ವಿಷಯದ ವಿವರಗಳಿಗೆ ದಾಟಿರಿ

ಜನವರಿ 19, 2012

6

ಸ್ವಾಮಿ ವಿವೇಕಾನಂದರೊಳಗಿನ ’ಮನುಷ್ಯ’ ಮತ್ತು ಮನುಷ್ಯನೊಳಗಿನ ’ಅವಿವೇಕ’

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಓದು,ಅನುಭವ ಮತ್ತು ವಯಸ್ಸು,ಮನುಷ್ಯನನ್ನ ಮಾಗಿಸುತ್ತದೆ ಅನ್ನುತ್ತಾರೆ,ಆದರೆ ಕೆಲವರ ಪಾಲಿಗೆ ಓದು,ಅನುಭವದ ಜೊತೆಗೆ ವಯಸ್ಸು ಬಾಗಿಸುತ್ತದೆ ದೇಹ ಮತ್ತೆ ತಲೆ ಎರಡನ್ನೂ…! ಅಂತವರ ವಿಷಯ ಪಕ್ಕಕ್ಕಿರಲಿ….ವಿವೇಕಾನಂದರ ವಿಷಯಕ್ಕೆ ಬರೋಣ…

ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸ್ವಾಮಿ ವಿವೇಕಾನಂದರು ಜಪಾನ್ ಮೂಲಕ ಸಾಗುವಾಗ ಅಲ್ಲಿನ ನಗರ ವೀಕ್ಷಣೆಯ ನಂತರ ತಮ್ಮ ಮದರಾಸಿ ಶಿಷ್ಯರಿಗೆ ಬರೆದ ಪತ್ರದ ಸಾಲುಗಳಿವು.ಈ ಪತ್ರದ ಕೆಲವು ಸಾಲುಗಳು ಇಂದಿಗೂ ನಮ್ಮ ನಡುವಿನ ತಲೆ ಕೆಟ್ಟ ಸಮಸ್ಯೆಗಳ ಅರಿವಿದ್ದೆ ಅವರು ಅಂದೇ ಹೇಳಿದ್ದರೇನೋ ಅನ್ನುವಂತಿವೆ.

“ಜಪಾನೀಯರ ಪಾಲಿಗಂತೂ ಭಾರತವೆಂದರೆ ಇನ್ನೂ ಎಲ್ಲ ಶ್ರೇಷ್ಠ-ಉನ್ನತ ವಿಚಾರಗಳ ಸ್ವಪ್ನ ಲೋಕವೇ ಆಗಿದೆ.ಆದರೆ ನೀವು?ನೀವೆಂಥವರು?… ಜೀವನವಿಡೀ ಕಾಡು ಹರಟೆಯಲ್ಲೇ ಮುಳುಗಿರುವವರು.ಕೇವಲ ಹರಟೆ ಮಲ್ಲರು.ಇನ್ನೆಂಥವರು ನೀವು? ಬನ್ನಿ ಇಲ್ಲಿಗೆ.ಈ ಜನರನ್ನು ನೋಡಿ ಬಳಿಕ ನಾಚಿಕೆಯಿಂದ ಮುಖ ಮುಚ್ಚಿ ಕುಳಿತುಕೊಳ್ಳಿ.

ಸಮುದ್ರ ದಾಟಿದರೆ ನಿಮ್ಮ ಜಾತಿ ಕೆಟ್ಟು ಹೋಗುತ್ತದಲ್ಲವೇ…!? ಬುದ್ದಿ ಕೆಟ್ಟ ಅರಳು ಮರಳು ಜನಾಂಗ…! ಶತಶತಮಾನಗಳಿಂದಲೂ ಮೂಢನಂಬಿಕೆ-ಕಂದಾಚಾರಗಳ ಕಂತೆಗಳನ್ನೇ ತಲೆಯ ಮೇಲೆ ಹೊತ್ತು ಕುಳಿತಿರುವವರು…!

ಈ ಆಹಾರವನ್ನು ಮುಟ್ಟಬಹುದೇ? ಆ ಆಹಾರವನ್ನು ಮುಟ್ಟಬಹುದೇ? ಎಂಬ ಬಹಳ ದೊಡ್ಡ ವಿಮರ್ಶೆಯಲ್ಲಿ ನೂರಾರು ವರ್ಷಗಳಿಂದ ಮುಳುಗಿದ್ದೀರಲ್ಲಾ-ಎಂಥ ಮನುಷರು ನೀವೆಲ್ಲ!

ಯುಗಯುಗಗಳಿಂದಲೂ ಅಮಾನುಷ ಸಾಮಾಜಿಕ ದಬ್ಬಾಳಿಕೆ ನಡೆಸಿ ಮಾನವೀಯತೆಯನ್ನೇ ಕಳೆದುಕೊಂಡಿದ್ದೀರಲ್ಲಾ-ನೀವು ಇನ್ನೆಂಥವರು? ಮತ್ತೀಗ ನೀವು ಮಾಡುತ್ತಿರುವುದಾದರೂ ಏನು? ಪರಕೀಯರು ಬರೆದ ಪುಸ್ತಕವನ್ನ ಕೈಯಲ್ಲಿ ಹಿಡಿದು,ಆ ಐರೋಪ್ಯ ಮೆದುಳೀನಲ್ಲಿ ಉದ್ಭವಿಸಿದ ಆಲೋಚನೆಗಳ ಕೆಲವು ಚೂರುಪಾರುಗಳನ್ನೇ ಮೆಲುಕು ಹಾಕುತ್ತ ಸಮುದ್ರ ತೀರದಲ್ಲಿ ವಿಹರಿಸುವುದು..! ನಿಮ್ಮ ತಲೆಯಲ್ಲಿರುವ ಅತ್ಯುನ್ನತ ಧ್ಯೇಯವೆಂದರೆ ತಿಂಗಳಿಗೆ ಮೂವತ್ತು ರೂಪಾಯಿ ಸಂಬಳ ತರುವ ಗುಮಾಸ್ತಗಿರಿ ಅಥವಾ ಇನ್ನು ಹೆಚ್ಚೆಂದರೆ ವಕೀಲನಾಗುವುದು-ಇದೇ ಭಾರತೀಯ ಯುವಕನ ಪರಮಾದರ್ಶ.ಇಷ್ಟೇ ನಿಮ್ಮ ಬದುಕು.ನಿಮ್ಮನ್ನೂ ನಿಮ್ಮ ಪುಸ್ತಕ-ಗೌನು ಪದವಿಗಳನ್ನೂ ಮುಳುಗಿಸುವಷ್ಟು ನೀರಿಲ್ಲವೇ ನಿಮ್ಮ ಆ ಸಮುದ್ರದಲ್ಲಿ? ”

ಮೊನ್ನೆಯ ಸೋಮವಾರದ ಅಂಕಣದಲ್ಲಿ  ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ `ಮನುಷ್ಯ ಮುಖ`ವನ್ನು ಕರ್ನಾಟಕಕ್ಕೆ ಪರಿಚಯಿಸಿದ ಅಂಕಣಕಾರ ದಿನೇಶ್ ಅಮೀನ್ ಮಟ್ಟು ಅವರ ಲೇಖನ (ನಿಂದನಾ ಸ್ತುತಿ!?)ಕ್ಕೆ ವಿವೇಕಾನಂದರ ಮಾತಿನಲ್ಲೇ ಒಂದೇ ಸಾಲಿನಲ್ಲಿ ಉತ್ತರಿಸುವುದಾದರೆ ಮೇಲೆ ಬೋಲ್ಡ್ ಮಾಡಿರುವ ಎರಡನೇ ಸಾಲುಗಳೇ ಸಾಕಲ್ಲವೇ? ಬಹುಷಃ ಅದನ್ನ ದಿನೇಶ್ ಅವರ ಲೇಖನಕ್ಕೆ ಒಂದು ಸಾಲಿನ ಉತ್ತರವಾಗಿ ಹೀಗೆ ಹೇಳಬಹುದೇ? “ಆಹಾರ ಶೈಲಿಯ ಬಗ್ಗೆಯೇ ಲೇಖನ ಬರೆದು ಅದಕ್ಕೆ ದೊಡ್ಡ ವಿಮರ್ಶೆಯ ರೂಪ ಕೊಟ್ಟು ಮತ್ತದನ್ನ ಮನುಷ್ಯ ಮುಖ ಅನ್ನುವ ಲೇಪ ಕೊಡುವ ನಿವೇಂಥ ಮನುಷ್ಯರು?” ಛೇ! ಹಾಗೆಲ್ಲ ಹೇಳಲು ನನಗೆ ಮನಸ್ಸು ಬರುವುದಿಲ್ಲ ಬಿಡಿ.

ವಿವೇಕಾನಂದರದು ಯಾವ ಜಾತಿ,ಮಾಂಸಹಾರ ಸೇವಿಸುತಿದ್ದರಾ,ಧೂಮಪಾನ ಮಾಡುತಿದ್ದರಾ ಅನ್ನುವುದೆಲ್ಲ ವಿವೇಕಾನಂದರನ್ನ ಆದರ್ಶ ವ್ಯಕ್ತಿಯನ್ನಾಗಿ-ಸ್ಪೂರ್ತಿಯ ಚಿಲುಮೆಯನ್ನಾಗಿ ಮಾಡಿಕೊಂಡವರಲ್ಲಿ ಗೊತ್ತಿಲ್ಲದೇ ಏನಿಲ್ಲ.ಆದರೆ ಮನುಷ್ಯ ಮುಖವನ್ನ ತೋರಿಸುವ ಉಮ್ಮೇದಿಗಿಂತ ಲೇಖಕರ ನೆಚ್ಚಿನ ವಿರೋಧಿ ದೇಶ ಭಕ್ತರ ಗುಂಪಿನ ಮೇಲೆ ಒಂದಿಷ್ಟು ಸಿಟ್ಟು ತೋರಿಸಲು ವಿವೇಕಾನಂದರನ್ನ ಗುರಾಣಿಯನ್ನಾಗಿ ಮಾಡಿಕೊಂಡಿರುವಂತಿದೆ ಇಡೀ ಲೇಖನ.ಆ ಗುರಾಣಿಯನ್ನ ’ಬಾಯಿ ಚಪಲ’ ಅನ್ನುವಂತ ಪದಗಳನ್ನೆಲ್ಲ ಬಳಸಿ ಕಡೆಗೆ “ವಿವೇಕಾನಂದರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ” ಅಂತ ಬೇಸರ ಮಾಡಿಕೊಳ್ಳುವವರಿಗೆ,ದೇಶ ಭಕ್ತಿಯನ್ನ ತಾವಾಗೇ ಒಂದು ಗುಂಪಿಗೆ ಗುತ್ತಿಗೆ ನೀಡಿ, ಉಗ್ರ ಹಿಂದುತ್ವ ಪ್ರತಿಪಾದಕರು ಅಂತ ಹೇಳುವ ಗುಂಪನ್ನ ಗುರಿಯಾಗಿರಿಸಿಕೊಳ್ಳಬೇಕಿದ್ದರೇ ಅವರ ಮೇಲೆಯೇ ನೇರಾ ನೇರ ಬರೆಯಬಹುದಿತ್ತಲ್ಲ.ಅದಕ್ಕೆ ವಿವೇಕಾನಂದರ ಹಿಂದೆ ಅವಿತುಕೂರಬೇಕಿತ್ತಾ!?

ಈ ಹಿಂದೆ, ಆಗಸ್ಟಿನಲ್ಲಿ ಅಣ್ಣಾ ರಾಮಲೀಲ ಮೈದಾನದಲ್ಲಿ ಬರೋಬ್ಬರಿ ೧೨ ದಿನ ಉಪವಾಸ ಕುಳಿತಾಗ,ದೇಶದ ಬಹುತೇಕ ಭಾಗಗಳಲ್ಲಿ ಜನಬೆಂಬಲ ವ್ಯಕ್ತವಾಗುತಿತ್ತು.ಬೆಂಗಳೂರಿನ ಫ಼್ರೀಡಂ ಪಾರ್ಕಿನಲ್ಲಿ ನಾನು ಕಾರ್ಯಕರ್ತನಾಗಿ ಪಾಲ್ಗೊಂಡಿದ್ದೆ.ಅಸಲಿಗೆ ಅಲ್ಲೆಷ್ಟು ಜನ ಸೇರುತಿದ್ದರು? ಇಡೀ ದೇಶದಲ್ಲಿ ಎಷ್ಟು ಜನ ಬೀದಿಗಿಳಿದು ಬಂದರು ಅಂತ ಯೋಚಿಸುತಿದ್ದಾಗ, ಇವರೇ ತಮ್ಮ ದಿವ್ಯ ದೃಷ್ಟಿಯಿಂದ ’೨೫,೭೬೪’ (ನನ್ನ ಬುದ್ದಿಗೆ ಅವ್ರೇಳಿದ ಸಂಖ್ಯೆ ಮರೆತು ಹೋಗಿದೆ…!) ಜನ ಅಣ್ಣಾ ಬೆಂಬಲಿಗರು ಅಂತೇಳಿ, ಆ ಲೇಖನದಲ್ಲಿ ಹೋರಾಟಕ್ಕಿಳಿದ ಸಾಫ಼್ಟ್ವೇರ್ ಇಂಜೀನಿಯರ್ಗಳ/ಮಧ್ಯಮ ವರ್ಗದ ಬಗ್ಗೆ ಪಿ.ಹೆಚ್.ಡಿ ಮಾಡಿದಂತೆ ಲೇಖನ ಬರೆದಿದ್ದರು.ಇನ್ನ ಇವರಿಗೆ ಈ ನಿಖರ ಸಂಖ್ಯೆ ಸಿಕ್ಕಿದ್ದು ವೈಮಾನಿಕ ಸಮೀಕ್ಷೆಯ ಮೂಲಕವೋ ಅಥವಾ ಮಹಾಭಾರತದ ’ಸಂಜಯ’ರ ರೀತಿಯಲ್ಲಿ ದಿವ್ಯದೃಷ್ಟಿ ಏನಾದರೂ ಉಂಟೋ ಅನ್ನುವ ಅನುಮಾನ ನನಗೆ.ಅದು ಪಕ್ಕಕ್ಕಿರಲಿ ವಿಷಯವನ್ನ ಹಾದಿ ತಪ್ಪಿಸುವ ಬದಲು ಮತ್ತೆ ವಿವೇಕಾನಂದರ ’ಮನುಷ್ಯ ಮುಖ’ದ ಕಡೆಗೆ ಹೊರಳೋಣ.

ಲೇಖನದ ಒಂದು ಕಡೆ ಮತಾಂತರದ ಬಗ್ಗೆ ವಿವೇಕಾನಂದರ ಮಾತುಗಳನ್ನ ಕೇಳಿದರೆ ಉಗ್ರ ಹಿಂದುತ್ವದ ಪ್ರತಿಪಾದಕರು,ವಿವೇಕಾನಂದರನ್ನು ’ಹಿಂದು ವಿರೋಧಿ” ಅಂದು ಬಿಡುತ್ತಾರೆ ಅನ್ನುವ ಆತಂಕವೂ ಪಾಪ ಲೇಖಕರನ್ನ ಕಾಡಿದಂತಿದೆ.ಇದೇ ಸ್ವಾಮಿ ವಿವೇಕಾನಂದರು ಸರ್ವ ಧರ್ಮ ಸಮ್ಮೇಳನ ಮುಕ್ತಾಯಗೊಳ್ಳುವ ಸಮಯದಲ್ಲಿ ಮತಾಂತರದ ಬಗ್ಗೆ ಹೀಗೆ ಹೇಳಿದ್ದರು “ಕ್ರೈಸ್ತನಾದವನು ಹಿಂದುವೋ ಬೌದ್ಧನೋ ಆಗಿ ಮತಾಂತರಗೊಳ್ಳಬೇಕಿಲ್ಲ;ಅಂತೆಯೇ ಹಿಂದುವೋ ಬೌದ್ಧನೋ ಕ್ರೈಸ್ತನಾಗಬೇಕಿಲ್ಲ.ಆದರೆ,ಪ್ರತಿಯೊಬ್ಬನೂ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು,ತನ್ನವೈಯುಕ್ತಿಕತೆಯನ್ನು ಕಳೆದುಕೊಳ್ಳದೆ,ತನ್ನದೇ ಆದ ಬೆಳವಣಿಗೆಯ ನಿಯಮಾನುಸಾರವಾಗಿ ಬೆಳೆಯಬೇಕು…”  ಈ ಹೇಳಿಕೆಯಲ್ಲಿ ಹಿಂದೂ ವಿರೋಧಿಯಾಗುತ್ತಾರಾ? ಇಲ್ಲವಲ್ಲ.ಅಷ್ಟಕ್ಕೂ ಮತಾಂತರಕ್ಕೆ ನಮ್ಮೊಳಗಿನ ಮಡಿ/ಮೈಲಿಗೆಯ ಕರಾಳತೆಯೂ ಒಂದು ಕಾರಣ ಅನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವೇ? ಅದನ್ನೇ ವಿವೇಕಾನಂದರ ಮೂಲಕ ಮತ್ತೊಮ್ಮೆ ಹೊಸದಾಗಿ ಹೇಳಿಸಿದಂತೆ ಮಾಡಿ ವಿರೋಧಿಪಾಳಯಕ್ಕೆ ಚುಚ್ಚಲೇ ಬೇಕು ಅನ್ನುವಂತೆ ಬರೆಯುವುದಾದರೆ ಯಾವುದನ್ನೂ ಎಲ್ಲಿಗೋ ಲಿಂಕ್ ಮಾಡಿ ಬರೆಯಬಹುದು ಅಲ್ವಾ?

ಮತಾಂತರದ ಬಗ್ಗೆ ವಿವೇಕಾನಂದರನ್ನ ಬಳಸಿ ಚುಚ್ಚುವವರಿಗೆ ಗೊತ್ತಿರಲಿ.ನಾನೊಬ್ಬ ಹೆಮ್ಮೆಯ ಭಾರತೀಯ,ಹೆಮ್ಮೆಯ ಹಿಂದೂ ಅಂತ ಹೇಳಿಕೊಳ್ಳಲು ಅವರು ನಿಮ್ಮಂತೆ ಹಿಂದು-ಮುಂದು ನೋಡುತ್ತಲಿರಲಿಲ್ಲ.ಯಾವ ದೇಶವನ್ನ ‘ಮಾತೃ ಭೂಮಿ,ತಾಯಿ’ ಅಂತೆಲ್ಲ ವರ್ಣಿಸುವುದರಿಂದ ತಮಗೆ ಬರಬಾರದ ಜಾಗದೆಲ್ಲ ನಗುಬರುತ್ತದಲ್ಲ,ಖುದ್ದು ವಿವೇಕಾನಂದರಿಗೆ ಭಾರತ ಅನ್ನುವುದು ಮಾತೃ ಭೂಮಿಯೇ ಆಗಿತ್ತು,ಅವರಿಗೆ ಭಾರತಾಂಬೆ ಅನ್ನಲು ಬುದ್ದಿ ಜೀವಿಗಳಂತೆ ಯಾವುದೇ ಮಡಿವಂತಿಕೆ ಇರಲಿಲ್ಲ.ಹಾಗಂತ ಅವರನ್ನ ಅವರ ಆದರ್ಶಗಳನ್ನ ಎಡ ಪಂಥಿಯರೆಲ್ಲ ವಿರೋಧಿಸಿಬಿಡುತ್ತಾರೆ ಅಂತೇಳುವುದು ಬಾಲಿಶವಾಗಲಿಕ್ಕಿಲ್ಲವ?

ವಿವೇಕಾನಂದರ ೧೫೦ನೆ ಜಯಂತಿ ಆಚರಣೆಯಲ್ಲಿ ನಿಜವಾದ ವಿವೇಕಾನಂದರನ್ನ ಮರೆಯಲಾಗುತ್ತಿದೆ ಅನ್ನುವ ನಿಜವಾದ ಆತಂಕವೇ ಲೇಖಕರಿಗೆ ಇದ್ದಿದ್ದರೆ,ಅವರ ಮನುಷ್ಯ ಮುಖದ ತೋರಿಸುವ ಉಮ್ಮೆದಿಯಲ್ಲಿ ‘ಬಾಯಿ ಚಪಲ,ಹೀಮ್ಯಾನ್’ ಅನ್ನುವಂತ ಪದ-ಪುಂಜಗಳ ಪ್ರಯೋಗ ಬೇಕಿತ್ತಾ!? ಇಂದು ಅವರನ್ನ ಹಾಡಿ ಹೊಗಳುವ ಇದೇ ದೇಶದ ಜನ ಅಂದು ಅವರು ಏಕಾಂಗಿಯಾಗಿ ಅಮೇರಿಕಾದಲ್ಲಿ ಹೋರಾಡುತಿದ್ದಾಗ ಈ ಮಟ್ಟದ ಬೆಂಬಲಕ್ಕಿರಲಿಲ್ಲ ಅನ್ನುವುದೆಲ್ಲ ವಿವೇಕಾನಂದರನ್ನ ಓದಿ ಕೊಂಡವರಿಗೆ ಗೊತ್ತಿರುವ ವಿಷಯವೇ ಅಲ್ಲವೇ? ಲೇಖಕರು ಯಾವ ಸಂಘಟನೆಯ ಮೇಲೆ ಗುರಿಯಿಟ್ಟು ಈ ಮಾತು ಹೇಳಿದ್ದಾರೋ,ಬಹುಷಃ ‘ಆ ಸಂಘಟನೆ’ ಆ ಕಾಲಕ್ಕೆ ಹುಟ್ಟಿದ್ದರೆ ಆಗಲೇ ಬೆಂಬಲ ನೀಡುತಿತ್ತೇನೋ!? ಆಗಿನ ಮಾತು ಬಿಡಿ ಲೇಖಕರೇ ಈಗಲೂ ವಿವೇಕಾನಂದರನ್ನ ಅವರಿಗೆ ಗುತ್ತಿಗೆ ನೀಡಲಾಗಿಲ್ಲ ಹಾಗಾಗಿ ವೃಥಾ ಚಿಂತೆಗೆ ಕಾರಣವಿಲ್ಲ…!

ವಿವೇಕಾನಂದರು ಮೇಲಿನ ಪತ್ರದಲ್ಲೇ,ಅನಗತ್ಯ ವಿಷಯಗಳ ಗುಲ್ಲೆಬ್ಬಿಸುವ ಬುದ್ದಿ ಜೀವಿಗಳನ್ನು ಜಾಡಿಸಿದಂತೆಯೇ,ಉಡುಪಿಯ ಪರ್ಯಾಯ ಪೀಠದ ವಿವಾದದ ಕೇಂದ್ರ ಬಿಂದುವಾದ ಸಮುದ್ರ ದಾಟಿದರೆ ಜಾತಿ ಕೆಡುತ್ತದೆ,ಅನ್ನುವಂತ ಮೂಢ ನಂಬಿಕೆಗಳ ಬಗ್ಗೆಯೂ ಚಾಟಿಬೀಸಿದ್ದಾರೆ.ಯಾರ ವ್ಯಕ್ತಿತ್ವದಿಂದ ಯಾವ ಅಂಶಗಳನ್ನ ತೆಗೆದುಕೊಳ್ಳಬೇಕು,ವ್ಯಕ್ತಿಯ ಯಾವ ಸಾಧಾನೆಯ ಗುಣಗಾನ ಮಾಡಬೇಕು ಅನ್ನುವ ಕಾಮನ್ ಸೆನ್ಸ್ ಇರಬೇಕು.ಅದು ಬಿಟ್ಟು ಕೈಗೊಂದು ಪೆನ್ನು,ಬರೆಯಲು ರಾಜ್ಯ ಮಟ್ಟದ ಪತ್ರಿಕೆಯ ಅಂಕಣ,ವಿರೋಧಿ ಗುಂಪಿಗೆ ಗುರಿಯಿಡಲು ಮೇರು ವ್ಯಕ್ತಿಯ ’ಮನುಷ್ಯ ಮುಖ’ದ ಹೆಗಲು ಬಳಸಿ ವಿಮರ್ಶೆಯ ಹೆಸರಲ್ಲಿ ‘ವ್ಯಂಗ್ಯ’ವನ್ನೇ ತುಂಬಿ ತುಳುಕಿಸಿ ಬರೆಯುವುದು ಯಾವ ಸೀಮೆಯ ಪತ್ರಿಕಾ ಧರ್ಮ ಅಂತ ಬರೆದವರು,ವಿರೋಧಿಗಳ ಬಗ್ಗೆ ಬರೆದಿದ್ದೆಲ್ಲವನ್ನು ಬೆಂಬಲಿಸಲೇ ಬೇಕೆಂಬ ನೀತಿಗೆ ಬಿದ್ದಂತೆ ಲೇಖಕರೆ ಹಿಂದೆ ನಿಂದೆ ನಿಂತು ಬೆಂಬಲಿಸುವವರ ಗುಂಪುಗಳೇ ಪ್ರಶ್ನೆ ಕೇಳಿಕೊಳ್ಳಬೇಕು.

ಎರಡೂ ಕಡೆಗಳಲ್ಲಿ ಅತಿರೇಕಿಗಳಿದ್ದಾರೆ ನಮ್ಮಲ್ಲಿ.ಒಂದು ಗುಂಪು ಸಂಪ್ರದಾಯ/ಪದ್ಧತಿಯ ಹೆಸರಿನಲ್ಲಿ ಎಲ್ಲರ ಬಾಯಿ ಮುಚ್ಚಿಸಲು ನೋಡಿದರೆ, ಇನ್ನೊಂದು ಗುಂಪು ಬೇಧ-ಭಾವದ ಸಮಾಧಿಯನ್ನೇ ಕೆದಕಿ,ಗಾಯಕ್ಕೆ ಉಪ್ಪು ಸವರುವಂತದ್ದು.ಇವರೀರ್ವರ ನಡುವೆಯೂ ತಮ್ಮ ಪಾಡಿಗೆ ತಾವು ಸಹಬಾಳ್ವೆ ನಡೆಸುತ್ತ,ತುತ್ತು ಕೂಲಿಗೆ ಹೋರಾಡುವ ಮಂದಿಗ್ಯಾವ ಧರ್ಮ,ಈ ಎರಡು ಗುಂಪುಗಳ ಅನವಶ್ಯಕ ಕೂಗಾಟ-ಹೊಡೆದಾಟಗಳಿಗೆ ತುತ್ತಾಗುವುದ್ಯಾವ ಕರ್ಮ!?

ಮಡಿ/ಮೈಲಿಗೆಯ ಬಿಟ್ಟು ನಮ್ಮ ಧರ್ಮವನ್ನ ಪ್ರೀತಿಸುತ್ತ ಅನ್ಯರ ಧರ್ಮವನ್ನು ಗೌರವಿಸುತ್ತ,ಎಲ್ಲ ಮನುಷ್ಯರು ಒಂದೇ ಎಂಬಂತೆ ಬಾಳಿ ಅನ್ನುವುದೇ ಸ್ವಾಮೀ ವಿವೇಕಾನಂದರು ನಮಗೆ ನೀಡಿರುವ ಸರಳ ಸಂದೇಶ,ಅದನ್ನ ಅರ್ಥ ಮಾಡಿಕೊಳ್ಳದೆ ಇನ್ನೊಬ್ಬರನ್ನ ಹೀಯಾಳಿಸಲಿಕ್ಕಾಗಿ ಅಂತ ಮಹನೀಯರ ಹೆಸರಿಡಿದು ಬೇಳೆಬೇಯಿಸಿಕೊಳ್ಳುವ ಗುಂಪುಗಳಿಗೆ ಇದು ಅರ್ಥವಾಗಬೇಕು.

6 ಟಿಪ್ಪಣಿಗಳು Post a comment
  1. ಪ್ರಮೋದ್ ಶೆಟ್ಟಿ's avatar
    ಪ್ರಮೋದ್ ಶೆಟ್ಟಿ
    ಜನ 19 2012

    ರಾಜಕೀಯ ನಡೆಸಲು ವಿವೇಕಾನಂದರನ್ನು ಬಳಸಿ ಕೊಂಡ ರೀತಿ ಸರಿ ಇಲ್ಲ ಅಂತ ಕಾಣಿಸ್ತಾ ಉಂಟು

    ಉತ್ತರ
  2. Megha Sridhar's avatar
    Megha Sridhar
    ಜನ 20 2012

    ವಿವೇಕವುಳ್ಳ ಯಾವುದೇ ವ್ಯಕ್ತಿ ಅಲ್ಲಗೆಳೆಯುವುದಿಲ್ಲ. ಆಕಾಶದಲ್ಲಿ ನಿಂತವನಿಗೆ ಪರ್ವತವೇ ಸಣ್ಣದು. ಪರ್ವತದ ಮೇಲೆ ನಿಂತವನಿಗೆ ಬಂಡೆ ಸಣ್ಣದು. ಬಂಡೆಯ ಮೇಲೆ ನಿಂತವನಿಗೆ ಕಲ್ಲುಗಳು ಸಣ್ಣವು. ಅಂತೆಯೇ ಪ್ರತಿಯೊಬ್ಬನಿಗೂ ಅವನದೇ ಆದ ಚೌಕಟ್ಟು ಆವರಣ ಇರುತ್ತದೆ. ವಿವೇಕಾನಂದರ ಬೆನ್ನಲ್ಲಿ ಅವಿತು ಇಂತಹ ಆರೋಪಗಳನ್ನು ಮಾಡುವುದು ಅರ್ಥ ರಹಿತ, ಅಡಿಪಾಯ ರಹಿತ (baseless arguments).
    ಬೆಳಕನ್ನು ಚೆಲ್ಲಿದ ವಿವೇಕಾನಂದರನ್ನು ಗೌರವದಿಂದ ನೆನೆಯೋಣ!

    ಉತ್ತರ
  3. mathad m r's avatar
    mathad m r
    ಜನ 21 2012

    Tamma Hesarannu belishikollalu, sri swami hesaranna balisikondiddare, Intha Janaranne swamigalu jarediddu, Innomme Odi tilidukollali. chiiii, swarthigalu

    ಉತ್ತರ
  4. dilip's avatar
    dilip
    ಜನ 28 2012

    dinesh ameen mattu avare nimma antartma hudugi nodi kolli yar bagge barebekadare swalp vichar madi bareiree

    ಉತ್ತರ
  5. shobha.H.G's avatar
    ಡಿಸೆ 26 2012

    nimma ee lekanavannu namma patrikege balasikollabahude?
    shobha, editor, stree jagruthi

    ಉತ್ತರ
  6. prasad kumar g c's avatar
    prasad kumar g c
    ಜನ 28 2015

    your very correct sir, Excellent thought by Swami Vivekananda

    ಉತ್ತರ

Leave a reply to dilip ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments