ವಿಷಯದ ವಿವರಗಳಿಗೆ ದಾಟಿರಿ

Archive for

2
ಜೂನ್

ಸಾಹಿತ್ಯ ಮತ್ತು ವಿಮರ್ಶೆ

– ಮು ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯನಾನು ಈ ಲೇಖನ ಬರೆಯುತ್ತಿರುವ ಇವತ್ತಿನ ತನಕ  (೨೯ ಮೇ ೨೦೧೪)  ಡಾ. ಶ್ರೀಪಾದ ಭಟ್ ಅವರ ‘ಸಾಹಿತ್ಯ ಕ್ಷೇತ್ರದ ಒಳ ಹೊರಗು’ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ಲೇಖನಗಳು  ‘ನಿಲುಮೆ”ಯಲ್ಲಿ  ಪ್ರಕಟವಾಗಿದೆ. (೨೭/೩/೨೦೧೪, ೧೨/೪ ಮತ್ತು ೨೪/೪). ಅವರ ಈ ಲೇಖನಗಳ ಬಗ್ಗೆ ‘ನಿಲುಮೆ’ಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನಾನೂ ಸಹ ಆ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳ ಮುಂದುವರಿದ ಭಾಗವಾಗಿ ಈ ಲೇಖನ ಬರೆದಿದ್ದೇನೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ/ವಿಮರ್ಶಕರ ನಡುವೆ ಅಂತಹ ಸೌಹಾರ್ದಯುತ ಸಂಬಂಧವೇನೂ ಇಲ್ಲ. ಇವೆರಡರ ನಡುವೆ ಇರುವ ಅಷ್ಟಿಷ್ಟು ನಂಟನ್ನು ಆಗಾಗ ಕಗ್ಗಂಟಾಗಿಸುವ ಸನ್ನಿವೇಶವನ್ನು ‘ಶೀತಲ ಸಮರ’, ಮುಸುಕಿನೊಳಗಿನ ಗುದ್ದಾಟ’ ಅಥವಾ ‘ಬೂದಿ ಮುಚ್ಚಿದ ಕೆಂಡ’  ಇಂತಹ ವಿಶೇಷಣಗಳಿಂದ ವಿವರಿಸಬಹುದು. ಕಾಲಾನುಕಾಲಕ್ಕೆ ವಿಮರ್ಶೆಯ ಪರಿಭಾಷೆಗಳು (=ಲಕ್ಷಣ; ನಿರೂಪಣೆ) ಬದಲಾಗುತ್ತಾ ಬಂದಿವೆ. ವಿಮರ್ಶೆಯೆಂದರೆ ಏನು? ಎಂಬ ಮೂಲಭೂತ ಪ್ರಶ್ನೆಯಿಂದ ಹಿಡಿದು ,ವಿಮರ್ಶೆಯೆಂದರೆ (ಮತ್ತು  ಆ ಮೂಲಕ ಪರೋಕ್ಷವಾಗಿ ಸಾಹಿತ್ಯವೆಂದರೆ)  ‘ಹೀಗೆ ಇರತಕ್ಕದ್ದು’ ಎಂದು ವ್ಯಾಖ್ಯಾನಿಸುವ ಅತ್ಯುತ್ಸಾಹದ, ಆತುರದ ಮಾತುಗಳೂ ಬಂದು ಹೋಗಿವೆ.

ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯಲ್ಲಿ ಒಂದೆರೆಡು ಲೈಂಗಿಕ ಪ್ರಸಂಗಗಳನ್ನು ವಿವರವಾಗಿ ವರ್ಣಿಸಿದಾಗ ‘ಪುಟ್ಟಪ್ಪನವರಿಗೆ ಈ ವಯಸ್ಸಿನಲ್ಲಿ ಈ ಚಪಲವೇಕೆ?’ ಎಂದು ಅಂದಿನ ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು. ನವ್ಯಕಾವ್ಯ/ಸಾಹಿತ್ಯ ಬಂದಾಗ ಅದರಲ್ಲಿ  ಕೆಲವೊಮ್ಮೆ ವಾಚ್ಯವಾಗಿ  ಮತ್ತು ಕೆಲವುಬಾರಿ  ಸೂಚ್ಯವಾಗಿ ಇರುತ್ತಿದ್ದ ಲೈಂಗಿಕ ಅಂಶಗಳು ಹಾಗು  ಅದಕ್ಕೆ ಸಂಬಂಧಿಸಿದ ಪ್ರತಿಮೆ ಪ್ರತೀಕಗಳಿಂದ  ಆ  ಕಾಲದ  ಹಿರಿಯರಿಗೆ ಇರುಸು ಮುರುಸು ಆಗಿದ್ದುಂಟು. ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಕವನ ಪ್ರಕಟವಾದಾಗ (ಬಹುಶಃ ಪ್ರಜಾವಾಣಿ ಪತ್ರಿಕೆಯಲ್ಲಿರಬಹುದು)  ಅದನ್ನು ಓದಿದ ಡಿ ವಿ ಜಿ ಅವರು ಬಹಳ ಸಿಟ್ಟಾಗಿ ಇಂತಹ ಬರವಣಿಗೆಯನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರಂತೆ. ಆಗಿನ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಅಡಿಗರಿಗೆ ‘ನಿಮ್ಮ ಮೇಲೆ ಇಂಥದ್ದೊಂದು ದೂರು ಬಂದಿದೆ. ಇದಕ್ಕೇನು ಉತ್ತರ’ ಎಂದು ಕೇಳಿ ಪತ್ರ ಬರೆದಿದ್ದರಂತೆ. (ವಿವರಗಳಿಗೆ ನೋಡಿ ಯು ಆರ್ ಅನಂತಮೂರ್ತಿ ಅವರ ‘ಸುರಗಿ’ ಪುಟ  ೧೨೪ ಪ್ರಥಮ ಮುದ್ರಣ ೨೦೧೨ ಪ್ರಕಾಶಕರು–ಅಕ್ಷರ ಪ್ರಕಾಶನ  ಹೆಗ್ಗೋಡು  ಸಾಗರ)  ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸಾಮಾನ್ಯ ಜನರಿಗೂ ತಿಳಿಸುವ ರೀತಿಯಲ್ಲಿ ಸಾಹಿತ್ಯ ರಚಿಸ ಬೇಕೆಂದು ಬಂದ  ಪ್ರಗತಿಶೀಲ ಸಾಹಿತ್ಯದ ಬಗ್ಗೆ ಮಾತನಾಡುತ್ತಾ  ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರು  ತಮ್ಮ “ಕವಲುದಾರಿಯಲ್ಲಿ ಕನ್ನಡ ವಿಮರ್ಶೆ”  (ಪ್ರಕಾಶಕರು: ಪ್ರಸಾರಾಂಗ  ಬೆಂಗಳೂರು ವಿ ವಿ  ಬೆಂಗಳೂರು  ೫೬) ಎಂಬ ಕೃತಿಯಲ್ಲಿ  ಹೇಳಿದ ಒಂದು ಮಾತು ಗಮನಾರ್ಹವಾಗಿದೆ. ‘ಅನಕೃ’ ಮತ್ತು ಇತರ ಪ್ರಗತಿಶೀಲ ಸಾಹಿತಿಗಳು ‘ವೇಶ್ಯಾ ಸಮಸ್ಯೆಯನ್ನು ಚಿತ್ರಿಸಲು ಹೊರಟು ವೇಶ್ಯಾವಾಟಿಕೆಗಳ ಚಿತ್ರಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು ‘. ಇಂತಹ ಸಾಹಿತ್ಯವನ್ನು ಓದಿದಾಗ ಆಗುವ “ಆ ಕ್ಷಣದ” ಆಕರ್ಷಣೆ ಬಿಟ್ಟು ಬೇರೆ  ಆಯಾಮಗಳನ್ನು ಅವು ನೀಡಲಾಗಲಿಲ್ಲ.  ಪ್ರಗತಿಶೀಲರು ಕೇವಲ ವೇಶ್ಯಾ ಸಮಸ್ಯೆಯನ್ನು ಮಾತ್ರ ಚಿತ್ರಿಸಿದರು ಎಂದು ಇದರ ಅರ್ಥವಲ್ಲ. ಅವರು ಯಾವುದೇ ಒಂದು ಸಮಸ್ಯೆಯನ್ನು ಪರಿಭಾವಿಸಿದ ರೀತಿಗೆ ಇದು ಒಂದು ಉದಾಹರಣೆ ಅಷ್ಟೇ. ಅಂತಹ  ಸನ್ನಿವೇಶದಲ್ಲೂ  ನಾಲ್ಕಾರು ಗಟ್ಟಿ ಕೃತಿಗಳು ಪ್ರಗತಿಶೀಲರಿಂದ ಬಂದಿತು. ಅದೇ  ಸಮಾಧಾನಪಟ್ಟುಕೊಳ್ಳಬಹುದಾದ ವಿಷಯ.

ಮತ್ತಷ್ಟು ಓದು »