ಮೂ(ರ್ತಿ)ತ್ರ ವಿಸರ್ಜನೆ ಮತ್ತು ಕಲಬುರ್ಗಿಯ ಅಸಹನೆ..
ಹೃಷಿಕೇಶ್, ಚಿಕ್ಕಮಗಳೂರು
’ಸಂಸ್ಕಾರ’ದ ನಾರಾಯಣಪ್ಪ ಸಂಪ್ರದಾಯವನ್ನೇ ತಿರಸ್ಕರಿಸಿ ಕೊನೆಗೂ ಯಾರಿಗೂ ಬೇಡವಾದ ಶವವನ್ನಾಗಿ ಮಲಗಿಸಿದ ಅನಂತ ಮೂರ್ತಿ, ಸೂರ್ಯನ ಕುದುರೆಯಲ್ಲಿ ಹಡೆವೆಂಕಟನ ಮೂಲಕ ಆಧುನೀಕತೆ ಮತ್ತು ಸಾಂಪ್ರದಾಯಿಕತೆಯ ದ್ವಂದ್ವಗಳನ್ನು ಮುಂದಿಡುತ್ತಾರೆ. ಬೆತ್ತಲೆ ಪೂಜೆ ಏಕೆ ಕೂಡದು? ಎಂಬ ಪುಸ್ತಕದಲ್ಲಿಯೂ ಇಂತಹ ದ್ವಂದ್ವ ಇರುವುದನ್ನು ಮೂರ್ತಿಯವರೆ ಒಪ್ಪಿಕೊಳ್ಳುತ್ತಾರೆ, ಅಂದರೆ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದು ದ್ವಂದ್ವವಾಗಿದೆ. ಮೂರ್ತಿಯವರು ನಿಜವಾಗಿಯೂ ನಾರಾಯಣಪ್ಪನೋ ಅಥವಾ ದ್ವಂದ್ವದಲ್ಲಿ ಸಿಲುಕಿಕೊಂಡಿರುವ ವಿದ್ಯಾವಂತ ಭಾರತೀಯನೋ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಅವರು ಸಂಪ್ರದಾಯ ಮತ್ತು ಆಧುನೀಕತೆಗಳ ನಡುವೆ ಅನುಸಂಧಾನ ನಡೆಸುತ್ತಿರುವ ಸೃಜನಶೀಲ ಚಿಂತಕ ಎಂದೇ ನಂಬಿಕೊಂಡಿದ್ದೆ.
ಆದರೆ, ಇತ್ತೀಚಿನ ಮೂರ್ತಿಯವರ ಹೇಳಿಕೆಗಳು ಹಾಗೂ ಅವರ ಕುರಿತ ಹೇಳಿಕೆಗಳು ಇವರು ಎಲ್ಲಿಗೂ ಸಲ್ಲದವರು ಎಂಬ ಅಭಿಪ್ರಾಯವನ್ನು ಹುಟ್ಟಿಸುತ್ತಿದೆ. ಕಾದಂಬರಿ, ಕಥೆಗಳಲ್ಲಿನ ದ್ವಂದ್ವಗಳು ಒಬ್ಬ ವ್ಯಕ್ತಿಯಾಗಿ ಅವರಿಗೆ ಕಾಡಲೇ ಇಲ್ಲ ಎಂಬುದು ಇತ್ತೀಚಿನ ನನ್ನ ಅನುಮಾನ. ಹಾಗಾದರೆ ಅವರು ಬರೆದದ್ದು ಹಾಗೂ ಈಗ ಮಾತನಾಡುತ್ತಿರುವುದು ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳು ಎಂದು ತೋರುತ್ತವೆ, ಅಂದರೆ ಹಿಪೋಕ್ರಾಟ್ ಎನ್ನದೆ ವಿಧಿ ಇಲ್ಲ. ಇರಲಿ, ಈಗ ಮೂತ್ರ ವಿಸರ್ಜನೆಯ ಕುರಿತು ಅವರ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಮತ್ತಷ್ಟು ಓದು
ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ
– ವಿನಾಯಕ್ ಹಂಪಿಹೊಳಿ
ನೀವೇನೋ ಹಳೆಗನ್ನಡ, ತಮಿಳು, ಮಲಯಾಳಂ, ತುಳು, ಹವ್ಯಕ ಕನ್ನಡ ಎಲ್ಲಾ ಓದೀರಿ. ಇವೆಲ್ಲಾ ದ್ರವಿಡ ಭಾಷಾಗಳು, ಹಿಂಗಾಗಿ ಋ, ಖ, ಘ, ಙ, ಛ, ಝ, ಞ, ಠ, ಢ, ಥ, ಧ, ಫ, ಭ ಎವೆಲ್ಲ ಅಕ್ಷರಗಳು ಕನ್ನಡದಾಗ ಬ್ಯಾಡಾ ಅಂತನೂ ಹೇಳೀರಿ. ಅಚ್ಚಗನ್ನಡ ಶಬ್ದದಾಗ ಮಹಾಪ್ರಾಣ ಅಕ್ಷರಗಳು ಬರಂಗಿಲ್ಲ ಅಂತನೂ ಅಂದ್ರಿ. ಜತಿಗೆ, ಷ ಬ್ಯಾಡ ಅಂತನೂ ಅಂದ್ರಿ. ಆ ಬದ್ಲಾವಣಿ ನಿಮ್ಮಿಂದನಽ ಶುರೂನೂ ಮಾಡಿದ್ರಿ. ನಿಮ್ಮ ಹೆಸರು ಭಟ್ಟ ಅಂತಿತ್ತು ಅದನ್ನು ಬಟ್ ಅಂತ ಮಾಡ್ಕೊಂಡೀರಿ. ಇರ್ಲಿ. ಇಂಗ್ಲೀಷನ್ಯಾಗ ಬರ್ಯೋಮುಂದ ಜ್ವಾಕಿ. ಆದ್ರ ನಿಮ್ಮ ಸಲಹಾ ಸರ್ಕಾರ ಕೇಳ್ತದೋ ಬಿಡ್ತದೋ, ಆದರೆ ಅದಕ್ಕೂ ಮೊದ್ಲ ನನ್ನ ಮಾತಿಗೂ ಸ್ವಲ್ಪ ಬೆಲಿ ಕೊಟ್ಟು ವಿಚಾರ ಮಾಡ್ರೀ..
ನಾವು ಧಾರವಾಡದ ಮಂದಿ. ನಮ್ಮ ಉತ್ತರ ಕರ್ನಾಟಕದ ಕನ್ನಡ, ಕನ್ನಡ ಹೌದೋ ಅಲ್ಲೋ? ಉತ್ತರ ಕರ್ನಾಟಕದ ಕನ್ನಡದಾಗ, ಸಾಹಿತ್ಯ, ಕಾದಂಬರಿ, ಕಾವ್ಯಗಳು ಐತೋ ಇಲ್ಲೋ? ಮುಂದನೂ ಈ ಕನ್ನಡ ಇರ್ಬಕೋ ಬ್ಯಾಡೋ? ನೀವು ಎಲ್ಲ ಮಹಾಪ್ರಾಣಗಳನ್ನು ನಮ್ಮ ಕನ್ನಡದ ಲಿಪಿಯಿಂದ ತಗದ್ರ ನಮ್ಮ ಸಾಹಿತ್ಯಕ್ಕ ಯಾವ ಲಿಪಿ ಇಟ್ಕೋಳೂಣು? ಬೆಂಗ್ಳೂರವ್ರು ಸತ್ಯ ಅನ್ಲಿಕ್ಕೆ ನಿಜ, ದಿಟ ಅನ್ನು ಪದ ಉಪಯೋಗಸ್ತಾರ. ಆದ್ರ ನಮ್ದು ಗಂಡ್ ಕನ್ನಡ ನೋಡ್ರಿ. ಖರೇನ ಹೇಳ್ತೀನಿ, ನಾವು ’ಖರೆ’ ಅನ್ನುಮುಂದ ವಟ್ಟ ’ಕರೆ’ ಅಂತ ಯಾವತ್ತೂ ಅನ್ನಂಗಿಲ್ರೀ. ನೀವು ಹವ್ಯಕರು, ಅಡಿಗಿ ಹೆಂಗಾಗ್ಯದ ಅಂತ ಕೇಳಿದ್ರ ’ಬಾಽಽರಿ ಚೊಲೊ ಆಯ್ದು ಮಾರಾಯ’ ಅಂತೀರಿ. ಆದ್ರ ನಾವು ನಮ್ಮ ಗಂಡ್ ಕನ್ನಡದಾಗ ’ಭಾರೀಽಽ ಛೊಲೋ ಆಗ್ಯದ್ ಲೇ ಮಂಗ್ಯಾ’ ಅಂತೀವಿ.
ನಾವು ಕಿಟಕಿ ಅನ್ನಂಗಿಲ್ಲ. ಸ್ಪಷ್ಟ ಖಿಡಕಿ ಅಂತೀವಿ. ಸ್ಪಷ್ಟ ಶಬ್ದದಾಗೂ ’ಷ’ ಅಕ್ಷರ ಭಾರೀ ಖಡಕ್ಕಾಗಿ ಬರ್ತೈತಿ ನಮ್ಮ ಮಾತ್ನ್ಯಾಗ. ನಾವು ನಿಮ್ಮಂಗ ಗಂಟೆ ಅನ್ನಂಗಿಲ್ರೀ. ಫಕ್ತ ಘಂಟಿ ಅಂತೀವಿ. ನೀವು ಸೆಲೆ ಅಂತೀರಿ. ನಾವು ನೀರಿನ ಝರಿ ಅಂತೀವಿ. ಅನ್ನಕ್ಕ ಹಚ್ಕೊಳ್ಳಿಕ್ಕೆ ಮೈದಾ ಹಿಟ್ಟಿಲೆ ಝುಣಕ ಅಂತ ಮಾಡ್ತೇವಿ. ಬಯ್ಯೋಮುಂದ ’ಭಾಮ್ಟ್ಯಾ’ ಅಂತ ಬೈತೀವಿ. ನಿಮಗ ಉಚ್ಚಾರ ಮಾಡ್ಲಿಕ್ಕೆ ತ್ರಾಸಾಗ್ತದ, ಅದ್ರ ನಮಗ ಅಗ್ದೀ ಸರಽಽಳ ನೋಡ್ರಿ. ಯಾರರೇ ಭಾಳಽಽ ದಪ್ಪ್ ಇದ್ರ ಢೇಪ್ಯಾ ಅಂತೀವಿ. ಠೇವಣಿ ಶಬ್ದ ಹೆಂಗದನೋ ಹಂಗ ಬಳಸ್ತೀವಿ. ಬಹಳ ಅನ್ನಂಗಿಲ್ರೀ. ತಟ್ಟೆ ಅನ್ನಂಗಿಲ್ರೀ. ಥಾಬಾಣ ಅಂತೀವಿ. ಕಚ್ಚಿ ಉಡೋ ದೊಡ್ಡ ಪಂಜಾಕ್ಕ ಧೋತ್ರ ಅಂತೀವಿ.