ವಿಷಯದ ವಿವರಗಳಿಗೆ ದಾಟಿರಿ

ಜೂನ್ 18, 2014

4

ಅಮರು ಶತಕದೊಳಗೊಂದು ಇಣುಕುನೋಟ

‍ನಿಲುಮೆ ಮೂಲಕ

– ಹಂಸಾನಂದಿ

ಅಮರುಶತಕಅಮರುಕ ಎಂಟನೇ ಶತಮಾನದಲ್ಲಿದ್ದ ಒಬ್ಬ ಸಂಸ್ಕೃತ ಕವಿ. ಈಗ ಕಾಶ್ಮೀರದ ರಾಜನೆಂದೂ,  ಮಾಹಿಷ್ಮತಿಯ ರಾಜನೆಂದೂ ಪ್ರತೀತಿಯಿದೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು  ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ. ಇವನ ಕಾವ್ಯದ ಹಲವು ಹಸ್ತಪ್ರತಿಗಳು ದೊರತಿದ್ದು ಮುಖ್ಯವಾಗಿ ಮೂರು ಪಾಠಾಂತರಗಳಿವೆ – ಇವುಗಳಲ್ಲಿ ಇರುವ ಪದ್ಯಗಳೆಲ್ಲ ಎಲ್ಲವೂ ಒಂದೇ ಆಗಿಲ್ಲ. ಅಲ್ಲದೆ, ನಂತರದ ಕೆಲವು ಕವಿಗಳೂ ಅಮರುಕನದ್ದೆಂದು ಕೆಲವು ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಉದಾಹರಿಸಿಯೂ ಇದ್ದಾರೆ. ಇವೆಲ್ಲಾ ಸೇರಿಸಿ, ಅಮರುಕನದ್ದೆಂದು ಹೇಳಲಾಗುವ ಸುಮಾರು ೧೬೦ ಪದ್ಯಗಳಿವೆ.

ಇವನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ  ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಲು ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕನ ದೇಹದಲ್ಲಿ  ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳ ಸತ್ಯಾಸತ್ಯತೆ ಹೇಗೇ ಇರಲಿ  – ಅಮರು ಬರೆದ ಪದ್ಯಗಳು ಸಾವಿರದಿನ್ನೂರು ವರ್ಷಗಳ ನಂತರವೂ ರಸಿಕರ ಮನ ಸೆಳೆಯುತ್ತಿವೆ. ಅಂದ ಹಾಗೆ , ಎಸ್ ಎಲ್ ಭೈರಪ್ಪ ಅವರ ’ಸಾರ್ಥ’ ಕಾದಂಬರಿಯನ್ನು ಓದಿದ್ದವರಿಗೆ ಅದರಲ್ಲಿ ಬರುವ ಅಮರುಕನ ಪಾತ್ರ ನೆನಪಾದರೂ ಆಗಬಹುದೇನೋ.

ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ. ಹಾಗಾಗಿ ಅವುಗಳ ಅನುವಾದ ಸ್ವಲ್ಪ ಕಷ್ಟವೇ ಆದರೂ, ಮನಸ್ಸಿಗೆ ಬಹಳ ತೃಪ್ತಿ ಕೊಡುವಂತಹವು. ನಾನು ಮಾಡಿರುವ ಅನುವಾದಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.

****
ಯಾವಾಗಲೋ ಒಮ್ಮೆ ನಾಯಕಿ ತನ್ನ ನಲ್ಲನಲ್ಲಿ ಹುಸಿಮುನಿಸು ತೋರಿದಳು. ಆದರೆ ಅದು ಸುಳ್ಳು ಎಂದರಿಯದ ಅವನು ದೂರವಾಗಿಬಿಟ್ಟ. ಈಗ ಇವಳಿಗೆ ಉಳಿದಿದ್ದೇನು? ಬರೀ ಒಂಟಿತನ. ತನ್ನ ಕೊರಗನ್ನು ಹೇಳಿಕೊಳ್ಳುವುದಕ್ಕೆ ಒಬ್ಬ ಗೆಳತಿಯಿದ್ದಾಳಲ್ಲ, ಸದ್ಯ! ಇಲ್ಲದಿದ್ದರೆ ಇವಳ ಪಾಡು ಏನಾಗುತ್ತಿತ್ತೋ!  (ಅಮರುಶತಕ: ೧೫)

ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು
ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ
ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ
ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?

ನಲ್ಲನಿಗೆ ತನ್ನಲ್ಲಿ ಮೊದಲಿದ್ದ ಪ್ರೇಮ ದೂರವಾಗಿದೆ ಎಂಬ ಅನಿಸಿಕೆ ಇವಳಲ್ಲಿ. ಆದರೆ ಅವನನ್ನೇ ನೆನೆವುದನ್ನೂ ಬಿಡಲಾರಳು. ತನ್ನ ಅಳಲನ್ನು ತನ್ನ ಗೆಳತಿಗಲ್ಲದೇ ಇನ್ನಾರಿಗೆ ತಾನೇ ಹೇಳುವಳು? (ಅಮರುಶತಕ – ೩೮)

ಒಲವಿನಾ ಕಟ್ಟುಗಳನೆಲ್ಲ  ಕಳಚಿ
ಬಲುದೂರವಾಗಿಸಿದ ಪ್ರೀತಿಯಾದರವ
ನಲುಮೆ ಭಾವಗಳನ್ನು ಹಿಂದೆ ಸರಿಸಿ
ಸಲೆ ಹೊಸಬನಂತವನು ದೂರ ಹೋದ!

ಕಣ್ಣಾರೆ ಕಂಡರೂ ಈ ಕಡೆಗಣಿಕೆಯನ್ನು
ಮುನ್ನದಾದಿನಗಳನೆ ಮತ್ತೆ ನೆನೆನೆನೆದೂ
ನುಚ್ಚುನೂರಾಗದೆಯೆ ಉಳಿಯಿತೇಕೆ
ಎನ್ನೆದೆಯು ಎಂಬುದನು ನಾನರಿಯೆ ಗೆಳತಿ!

ಆ ಗೆಳತಿಯೋ ಸ್ವಲ್ಪ ಲೋಕದ ರೀತಿ ನೀತಿಗಳನ್ನು ಅರಿತವಳು ಅಂತ ಕಾಣುತ್ತದೆ. ಅವಳು ಕೊಡುವ ಸಲಹೆಯೇನೋ ತಕ್ಕದ್ದೇ. ಆದರೆ, ಪ್ರೇಮದಲ್ಲಿ ಬಿದ್ದವಳಿಗೆ ಆ ಸಲಹೆ ಒಪ್ಪುತ್ತದೆಯೇ? ( ಅಮರುಶತಕ: ೭೦)

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ
ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ?
ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ
ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು!

ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು
ಬೆದರುಮೊಗದಲ್ಲೀಕೆ  ಮರುನುಡಿಯುತಿಹಳು
ಮೆಲ್ಲ ನುಡಿ ಸಖಿ ನೀನು! ಕೇಳಿಬಿಟ್ಟಾನವನು
ನಲ್ಲ ನೆಲೆನಿಂತಿರುವನೆನ್ನ ಎದೆಯಲ್ಲೆ!

ಕೋಪ ಕಳೆದು ಮತ್ತೆ ಬರುವನೇನೋ ಪ್ರಿಯಕರ ಎಂದು ಇವಳು ಕಾದದ್ದೇ ಬಂತು. ಅವನು ಬರಲೇ ಇಲ್ಲ. ಕೊನೆಗೆ ಕೋಪ ಮೀರಿ ಗೆಳತಿಗೆ ಈತನನ್ನು ಮರೆಯುತ್ತೇನೆಂದು ಅವಳು ಹೇಳಿದ್ದು ನಿಜವೇ? (ಅಮರುಶತಕ: ೭೩)

ಗೆಳತಿ! ನನ್ನೆದೆ
ಒಡೆದರೂ ಸರಿ ;
ಎನ್ನೊಡಲ ಆ ಮದನ
ಸೊರಗಿಸಿದರೂ ಸರಿ ;
ಒಂದೆಡೆ ನಿಲ್ಲದವನಲ್ಲಿ
ನಾನದೆಂತು ಒಲವನಿಡಲೇ?

ಹೀಗೆ ಸಿಟ್ಟಿನಲಿ
ಸೆಡವಿನಲಿ ನುಡಿಯುತ್ತಲೇ
ನಲ್ಲನ ದಾರಿಯ
ಕಳವಳದಲಿ
ಬಿಡದೇ ನೋಡಿದಳು
ಚಿಗರೆಗಣ್ಣಿ!

ಇವಳ ಪುಣ್ಯವೋ ಅವನ ಪುಣ್ಯವೋ, ಕೊನೆಗೂ ಪ್ರಿಯತಮ ತನ್ನಲ್ಲಿಗೆ ಮರಳುತಿದ್ದಾನೆಂಬ ಸಿಹಿ ಸುದ್ದಿ ಹೇಗೋ ಇವಳಿಗೆ ಮುಟ್ಟಿತು. ಆದರೆ ಬಂದವನನ್ನು ಹಾಗೇ ಕರೆದು ಅಪ್ಪಿಕೊಂಡುಬಿಟ್ಟರೆ ಅದು ಇವಳ ಅಭಿಮಾನಕ್ಕೆ ತಕ್ಕುದೇ? ಶಾಂತಂ ಪಾಪಂ! ಸರಿಯಾದ ತಯಾರಿಯನ್ನೇ ನಡೆಸಿದ್ದಾಳೆ ಈಕೆ. ಆದರೆ ಗೆಲುವು ಯಾರದ್ದು? ಕಾಯ್ದು ನೋಡುವುದೊಂದೇ ದಾರಿ (ಅಮರುಶತಕ: ೯೨)

ಹುಬ್ಬು ಗಂಟಿಕ್ಕಿದ್ದಾಯಿತು

ಬಹುಕಾಲ
ಕಣ್ಮುಚ್ಚಿರುವುದನು
ರೂಢಿಸಿದ್ದಾಯ್ತು

ಜೊತೆಗೆ ಅಳುವುದ
ಚೆನ್ನಾಗಿ ಕಲಿಸಿದ್ದಾಯಿತು
ನಗುವನೊತ್ತಾಯದಲಿ
ಮೌನದಲಿ ನಿಲಿಸಾಯ್ತು

ಮನಸ ಹೇಗೋ
ಗಟ್ಟಿ ಮಾಡುತ್ತ
ಕಡುದಿಟ್ಟತನದಲಿ
ಕಟ್ಟಿರಿಸಿದ್ದಾಯಿತು

ಹಮ್ಮು ಬಿಡದಿರಲಿಕೆ
ಎಲ್ಲ ಅಣಿಗೊಳಿಸಾಯ್ತು
ಇನ್ನು ಗೆಲುವನು
ದೇವರಿಗೇ ಬಿಟ್ಟಾಯ್ತು

ಅಂತೂ ಕಾತರದಿಂದ ಕಾಯುತ್ತಿದ್ದವಳಿಗೆ ನಲ್ಲ ಬಾಗಿಲಲ್ಲಿ ಬಂದುದು ಕಂಡಿತಲ್ಲ. ಏನು ಮಾಡುವಳು  ಅವಳೀಗ? ನೇರವಾಗಿ ಅವನನ್ನು ಒಪ್ಪುವಳೇ? ಅಪ್ಪುವಳೇ? ಮತ್ತೆ ಹುಸಿಮುನಿಸು ತೋರಬಾರದಲ್ಲವೇ? ( ಅಮರುಶತಕ: ೧೫)

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ
ಪಕ್ಕದಲಿ ಕೂರುವುದ ತಪ್ಪಿಸಿದಳು ;
ತಾಂಬೂಲವನು ಕೊಡುವ ನೆವದಿಂದ ಒಳಹೋಗಿ
ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ;
ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ
ಅವನ ಮಾತಿಗೆ ತಾನು  ಸಿಗದಿದ್ದಳು ;
ಮಾಡುವುಪಚಾರದಲಿ ಕೊರತೆಯನು ಕಾಣಿಸದೆ
ಚದುರೆ ಮನಸಿನ ಮುನಿಸ ಮೈವೆತ್ತಳು !

ಇಷ್ಟೆಲ್ಲಾ ನಡೆದರೆ ಅವನಿಗೆ ಪ್ರೇಯಸಿಯ ಅಂತರಂಗ ತಿಳಿಯದೇ ಹೋದೀತೇ? ಇವಳು ಏನು ಜಾಣತನ ಮಾಡಿದರೂ, ಅವನು ಬಳಿಗೆ ಬಾರದೇ ಹೋಗುವನೇ? ( ಅಮರುಶತಕ: ೪೪)

ದೂರದಿಂದಲಿ ಹುರುಪಿನಲಿ
ಬಂದರೆಲ್ಲಿಗೋ ಜಾರಿದವು
ಮಾತನಾಡಿಸಲು
ಥಟ್ಟನೇ ಬಿರಿದವು
ಅಪ್ಪಿಕೊಂಡರೆ
ಕೆಂಪಾದುವು
ಉಡುಗೆಯನು  ಹಿಡಿಯೆ
ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು

ಪಾದವೇ ಗತಿಯೆನುತ
ಅವಳಡಿಗೆ ಬೀಳಲು
ಚಣ ಮಾತ್ರದಲಿ
ನೀರು ತುಂಬಿದವು

ಹಾ! ಏನಚ್ಚರಿಯೊ!
ಇವಳ ಕಣ್ಣುಗಳು
ನಲ್ಲನ ತಪ್ಪಿಗೆ  ತಕ್ಕ
ಚತುರತೆಯ ತಾಳಿಹವು!

ಅಂತೂ ಅವನು ಇವಳ ಕಾಲಿಗೆ ಬಿದ್ದನಲ್ಲ? ಇನ್ನು ಮುನಿಸೇಕಿರುವುದು? ಅಂತೂ ಇಂತೂ ಕಥೆ ಸುಖಾಂತ!

(ಕೊ: ಅಮರುಶತಕದ ಪದ್ಯಗಳೆಲ್ಲ ಬಿಡಿಹೂಗಳಂತೆ, ಬಿಡಿಮುತ್ತುಗಳಂತೆ. ಅವುಗಳಿಗೆ ಮುಕ್ತಕಗಳೆಂದೇ ಹೆಸರು. ನಾನು ಕೆಲವನ್ನು ಒಂದಾದರೊಂದು ಬರುವಂದೆ ಸೇರಿಸಿ, ಒಂದು ಕಥೆಯಂತೆ ಹೇಳಿದ್ದೇನೆ ಅಷ್ಟೇ! )

ಚಿತ್ರ ಕೃಪೆ : http://www.indianminiaturepaintings.co.uk (Peter Blohm)

4 ಟಿಪ್ಪಣಿಗಳು Post a comment
  1. Universal's avatar
    Universal
    ಜೂನ್ 18 2014

    ಇಷ್ಟವಿಲ್ಲದೇ ಓದಿದೆ – ಕಷ್ಟಪಡದೇ ಮುಗಿಸಿದೆ.
    ಭಾಷಾಂತರ ಚೆನ್ನಾಗಿ ಬಂದಿದೆ – ಹಂಸಾನಂದಿಯವರೇ!

    ಉತ್ತರ
  2. Hamsanandi (@hamsanandi)'s avatar
    ಜೂನ್ 18 2014

    ಧನ್ಯವಾದಗಳು Universal – ಆದರೆ “ಇಷ್ಟವಿಲ್ಲದೇ ಓದಿದೆ” – ಅಂದಿದ್ದು ಯಾಕೆ ಅಂತ ಗೊತ್ತಾಗಲಿಲ್ಲ!

    ಉತ್ತರ
  3. Chidambara.R.'s avatar
    ಜೂನ್ 26 2014

    Citizens of three cities got ‘uchitavagi oLLeyadinagaLannu paDediddaare’

    ಉತ್ತರ
  4. simha sn's avatar
    simha sn
    ಜೂನ್ 27 2014

    ಚೆನ್ನಾಗಿವೆ. ವೆಲ್ಲಾಲ ಸತ್ಯಂ ಅವ್ರ ಶೃಂಗಾರ ರಸರಾತ್ರಿಗಳು ಅನ್ನೋ ಅನುವಾದ ನೋಡಿದ್ದೀರಾ?

    ಉತ್ತರ

Leave a reply to Hamsanandi (@hamsanandi) ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments