ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2011

1

ಆತನಿಗೆ ಮದುವೆಯ ಮೊದಲೆ ಗೊತ್ತಿತು!?

‍Jagannath Shirlal ಮೂಲಕ

ಪವನ್ ಎಂ.ಟಿ

ಯಾವುದೇ ತೊಂದರೆಯಿಲ್ಲದೆ ಸುಂದರವಾಗಿ ಜೀವನಮಾಡುತ್ತಿದ್ದ ವಿದ್ಯಾವಂತಳಾದ ಆಕೆಯ ಬಾಳಿನಲ್ಲಿ ಮದುವೆಯ ಸಂದರ್ಭವೊಂದು ಬಂದಿತು. ದೂರದ ಮುಂಬೈಯಿಂದ ಯುವಕನೊರ್ವ ಆಕೆಯನ್ನು ನೋಡಲು ಬಂದ. ಆ ವರನಿಗೆ ವಧು ಇಷ್ಟವಾದಳು. ಮುಂಬೈಯಲ್ಲಿರುವ ಹುಡುಗ, ಒಳ್ಳೆಯ ಸಂಪಾದನೆ, ಸುಂದರ, ಇದೆಲ್ಲವನ್ನು ಕಂಡ ವಧುವಿನ ಕಡೆಯವರಿಗೂ ವರ ಇಷ್ಟವಾದನು. ವರನ ಕಡೆಯವರು ಆತುರದಲ್ಲಿ ಮದುವೆಯನ್ನು ಪಿಕ್ಸ್ ಮಾಡಿದರು. ಮದುವೆಯೂ ಆಯಿತು. ಮದುವೆಯಾಗಿ ಮೊದಲ ಮಗುವಾಗುವ ಸಮಯದಲ್ಲಿ  ಆಕೆಗೆ ತಿಳಿಯಿತು ನನಗೆ ಎಚ್‌ಐವಿ ಬಂದಿದೆ ಎಂದು. ಇದನ್ನು ಆಕೆಯ ಗಂಡ ಉಡುಗೊರೆಯಾಗಿ ನೀಡಿದ್ದ ಆತನಿಗೆ ಮದುವೆಗೆ ಮೊದಲೇ ಈ ರೋಗವಿದ್ದರೂ ಅದನ್ನು ಎಲ್ಲರೂ ಸೇರಿ ಮುಚ್ಚಿ ಹಾಕಿ ಆಕೆಯ ಜೀವನದಲ್ಲಿ ಆಟವಾಡಿದ್ದರು. ಆದರೆ ಸಂಘಟನೆಯ ಸಹಾಯ ಪಡೆದು ಎಆರ್‌ಟಿ ಚಿಕಿತ್ಸೆಯನ್ನು ಪಡೆದು ಎಲ್ಲರಂತೆ ಬದುಕುತ್ತಿದ್ದಾಳೆ. ನೋಡಿ ಈ ಮಾತನ್ನು ಎಚ್‌ಐವಿ ಪೀಡಿತೆಯಾದ ಅಮಾಯಕ ಹೆಣ್ಣುಮಗಳೊಬ್ಬಳು ಹೇಳುತ್ತಿರುವಂತಹದ್ದು. ಈ ರೀತಿ ಮೋಸವನ್ನು ಹೋಗುವುದಕ್ಕೆ ಮೊದಲು ವಿವಾಹ ಸಂಬಂಧವನ್ನು ಮಾಡುವಾಗ ನೀವೆಲ್ಲ ಸ್ವಲ್ಪ ಯೋಚನೆಮಾಡಿ ನಿರ್ಧಾರ ತೆಗೆದುಕೊಳ್ಳಿ. ಆವಾಗ ಮುಂದೆ ಪರಿತಪಿಸುವ ಅಗತ್ಯ ಬರಲ್ಲ. ಆ ಮಾತು ಆಗಿರಲಿ ಈಗ ಎಚ್‌ಐವಿ ಬಂದವರು ಏನು ಮಾಡುವುದು ಎಂಬುದರ ಬಗ್ಗೆ ಸ್ವಲ್ಪ ಗಮನಹರಿಸೋಣ.

ನಮ್ಮಲ್ಲಿ ಎಚ್‌ಐವಿ ರೋಗಿಗಳು ಬದುಕುವುದೇ ಇಲ್ಲ. ಅವರು ಬದುಕುವುದೇ ತಪ್ಪು, ಅಂತವರು ಸಮಾಜದಲ್ಲಿರಬಾರದು, ಅವರನ್ನು ಭಹಿಷ್ಕರಿಸಬೇಕು, ಎನ್ನುವ ಮಾತುಗಳು ಬಹಳ ಹಿಂದಿನಿಂದ ಕೇಳಿ ಬರುತ್ತಿರುವ ಮಾತುಗಳು. ಆದರೆ ಈಗ ಕಾಲ ಬದಲಾದುದರಿಂದ, ಸರಕಾರದ ಯೋಜನೆಗಳಿಂದ, ಸಂಘ ಸಂಸ್ಥೆಗಳ ಮಾನವೀಯ ಕಾರ್ಯಗಳಿಂದಾಗಿ ಇವರ ಬಗ್ಗೆ ಜನರಿಗಿದ್ದ ತಪ್ಪು ಕಲ್ಪನೆಗಳು ದೂರವಾಗುತ್ತಿವೆ. ರೋಗಿಗಳು ಸಹ ಧೈರ್ಯದಿಂದ ಚಿಕಿತ್ಸೆಯನ್ನು ಪಡೆದುಕೊಂಡು ಎಲ್ಲಾ ಮನುಷ್ಯರಂತೆ ಬದುಕಲು ಪ್ರಯತ್ನ ಮಾಡುತ್ತಿದ್ದಾರೆ, ಬದುಕುತ್ತಿರುವವರು ಇದ್ದಾರೆ.

ಮೊದಲೆಲ್ಲ ಎಚ್‌ಐವಿ ಪೀಡಿತರು ಸಮಾಜದಲ್ಲಿ ತಮ್ಮನ್ನು ಜನ ಗುರುತಿಸಿದರೆ ತೊಂದ್ರೆಯಾಗುತ್ತದೆ. ಮತ್ತೆ ಬದುಕಲು ಸಾಧ್ಯವಿಲ್ಲ ಎಂಬ ಭಾವನೆಯೊಂದಿಗೆ ಯಾವುದೇ ಚಿಕಿತ್ಸೆಗೆ ತೆರೆದುಕೊಳ್ಳದೆ ಸಾವಿಗೀಡಾಗುವ ಸನ್ನಿವೇಶವಿತ್ತು. ಆದರೆ ಈಗ ಹಾಗಾಗುತಿಲ್ಲ. ಎಚ್‌ಐವಿ ಪೀಡಿತರು ಆರೋಗ್ಯಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಎಆರ್‌ಟಿ ಚಿಕಿತ್ಸೆಯನ್ನು ಪಡೆದುಕೊಂಡು ರೋಗವನ್ನು ನಿಯಂತ್ರಿಸಲು ಪ್ರಯತ್ನಿಸುತಿದ್ದಾರೆ. ಎಆರ್‌ಟಿ ಎಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆ ಇಲ್ಲಿ ಒಂದು ಆತಂಕ ಪಡುವ ವಿಷಯವೆಂದರೆ ಎಷ್ಟು ಜನ ಎಚ್‌ಐವಿ ಪೀಡಿತರು ಸಮಾಜದಲ್ಲಿ ಗುರುತಿಸಿಕೊಂಡು, ಆರೋಗ್ಯಕೇಂದ್ರದಲ್ಲಿ ಹೆಸರನ್ನು ನೊಂದಾಯಿಸಿ ಚಿಕಿತ್ಸೆಯನ್ನು ಪಡೆಯುತಿದ್ದಾರೆಯೋ ಅದಕ್ಕಿಂತ ಮೂರು ಪಟ್ಟು ಹೆಚ್ಚು ಎಚ್‌ಐವಿ ಪೀಡಿತ ಜನರು ಇನ್ನು ಯಾವುದೇ ಕ್ರಮಗಳಿಗೆ ಮುಂದಾಗದೆ ತಮ್ಮನೇ ತಾವು ಶಿಕ್ಷಿಸಿ ಕೊಳ್ಳುತಿದ್ದಾರೆ. ನಮ್ಮ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಗಟ್ಟಲೆ ಎಚ್‌ಐವಿ ಪೀಡಿತರು ತಮ್ಮ ಹೆಸರನ್ನು ಆರೋಗ್ಯಕೇಂದ್ರಗಳಲ್ಲಿ ನೊಂದಾಯಿಸಿದ್ದಾರೆ. ಆದರೇ ನೊಂದಾವಣೆ ಮಾಡದವರು ಎಷ್ಟಿದ್ದಾರೊ?

ನೋಡಿ ಇವತ್ತು ಎಚ್‌ಐವಿ ಬಂತು ಎಂದು ಹೆದರಬೆಕಾಗಿಲ್ಲ. ಎಚ್‌ಐವಿ ಕ್ಯಾನ್ಸರ್‌ಗಿಂತ ದೊಡ್ದ ರೋಗವೇನಲ್ಲ. ಇಂದು ಎಚ್‌ಐವಿ ಪೀಡಿತರು ಸೂಕ್ತ ಸಮಯದಲ್ಲಿ ಎಆರ್‌ಟಿ ಮಾತ್ರೆಯನ್ನು ಪಡೆದುಕೊಂಡರೆ ರೋಗದ ಬಗ್ಗೆ ಯಾವುದೇ ಭಯಪಡಬೇಕಾಗಿಲ್ಲ. ಇಂದು ಎಲ್ಲಾ ಆರೋಗ್ಯಕೇಂದ್ರಗಳಲ್ಲಿ ಎಆರ್‌ಟಿ ಮಾತ್ರೆ ಉಚಿತವಾಗಿ ದೊರೆಯುತ್ತಿದೆ. ಇದನ್ನು ಸರಿಯಾದ ರೀತಿಯಿಂದ ಪಡೆದವರು,  ಸಂಘಸಂಸ್ಥೆಗಳಿಂದ ಎಚ್‌ಐವಿ ಕುರಿತಂತೆ ಮಾಹಿತಿ ಪಡೆದವರು ಎಚ್‌ಐವಿ ಪೀಡಿತರಾಗಿಯೂ ೨೫ ವರ್ಷಗಳ ಕಾಲ ಕಳೆದರೂ ಇನ್ನೂ ಎಲ್ಲಾ ಆರೋಗ್ಯವಂತ ಮಾನವರಂತೆ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನೇಕ ಸಂಘಟನೆಗಳು ಸರಕಾರದ ಫಂಡ್‌ನೊಂದಿಗೆ ಎಚ್‌ಐವಿ ಪೀಡಿತರ ಸೇವೆಯನ್ನು ಮಾಡುವುದರೊಂದಿಗೆ ಅವರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿವೆ. ದಕ್ಷಿಣ ಕನ್ನಡದ ಹೊಂಗಿರಣ, ಸ್ನೇಹ ಸದನ, ಜೀವನ್‌ದಾನ್, ಪ್ರಜ್ಞಾ, ಡಿ.ಕೆ.ಆರ್.ಡಿ.ಎಸ್, ಬ್ರೇಕ್ ಥ್ರೂ, ವೆನ್‌ಲಾಕ್, ಪಿ.ಒ.ಡಿ.ಪಿ ಮತ್ತು ಉಡುಪಿ ಜಿಲ್ಲೆಯ ಜೀವನಸಂಘರ್ಷ, ಚೇತನ, ಗಾರ್ಡ್, ದೀಪಜ್ಯೋತಿ ಮೊದಲಾದ ಸಂಸ್ಥೆಗಳು ಈ ರೀತಿಯ ಕೆಲಸವನ್ನು ಮಾಡುತ್ತಿವೆ. ಕೆಲವು ಸಂಸ್ಥೆಗಳಲ್ಲಿ ಸ್ವಲ್ಪವು ಶಕ್ತಿಯಿಲ್ಲದ ಸಂಪೂರ್ಣವಾಗಿ ಅನಾರೋಗ್ಯದಿಂದ ಕಂಗೆಟ್ಟಿರುವ ದೇಹವನ್ನು ತಮ್ಮಲ್ಲಿಯೇ ಇರಿಸಿಕೊಂಡು ಯಾವುದೇ ಭೇದಭಾವವಿಲ್ಲದೆ ನೋಡಿಕೊಳ್ಳುತ್ತಿವೆ. ಎಚ್‌ಐವಿ ಪೀಡಿತ ಚಿಕ್ಕಮಕ್ಕಳಿಗೆ ಆಶ್ರಯ ಮತ್ತು ಶಿಕ್ಷಣವನ್ನು ನೀಡುತ್ತಿವೆ. ದೊಡ್ದವರಿಗೆ ಕರಕುಶಲ ವಸ್ತು ತಯಾರಿಸುವ ತರಬೇತಿಯನ್ನು, ಕೆಲಸವನ್ನು ನೀಡುತ್ತಿದೆ. ಮಾಂಸ ಮತ್ತು ಸಸ್ಯಾಹಾರವನ್ನು ದಿನಂಪ್ರತಿ ನೀಡುತ್ತಿವೆ. ಬೇರೆ ಊರುಗಳಲ್ಲಿ ರೋಗದ ಕುರಿತ ಜಾಗೃತಿಯನ್ನು ನೀಡುತ್ತಿವೆ.  ಈ ರೀತಿಯ ಸಂಸ್ಥೆಗಳಲ್ಲಿ ಹೆಚ್ಚಾಗಿ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವರು ದುಡಿಯುತ್ತಿರುವುದು ಗಮನಾರ್ಹವಾದ ಸಂಗತಿ. ಇತರ ಪಂಗಡದವರು ತಮ್ಮನ್ನು ಎಚ್‌ಐವಿ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಇಲ್ಲಿ ಸಂಸ್ಥೆಗಳಿಗೆ ಸಮಸ್ಯೆಯನ್ನು ತಂದಿರುವುದು ಸರಕಾರದ ಯೋಜನೆಗಳು ನಿಂತು ಹೋಗುತ್ತಿರುವುದು. ಸರಕಾರ ಯೋಜನೆಯನ್ನು ಪ್ರಾರಂಭಿಸಿ ಒಂದೆರಡು ವರ್ಷದ ನಂತರ ಅದನ್ನು ನಿಲ್ಲಿಸಿ ಬಿಡುತ್ತದೆ. ಇದರಿಂದಾಗಿ ಇಂದು ತಮ್ಮಲ್ಲಿರುವ ರೋಗಿಗಳನ್ನು ನೋಡಿಕೊಳ್ಳಲು ವ್ಯವಸ್ಥಾಪಕರಿಗೆ ಕಷ್ಟವಾಗುತ್ತಿದೆ. ಇರುವ ರೋಗಿಗಳನ್ನು ಸಂಸ್ಥೆಯಿಂದ ಹೊರಗೆ ಕಳುಹಿಸುವಂತೆಯೂ ಇಲ್ಲ ಇರಿಸಿಕೊಳ್ಳುವಂತೆಯೂ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಸದ್ಯಕ್ಕೆ ಜನರ ಸಹಾಯವನ್ನು ಪಡೆದು ಕೆಲವು ಸಂಸ್ಥೆಗಳು ನಡೆಯುತ್ತಿವೆ. ಸರಕಾರ ಇದರ ಬಗ್ಗೆ ಗಮನ ಹರಿಸಿ, ಪರಿಹಾರವನ್ನು ಬಹುಬೇಗ ದೊರಕಿಸಬೇಕಾಗಿದೆ. ಇಲ್ಲದಿದ್ದಲ್ಲಿ ಎಚ್‌ಐವಿ ಪೀಡಿತರ ಕೇಂದ್ರಗಳು ಪಾಳುಬಿದ್ದ ಬಂಗಲೆಯಾಗಬೇಕಾಗುತ್ತದೆ ಮತ್ತು ಎಚ್ ಐ ವಿ ಪೀಡಿತರ ಗತಿ ಅದೋ ಗತಿ.

ಇಲ್ಲಿ ಒಂದು ಗಮನಿಸಬೇಕಾದ ಸಂಗತಿಯೆಂದರೆ ನಿಮ್ಮಲ್ಲಿ ಯಾರಾದರೂ ಎಚ್‌ಐವಿ ಪೀಡಿತರಿದ್ದಲ್ಲಿ ಅವರನ್ನು ಈ ಸಂಸ್ಥೆಗಳ ಪರಿಚಯವನ್ನು ಮಾಡಿಸಿ ಅವರ ಜೀವನಕೊಂದು ದಾರಿ ತೋರಿಸಿ, ಇಲ್ಲದಿದ್ದಲ್ಲಿ ನಾವು ದಿನವಿಡೀ ಎಚ್‌ಐವಿ ರೋಗದ ಭಯದಲ್ಲಿಯೇ ಬದುಕಬೇಕಾಗುತ್ತದೆ. ಯಾಕೆಂದರೆ ಎಚ್‌ಐವಿ ಅಸುರಕ್ಷಿತ ಲೈಂಗಿಕತೆಯಿಂದ ಮಾತ್ರ ಬರುವುದಲ್ಲ.

ಚಿತ್ರ ಕೃಪೆ: sajaforum.org

1 ಟಿಪ್ಪಣಿ Post a comment
  1. supritha's avatar
    supritha
    ಏಪ್ರಿಲ್ 2 2011

    ನೀವು ಬರೆದ ಲೇಖನವು ಉತ್ತಮವಾಗಿ ಮೂಡಿ ಬ೦ದಿದೆ.ಈ ಲೇಖನದಲ್ಲಿ ಪುರುಷನೋರ್ವ ವಿವಾಹಕ್ಕೆ ಮು೦ಚಿತವಾಗಿ ಎಚ್ಐವಿ ಸೋ೦ಕಿಗೆ ಒಳಗಾಗಿದ್ದು;ಅದನ್ನು ತಾನು ವಿವಾಹವಾಗುವವಳಲ್ಲಿ ತಿಳಿಸದೇ ಆಕೆಯನ್ನು ಎಚ್ಐವಿ ಸೋ೦ಕಿಗೆ ಒಳಗಾಗಿಸಿರುವುದು ವಿಪರ್ಯಾಸವೇ ಸರಿ.ಸ್ವಾರ್ಥತೆಯನ್ನು ಇಲ್ಲಿ ಗಮನಿಸಬಹುದು.ಸ್ವಾರ್ಥತೆ ಬೇಕು; ಆದರೆ ಆ ಸ್ವಾರ್ಥತೆಯು ಇನ್ನೊಬ್ಬರ ಸ್ವಾಸ್ತ್ಯವನ್ನು ಕೆಡಿಸುವ೦ತಿರಬಾರದು.ಇದು ಪುರುಷರಿಗಾಗಲೀ ಸ್ತ್ರೀಯರಿಗಾಗಲೀ ಅನ್ವಯಿಸುವ ಮಾತಾಗಿದೆ. ಈ ಲೇಖನದಲ್ಲಿ ಕೇವಲ ಲೈ೦ಗಿಕತೆಯಿ೦ದ ಮಾತ್ರ ಈ ಸೋ೦ಕಿಗೆ ಒಳಗಾಗುವುದಲ್ಲ.ಇನ್ನಿತರ ಕಾರಣಗಳಿ೦ದಲೂ ಎಚ್ಐವಿ ಸೊ೦ಕು ಕಾಣಿಸಿಕೊಳ್ಳಬಹುದು ಎ೦ದು ಹೇಳಲಾಗಿದೆ.ಆದರೆ ಇನ್ನಿತರ ಕಾರಣಗಳನ್ನು ನೀಡುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

    ಉತ್ತರ

Leave a reply to supritha ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments