ಬೃಹತ್ ಬ್ರಹ್ಮಾಂಡದ ವಿರುದ್ಧ ಆಂದೋಲನದ ನೀಲನಕ್ಷೆ…

ದಯವಿಟ್ಟು ಗುದ್ದಲಿಪೂಜೆಗೆ ಬನ್ನಿ…
– ಕಿರಣ ಬಾಟ್ನಿ
’ನಿಲುಮೆ’ಯಲ್ಲಿ ಪ್ರಕಟವಾಗಿದ್ದ ಶ್ರೀ ಅಜಕ್ಕಳ ಗಿರೀಶಬಟ್ಟರ ’ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?’ ಎಂಬ ಬರಹಕ್ಕೆ ಉತ್ತರವಾಗಿ ನಾನು ಬರೆದಿದ್ದ ’ಇಗೋ, ಇದರಲ್ಲಿ ಮುಂದಿದೆ’ ಎಂಬ ಬರಹಕ್ಕೆ ಹಲವರು ತಮ್ಮ ಅನಿಸಿಕೆಯನ್ನು ತಿಳಿಸಿ, ಅದರ ಬಗ್ಗೆ ’ನಿಲುಮೆ’ಯಲ್ಲಿ ಚರ್ಚೆಯಾಗಿರುವುದು ಮನಸ್ಸಿಗೆ ಮುದ ತಂದಿದೆ. ಕನ್ನಡದ ಸೊಲ್ಲರಿಮೆ ಮತ್ತು ನುಡಿಯರಿಮೆಗಳ ವಿಶಯ ಬಹಳ ಮುಕ್ಯವಾದುದು. ಹಾಗೆಯೇ, ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಕಾಳಜಿಯುಳ್ಳವರು ಇದನ್ನು ಕುರಿತು ನೆಮ್ಮದಿಯ ಮನಸ್ಸಿನಿಂದ ಚಿಂತಿಸುವುದು ಕೂಡ ಬಹಳ ಮುಕ್ಯವಾದುದು. ಆದುದರಿಂದ ನನ್ನ ಬರಹಕ್ಕೆ ಬಂದ ಅನಿಸಿಕೆಗಳನ್ನು ನಿದಾನವಾಗಿ ಕುಳಿತು ಯೋಚಿಸಿ ಉತ್ತರಿಸಲು ಸಮಯವನ್ನು ಕೊಟ್ಟ ’ಒಡ-ಕಾಳಜಿಗ’ರಿಗೆ ದನ್ಯವಾದಗಳು. ಇಲ್ಲಿ ನಾನು ಮಂಡಿಸಿದ ವಿಶಯಕ್ಕೆ ಸಂಬಂದಿಸಿದ ಅನಿಸಿಕೆಗಳಿಗೆ ನನ್ನ ಟಿಪ್ಪಣಿಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.
’ಕನ್ನಡದಾ ಮಕ್ಕಳೆಲ್ಲ ಒಂದಾಗಿ’ ಮಕ್ಕಳಲ್ಲ!
ಮೊದಲನೆಯದಾಗಿ, ಶ್ರೀ ನರೇಂದ್ರಕುಮಾರ್ ಎಸ್. ಎಸ್. ಅವರು ನಾನು ’ಪ್ರಶ್ನೆಗಳನ್ನು ಸ್ವಾಗತಿಸುವೆನೆಂದೂ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲವೆಂದೂ, ತರ್ಕಬದ್ದವಾದುದನ್ನು ಒಪ್ಪುವೆನೆಂದೂ’ ಎಣಿಸಿ ಕೆಲ ಪ್ರಶ್ನೆಗಳನ್ನು ನನ್ನ ಮುಂದಿಟ್ಟಿದ್ದಾರೆ. ಅವರ ಈ ಪೀಟಿಕೆ ಬಹಳ ಸಂತಸ ತಂದಿತು, ಏಕೆಂದರೆ ಈ ನಂಬುಗೆಯು ಯಾವರೀರ್ವರ ನಡುವೆ ಇರುವುದಿಲ್ಲವೋ, ಅವರ ನಡುವೆ ಚರ್ಚೆಗೆ ಅರ್ತವಿಲ್ಲ. ಆ ನಂಬುಗೆಯನ್ನು ನಾನು ಈ ನನ್ನ ಟಿಪ್ಪಣಿಯಲ್ಲಿ ಉಳಿಸಿಕೊಳ್ಳುತ್ತೇನೆ ಎಂದು ನಂಬಿದ್ದೇನೆ.