ಇತಿಹಾಸ ಮರು ಕಲಿಸಬೇಕೇ?
-ಅ.ಸು.ರವೀಂದ್ರ,ಶಿವಮೊಗ್ಗ
History Repeats. ಇತಿಹಾಸ ಮರುಕಳಿಸುತ್ತಿದೆ. ಯಾವುದೇ ಮಹತ್ತರ ಘಟನೆ ಪುನರಾವರ್ತನೆಗೊಂಡಾಗ ಮಾಧ್ಯಮಗಳಲ್ಲಿ ಕೇಳಿ ಬರುವ ಪದಗಳಿವು. ಆದರೆ ಈಗಿನ ಚರ್ಚೆಯ ವಿಷಯ ಇತಿಹಾಸವನ್ನು ಮರು `ಕಲಿಸುವ` ಬಗ್ಗೆ. ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಭಾ.ಜ.ಪ. ಸರ್ಕಾರ ಅಧಿಕಾರಕ್ಕೆ ಬರುತ್ತಲೆ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಯ ಪ್ರಕಾರ ಇತಿಹಾಸದ ಪಾಠಗಳನ್ನು ತಿದ್ದಬಹುದೆಂಬ ಹುಯಿಲು ಎಡಪಂಥೀಯ ಹಾಗೂ ಮೆಕಾಲೆ ಗೋತ್ರಜರಿಂದ ಆರಂಭವಾಗಿದೆ. ಎನ್.ಡಿ.ಎ. ಸರ್ಕಾರದ ಅಧಿಕಾರದ ಸಂದರ್ಭದಲ್ಲಿಯೇ ಆಗಿನ ಸಚಿವ ಶ್ರೀ ಮುರಳಿ ಮನೋಹರ ಜೋಷಿಯವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರಾದರೂ ಹೆಚ್ಚಿನ ಯಶ ಕಂಡಿರಲಿಲ್ಲ. ಆಗ ಹುಸಿ ಜಾತ್ಯಾತೀತ ವಾದದ ಭ್ರಮೆ ನಮ್ಮ ರಾಜಕೀಯ ಕ್ಷೇತ್ರವನ್ನು ಆವರಿಸಿದ್ದ ಕಾಲ. ಮೈತ್ರಿಕೂಟದ ಮಿತ್ರ ಪಕ್ಷಗಳೂ ಈ ವಿಚಾರದಲ್ಲಿ ಭಾ.ಜ.ಪ.ವನ್ನು ಬೆಂಬಲಿಸಲು ತಯಾರಿರಲಿಲ್ಲ. ಬೌದ್ಧಿಕ ಕ್ಷೇತ್ರದಲ್ಲಿ ದಶಮಾನಗಳಿಂದ ಪ್ರತಿಷ್ಠಾಪಿಸಿದ್ದ ವರ್ಗಕ್ಕೆ ಇತಿಹಾಸ, ಪರಂಪರೆ, ಸ್ವಾಭಿಮಾನಿ ರಾಷ್ಟ್ರ ಭಕ್ತಿಯಂತಹ ವಿಷಯಗಳು ಹೇಗೂ ವರ್ಜ್ಯವಾಗಿದ್ದವು. ಇವರ ತಾಳಕ್ಕೆ ಕುಣಿಯುವ ಮಾಧ್ಯಮಗಳು ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಬೊಬ್ಬೆ ಹಾಕಿ ಈ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲು ಅವಕಾಶವನ್ನೇ ಕೊಡಲಿಲ್ಲ. ಸ್ವಯಂ ಬಹುಮತವಿಲ್ಲದ ಪಕ್ಷ ದಿಟ್ಟ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ಕೈಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಗಂಗೆ ಯಮುನೆಯರಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಾಪಿತ ಎಲ್ಲಾ ಸೈದ್ಧಾಂತಿಕ ಮಿಥ್ಯೆಗಳನ್ನು ನಿವಾಳಿಸಿ ಮತದಾರ ತೀರ್ಪು ನೀಡಿದ್ದಾನೆ, ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಿ ಹೊಸ ಶಕೆಯನ್ನು ಆರಂಭಿಸುವ ಆಡಳಿತ ಪಕ್ಷದ ಭರವಸೆಗಳನ್ನು ನಂಬಿ ಆದೇಶ ನೀಡಿದ್ದಾನೆ.
ಈಗ ಪ್ರಶ್ನೆ ಎದ್ದಿರುವುದು ನಮಗೆ ಇಂತಹ ಇತಿಹಾಸದ ಪಾಠಗಳ ಪುನರ್ವಿಮರ್ಶೆ ಅಗತ್ಯವಿದೆಯೋ ಇಲ್ಲವೋ ಎಂಬುದು. ಇದೆ ಎಂದಾದಲ್ಲಿ ಹಿಂದಿನ ವ್ಯವಸ್ಥೆಯ ಲೋಪವನ್ನು ಒಫ್ಫಿಕೊಂಡು ಸರಿಪಡಿಸಿಕೊಳ್ಳಬೇಕು. ಇಲ್ಲವೆಂದಾದಲ್ಲಿ ಈವರೆಗೆ ಅನುಸರಿಸಿದ ಕ್ರಮಗಳಿಂದ ನಾವು ಸಾಧಿಸಿರುವುದಾದರೂ ಏನು ಎಂಬುದರ ಮೌಲ್ಯಮಾಪನ ಆಗಬೇಕು. ೧೯೪೭ ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿದಾಗಲೇ ಇಂತಹ ಕ್ರಮದ ಅಗತ್ಯ ಇತ್ತು. ಆಗ ನಮಗೆ ರಾಜಕೀಯ ಸ್ವಾತಂತ್ರ್ಯವೇನೋ ಸಿಕ್ಕಿತ್ತು. ಆದರೆ ಎರಡು ಶತಮಾನಗಳ ಅವರ ಆಡಳಿತದ ಪ್ರಭಾವದಿಂದಾಗಿ ನಮ್ಮ ವೈಚಾರಿಕ, ಸಾಂಸ್ಕೃತಿಕ ವಿಚಾರಗಳ ದಾಸ್ಯದ ಮನಸ್ಥಿತಿ ಬದಲಾಗಲೇ ಇಲ್ಲ. ಪಂಡಿತ್ ನೆಹರೂರವರು ಮನಸ್ಸು ಮಾಡಿದಲ್ಲಿ ಒಂದು ಸ್ವತಂತ್ರ ಸ್ವಾಭಿಮಾನಿ ರಾಷ್ಟ್ರಕ್ಕೆ ಅಗತ್ಯವಾಗಿದ್ದ, ತನ್ನ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನವುಳ್ಳ, ಅಂತಹ ಧೀಃಶಕ್ತಿಯನ್ನು ಪ್ರೇರೇಪಿಸಬಲ್ಲ ನವಪೀಳಿಗೆಯನ್ನು ಬೆಳೆಸಬಹುದಿತ್ತು. ಸ್ವಾತಂತ್ರ್ಯ ಪಡೆದ ಘಳಿಗೆಯಲ್ಲಿನ ಜನಮಾನಸದ ಹುಮ್ಮಸ್ಸು, ಮನಸ್ಥಿತಿ, ಅಂತಹ ಕ್ರಮಗಳಿಗೆ ಪೂರಕವಾಗಿ ಸ್ಪಂದಿಸುವುದರಲ್ಲಿ ಅನುಮಾನವಿರಲಿಲ್ಲ. ಅವರ ಅಂದಿನ ಆಡಳಿತಾತ್ಮಕ ಕ್ರಮಗಳು ಪ್ರಜಾ ಸಂಕುಲಕ್ಕೆ ಹೊಟ್ಟೆ ಬಟ್ತೆ ನೀಡುವ ಮಟ್ಟಿಗೆ ಸೀಮಿತವಾಗಿದ್ದವು ಅನ್ನಿಸುತ್ತವೆ. ದೇಶವೊಂದರ ಚುಕ್ಕಾಣಿ ಹಿಡಿದ ನಾಯಕತ್ವಕ್ಕೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬಲ್ಲ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾದ ಆದ್ಯತೆಗಳೂ ಇರುತ್ತವೆ ಎಂಬುದನ್ನು ಅಂದಿನ ಸರ್ಕಾರ ಮರೆತಿದ್ದೇ ನಾವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವಿಸುತ್ತಿರುವ ಅನಾಥ ಪ್ರಜ್ಞೆಗೆ ಕಾರಣವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.