ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 14, 2013

ಮೋದಿ ಫ್ಯಾಕ್ಟರ್ : ಒಮರ್ ಅಬ್ದುಲ್ಲಾರ ಮಾತುಗಳು ಯುಪಿಎ ದಿಗಿಲಿನ ಕನ್ನಡಿಯೇ?

‍ನಿಲುಮೆ ಮೂಲಕ

ಮೂಲ : ಸಂಜಯ್ ಸಿಂಗ್
ಅನುವಾದ : ಪ್ರಶಾಂತ್ .ಕೆ

Modi Omar“ನನಗನ್ನಿಸುತ್ತೆ, ನಾವೇನಾದರೂ( ಯು.ಪಿ.ಎ. ಅಂಗಪಕ್ಷಗಳು) ‘ಮೋದಿ ಫ಼್ಯಾಕ್ಟರ್’ ನ್ನು ನಿರ್ಲಕ್ಷಿಸಿದರೆ ಅದು ಮೂರ್ಖತನವಾಗುತ್ತೆ; ಅಲ್ಲದೆ ಅದೊಂದು ಅಪಾಯಕಾರಿ ತಪ್ಪು ಕೂಡ..”
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ‘ಒಮರ್ ಅಬ್ದುಲ್ಲಾ’, ‘ಹಿಂದುಸ್ತಾನ್ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳಿವು. ದೇಶದ ಅತ್ಯಂತ ಸಮಸ್ಯಾತ್ಮಕ ರಾಜ್ಯದ, ಅದರಲ್ಲೂ ಆ ರಾಜ್ಯದ ಆಗು- ಹೋಗುಗಳು ಇಡೀ ದೇಶವನ್ನ ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ, ಆ ರಾಜ್ಯದ ಮುಖ್ಯಮಂತ್ರಿಯ ಮಾತುಗಳನ್ನು ಹಗುರವಾಗಿ ಕಾಣುವ ಹಾಗಿಲ್ಲ. ‘ಒಮರ್’ ‘ರಾಹುಲ್ ಗಾಂಧಿ’ಯವರ ಆಪ್ತ ಮಿತ್ರ, ಅಲ್ಲದೆ ಅವರ ತಂದೆ ‘ಫ಼ರೂಕ್ ಅಬ್ದುಲ್ಲ’ ಯು.ಪಿ.ಎ. ಸರಕಾರದಲ್ಲಿ ಮಂತ್ರಿ ಕೂಡ ಹೌದು; ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಇನ್ನೂ ಮಹತ್ವ ಪಡೆದುಕೊಳ್ಳುತ್ತವೆ, ‘ರಾಹುಲ್ ಗಾಂಧಿ’ ಉತ್ತರ ಪ್ರದೇಶ, ರಾಮ್ ಪುರದಲ್ಲಿ ಹೇಳಿದ ” ೨೦೧೪ ರಲ್ಲಿ ಕೇಂದ್ರದಲ್ಲಿ ಯುವಶಕ್ತಿಯ ಸರಕಾರ ಅಧಿಕಾರಕ್ಕೆ ಬರುತ್ತದೆ, ಅದು ದೇಶವನ್ನೇ ಬದಲಾಯಿಸಬಲ್ಲುದು” ಎಂಬ ಮಾತುಗಳನ್ನು ಒಮರ್ ಪೂರ್ತಿ ಒಪ್ಪಿದಂತೆ ಕಾಣುವುದಿಲ್ಲ; ನಿಮಗೆ ಗೊತ್ತಿರಲಿ, ರಾಹುಲ್ ಮತ್ತು ಒಮರ್ ಇಬ್ಬರೂ ಒಂದೇ ವರ್ಷದಲ್ಲಿ ಜನಿಸಿದವರು ಮತ್ತು ಇಬ್ಬರಿಗೂ ಏಗ ೪೩ ವರ್ಷ ವಯಸ್ಸು. ಅನೇಕ ಕಾಂಗ್ರೆಸ್ ನಾಯಕರಂತೆ, ರಾಹುಲ್ ಗಾಂಧಿಯ ಈ ಭಾಷಣದ ಬಳಿಕ ಮುಂದಿನ ಸರಕಾರ ನಡೆಸಲು ಆತನೇ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸದ ಕಾರಣ , ನ್ಯಾಷನಲ್ ಕಾನ್ಫ಼ರೆನ್ಸ್ ನ ನಾಯಕನ ಮಾತುಗಳನ್ನು ವಿಶೇಷವಾಗಿ ಪರಿಗಣಿಸಬೇಕು.

‘ಮೋದಿ ಫ಼್ಯಾಕ್ಟರ್’ ನ್ನು ವಿಶ್ಲೇಷಿಸುತ್ತಾ, ಒಮರ್ ಅಬ್ದುಲ್ಲಾ, ” ಆರು ತಿಂಗಳ ಮೊದಲಾಗಿದ್ದರೆ, ‘ಮೋದಿ ಫ಼್ಯಾಕ್ಟರ್’ ಎಂಬುದೇ ಇಲ್ಲ ಎನ್ನುತ್ತಿದ್ದೆ, ಆದರೆ, ಈಗ ಹಾಗೆ ಹೇಳಿದರೆ ನಾನೊಬ್ಬ ಮೂರ್ಖ ಅಷ್ಟೇ; ಮೋದಿ ನಾಯಕತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ, ಈ ಸಂಘಟಿತ ಹೋರಾಟವೇ ಚುನಾವಣೆಯ ಸೋಲು-ಗೆಲುವನ್ನು ನಿರ್ಧರಿಸುವ ಅಂಶ” ಎಂದರು. ಒಮರ್ ಅಬ್ದುಲ್ಲಾ ಈ ಸಂದರ್ಶನದಲ್ಲಿ, ಯು.ಪಿ.ಎ. ಅಂಗಪಕ್ಷಗಳು, ನ್ಯಾಷನಲ್ ಕಾನ್ಫ಼ರೆನ್ಸೂ ಸೇರಿ ಮೋದಿಗೆ ಪರ್ಯಾಯವನ್ನು ಹುಡುಕಲು ವಿಫ಼ಲವಾದ್ದನ್ನು ಒಪ್ಪಿಕೊಂಡರು. “ಇದು ನನ್ನ ಸೋಲು” ಅಂದ ಅವರು, ಯು.ಪಿ.ಎ. ಅಂಗಪಕ್ಷವಾಗಿ ಪರ್ಯಾಯವನ್ನು ಹುಡುಕಬೇಕಾದರೂ , ಸಧ್ಯ ನಾವು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದೆವು. ಆದರೆ ಈಗ ತುಂಬಾ ಕಾಲ ಕಾದು ನೋಡಿದೆವು ಎಂದು ಅನಿಸುತ್ತಿದೆ” ಎಂದರು. ಒಮರ್ ಅಬ್ದುಲ್ಲಾ ಗೆ, ಕಾಂಗ್ರೆಸ್, ಮೋದಿಯನ್ನು ನಿರ್ಲಕ್ಷಿಸುವ ಯೋಜನೆಯಿಂದ ತಾನು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಹೇಳಲಾಗುತ್ತಿಲ್ಲ; ‘ಕಾಶ್ಮೀರ’,ಮೋದಿ ಮತ್ತು ಬಿ.ಜೆ.ಪಿ.ಗೆ ಸೈಧ್ಧಾಂತಿಕ ವಿಷಯವಾಗಿರುವುದು ಒಮರ್ ಗೆ ಆತಂಕ ತಂದೊಡ್ಡಿದೆ. ಮೋದಿ ಏನಾದರು ಅಧಿಕಾರಕ್ಕೆ ಬಂದರೆ ಅದರ ಪರಿಣಾಮ ಕಾಶ್ಮೀರ ಕೊಳ್ಳದಲ್ಲಾಗುವುದು ಒಮರ್ ಗೆ ಚೆನ್ನಾಗೇ ಗೊತ್ತಿದೆ.

ಕಾಂಗ್ರೆಸ್ ಮೊದಲಿಗೆ ಮೋದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಯತ್ನಿಸಿದರೂ ಸಫ಼ಲರಾಗಲಿಲ್ಲ; ನಂತರ ಮೋದಿ ಕೇವಲ ‘ಮತ್ತೊಬ್ಬ ಮುಖ್ಯಮಂತ್ರಿ’ ಯಷ್ಟೇ ಎಂದು ಚಿತ್ರಿಸುವ ಪ್ರಯತ್ನ ನಡೆಯಿತು.ಈ ತಂತ್ರದ ಅಂಗವಾಗಿ ಮೋದಿಯನ್ನ ಕೇವಲ ಪ್ರಾದೇಶಿಕ ನಾಯಕನನ್ನಾಗಿಸಲು, ಅವರದೇ ಗುಜರಾತ್ ನ ಕಾಂಗ್ರೆಸ್ ಮುಖಂಡರಿಂದ ಟೀಕಾ ಪ್ರಹಾರ ಮಾಡಿಸಲಾಯಿತು; ಆದರೆ ಆ ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಸೋತು ಹತ್ತು ತಿಂಗಳುಗಳೇ ಉರುಳಿದ್ದರಿಂದ ಅವರ ಹೇಳಿಕೆಗಳಿಗೆ ಅಂತಹ ಮಹತ್ವವೂ ಬರಲಿಲ್ಲ, ಕಾಂಗ್ರೆಸ್ ನ ರಣತಂತ್ರ ಏನಾಗಿತ್ತೆಂದರೆ, ಕಾಂಗ್ರೆಸ್ ವಿರುದ್ಧದ ಕೇವಲ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಅವರ ರಾಜ್ಯಕ್ಕೆ ಸೀಮಿತಗೊಳಿಸಿ, ದೇಶದಲ್ಲೇ ಪ್ರಭಾವಶಾಲಿ ರಾಜಕೀಯ ಕುಟುಂಬವಾದ ಗಾಂಧಿ-ನೆಹರೂ ಕುಟುಂಬದ ವಿರುದ್ಧ ಸೊಲ್ಲೆತ್ತದಂತೆ ಹಣಿಯುವುದಾಗಿತ್ತು.ಆದರೆ ಇದೂ ಫ಼ಲ ನೀಡಲಿಲ್ಲ.

ಆದರೆ, ಒಮರ್ ಮಾತುಗಳಲ್ಲಿ ತಥ್ಯಾಂಶವಿದೆ; ಸಂಘಟಿತ ಹೋರಾಟ ಎಂಬುದು ಚುನಾವಣೆಯ ಸೋಲು-ಗೆಲುವುಗಳಲ್ಲಿ ಖಂಡಿತ ಮುಖ್ಯ ಪಾತ್ರ ವಹಿಸುತ್ತದೆ, ಕಾಂಗ್ರೆಸ್ ನ ಎಂ.ಪಿಯೊಬ್ಬರು ಒಪ್ಪಿಕೊಂಡಂತೆ,’ಯು.ಪಿ.ಎನ ಚಿಂತನಾ ಕ್ರಮದಲ್ಲೇ ಬದಲಾವಣೆಯಾಗಬೇಕಿದೆ’. ಬಿ.ಜೆ.ಪಿ. ಒಂದೂ ಸ್ಥಾನ ಹೊಂದಿರದ ಹೈದರಾಬಾದ್, ತ್ರಿಚಿ, ರೇವಾರಿ,ಡೆಲ್ಲಿ ಯಲ್ಲಿ ಮೋದಿ ಹವಾ ಮತ್ತು ಜನರ ಅಭೂತಪೂರ್ವ ಸ್ಪಂದನ ನೋಡಿದ ಎಂ.ಪಿ. ಯ ಮಾತುಗಳಿವು. ಕಾಕತಾಳೀಯವೆಂಬಂತೆ, ಒಮರ್ ಕಳೆದ ಕೆಲ ದಿನಗಳಿಂದ ‘ಮೋದಿ ಫ಼್ಯಾಕ್ಟರ್’ ಅನ್ನು ಒಪ್ಪಿಕೊಂಡ ಮೂರನೇ ಯು.ಪಿ.ಎ. ನಾಯಕ. ಅಕ್ಟೋಬರ್ ೧ ಕ್ಕೆ ಅಮೆರಿಕದಿಂದ ವಾಪಸಾಗುವ ಹಾದಿಯಲ್ಲಿ, ಪ್ರಧಾನಿ ಮನಮೊಹನ್ ಸಿಂಗ್, ” ಮೋದಿ ವಿರುದ್ಧ ಜಾತ್ಯತೀತ ಶಕ್ತಿಗಳೆಲ್ಲ ಒಂದಾಗಬೇಕಾಗಿದೆ.ನನಗೆ ಇದರಲ್ಲಿ ಸಂಪೂರ್ಣ ನಂಬಿಕೆಯಿದೆ.ಕೆಲ ಕಾಲ ಕಾದು ನೋಡಿ” ಎಂದಿದ್ದರು. ಇದು ಸಾರ್ವಜನಿಕವಾಗಿ ಮಾಡಿದ ಮೊದಲ ಒಪ್ಪಿಗೆಯಾಗಿತ್ತು.ಮೋದಿ ಆಡಳಿತ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರ ಸ್ಪಷ್ಟ ಸೂಚನೆಯಾಗಿತ್ತು. ಮೋದಿ ವಿರುದ್ಧ ತಮ್ಮ ಪಕ್ಷವೊಂದೇ ಸಾಕಾಗದು, ಅದಕ್ಕೋಸ್ಕರ ಎಲ್ಲಾ ಜಾತ್ಯತೀತ ಶಕ್ತಿಗಳನ್ನು ಸೇರಿಸುವ ಇರಾದೆ ಅವರ ಮಾತುಗಳಲ್ಲಿತ್ತು.

ಇದಾದ ನಂತರ ಕಾಂಗ್ರೆಸ್ ನ ಗಟ್ಟಿ ಧ್ವನಿಯಾದ ಪಿ.ಚಿದಂಬರಮ್ ಸರದಿ. ರಾಯಿಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಚಿದಂಬರಮ್ ,”ಮೋದಿ ಹಳ್ಳಿಪ್ರದೇಶದ ಯುವಕರನ್ನು ಆಕರ್ಷಿಸುತ್ತಿದ್ದಾರೆ” ಎಂದಿದ್ದರು. “ಮೋದಿ ಆವೇಗವನ್ನು ಪಡೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ;ಬಿ.ಜೆ.ಪಿಯ ನಾಯಕರು ಬೇರೆ ಬೇರೆಯಾಗಿದ್ದಾರೆ ಆದರೂ ಪಕ್ಷವನ್ನ ಒಂದು ಮಟ್ಟಕ್ಕೆ ಮೋದಿ ಸಂಘಟಿಸಿದ್ದಾರೆ.ಅವರು ಸ್ವಲ್ಪ ಪ್ರಮಾಣದಲ್ಲಿ ಹಳ್ಳಿಗಾಡಿನ ಯುವಕರ ಗಮನ ಸೆಳೆಯಲು ಯಶಸ್ವಿಯಾಗಿದ್ದಾರೆ ಎಂಬುದು ನಿಜ ಆದರೆ ಈಗಲೂ ಜನ ಮೋದಿಯ ಸಾಧನೆ, ರಾಜಕೀಯ ನಡೆಗಳು, ಇತಿಹಾಸದ ಬಗ್ಗೆ ಚಿಂತಿತರಾಗೇ ಇದ್ದಾರೆ.ಮೋದಿ ಎಲ್ಲಾ ರಾಜ್ಯಗಳಲ್ಲೂ ಗೆಲ್ಲುತ್ತಾರೆ ಎಂಬುದು ಭ್ರಮೆ ಅಷ್ಟೇ” ಇದು ಅಮೆರಿಕಕ್ಕೆ ಹೋಗುವ ಮುನ್ನಾ ದಿನ ಚಿದಂಬರಂ ಆಡಿದ ಮಾತುಗಳು. ಸತ್ಯ ಏನೆಂದರೆ ಕಾಂಗ್ರೆಸ್ ನ ಸಂಘಟನಾ ವ್ಯವಸ್ಥೆ ಮೋದಿಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್,ವಡೋದರಾದಲ್ಲಿ ಮಾತನಾಡುತ್ತಾ,”ಮೋದಿ ಪ್ರಧಾನಿ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ಏನೂ ಚಿಂತಿತವಾಗಿಲ್ಲ.ಪ್ರತೀ ಪಕ್ಷಕ್ಕೂ ಅದರ ಅಭ್ಯರ್ಥಿ ಘೋಷಿಸುವ ಹಕ್ಕು ಇದೆ” ಎಂದರು. ಆದರೆ ಈಗಲೂ ಕಾಂಗ್ರೆಸ್ ನ ಕೆಲ ಮುಖಂಡರ ನಂಬಿಕೆ ಏನೆಂದರೆ , ಮೋದಿ ವಿರುದ್ಧ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿ ಕೆಲಸ ಮಾಡಲಿವೆ ಎಂದು. ಆದರೂ ಮೂರನೇ ರಂಗದ ಉದಯವಾಗುವ ಸಾಧ್ಯತೆ ಕ್ಷೀಣಿಸಿರುವುದು ಕಾಂಗ್ರೆಸ್ಸ್ ಪಾಲಿಗೆ ಸಾಂತ್ವನ ವಿಷಯ ಏಕೆಂದರೆ ಆಗ ಸಿ.ಪಿ.ಎಂ,ಸಮಾಜವಾದಿ,ಬಿ.ಜೆ.ಡಿ.ಯಂತಹ ಪಕ್ಷಗಳಿಗೆ ಕಾಂಗ್ರೆಸನ್ನು ಬೆಂಬಲಿಸುವುದು ಬಿಟ್ಟರೆ ಪರ್ಯಾಯವಿರುವುದಿಲ್ಲ. ಸಧ್ಯಕ್ಕೆ, ಏ.ಐ.ಏ.ಡಿ.ಎಂ.ಕೆ. ಮತ್ತು ವೈ.ಎಸ್.ಆರ್. ಕಾಂಗ್ರೆಸ್ ಪಕ್ಷಗಳು ಕಾದು ನೋಡುವ ತಂತ್ರ ಅನುಸರಿಸುತ್ತಿವೆ. ಕಾಂಗ್ರೆಸ್ ನ ವಿಶ್ವಾಸ ಏನೆಂದರೆ, ಈ ಮೂರನೇ ರಂಗದ ಪಕ್ಷಗಳು ಚುನಾವಣೆಯಲ್ಲಿ ಎಷ್ಟೇ ಸೀಟು ಗೆದ್ದರೂ ಅವಕ್ಕೆ ಕಾಂಗ್ರೆಸ್ ನ್ನು ಬೆಂಬಲಿಸಿಸುವುದು ಬಿಟ್ಟರೆ ಅನ್ಯಮಾರ್ಗವಿರುವುದಿಲ್ಲ. ಆದರೆ ಇದನ್ನು ಜನ ಒಪ್ಪುವರೇ?

ಕೃಪೆ : ರ್ಸ್ಟ್ ಪೋಸ್ಟ್.ಕಾಂ

ಚಿತ್ರ ಕೃಪೆ : http://www.indiatimes.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments