ಸುಪ್ತ ಪ್ರಜ್ನೆಗೆ ಭವಿಷ್ಯವೂ ಗೊತ್ತಿರುತ್ತದೆ !
– ಸಚ್ಚಿದಾನಂದ ಹೆಗಡೆ
ಹಿಂದಿನ ಜನ್ಮಗಳ ನೆನಪುಗಳ ಆಧಾರದ ಮೇಲೆ ಈ ಜನ್ಮದಲ್ಲಿ ಬಂದಿರುವ ಮನೋದೈಹಿಕ ತೊಂದರೆಗಳನ್ನು ನಿವಾರಿಸುವ ಚಿಕಿತ್ಸೆ ಬಗ್ಗೆ ಬಹುಶಃ ಈಗ ಟೀವಿ ನೋಡುವವರಿಗೆಲ್ಲರಿಗೂ ಗೊತ್ತಿದೆ. ನಮ್ಮ ದೇಶದಲ್ಲಿ ಬಹುಶಃ ನೂರಾರು ಜನ ಇಂಥ ಚಿಕಿತ್ಸಕರಿರಬಹುದು. ಸಮ್ಮೋಹನ, ರೇಕಿ, ಪ್ರಾಣಚೈತನ್ಯ ಚಿಕಿತ್ಸೆ, ಕಾಸ್ಮಿಕ್ ಚಿಕಿತ್ಸೆ ಮುಂತಾದ ಹಲವಾರು ಪದ್ಧತಿಗಳ ಮೂಲಕ ಪೂರ್ವಜನ್ಮಗಳ ನೆನಪುಗಳನ್ನು ಕೆದಕಿ, ಈಗಿನ ತೊಂದರೆಯ ಬೇರುಗಳು ಎಲ್ಲಿ ಅಡಗಿವೆ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ಮಾಡುವುದು ಈಗ ಅಪರೂಪವೇನೂ ಅಲ್ಲ.
ಸಮ್ಮೋಹನ ಪದ್ಧತಿಯ ಮೂಲಕ ೪೦೦೦ಕ್ಕೂ ಹೆಚ್ಚು ಪ್ರಯೋಗ ನಡೆಸಿ ಪುನರ್ಜನ್ಮದ ಬಗೆಗೆ ಸಂಶೋಧನೆ ನಡೆಸಿರುವುದಾಗಿ ಖ್ಯಾತ ಅಮೇರಿಕನ್ ಮನೋವೈದ್ಯ ಡಾ. ಬ್ರಿಯಾನ್ ವೇಯ್ಸ್ ಹೇಳಿದ್ದಾನೆ. ತಾನು ನಡೆಸಿದ ಪ್ರಯೋಗಗಳನ್ನು ಉಲ್ಲೇಖಿಸಿ ಆತ ಹತ್ತಾರು ಪುಸ್ತಕಗಳನ್ನು ಬರೆದಿದ್ದು ಅವು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿವೆ. ಅದೇರೀತಿ ಡಾ. ಬ್ರೂಸ್ ಗೋಲ್ಡ್ ಬರ್ಗ್ ಎಂಬ ಚಿಕಿತ್ಸಕನೂ ಜನ್ಮ-ಜನ್ಮಾಂತರಗಳ ವೃತ್ತಾಂತಗಳ ಆಧಾರದ ಮೇಲೆ ತಾನು ನಡೆಸಿದ ಚಿಕಿತ್ಸೆಗಳನ್ನು ಪುಸ್ತಕಗಳ ರೂಪದಲ್ಲಿ ದಾಖಲಿಸಿದ್ದಾನೆ.
ನಾನು ಬೆಂಗಳೂರಿನಲ್ಲಿರುವ ರಾಷ್ಟ್ರಖ್ಯಾತಿಯ ನಿಮ್ಹಾನ್ಸ್ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಯೂ ಪೂರ್ವಜನ್ಮ ಚಿಕಿತ್ಸಕರಿದ್ದಾರೆಂದು ತಿಳಿಯಿತು. (ಅವರ ಹೆಸರುಗಳು ಈಗ ಮರೆತುಹೋಗಿವೆ).
ಇಂಥ ಚಿಕಿತ್ಸೆ-ಪ್ರಯೋಗಗಳಿಗೆ ಸಂಬಂಧಿಸಿ ನಾನು ಕೆಲವು ಪುಸ್ತಕಗಳನ್ನು ಮಗುಚಿಹಾಕಿದ್ದೇನೆ. ಮೊದಮೊದಲು ನನಗೆ ಪೂರ್ವಜನ್ಮದ ನೆನಪುಗಳೆಂದರೆ ತುಂಬ ರೋಮಾಂಚನವಾಗುತ್ತಿತ್ತು. ಆಧ್ಯಾತ್ಮಿಕ ಸಾಧಕರೊಬ್ಬರು ನನ್ನ ಕೆಲವು ಪೂರ್ವಜನ್ಮಗಳ ಬಗ್ಗೆ ಹೊಳಹುಗಳನ್ನು ನೀಡಿದಾಗಲೂ ನನಗೆ ಬಹಳ ಆಶ್ಚರ್ಯವೆನಿಸಿತ್ತು. ಆ ಸಾಧಕರು ನನ್ನ ಈ ಜನ್ಮದ ಒಂದು ವಿಚಿತ್ರ ಸಮಸ್ಯೆಯ ಮೂಲ ಹಿಂದಿನ ಒಂದು ಜನ್ಮದಲ್ಲಿದ್ದುದರ ಬಗ್ಗೆ ಹೇಳಿದಾಗ ನನ್ನ ಆ ಸಮಸ್ಯೆ ಬಹುಮಟ್ಟಿಗೆ ಪರಿಹಾರ ಕಂಡಿತ್ತು. ಆದರೆ ಈಗ ನನಗೆ ಇಂಥ ಸಂಗತಿಗಳು ಸಹಜ ಎನ್ನಿಸತೊಡಗಿವೆ. ಆಧ್ಯಾತ್ಮಿಕ ಸಾಹಿತ್ಯದಲ್ಲಂತೂ ಹಿಂದಿನ ಜನ್ಮಗಳ ಕರ್ಮ ಅನುಭವಿಸುವ ವಿಷಯ ಧಾರಾಳವಾಗಿ ಸಿಗುತ್ತವೆ.