ಹೊಸ ಚಿಂತನೆ ಮೂಡಿ ಬರಲಿ
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ನಿಜ ಹೇಳಬೇಕೆಂದರೆ 2014ರ ಲೋಕಸಭಾ ಚುನಾವಣೆ ನಮ್ಮಲ್ಲಿನ ನೈಜ ರಾಷ್ಟ್ರೀಯತೆಗೆ ಅದರ ಪರಂಪರಾಗತವಾದ ಜಾತ್ಯಾತೀತತೆಯ ನಿಜ ಅರ್ಥವಂತಿಕೆಗೆ ಮತದಾರ ಕೊಡಬೇಕಾದ ಪ್ರಬುದ್ಧ ತೀರ್ಪು ಎನ್ನಬಹುದುದೇನೋ! ಅದರಲ್ಲೂ ಈ ಚುನಾವಣೆ ಈ ದೇಶದ ಅಲ್ಪಸಂಖ್ಯಾತ-ಬಹುಸಂಖ್ಯಾತರೆಂಬ ಸಂಕುಚಿತ ಅವಕಾಶವಾದಿ ಮನೋಭೂಮಿಕೆಯನ್ನೊದ್ದು, ಈ ದೇಶ ಒಂದು ರಾಷ್ಟ್ರವಾಗಿ, ಜಾತಿ-ಮತಗಳ ಸಣ್ಣತನವನ್ನು ಬದಿಗಿಟ್ಟು, ಈ ದೇಶದ ಭವ್ಯ ಭವಿಷ್ಯವನ್ನು ಕಣ್ತುಂಬಿಕೊಳ್ಳಲು ಈ ದೇಶದ ಶ್ರೀಸಾಮಾನ್ಯನಿಗೆ ಸ್ವತಃ ಆ ಭಗವಂತನೇ ನೀಡಿದ ಅವಕಾಶವೆಂದರೆ ಖಂಡಿತ ಉತ್ಪ್ರೇಕ್ಷೆ ಎಂದು ಭಾವಿಸಬೇಕಿಲ್ಲ. ಅದಲ್ಲೂ ಇಲ್ಲಿನ ಅಲ್ಪಸಂಖ್ಯಾತರೆಂದೇ ಬಿಂಬಿಸಲ್ಪಡುವ ಕ್ರೈಸ್ತ-ಮುಸುಲ್ಮಾನ ಬಂಧುಗಳಿಗೂ ಈ ಚುನಾವಣೆ ಈ ದೇಶದ ತಮ್ಮ ವಾರಸಿಕೆ ಶೃತಪಡಿಸಲು ಇದೊಂದು ಸದವಕಾಶ ಎನ್ನಲು ಅವರು ಸಂಕೋಚಪಡಬೇಕಿಲ್ಲ. ಈ ದೇಶದ ಬಹುತೇಕ ರಾಜಕೀಯ ನಾಯಕರು ಬುದ್ಧಿಜೀವಿವರ್ಗ ಅಕ್ಷರಶಃ ಈ ದೇಶದ ನೈಜ ರಾಷ್ಟ್ರೀಯತೆ ಮತ್ತದರ ಪಾರಂಪರಿಕ ಜಾತ್ಯಾತೀತತೆಯ ವೈಶಾಲ್ಯತೆಯನ್ನು ಪ್ರತಿಪಾದಿಸಲು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ದೇಶದ ಜಾತಿ-ಪಂಥಗಳಿಗೆ ಮೀರಿದ ಈ ರಾಷ್ಟ್ರ ನನ್ನದು, ಈ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಸವಾಲಾಗಿರುವ ಭಾರತದ ಇಂದಿನ ಜಾತ್ಯಾತೀತತೆಯ ವ್ಯಾಖ್ಯಾನದ ನೈಜ ಅರ್ಥವನ್ನು ಪುನರ್ರೂಪಿಸುವ ಅವಕಾಶ ಒದಗಿಬಂದಿರುವುದು ಈ ದೇಶದ ಅಲ್ಪಸಂಖ್ಯಾತರೆಂದು ಕರೆಯಲ್ಪಡುತ್ತಿರುವವರು ಮಾಡಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎಂದರೆ ತಪ್ಪಲ್ಲ. ಈ ದೇಶವನ್ನು ಬ್ರಿಟಿಷರು ಆಳುತ್ತಿದ್ದಾಗ ಹಿಂದುಗಳ ಗುಮ್ಮವನ್ನು ಮುಸಲ್ಮಾನರ ಮುಂದೆ, ಮುಸಲ್ಮಾನರ ಗುಮ್ಮವನ್ನು ಹಿಂದುಗಳ ಮುಂದೆ ತೋರಿಸಿ ಅಖಂಡ ಭಾರತವನ್ನು ತುಂಡಾಗಿಸಿ ಅವರ ಸುತ್ತ ಗಿರಕಿ ಹೊಡೆಯುತ್ತಿದ್ದ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಂದೊಂದು ತುಂಡನ್ನು ಆಳಲು ಕೊಟ್ಟು, ಬ್ರಿಟಿಷರು ಹೋದ ಮೇಲೆ ಇಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ಸ್ ಮಾಡಿದ್ದೇನು?