೋದದ್ದು ಎನ್ನುವಂತಾಯಿತು. ಕಡಿಮೆ ವಿದ್ಯುತ್ ಬಳಸುವ ಸಮಯದಲ್ಲಿ ಶಕ್ತಿಯ ಬಹು ಅಂಶ ಅದುವೇ ಕಬಳಿಸುತ್ತದೆ ಹಾಗೂ ನನ್ನ ಉಪಯೋಗಕ್ಕೆ ಸಿಗುವುದು ಕಡಿಮೆ ಎನ್ನುವ ವಿಚಾರ ಕ್ರಮೇಣ ಅನುಭವಕ್ಕೆ ಬಂತು. ಹಗಲ ಉಪಯೋಗಕ್ಕಿಂತ ರಾತ್ರಿ ನಾನು ಬಾಟರಿಯಲ್ಲಿ ತುಂಬಿಸಿಟ್ಟ ವಿದ್ಯುತ್ ಉಪಯೋಗದಲ್ಲಿ ಜಾಗ್ರತೆ ವಹಿಸಲೇ ಬೇಕು.
ನಮಗೆ ಬೇಕಾದಷ್ಟು ಶಕ್ತಿಯನ್ನು ಬಳಸಲು ಅನುಕೂಲವಾಗಲೆಂದು 12 ಯಾ 48 volt ಲಬ್ಯವಾಗುವಂತೆ dipole relay ಗಳನ್ನು ಸೌರ ಫಲಕದಲ್ಲಿ ಗೆಳೆಯ ಅಶೋಕ ಅಳವಡಿಸಿದ. ಸುಮಾರು ಒಂದು ವರುಷ ಅವುಗಳು ಶಕ್ತಿ ಪೊರೈಕೆ ವಿಚಾರ ಚೆನ್ನಾಗಿ ಕೆಲಸ ಮಾಡಿದವು ಅನಂತರ ಅವುಗಳ contacts ಸುಟ್ಟು ಹೋದಂತಾಗಿ ಕ್ಷಮತೆ ಕಳಕೊಂಡವು. ಅದುದರಿಂದ ನಾನು ಅವುಗಳನ್ನು ಕಳಚುವುದು ಅನಿವಾರ್ಯವಾಯಿತು.
ಸೌರ ಫಲಕಗಳಿಂದ ಬರುವ ವಿದ್ಯುತ್ ಶಕ್ತಿಯ ನಿಯಂತ್ರಣ ಬಹಳ ಅಗತ್ಯ. ತಯಾರಿ, ದಾಸ್ತಾನು ಮತ್ತು ಬೇಡಿಕೆಗಳ ಹೊಂದಾಣಿಕೆ ನಿರ್ವಹಿಸುವ ಈ charge controllers ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲವಾದರೆ ನಮ್ಮ ಬಾಟರಿ ಅತಿ ಹೆಚ್ಚು ಚಾರ್ಜ್ ಆಗಿ ಹಾಳಾಗಬಹುದು. ನಮ್ಮಲ್ಲಿ ಪುಟ್ಟ ಫಲಕಗಳಿಂದ ಬರುವ 12V ನಿಯಂತ್ರಣಕ್ಕೆ ಬೇಕಾದ ಉಪಕರಣ ಊರಲ್ಲಿಯೇ ದೊರಕುತ್ತದೆ. ಆದರೆ ಹೆಚ್ಚು ವಿಧ್ಯುತ್ (30 A) ಅಥವಾ ಹೆಚ್ಚು ವೊಲ್ಟೇಜ್ (48 V) ಎರಡಕ್ಕೂ ಮಾರಾಟಗಾರರಲ್ಲಿ ಸ್ಪಷ್ಟ ಉತ್ತರವಿಲ್ಲ. ಬೇಕಾದ ಬಿಡಿ ಬಾಗ ಲಬ್ಯವಿಲ್ಲ ಮತ್ತು ಯಾರಿಗೂ ಬಿನ್ನ ಹಾದಿಯಲ್ಲಿ ಸಾಗುವ ಆಸಕ್ತಿಯೂ ಇಲ್ಲ. ನನ್ನ ಬೇಡಿಕೆ ಮೇಲೆ ಬೆಂಗಳೂರಿನಲ್ಲಿ ತಯಾರಾದ ಒಂದು 48 V charge controller ಗುಣಮಟ್ಟ ಸಮದಾನಕರವಲ್ಲ.





ನಮ್ಮಲ್ಲಿಯೂ ಸೌರ ವಿದ್ಯುತ್ ತಯಾರಿಸ ಬಹುದು ಸರ್. ತಯಾರಿಸುದಕ್ಕೆ ಅವಕಾಶ ನೀಡಿದರೆ ನಮ್ಮ ಜನರು ನೆಮ್ಮದಿಯಿಂದ ಬದುಕಿಬಿಡುತ್ತಾರೆ ಎನ್ನುವ ಭಯ. ಈಗ ನೋಡಿ ನಮ್ಮ ಉಡುಪಿಯ ಜನರಿಗೆ ಬಂದಿರೋ ಗತಿ. ಇದನ್ನು ನೋಡಿ ಸರಕಾರವರ ಹೊಟ್ಟೆ ತುಂಬುತಿರಬಹುದು. ನಿಮ್ಮ ಲೇಖನಕ್ಕಾಗಿ ಧನ್ಯವಾದಗಳು.
ನನಗೆ ಇದರಲ್ಲಿ ಆಸಕ್ತಿಯಿದೆ. ಆದರೆ ತಾಂತ್ರಿಕ ತಿಳುವಳಿಕೆ ಏನೂ ಇಲ್ಲ. ಕಲಿಯುವ, ಬಳಸುವ ಮತ್ತು ಪ್ರಚಾರಕ್ಕೆ ತರುವ ಉತ್ಸಾಹವಿದೆ. ಸನಿಮ್ಮ ಸಂಪರ್ಕದಲ್ಲಿರಲು ಬಯಸುತ್ತೇನೆ. prasanna(at)kakunje(dot)com
ಗೋವಿಂದ ಭಟ್ಟರ ಬಗ್ಗೆ ಅವರ ಬ್ಲಾಗ್, ಕೆಂಡಸಂಪಿಗೆ ಮುಂತಾದ ಕಡೆ ಓದಿದ್ದೇನೆ. ಅವರ ಜೀವನೊತ್ಸಾಹ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ, ಅನ್ವೇಷಿಸುವ ಶೃದ್ಧೆ ನಮಗೆ ಆದರ್ಶ.
ಸೌರವಿದ್ಯುತನಿಂದ ನಮ್ಮ ವಿದ್ಯುತ ಕೊರತೆಯ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿವಾರಿಸಿಕೊಳ್ಳಲು ಸಾಧ್ಯವಿದೆ. ಮೊನ್ನೆಯಷ್ಟೆ ಪ್ರಜಾವಾಣಿಯಲ್ಲಿ ಗ್ರಾಮೀಣ ಜನರಿಗೆ ಕಡಿಮೆ ಖರ್ಚಿನಲ್ಲಿ ಸೌರ ವಿದ್ಯುತ್ತಿನ ಪ್ರಯೋಜನಗಳನ್ನು ಒದಗಿಸುತ್ತಿರುವ ನೀಲವಣ್ಣನ್ ಮತ್ತು ಉಮಾಮಣಿ ದಂಪತಿಗಳ ಬಗ್ಗೆ ಓದಿದ್ದೆ. ಹಾಗಯೇ ಧಾರವಾಡದ ಒಬ್ಬರು (ಹೆನರು ನೆನಪಿಗೆ ಬರುತ್ತಿಲ್ಲ) ಹಳ್ಳಿಗಳನ್ನು ಸೀಮೆಯೆಣ್ಣೆ ಕಂದಿಲುಮುಕ್ತ ಮಾಡಬೇಕೆಂದು, ರಿಯಾಯತಿ ದರದಲ್ಲಿ ಸೌರ ದೀಪವನ್ನು ಕೊಡುವುದನ್ನು ಓದಿದ್ದೆ . ನಮ್ಮ ಸರಕಾರಗಳು ಸೀರೆ, ಲಂಗ, ಅವನ್ನಿಡಲು ಪೆಟ್ಟಿಗೆ ಇಂತಹ ಹಲವಾರು ತಲೆಯಿಲ್ಲದ ಯೋಜನೆಗಳಲ್ಲಿ ತೊಡಗಿಕೊಳ್ಳುವ ಬದಲು, ಗ್ರಾಮೀಣ ಬಾಗದಲ್ಲಿ ಸೌರವಿದ್ಯುತನ್ನು ಜನಪ್ರಿಯ ಮಾಡುವಲ್ಲಿ ಮತ್ತು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವಲ್ಲಿ ‘ಗಂಭೀರ’ ವಾಗಿ ಯೋಚಿಸಬಾರದೇಕೆ?.